ads

Search This Blog

Saturday, 21 December 2024

ಭೀಕರ ಅಗ್ನಿ ಅವಘಡ: ಒಂದೇ ಕುಟುಂಬದ 4 ಸಜೀವ ದಹನ

 ದೇವಾಸ್: ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಮನೆಯೊಂದರಲ್ಲಿ ಭಾರೀ ಅಗ್ನಿ ಅವಘ ಸಂಭವಿಸಿದ್ದು, ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿರುವ ಘಟನೆ ಶನಿವಾರ ನಡೆದಿದೆ.


ನಯಾಪುರ ಪ್ರದೇಶದ ಮೂರು ಅಂತಸ್ತಿನ ಮನೆಯಲ್ಲಿ ಇಂದು ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು, ಸ್ವಲ್ಪ ಸಮಯದೊಳಗೆ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡವನ್ನು ಆವರಿಸಿದೆ. ಬೆಂಕಿ ಹೊತ್ತಿಕೊಂಡಿದ್ದರಿಂದ ಮನೆಯಲ್ಲಿ ಇರಿಸ ಲಾಗಿದ್ದ ಸಿಲಿಂಡರ್ ಕೂಡ ಸ್ಫೋಟಗೊಂಡಿದೆ. ಸ್ಫೋಟದ ಸದ್ದು ಇಡೀ ಪ್ರದೇಶಕ್ಕೆ ಪ್ರತಿಧ್ವನಿಸಿದೆ.

ಸ್ಫೋಟದ ಸದ್ದಿನಿಂದ ಅಕ್ಕಪಕ್ಕದವರು ಎಚ್ಚೆತ್ತುಕೊಂಡು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. 3 ಗಂಟೆಗಳ ಪ್ರಯತ್ನದ ಬಳಿಕ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಆದರೆ, ಈ ದುರಂತದಲ್ಲಿ ಮನೆಯಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ.

ಮೃತರನ್ನು ದಿನೇಶ್ ಕಾರ್ಪೆಂಟರ್ (35), ಗಾಯತ್ರಿ ಕಾರ್ಪೆಂಟರ್ (30), ಇಶಿಕಾ (10) ಮತ್ತು ಚಿರಾಗ್ (7) ಎಂದು ಗುರ್ತಿಸಲಾಗಿದೆ. ಮೃತ ದಿನೇಶ್ ಅವರು ಕಟ್ಟಡದ ನೆಲ ಮಹಡಿಯಲ್ಲಿ ಡೈರಿ ನಡೆಸುತ್ತಿದ್ದರು, ಎರಡನೇ ಮಹಡಿಯಲ್ಲಿ ಕುಟುಂಬ ದೊಂದಿಗೆ ವಾಸವಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪುನೀತ್ ಗೆಹ್ಲೋಟ್ ಹೇಳಿದ್ದಾರೆ.

43 ವರ್ಷಗಳ ಬಳಿಕ ಭಾರತದ ಪ್ರಧಾನಿ ಕುವೈತ್'ಗೆ ಭೇಟಿ

 ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದಿನಿಂದ ಎರಡು ದಿನಗಳ ಕಾಲ ಗಲ್ಫ್‌ ರಾಷ್ಟ್ರ ಕುವೈತ್‌ಗೆ ಪ್ರವಾಸ ಕೈಗೊಂಡಿದ್ದು, ಇದು 43 ವರ್ಷಗಳ ಬಳಿಕ ಪಶ್ಚಿಮ ಏಷ್ಯಾ ರಾಷ್ಟ್ರಕ್ಕೆ ಭಾರತದ ಪ್ರಧಾನಿ ನೀಡುತ್ತಿರುವ ಮೊದಲ ಭೇಟಿಯಾಗಿದೆ.


ಪ್ರಧಾನಮಂತ್ರಿ ನರೇಂದ್ರ ಮೋದಿ

ಕುವೈತ್‌ನ ಅಮೀರ್, ಶೇಖ್‌ ಮಿಶಾಲ್‌ ಅಲ್‌ ಅಹ್ಮದ್‌ ಅಲ್‌ ಜಬೇರ್‌ ಅಲ್‌ ಸಬ್ಹಾ ಅವರ ಆಹ್ವಾನದ ಮೇರೆಗೆ ಮೋದಿ ಕುವೈತ್‌ಗೆ ತೆರಳುತ್ತಿದ್ದಾರೆ. ಭೇಟಿ ವೇಳೆ ಮೋದಿಯವರು ಅಲ್ಲಿನ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ ಜೊತೆಗೆ ಕುವೈತ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಭೇಟಿಯು ಭಾರತ ಮತ್ತು ಕುವೈತ್‌ ನಡುವಿನ ಬಹುಮುಖಿ ಸಂಬಂಧವನ್ನು ಬಲಪಡಿಸಲು ನೆರವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

ಕುವೈತ್‌ನಲ್ಲಿಂದು ನಡೆಯುವ ʻಹಾಲಾ ಮೋದಿ ಮೆಗಾ ಡಯಾಸ್ಪೊರಾʼ ಕಾರ್ಯಕ್ರಮಕ್ಕೆ ಈಗಾಗಲೇ ವೇದಿಕೆ ಸಿದ್ಧಪಡಿಸಲಾಗಿದ್ದು, ಕಾರ್ಯಕ್ರಮಕ್ಕೆ ಸುಮಾರು 5,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.

