ಹುನಗುಂದ : ಕೂಡಲಸಂಗಮ ಕ್ರಾಸ್ ಹತ್ತಿರ ಹೂವನೂರಿನಲ್ಲಿ ಜನೇವರಿ ೧೨, ೧೩ ಮತ್ತು ೧೪ ರಂದು ಮೂರನೇ ವರ್ಷದ ಸ್ವಾಭಿಮಾನಿ ಶರಣ ಮೇಳವು ಭಕ್ತಿ ಸಂಭ್ರಮದಿಂದ ನಡೆಯಲಿದ್ದು, ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿಯವರು ಬಸವ ಜ್ಯೋತಿ ಬೆಳಗಿಸಿ ದಿನಾಂಕ : ೧೩ ರಂದು ಶಿವ (ಸೋಮ) ವಾರ ಬೆಳಿಗ್ಗೆ ೧೧ ಗಂಟೆಗೆ ಉದ್ಘಾಟಿಸಲಿದ್ದಾರೆ ಎಂದು ಉತ್ಸವ ಸಮಿತಿಯ ಅಧ್ಯಕ್ಷರು ಮತ್ತು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೂಜ್ಯಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ಶರಣ ಮೇಳದ ಸಮಾರಂಭ ಆಯೋಜನೆಯ ವೇದಿಕೆಯ ಕಾರ್ಯವನ್ನು ಪರಿಶೀಲನೆ ಮಾಡಿರುವ ಪೂಜ್ಯ ಡಾ ಚನ್ನಬಸವಾನಂದ. ಸ್ವಾಮಿಜಿ. ರಾಷ್ಟ್ರೀಯ ಅಶೋಕ ಬೆಂಡಿಗೇರಿ. ಕಲ್ಮೇಶ ಲಿಂಗಾಯತ ಇದ್ದರು.
ಇಂದು ಹುನಗುಂದದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಬಸವ ಧ್ವಜಾರೋಹಣ ಮಾಡಲಿದ್ದಾರೆ. ಬಸವ ತತ್ವ ಚಿಂತಕರಾದ ಕಲಬುರ್ಗಿಯ ಶರಣೆ ಮೀನಾಕ್ಷಿ ಬಾಳಿ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು. ಸಮ್ಮುಖವನ್ನು ಕ್ರಾಂತಿ ಗಂಗೋತ್ರಿ ಮಹಿಳಾಗಣದ ರಾಷ್ಟ್ರೀಯ ಅಧ್ಯಕ್ಷರಾದ ಪೂಜ್ಯ ಸದ್ಗುರು ಮಾತೆ ಸತ್ಯಾದೇವಿಯವರು ವಹಿಸಲಿದ್ದು, ಕುಣಿಗಲ್ ಅರೆಶಂಕರ ಮಠದ ಶ್ರೀ ಸಿದ್ಧರಾಮ ಚೈತನ್ಯ ಸ್ವಾಮಿಗಳು, ಚಿಕ್ಕಮಗಳೂರಿನ ವಿಶ್ವಧರ್ಮ ಪೀಠದ ಶ್ರೀ ಜಯಬಸವಾನಂದ ಸ್ವಾಮಿಗಳು, ಮಂಡ್ಯದ ಓಂಕಾರೇಶ್ವರ ಸ್ವಾಮಿಗಳು, ಚಳ್ಳಕೆರೆಯ ಗುರು ಸ್ವಾಮಿಗಳು, ಧಾರವಾಡದ ಶ್ರೀ ಅಬ್ದುಲ್ ರಜಾಕ ಖಾದ್ರಿ ಸೂಫಿ ಸಂತರು ಸಾನಿಧ್ಯ ವಹಿಸಲಿದ್ದಾರೆ. ಚಿಕ್ಕಮಗಳೂರು ರಾಷ್ಟ್ರೀಯ ಬಸವದಳದ ಗಣನಾಯಕರಾದ ಬಾಣೂರು ಚನ್ನಪ್ಪ ಅಧ್ಯಕ್ಷತೆ ವಹಿಸುವರು.
