ಗುರುವಿನ ಧಾರ್ಮಿಕ ಸಮಾನತೆ ಮತ್ತು ಲಿಂಗನಿಷ್ಟೆ.
ಅಕ್ಕಮಹಾದೇವಿಗೆ ಲಿಂಗ, ಲಿಂಗತತ್ವ, ಲಿಂಗಪೂಜೆಯ ಮಹತ್ವ ತಿಳಿಸಿ, ಲಿಂಗದೀಕ್ಷೆ ಸಂಸ್ಕಾರ ನೀಡಿ ಆಶಿರ್ವದಿಸಿದ ಗುರು ಲಿಂಗದೇವರು, ಧರ್ಮದಲ್ಲಿ ಗುರುವಿನ ಕರ್ತವ್ಯ ಮತ್ತು ಸಮಾನತೆ ಹಾಗೂ ಲಿಂಗನಿಷ್ಟೆ ಕುರಿತು ಅರಿವು ಮೂಡಿಸುತ್ತಾರೆ. ಗುರುವಾದವನು ತಾನು ಹುಟ್ಟಿದ ಮೂಲ ಜಾತಿಯನ್ನು ಕಳೆದುಕೊಂಡು ಧರ್ಮದ ನೀತಿ ಮತ್ತು ಸಮಾನತೆ ತತ್ವ, ಆಧ್ಯಾತ್ಮಿಕ ಜೀವನದಲ್ಲಿ ವ್ಯವಹರಿಸಬೇಕು. ಗುರುವಿನ ಕರ್ತವ್ಯ ಬಹಳ ದೊಡ್ಡದು; ಶಿಷ್ಯನನ್ನು ತನ್ನಂತೆ ಮಾಡಿಕೊಳ್ಳಬೇಕು ಆ ಗುಣ ಗುರುವಿನಲ್ಲಿರುತ್ತದೆ. ಅಲ್ಲಮಪ್ರಭು ದೇವರು ತಮ್ಮ ವಚನದಲ್ಲಿ ಹೀಗೆ ಹೇಳುವರು, "ಗುರುವಿನ ಪರಿ ವಿಪರೀತವಾಯಿತ್ತಯ್ಯ! ಭ್ರಮರ ಕೀಟ ನ್ಯಾಯದಂತಾಯಿತ್ತು. ಗುರು ತನ್ನ ನೆನೆವನ್ನ ಬರ ಎನ್ನನು ಗುರುವ ಮಾಡಿದನು. ಇನ್ನು ಶಿಷ್ಯನಾಗಿ ಗುರುವ ಪೂಜಿಸುವರಾರು ಹೇಳಾ ಗುಹೇಶ್ವರಾ?" ಎಂದು.
ಗುರುವಿನ ನ್ಯಾಯ ಎಂದರೆ ಭೃಂಗ ಹುಳು ಅರಲಿನ ಗೂಡು ಕಟ್ಟಿ ಅದರಲ್ಲಿ ಒಂದು ಹಸಿರು ಕೀಡೆಯನ್ನು ತಂದು ಅದಕ್ಕೆ ತನ್ನ ಬಾಯಿ ರಸದಿಂದ ಚುಚ್ಚುಮದ್ದು ನೀಡಿ ಒಂದಿಷ್ಟು ಶಬ್ದ ಮಾಡಿ ಹೋಗುತ್ತದೆ. ಕೆಲ ದಿನಗಳ ನಂತರ ಆ ಗೂಡಿನಲ್ಲಿದ್ದ ಕೀಡೆಗಳು ಭೃಂಗವಾಗಿ ಹೊರಬರವವು ಹಾಗೆಯೇ ಗುರುವಾದವನು ಭೃಂಗ ಇದ್ದಂತೆ ಶಿಷ್ಯನೆಂಬ ಕೀಡೆಗೆ ತನ್ನ ಹಸ್ತಮಸ್ತಕ ಸಂಯೋಗದಿಂದ, ಸಂಕಲ್ಪ ಮಾತ್ರದಿಂದ, ದೃಷ್ಟಿಮಾತ್ರದಿಂದ ಆಶಿರ್ವದಿಸುತ್ತಾನೆ ಆಗ ಮಾಂಸ ಪಿಂಡವಾಗಿದ್ದ ಶಿಷ್ಯ ಮಂತ್ರ ಪಿಂಡವಾಗಿ ಗುರುವಿನಂತಾಗುತ್ತಾನೆ. ಶರಣ ಧರ್ಮದಲ್ಲಿ ಜ್ಯೋತಿ ಮುಟ್ಟಿ ಜ್ಯೋತಿಯಂತಾಗುವಂತೆ ಗುರು ಮುಟ್ಟಿ ಗುರುವಾಗುವ ಧಾರ್ಮಿಕ ಸಮಾನತೆ ಇದೆ.