ಉಭಯ ರಾಷ್ಟ್ರಗಳ ದ್ವಿಪಕ್ಷಿಯ ಸಂಬಂಧ ಮತ್ತಷ್ಟು ಅಭಿವೃದ್ಧಿಪಡಿಸುವ ಸಲುವಾಗಿ ಮೋದಿ ಭೇಟಿ ನೀಡುತ್ತಿದ್ದಾರೆ. ಮೊದಲು ಬಯಾನ್ ಅರಮನೆಯಲ್ಲಿ ಗೌರವಾನ್ವಿತ ಗೌರವ ಸ್ವೀಕರಿಸಲಿದ್ದಾರೆ. ಬಳಿಕ ಕುವೈತ್ ನಾಯಕತ್ವದೊಂದಿಗೆ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ರಾಜಕೀಯ, ವ್ಯಾಪಾರ, ಹೂಡಿಕೆ, ಇಂಧನ, ಸಂಸ್ಕೃತಿ ಮತ್ತು ಜನರ ನಡುವಿನ ಸಂಬಂಧಗಳು ಹಾಗೂ ಇದಕ್ಕಾಗಿ ಉಭಯ ರಾಷ್ಟ್ರಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಿದ್ದಾರೆ. ನಂತರ ಔತಣಕೂಟದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಅರಣು ಕುಮಾರ್ ಚಟರ್ಜಿ ಮಾಹಿತಿ ನೀಡಿದ್ದಾರೆ,

ಪ್ರಧಾನಿಗಳ ಈ ಭೇಟಿಯು ಭವಿಷ್ಯದಲ್ಲಿ ಉತ್ತಮ ಸಹಕಾರಕ್ಕಾಗಿ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ. ಭಾರತ ಮತ್ತು ಗಲ್ಫ್‌ ಸಹಕಾರ ಮಂಡಳಿಯ ನಡುವಿನ ಬಾಂಧವ್ಯ ಹೆಚ್ಚಿಸುತ್ತದೆ. ಮುಖ್ಯವಾಗಿ, ಭಾರತ ಸರ್ಕಾರವು ವಿದೇಶದಲ್ಲಿರುವ ಎಲ್ಲಾ ಕಾರ್ಮಿಕರ ಕಲ್ಯಾಣಕ್ಕೆ ಪ್ರಾಮುಖ್ಯತೆ ನೀಡುತ್ತಲೇ ಇದೆ. ಕುವೈತ್‌ನಲ್ಲಿ ಸದ್ಯ 10 ಲಕ್ಷ ಭಾರತೀಯರು ಇದ್ದಾರೆ. ಈ ಕಾರಣಕ್ಕಾಗಿ ಅಲ್ಲಿನ ಕಾರ್ಮಿಕ ಸಮುದಾಯಕ್ಕೂ ಭೇಟಿ ನೀಡಿವ ಯೋಜನೆ ಇದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಧಾನಿ ಮೋದಿಯವರು ಕೂಡ ಸಾಮಾಜಿಕ ಜಾಲತಾಣದ ಲ್ಲಿ ಪೋಸ್ಟ್ ಮಾಡಿ, ಕುವೈತ್'ಗೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಇಂದು ಮತ್ತು ನಾಳೆ ನಾನು ಕುವೈತ್‌ಗೆ ಭೇಟಿ ನೀಡುತ್ತಿದ್ದೇನೆ. ಈ ಭೇಟಿಯು ಕುವೈತ್‌ನೊಂದಿಗಿನ ಭಾರತದ ಐತಿಹಾಸಿಕ ಸಂಬಂಧವನ್ನು ಗಾಢವಾಗಿಸುತ್ತದೆ. ಕುವೈತ್‌ನ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನ ಮಂತ್ರಿ ಅಮೀರ್ ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ. ಇಂದು ಸಂಜೆ, ನಾನು ಕುವೈತ್ನಲ್ಲಿರುವ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಲಿದ್ದೇನೆ ಮತ್ತು ಅರೇಬಿಯನ್ ಗಲ್ಫ್ ಕಪ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುತ್ತೇನೆಂದು ಹೇಳಿದ್ದಾರೆ.

ಗೂಂಡಾಗಳು ಸುವರ್ಣ ಸೌಧದೊಳಕ್ಕೆ ಹೇಗೆ ಬಂದರು? ಯಾವುದಾದರೂ ಕಲ್ಲು ಬಂಡೆಯ ಕರಾಮತ್ತು, ಕುಮ್ಮಕ್ಕು ಇದೆಯಾ? -ಎಚ್.ಡಿ ಕುಮಾರಸ್ವಾಮಿ

 ಬೆಂಗಳೂರು: ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ ಎನ್ನುವುದು ನನ್ನ ಅನುಮಾನ. ಪ್ರತಿಪಕ್ಷ ನಾಯಕರಿಗೇ ರಕ್ಷಣೆ ಇಲ್ಲ ಎಂದ ಮೇಲೆ ವಿಧಾನಮಂಡಲದಲ್ಲಿ ಯಾರ ಭಾವಚಿತ್ರ ಹಿಡಿದರೇನು ಫಲ? ವಿಧಾನ ಪರಿಷತ್ ಸದಸ್ಯರಾದ ಸಿಟಿ ರವಿ ಅವರ ಮೇಲೆ ಸುವರ್ಣಸೌಧದಲ್ಲಿಯೇ ಹಲ್ಲೆ ಯತ್ನ ನಡೆದಿರುವುದನ್ನು ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಖಂಡಿಸಿದ್ದಾರೆ.


ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ


ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಗೌರವಾನ್ವಿತ ಸಚಿವೆ ಬಗ್ಗೆ ಸಿ.ಟಿ.ರವಿ ಅವರು ಅಶ್ಲೀಲ ಪದ ಬಳಸಿದ್ದರೆ ಅದನ್ನು ನಾನು ಸಮರ್ಥಿಸುವುದಿಲ್ಲ. ಅದಕ್ಕೆ ಪ್ರತಿಯಾಗಿ ಸಚಿವೆ ವರ್ತಿಸಿದ ರೀತಿ, ಅವರ ಬೆಂಬಲಿಗರ ಗೂಂಡಾಗಿರಿ ಅತಿರೇಖದ್ದು. ಎಲ್ಲದ್ದಕ್ಕೂ ಡಾ.ಅಂಬೇಡ್ಕರ್ ಅವರ ಸಂವಿಧಾನದಡಿಯಲ್ಲಿ ರೂಪಿತವಾದ ಕಾನೂನಿದೆ. ಸಭಾಪತಿಗಳೂ ರೂಲಿಂಗ್ ನೀಡಿದ್ದಾರೆ. ಆ ನಂತರವೂ ನಡೆಯುತ್ತಿರುವ ಘಟನಾವಳಿಗಳು, ಸಭಾಪತಿಗಳನ್ನೇ ನಿಂದಿಸುವ ಕೆಟ್ಟ ನಡವಳಿಕೆಗಳು ಆಘಾತಕಾರಿ. ಸರಕಾರದಲ್ಲಿರುವ ಕೆಲವರು ಈ ಘಟನೆಗೆ ಜ್ವಾಲೆ ಸ್ವರೂಪ ನೀಡಿ ಪ್ರಚೋದಿಸುತ್ತಿರುವುದು ಕಳವಳಕಾರಿ ಎಂದಿದ್ದಾರೆ.

ಮೀಸಲಾತಿಗಾಗಿ ಪಂಚಮಸಾಲಿ ಮುಖಂಡರು ಸುವರ್ಣಸೌಧದ ಮುಂದೆ ಪ್ರತಿಭಟಿಸಿದ್ದಕ್ಕೆ ಪೊಲೀಸರಿಂದ ಲಾಠಿಚಾರ್ಜ್ ಮಾಡಿಸಿ ಪೌರುಷ ಮೆರೆದಿತ್ತು ಕರ್ನಾಟಕ ಕಾಂಗ್ರೆಸ್ ಸರಕಾರ. ಅಂದು ಪೊಲೀಸರ ಪ್ರತಾಪ ಹೇಳತೀರದು. ಗೇಟಿನಲ್ಲಿಯೇ ತಡೆದು ಆ ಪಂಚಮಸಾಲಿ ಜನರಿಗೆ ರಕ್ತ ಬರುವಂತೆ ಲಾಠಿ ಬೀಸಿದ ಪೊಲೀಸರೇ.., ಈ ಗೂಂಡಾಗಳು ಸುವರ್ಣಸೌಧದೊಳಕ್ಕೆ ಹೇಗೆ ಬಂದರು? ಅಥವಾ... ಅವರೇ ನಿಮ್ಮ ಕಣ್ತಪ್ಪಿಸಿ ಒಳ ನುಸಳಿದರೋ ಅಥವಾ ಸರಕಾರವೇ ಷಡ್ಯಂತ್ರ ಮಾಡಿ ಒಳ ನುಗ್ಗಿಸಿತೋ? ಇಲ್ಲವೇ ಯಾವುದಾದರೂ ಕಲ್ಲು ಬಂಡೆಯ ಕರಾಮತ್ತು, ಕುಮ್ಮಕ್ಕು ಇದೆಯಾ? ಎಂದು ಪ್ರಶ್ನಿಸಿದ್ದಾರೆ. ಸದನದ ಕಾರಿಡಾರಿನಲ್ಲಿಯೇ ಆ ಗೂಂಡಾಗಳು ಶಾಸಕರನ್ನು ಅಟ್ಟಾಡಿಸುತ್ತಾರೆ, ಕೊಲೆಗೆತ್ನಿಸುತ್ತಾರೆ, ಮಾರ್ಷಲ್'ಗಳನ್ನು ಕೆಳಕ್ಕೆ ಕೆಡವಿ ಕ್ರಿಮಿನಲ್ ಪ್ರವೃತ್ತಿ ಮೆರೆಯುತ್ತಾರೆಂದರೆ ಬಂಡೆ ಬೆಂಬಲವಿದೆ ಎಂದೇ ಅರ್ಥ. ಆ ಗೌರವಾನ್ವಿತ ಸಚಿವೆಯ ಆಪ್ತ ಸಹಾಯಕ ಶಾಸಕರ ಮೇಲೇರಿ ಹೋಗುವ, ಕಾರಿಡಾರಿನ ಕಬ್ಬಿಣದ ಬಾಗಿಲನ್ನೇ ಮುರಿಯಲೆತ್ನಿಸಿ ಹಲ್ಲೆಗೆ ಯತ್ನಿಸುವ ದೃಶ್ಯಗಳು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ರಾಜ್ಯದಲ್ಲಿ ಆಡಳಿತ ಸುರಕ್ಷಿತ ಕೈಗಳಲ್ಲಿ ಇಲ್ಲ ಎನ್ನುವುದಕ್ಕೆ ಆ ದೃಶ್ಯಗಳೇ ಸಾಕ್ಷಿ ಎಂದು ಕಿಡಿಕಾರಿದ್ದಾರೆ.