ಈ ರೀತಿಯಾಗಿ ಅಕ್ಕಮಹಾದೇವಿಯು ಗುರು ಮುಟ್ಟಿ ಗುರುವಾಗಿ ಅಪಾರ ಲಿಂಗನಿಷ್ಟೆಯನ್ನು ಸಾಧಿಸುತ್ತಾಳೆ, ಚನ್ನಮಲ್ಲಿಕಾರ್ಜುನನ್ನು ಹಂಬಲ ತುಂಬಿದ ಭಾವದಲ್ಲಿ ಆತ್ಮರತಿಯಾಗಿ ಪೂಜಿಸುತ್ತಾಳೆ, ಪರಮಾತ್ಮನ ಅನಂತತೆ ಮತ್ತು ದಿವ್ಯ ಸ್ವರೂಪವನ್ನು ಅರಿತು ಚುಳುಕಾಗಿ ತನ್ನ ಅಂಗೈಯಲ್ಲಿರುವ ಲಿಂಗವನ್ನು ನೋಡಿ ಆಶ್ಚರ್ಯ ಚಕಿತಳಾಗುತ್ತಾಳೆ; ತನ್ನ ವಚನದಲ್ಲಿ ಅದನ್ನು ಹೀಗೆ ಹೇಳಿಕೊಳ್ಳುತ್ತಾಳೆ. "ಅಯ್ಯಾ !ಪಾತಾಳವಿತ್ತಿತ್ತ, ಶ್ರೀಪಾದವತ್ತತ್ತ ಬ್ರಹ್ಮಾಂಡವಿತ್ತಿತ್ತ, ಮಣಿಮುಕುಟವತ್ತತ್ತ, ಅಯ್ಯಾ ! ದಶದಿಕ್ಕು ಇತ್ತಿತ್ತ, ದಶಭುಜಂಗಳತ್ತತ್ತ ಚನ್ನಮಲ್ಲಿಕಾರ್ಜುನಯ್ಯಾ, ನೀನೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ."
ಪರಮಾತ್ಮನ ಸ್ವರೂಪ ಜಗದಗಲ ಮಿಗಿಲಗಲವಾದದ್ಧು ಮತ್ತು ನಮ್ಮೊಳಗೆ ಓತಪ್ರೋತವಾಗಿ ತುಂಬಿದೆ. ಅಂತಹ ದೇವನನ್ನು ಭೌತಿಕ ವಸ್ತುಗಳಿಂದ ಪೂಜೆ ಮಾಡಿದರೆ ಅವನ ಅಸ್ತಿತ್ವಕ್ಕೆ ಭಂಗ ಬರುವುದು ಎಂದು ತಿಳಿದು, ಸದಾಕಾಲ ಪರಮಾತ್ಮನ ಅಂಗದೊಳಗೆ ಆತ್ಮನಾಗಿರುವುದರಿಂದ ಮಹಾದೇವಿಯು ಅಂಗೈಯಲ್ಲಿ ಲಿಂಗವನ್ನು ಚುಳುಕಾಗಿ ಪೂಜಿಸಿ, ಅಂಗದ ಮೇಲೆ ಧರಿಸುತ್ತಾಳೆ ಮತ್ತು ಅವನಿಂದ ಬಿಟ್ಟು ಬೇರಾಗದ ಅವಿನಾಭಾವ ಸಂಬಂಧದಲ್ಲಿ ಒಂದಾಗುವ ಬಯಕೆಯನ್ನು ಹೊಂದುತ್ತಾಳೆ.
ಇಷ್ಟಲಿಂಗವು ಇದು ಜಾತಿಯ ಕುರುಹು ಅಲ್ಲ; ಆತ್ಮಜ್ಯೋತಿಯ ಕುರುಹು, ನಿರಾಕಾರ ಪರಮಾತ್ಮನ ಸಾಕಾರ ಕುರುಹು. ಅರಿವು ಪಡೆಯಬೇಕೆಂಬ ಹಂಬಲ ಹೊಂದಿರುವ ಮಾನವ ಮಾತ್ರರೆಲ್ಲರೂ ಅಂಗದ ಮೇಲೆ ಧರಿಸಬಹುದಾದ ಸಮಾನತೆಯ ಕುರುಹು. ಇಂತಹ ಇಷ್ಟಲಿಂಗವು ನಮ್ಮೊಳಗಿನ ಜೀವ ಚೈತನ್ಯಕ್ಕೆ ಅರಿವು ಮೂಡಿಸಿ ಆನಂದವನ್ನುಂಟು ಮಾಡುತ್ತದೆ. ಇಷ್ಟಲಿಂಗದ ಮೇಲೆ ಅಪಾರ ನಿಷ್ಟೆ ಹೊಂದಿದ ಮಹಾದೇವಿ "ಲಿಂಗವು ಬಂದೆನ್ನ ಅಂಗದೊಳು ನೆಲೆಸಲು ಅಂಗವು ಲಿಂಗದೊಳಗಾದ ಕಾರಣವು ಹಿಂಗಿದವು ಎನ್ನ ಭವ-ಭವವು" ಎಂದು ಹೇಳಿಕೊಳ್ಳುತ್ತಾ ತಮಗೆ ಬಂದ ಜನ್ಮ ಜನ್ಮಾಂತರದ ಭವಗಳನ್ನು ಕಳೆದುಕೊಂಡಿದ್ದಾಳೆ.
ಮುಂದುವರೆಯುವುದು....
ಪ್ರವಚನಕಾರರು: ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.
ಸ್ಥಳ: ಅಂಬಾ ಭವಾನಿ, ಲಕ್ಷ್ಮೀ ದೇವಸ್ಥಾನ ಮುಡಬಿ.
ವರದಿ: ಶ್ರೀನಾಥ ಬಿ ಕಣಜಿ ಮುಡಬಿ.