ಶಿಕ್ಷಣದಲ್ಲಿ ಮಕ್ಕಳಿಗೆ 3-ಹೆಚ್ ಸೂತ್ರ ಅಳವಡಿಸಿ: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಕರೆ

 ಮಂಡ್ಯ: ಇಂದು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನೇಕ ಜನ ಶಿಕ್ಷಕರು ಇಲ್ಲಿ ಸೇರಿದ್ದೀರಿ. ಸಂಕಷ್ಟದಲ್ಲಿರುವ ಭಾಷೆಗಳಲ್ಲಿ ಕನ್ನಡವೂ ಒಂದೆಂದು ವಿದ್ವಾಂಸರು ಹೇಳುತ್ತಾರೆ. ಇದಕ್ಕೆ ಕಾರಣಗಳೇನು ಎಂಬುದನ್ನು ಕಂಡುಕೊಳ್ಳಬೇಕಾಗಿದೆ. ನನಗೆ ತಿಳಿದ ಮಟ್ಟಿಗೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲವು ಸಮಸ್ಯೆಗಳಿವೆ. ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಮಕ್ಕಳಿಗೆ 3-ಎಚ್ ಸೂತ್ರವನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


ಸಮ್ಮೇಳನದಲ್ಲಿ ಪ್ರಮುಖವಾಗಿ ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ಹೆಡ್, ಹಾರ್ಟ್ ಮತ್ತು ಹ್ಯಾಂಡ್ ಎಂದು ಕರೆಯಲಾಗುವ 3-ಹೆಚ್ ಸೂತ್ರಗಳು ಮೆದುಳು, ಕರುಣೆ ಮತ್ತು ಕೌಶಲ್ಯವು ಸೇರಿ ರೂಪುಗೊಂಡ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕಾಗಿದೆ. ಬುದ್ಧ ಇದನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದ. ಗಾಂಧೀಜಿಯವರೂ ಇದನ್ನೆ ಹೇಳಿದ್ದರು. ಈಗಿನ ಶಿಕ್ಷಣ ವ್ಯವಸ್ಥೆಯು ಹಳೆಯ ವೈದಿಕ ಶಿಕ್ಷಣ ವ್ಯವಸ್ಥೆಯಂತೆಯೆ ಬಾಯಿಪಾಠ ಮಾಡುವ ಉಪಯೋಗವಿಲ್ಲದ ವ್ಯವಸ್ಥೆಯಾಗಿದೆ. ಕನ್ನಡ ಉಳಿಯಬೇಕಾದರೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರ ಬದಲಾಯಿಸಿ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೆಳೆಯಬೇಕಾಗಿದೆ. ಹೀಗಾದಾಗ ಮಾತ್ರ ಕನ್ನಡದಲ್ಲಿ ಯೋಚಿಸುವ, ಸಂಶೋಧನೆ ಮಾಡುವ, ಉತ್ಪಾದನೆ ಮತ್ತು ಮಾರುಕಟ್ಟೆ ಮಾಡುವ ಭಾಷೆಯಾಗಿ ಕನ್ನಡವು ಬೆಳೆಯುತ್ತದೆ ಎಂದು ಭಾವಿಸುತ್ತಿರುವುದಾಗಿ ಹೇಳಿದರು.

ಸಿದ್ದರಾಮಯ್ಯನವರ ಭಾಷಣದ ಮುಖ್ಯಾಂಶಗಳು : ಮಂಡ್ಯ ಜಿಲ್ಲೆಯು ಅಪ್ಪಟ ಕನ್ನಡಿಗರು ವಾಸಿಸುವ ಜಿಲ್ಲೆ. ಕನ್ನಡ ಭಾಷೆ ಮತ್ತು ಸಂಸ್ಕೃತಿ ವಿಕಾಸಕ್ಕೆ ಈ ಜಿಲ್ಲೆಯ ಕೊಡುಗೆ ಅಪಾರ. ಕ್ರಿ.ಶ 10ನೇ ಶತಮಾನದ ಆತಕೂರಿನ ಶಾಸನ ನಾಡಿನ ಹಳೆಯ ಶಾಸನಗಳಲ್ಲೊಂದು. ನಾಯಿಯೊಂದರ ವೀರ ಮರಣವೂ ಇತಿಹಾಸದಲ್ಲಿ ನೆಲೆ ನಿಲ್ಲುವಂತೆ ಮಾಡಿದ ಶಾಸನ ಮತ್ತು ಅಲ್ಲಿ ಬಳಕೆಯಾದ ಕನ್ನಡವನ್ನು ನಾವು ಮರೆಯಬಾರದು.

ನಮ್ಮ ಭಾಷೆ, ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಪ್ರತಿನಿಧಿಸುತ್ತದೆ. ವಿಶ್ವವೇ ಜಾಗತಿಕ ಹಳ್ಳಿಯಾಗಿ ಪರಿವರ್ತಿತವಾಗಿರುವ ಈ ಸಂದರ್ಭದಲ್ಲಿ ನಾವು ನಮ್ಮತನವನ್ನು ಉಳಿಸಿಕೊಳ್ಳುವ ಅಗತ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. “ನುಡಿ ಬಿಟ್ಟರೆ ನಾಡು ಬಿಟ್ಟಂತೆ ಭಾಷೆಗೇಡಿ ದೇಶಗೇಡಿಯೂ ಆಗುತ್ತಾನೆ ಎಂದು ಕುವೆಂಪು ಹೇಳಿದ್ದರು"

ಓದು-ಬರಹ ಭಾಷೆ ಬರವಣಿಗೆ ಎಲ್ಲವೂ ಪರಕೀಯವಾದರೆ ನಮ್ಮ ಮಾತೃಭಾಷೆಗೆ ಅಪಾಯ ತಪ್ಪಿದ್ದಲ್ಲ. ಯಾವುದೇ ಭಾಷೆಯ ಅಳಿವು ಆ ಭಾಷೆ ಸಮುದಾಯದ ಅಳಿವೂ ಆಗಿರುತ್ತದೆ. ಭಾಷೆ ಬೆಳೆಯುವುದು ಉಳಿಯುವುದು ಅದನ್ನು ಬಳಸಿದಾಗ ಮಾತ್ರ. ಬಳಸದೇ ಹೋದರೆ ಭಾಷೆಯ ಅಸ್ತಿತ್ವ ಹಾಗೂ ಬೆಳವಣಿಗೆ ಎರಡಕ್ಕೂ ಅಪಾಯ ತಪ್ಪಿದ್ದಲ್ಲ.

ಕನ್ನಡದ ಕಲೆ, ಜಾನಪದ, ಭಾಷೆ, ಉದ್ಯೋಗದ ಜೊತೆಗೆ ಕನ್ನಡದ ಅಸ್ಮಿತೆಗೆ ಉಂಟಾಗಿರುವ ಸಮಸ್ಯೆಗಳನ್ನು ಗುರುತಿಸಿ ಹಾಗೂ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸಾಹಿತ್ಯ ಸಮ್ಮೇಳನಗಳು ಮಹತ್ವದ ಕೊಡುಗೆ ನೀಡುತ್ತಾ ಬಂದಿವೆ. ಈ ಸಮ್ಮೇಳನವೂ ಆ ದಿಕ್ಕಿನಲ್ಲಿ ಕೆಲಸ ಮಾಡಲಿ. ಕನ್ನಡ ನೆಲದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ ಎಂಬುದನ್ನು ನೆನಪಿಟ್ಟುಕೊಳ್ಳಿ. ಅನ್ಯ ಭಾಷಿಕರೊಂದಿಗೆ ಅವರದೇ ಭಾಷೆಯಲ್ಲಿ ಮಾತನಾಡುವುದನ್ನು ಬಿಡಿ. ಅವರಿಗೆ ಕನ್ನಡ ಕಲಿಸಿ. ಕನ್ನಡ ಉಳಿಸಿ ಬೆಳೆಸಬೇಕಾಗಿದೆ.

ಇದು ನಿನ್ನ ಭಾಷೆ, ಇದು ದೇಶಭಾಷೆ, ಇದು ಸಾವಿರಾರು ವರ್ಷಗಳ ಸುಪುಷ್ಟ ಸಾಹಿತ್ಯ ಭಾಷೆ, ಇದು ಮಹಾಕವಿಗಳನ್ನೂ ಶಿಲ್ಪಿಗಳನ್ನೂ ರಾಜಾಧಿರಾಜರನ್ನೂ ವೀರಾಧಿವೀರ ರನ್ನೂ ರಸಋಷಿ ದಾರ್ಶನಿಕರನ್ನು ಹಡೆದಿರುವ ಭಾಷೆ ಎಂದು ಕುವೆಂಪು ಹೇಳಿದರು. ಕಾವೇರಿ ಕಣಿವೆಯಲ್ಲಿರುವ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ, ಹೇಮಾವತಿ, ಶಿಂಷಾ, ಲೋಕಪಾವನಿ ಮುಂತಾದ ಜೀವನದಿಗಳು ಹರಿಯುತ್ತಿವೆ. ಕನ್ನಡ ಸಾಹಿತ್ಯ ಪರಂಪರೆಯನ್ನು ಸದಾಕಾಲಕ್ಕೂ ಮೆರೆಸಿರುವ ಮಂಡ್ಯ ಜಿಲ್ಲೆ, ಅಪ್ಪಟ ಕನ್ನಡದ ನೆಲ. ಭತ್ತದ ಕಣಜ, ಸಕ್ಕರೆ ನಾಡು ಎಂದೇ ಜನಜನಿತ. ಜಗತ್ತಿನ ಯಾವ ಮೂಲೆಯ ಭಾಷಿಕರೆ ಬಂದರೂ ಅವರಿಗೆ ಒಂದೇ ತಿಂಗಳಲ್ಲಿ ಕನ್ನಡವನ್ನು ಕಲಿಸುತ್ತೇವೆ ಎಂಬ ಭಾಷಾಭಿಮಾನ ಮತ್ತು ದಿಟ್ಟತನ ಮಂಡ್ಯದ ಜನರದ್ದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

                    ಸಕ್ಕರೆ ನಾಡು ಮಂಡ್ಯದಲ್ಲಿ ಇಂದು ಶುಕ್ರವಾರ ಮೂರು ದಿನಗಳ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೀಪ ಬೆಳಗಿಸುವುದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಶ್ರೀ, ಗೋ.ರು.ಚನ್ನಬಸಪ್ಪ, ಸಚಿವರಾದ ಚಲುವರಾಯಸ್ವಾಮಿ, ಮಹ ದೇವಪ್ಪ, ಶಿವರಾಜ್ ತಂಗಡಗಿ, ಸಭಾಧ್ಯಕ್ಷ ಯು.ಟಿ.ಖಾದರ್, ಸಾಹಿತಿ ಚಂದ್ರಶೇಖರ ಕಂಬಾರ, ಶಾಸಕರು ಸೇರಿದಂತೆ ಹಲವರು ಭಾಗಿ ಯಾಗಿದ್ದರು. 

ಕನ್ನಡ ಭಾಷೆ ಮಕ್ಕಳಿಗೆ ಬೋಧನಾ ಮಾಧ್ಯಮವಾಗಬೇಕು -ಸಮ್ಮೇಳನದ ಅಧ್ಯಕ್ಷ ಗೊ ರು ಚನ್ನಬಸಪ್ಪ

 ಮಂಡ್ಯ: ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯವರೆಗೆ ಕನ್ನಡ ಭಾಷೆಯನ್ನು ಬೋಧನಾ ಮಾಧ್ಯಮವಾಗಿ ಪ್ರತಿಪಾದಿಸುವುದರ ಜೊತೆಗೆ ಇಂಗ್ಲಿಷ್ ಒಂದು ವಿಷಯವಾಗಿ ಕಲಿಸಬೇಕು ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೋ.ರು ಚನ್ನಬಸಪ್ಪ ಒತ್ತಾಯಿಸಿದ್ದಾರೆ.




87ನೇ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಗೊ ಕು ಚನ್ನಬಸಪ್ಪ ಅವರು, ಶಾಲೆಗಳಲ್ಲಿ ಇಂಗ್ಲಿಷ್ ಹೇರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಮತ್ತು ಇಂಗ್ಲಿಷ್ ನ್ನು ಒಂದು ವಿಷಯವಾಗಿ ಕಲಿಯುವುದಕ್ಕೆ ವಿರೋಧ ವ್ಯಕ್ತಪಡಿಸಬಾರದು ಎಂದು ಹೇಳಿದರು.

ಆಂಗ್ಲ ಮಾಧ್ಯಮ ಶಾಲೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡು ಹರಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಈ ಪ್ರವೃತ್ತಿ ಕನ್ನಡಕ್ಕೆ ಮಾರಣಾಂತಿಕ ಹೊಡೆತವನ್ನು ನೀಡುತ್ತದೆ. ಸರಕಾರ ಶಾಲಾ ಶಿಕ್ಷಣವನ್ನು ಬದಲಿಸಿದಂತೆ ಕನ್ನಡಕ್ಕೆ ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆ ಎಂಬ ಸ್ಥಿತಿ ಬದಲಾಯಿತು ಎಂದು ಖೇದ ವ್ಯಕ್ತಪಡಿಸಿದರು.

ಹಳ್ಳಿಗಳಲ್ಲಿನ ಸರ್ಕಾರಿ ಶಾಲೆಗಳ ಸ್ಥಿತಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಅವುಗಳ ವಿಲೀನದ ಬಗ್ಗೆ ಕಳವಳ ವ್ಯಕ್ತಪಡಿಸಿದರು, ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಶಾಲೆಗಳು ಮುಚ್ಚಲ್ಪಟ್ಟಿವೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಉತ್ತಮ ಮೂಲಸೌಕರ್ಯ ಮತ್ತು ಬೋಧಕ ಸಿಬ್ಬಂದಿಯೊಂದಿಗೆ ಸರ್ಕಾರವು ಎಲ್ಲಾ ಪಂಚಾಯತ್‌ಗಳಲ್ಲಿ ಸಂಯೋಜಿತ ಶಾಲೆಗಳನ್ನು ತೆರೆಯಿತು.

ಉಜ್ವಲ ವೃತ್ತಿ ಭವಿಷ್ಯಕ್ಕಾಗಿ ಪೋಷಕರು ತಮ್ಮ ವಾರ್ಡ್‌ಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ ಎಂದು ಒಪ್ಪಿಕೊಂಡ ಗೋ ರು ಚನ್ನಬಸಪ್ಪ, ಶಾಲಾ ಶಿಕ್ಷಣವನ್ನು ಕನ್ನಡದಲ್ಲಿ ನೀಡುವುದು ಮತ್ತು ಇಂಗ್ಲಿಷ್ ನ್ನು ಒಂದು ವಿಷಯವಾಗಿ ಕಲಿಸುವುದರಿಂದ ಮಕ್ಕಳ ಭವಿಷ್ಯಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗುವುದಿಲ್ಲ ಮತ್ತು ಪೋಷಕರಿಗೆ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಸಲಹೆಗಳನ್ನು ನೀಡಲು ಸಾಗರೋತ್ತರ ಕನ್ನಡಿಗರು ಮತ್ತು ಸ್ವಯಂಸೇವಾ ಸಂಸ್ಥೆಗಳನ್ನು ಸಮಿತಿಯ ಅಡಿಯಲ್ಲಿ ತರಬೇಕು ಎಂದು ಸಲಹೆ ನೀಡಿದರು. ಸರ್ಕಾರದ ಬೆಂಬಲದೊಂದಿಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ನವೀಕರಿಸಿದ ಭಾಷೆ ಮತ್ತು ಡೇಟಾದ ಅಭಿವೃದ್ಧಿಗೆ ತಂತ್ರಜ್ಞಾನವನ್ನು ಬಳಸಬೇಕು. ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳಲ್ಲಿ ಆಸಕ್ತಿ ಮತ್ತು ಬದ್ಧತೆಯ ಕೊರತೆಯಿದೆ ಎಂದು ಹೇಳಿದರು.

ರಾಜ್ಯಗಳ ಮೇಲೆ ಹಿಂದಿ ಹೇರಿಕೆಯನ್ನು ವಿರೋಧಿಸಿದ ಅವರು, ಕನ್ನಡ ಕಲಿಕಾ ಕೇಂದ್ರಗಳನ್ನು ತೆರೆಯುವುದನ್ನು ಹೊರತುಪಡಿಸಿ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ ಮತ್ತು ಆರ್ಥಿಕ ಸಂಬಂಧಗಳನ್ನು ಬಲಪಡಿಸಲು ಕನ್ನಡ ಸಾಹಿತ್ಯ ಪರಿಷತ್ತು ಎರಡು ಅಥವಾ ಮೂರು ಅಂತಾರಾಜ್ಯ ಕನ್ನಡ ಸಭೆಗಳನ್ನು ಆಯೋಜಿಸಲು ಸಲಹೆ ನೀಡಿದರು.

ಚನ್ನಬಸಪ್ಪ ಅವರು ತಮ್ಮ ಭಾಷಣದಲ್ಲಿ ಲಿಂಗ ಸಮಾನತೆ ಮತ್ತು ಸಮಾಜದಲ್ಲಿ ಮಹಿಳೆಯರ ತಾರತಮ್ಯವನ್ನು ಎತ್ತಿ ತೋರಿಸಿದರು. ಶಾಸಕಾಂಗ ಮತ್ತು ಸಂಸತ್ತು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳ ಕೊರತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಲಿಂಗ ಸಮಾನತೆಯನ್ನು ಸ್ಥಾಪಿಸುವುದಾಗಿ ಜನಪ್ರತಿನಿಧಿಗಳು ಭರವಸೆ ನೀಡಿದ್ದರೂ, 77 ವರ್ಷಗಳಿಂದ ಅದರ ಅನುಷ್ಠಾನಕ್ಕೆ ತಳಮಟ್ಟದಲ್ಲಿ ಏನೂ ಮಾಡದ ಕಾರಣ ಅವೆಲ್ಲವೂ ಪೊಳ್ಳು ಎಂದು ಸಾಬೀತುಪಡಿಸಿವೆ ಎಂದು ಹೇಳಿದರು. ಮಹಿಳಾ ಪ್ರಾತಿನಿಧ್ಯವು ಸಂಸತ್ತಿನಲ್ಲಿ ಶೇಕಡಾ 13 ಕ್ಕಿಂತ ಕಡಿಮೆ ಮತ್ತು ಕರ್ನಾಟಕ ವಿಧಾನಸಭೆಯಲ್ಲಿ 5 ಶೇಕಡಾ ಇದೆ ಎಂದರು.

ಮಂಡ್ಯದ ಕನ್ನಡದ ನಿರಂತರ ಪ್ರೀತಿ-ಕಸಾಪ ಅಧ್ಯಕ್ಷರು ಶ್ಲಾಘನೆ

ಮಂಡ್ಯದ ಶ್ರೀಮಂತ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪರಂಪರೆಯನ್ನು ಎತ್ತಿ ಹಿಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಸಾಮಾಜಿಕ ಸಾಮರಸ್ಯ, ಸೌಹಾರ್ದ ಮತ್ತು ಸ್ಥೈರ್ಯವನ್ನು ಉತ್ತೇಜಿಸುವಲ್ಲಿ ಮಂಡ್ಯದ ಪಾತ್ರವನ್ನು ಒತ್ತಿ ಹೇಳಿದರು. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಜೋಶಿ, ''ಮಂಡ್ಯ ತನ್ನ ಗಟ್ಟಿತನ ಮತ್ತು ದೃಢಸಂಕಲ್ಪಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಜನರು ನೇಗಿಲಯೋಗಿಗಳು - ನಿಜವಾದ ಮಣ್ಣಿನ ಮಕ್ಕಳು ಎಂದರು.

ಬೇಲ್ ಸಿಕ್ಕ ಮೇಲೆ ಬೆನ್ನು ನೋವು 'ಗಾಯಬ್': ಫಾರಂ ಹೌಸ್‌ನಲ್ಲಿ ದರ್ಶನ್‌ ರಿಲ್ಯಾಕ್ಸ್‌

 ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ನಟ ದರ್ಶನ್ ಅವರು 6 ತಿಂಗಳ ಬಳಿಕ ಶುಕ್ರವಾರ ಮೈಸೂರಿಗೆ ಆಗಮಿಸಿ, ತಮ್ಮ ಫಾರಂ ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದಾರೆ


ನಟ ದರ್ಶನ್


    ರೇಣುಕಾಸ್ವಾಮಿ ಕೇಸ್​ನಲ್ಲಿ ಆರೋಪಿಗಳಿಗೆ ಜೈಲಿನಿಂದ ಮುಕ್ತಿ ಸಿಕ್ಕಿದೆ. ಇದೀಗ ದರ್ಶನ್‌ಗೆ ತಮ್ಮ ತವರಿಗೆ ತೆರಳಲು ಅನುಮತಿ ಸಿಕ್ಕಿದೆ. ಇದರ ಬೆನ್ನಲ್ಲೇ ದಾಸ ತವರೂರಿಗೆ ಪಯಣಿಸಿದ್ದಾರೆ. ತಮ್ಮ ತೋಟದ ಮನೆಯಲ್ಲಿ ಓಡಾಡುತ್ತಾ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ದರ್ಶನ್ ಅವರೊಂದಿಗೆ ತಾಯಿ ಮೀನಾ ತೂಗುದೀಪ, ಪತ್ನಿ ವಿಜಯಲಕ್ಷ್ಮಿ, ನಟ ಧನ್ವಿರ್, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಜೊತೆಗಿದ್ದಾರೆ. ಮೈಸೂರಿಗೆ ಆಗಮಿಸಿರುವ ದರ್ಶನ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಯಾವುದೇ ಫೋಟೋ ತೆಗೆಯದಂತೆ ಫಾರ್ಮ್ ಹೌಸ್ ಗೇಟ್ ಟಾರ್ಪಾಲ್ ನಿಂದ ಮುಚ್ಚಲಾಗಿದೆ.

ರೆಗ್ಯುಲರ್​ ಬೇಲ್ ಸಿಗುತ್ತಿದ್ದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದ ದರ್ಶನ್​ಗೆ ಮೈಸೂರಿನ ಫಾರ್ಮ್ ಹೌಸ್​​​ ಕಡೆ ಹೋಗಲು ತುಡಿತ ಹೆಚ್ಚಾಗಿತ್ತು. ಇದೇ ನಿಟ್ಟಿನಲ್ಲಿ ಸೆಷನ್ಸ್ ಕೋರ್ಟ್‌ಗೆ ದಾಸ ಅರ್ಜಿ ಸಲ್ಲಿಸಿದ್ದರು. ಕೋರ್ಟ್‌ ಕೂಡಾ ದರ್ಶನ್‌ಗೆ ಅನುಮತಿ ನೀಡಿತ್ತು. ಡಿಸೆಂಬರ್ 20ರಿಂದ ಜನವರಿ 05ರವರೆಗೆ 2 ವಾರ ಪರ್ಮಿಷನ್ ಕೊಟ್ಟಿದೆ. ಅನುಮತಿ ಕೊಟ್ಟ ಬೆನ್ನಲ್ಲೇ ನಿನ್ನೆ ಬೆಳಗ್ಗೆ ದರ್ಶನ್ ಮೈಸೂರಿಗೆ ಪಯಣಿಸಿದ್ದಾರೆ. ಫಾರ್ಮ್ ಹೌಸ್​ನಲ್ಲಿ ಪ್ರಾಣಿಗಳ ಜೊತೆ ಕಾಲ ಕಳೆಯುತ್ತ ದರ್ಶನ್ ಓಡಾಡುತ್ತಿದ್ದಾರೆ. ತೋಟದ ಕೆಲಸ ಮಾಡಿಸುತ್ತ ಬೆನ್ನು ನೋವನ್ನೇ ಮರೆತಂತೆ ಕಾಣಿಸಿಕೊಂಡಿದ್ದಾರೆ.

ಸಿ ಟಿ ರವಿಗೆ ಜಾಮೀನು: ಹಿಟ್ಲರ್ ಕಾಂಗ್ರೆಸ್ ಸರ್ಕಾರಕ್ಕೆ ಕಪಾಳಮೋಕ್ಷ; ಬಿ ವೈ ವಿಜಯೇಂದ್ರ

 ಬೆಂಗಳೂರು: ಎಂಎಲ್ಸಿ ಸಿ ಟಿ ರವಿಗೆ ಮಧ್ಯಂತರ ಜಾಮೀನು ನೀಡುವ ಮೂಲಕ ಹೈಕೋರ್ಟ್ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಅಕ್ಷರಶಃ ಕಪಾಳಮೋಕ್ಷ ಮಾಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.


ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ


ಶುಕ್ರವಾರ ಮಾತನಾಡಿದ ಅವರು, ಘಟನೆಯ ಬಗ್ಗೆ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ರವಿ ಅವರಿಗೆ ನೋಟಿಸ್ ಜಾರಿ ಮಾಡದ ಕಾರಣ ಅವರನ್ನು ಬಂಧಿಸಿರುವುದು ಕಾನೂನುಬಾಹಿರ ಎಂದು ತಿಳಿಸಿದೆ. "ಬಿಜೆಪಿ ಎಂಎಲ್‌ಸಿಯನ್ನು ಭಯೋತ್ಪಾದಕನಂತೆ ಮತ್ತು ಪ್ರಾಣಿಯಂತೆ ನಡೆಸಿಕೊಳ್ಳಲಾಗಿದೆ. ದೇಶವು ಈ ಹಿಂದೆ ಇಂತಹ ಘಟನೆಗೆ ಸಾಕ್ಷಿಯಾಗಿರಲಿಲ್ಲ. ನ್ಯಾಯಾಲಯದ ಆದೇಶವು ಕರ್ನಾಟಕದ 'ಹಿಟ್ಲರ್-ಸರ್ಕಾರ'ಕ್ಕೆ ಸ್ಪಷ್ಟ ಕಪಾಳಮೋಕ್ಷವಾಗಿದೆ," ಎಂದು ಅವರು ಹೇಳಿದರು. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ನಾಯಕರೊಂದಿಗೆ ಸಮಾಲೋಚಿಸಿದ ನಂತರ ಮುಂದಿನ ಕ್ರಮವನ್ನು ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಬೆಳಗಾವಿಯ ಸುವರ್ಣ ಸೌಧಕ್ಕೆ ನುಗ್ಗಿ ಎಂಎಲ್‌ಸಿ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ‘ರಾಜಕೀಯ ಷಡ್ಯಂತ್ರ ನಡೆದಿದ್ದು, ಚುನಾಯಿತ ಜನಪ್ರತಿನಿಧಿಗೆ ಈ ರೀತಿಯಾದರೆ, ಜನಸಾಮಾನ್ಯರ ಪಾಡೇನು?’ ಎಂದು ಶಾಸಕ ವಿಜಯೇಂದ್ರ ಪ್ರಶ್ನಿಸಿದ್ದಾರೆ. ಸಿ.ಟಿ. ರವಿಯನ್ನು 500 ಕಿಮಿ ಸುತ್ತಿಸಿದ್ದಾರೆ. ಇದು ಹಿಟ್ಲರ್ ಸರ್ಕಾರವೋ? ಕಾಂಗ್ರೆಸ್ ಸರ್ಕಾರವೋ? ಅಂತ ವಿಜಯೇಂದ್ರ ಪ್ರಶ್ನಿಸಿದ್ರು. ತುರ್ತು ಪರಿಸ್ಥಿತಿ ಹೇರಿರುವ ಕುಖ್ಯಾತಿ ಕಾಂಗ್ರೆಸ್ ಪಕ್ಷದ್ದು. ನೆತ್ತಿಯ ಮೇಲೆ ರಕ್ತ ಬಂದ್ರೂ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ ಅಂತ ಆರೋಪಿಸಿದರು. ಸಿದ್ದರಾಮಯ್ಯನವರೇ, ಅಧಿಕಾರ ಶಾಶ್ವತವಲ್ಲ. ಅಧಿಕಾರದ ಮದದಿಂದ ಹಲ್ಲೆ ಮಾಡುವ ಕೆಲಸ ಮಾಡ್ತಿದ್ದಾರೆ. ಪ್ರತಿ ಅರ್ಧಗಂಟೆಗೆ ಕರೆ ಮಾಡಿ ಯಾರೋ ಸೂಚನೆ ಕೊಡ್ತಿದ್ರು ಎಂದು ಸಿಟಿ ರವಿ ಹೇಳಿದ್ದಾರೆ. ಸಿಟಿ ರವಿ ಉಗ್ರಗಾಮಿಯಾ? ಟೆರರಿಸ್ಟಾ? ಅಂತ ವಿಜಯೇಂದ್ರ ಖಾರವಾಗಿ ಪ್ರಶ್ನಿಸಿದ್ರು.

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...