ಕಬುರ್ಗಿಯ ನಿವೃತ್ತ ಕೆ.ಎ.ಎಸ್. ಅಧಿಕಾರಿ ಎಸ್. ದಿವಾಕರ, ಬಸವತತ್ವ ಚಿಂತಕ ಶ್ರೀಶೈಲ ಜಿ. ಮಸೂತಿ ಬೆಂಗಳೂರು ಹಾಗೂ ಸದಾಶಿವ ಹಚ್ಚಡದ್ ಚಿಕ್ಕೋಡಿ ಅನುಭಾವ ನೀಡಲಿದ್ದಾರೆ. ಮುಂಬೈ ಮಹಾನಗರ ಪಾಲಿಕೆಯ ಮಾಜಿ ಮಹಾಪೌರ ಶಶಿಕಾಂತ ಬಿರಾಜದಾರ, ಹೈದ್ರಾಬಾದಿನ ವೆನ್ನ ಈಶ್ವರಪ್ಪ, ಸಂಗಮೇಶ್ವರಜಿ, ಸೋಲಾಪೂರದ ವಿಜಯಕುಮಾರ ಹತ್ತೂರೆ, ನವದೆಹಲಿಯ ವೈಜನಾಥ ಬಿರಾದಾರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ದಿನಾಂಕ: ೧೨ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ ಅವರ ಅಧ್ಯಕ್ಷತೆಯಲ್ಲಿ ಚಿಂತಾಗೋಷ್ಠಿ-೧ ನಡೆಯಲಿದೆ. ಬಸವಧರ್ಮ ಪೀಠದ ವಿವಾದ ಬಗೆಹರಿಸಿಕೊಂಡು ಒಂದಾಗುವ ಕುರಿತು ಮತ್ತು ಧರ್ಮಗ್ರಂಥ ಬಿಡುಗಡೆ, ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಮುಂದೆ ರೂಪಿಸಬೇಕಾದ ಹೋರಾಟದ ಕುರಿತು ಚರ್ಚೆ ನಡೆಯಲಿದೆ. ಸಂಜೆ ೫-೦೦ ಗಂಟೆಗೆ ಚಿಂತಾಗೋಷ್ಠಿ-೨ ನಡೆಯಲಿದ್ದು, ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಶಿವಪುರ, ವಿಷಯ ಮಂಡನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶೆಗುಣಸಿ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಮೋಹನ ಕರೆಪ್ಪನವರ ವಹಿಸಲಿದ್ದಾರೆ. ಉದ್ಘಾಟನೆಯನ್ನು ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿಯವರು ಉದ್ಘಾಟಿಸುವರು. ಪಿರಗೊಂಡ ಪಾಟೀಲ ವಿಜಯಪುರ ಧ್ವಜಾರೋಹಣ ಮಾಡಲಿದ್ದಾರೆ. ದಿನಾಂಕ: ೧೩ ರಂದು ಸಾಯಂಕಾಲ ೪ ರಿಂದ ೬ ಗಂಟೆಯವರೆಗೆ ಮಕ್ಕಳ ಗೋಷ್ಠಿ ನಡೆಯಲಿದ್ದು, ಸಂಜೆ ೬-೦೦ ಗಂಟೆಗೆ ರಾಷ್ಟ್ರೀಯ ಬಸವದಳದ ಸಮಾವೇಶ ಪ್ರಾರಂಭವಾಗುವುದು. ಕಲಬುರ್ಗಿ ಯುನೈಟೆಡ್ ಆಸ್ಪತ್ರೆಯ ಮಾಲೀಕರಾದ ಡಾ. ವಿಕ್ರಮ ಸಿದ್ಧಾರೆಡ್ಡಿ ಉದ್ಘಾಟನೆ ಮಾಡುವರು. ಶರಣ ಸಾಹಿತಿಗಳಾದ ಸಚ್ಚಿದಾನಂದ ಚಟ್ನಳ್ಳಿ, ಕಲಬುರ್ಗಿಯ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಇಂದುಮತಿ ಪಾಟೀಲ, ಬೀದರಿನ ಸಿದ್ಧವೀರ ಸಂಗಮದ ಅವರು ಉಪನ್ಯಾಸ ನೀಡಲಿದ್ದಾರೆ. ಹಿರಿಯೂರಿನ ಶರಣ ತಾರಕನಾಥ ಅಧ್ಯಕ್ಷತೆ ವಹಿಸುವರು.
ದಿನಾಂಕ: ೧೪ ಬಸವ ಕ್ರಾಂತಿಯ ದಿನದಂದು ಲಿಂಗಾಯತ ಧರ್ಮ ಸಂಸ್ಥಾಪನ ದಿನಾಚರಣೆ ನಿಮಿತ್ಯ ಸಮುದಾಯ ಪ್ರಾರ್ಥನೆ, ವಚನ ಪಠಣ, ಸಾಮೂಹಿಕ ಇಷ್ಟಲಿಂಗಪೂಜೆ ಹಾಗೂ ಶರಣವ್ರತಧಾರಿಗಳಿಗೆ ಆಶೀರ್ವಾದ ಮಾಡುವ ಕಾರ್ಯಕ್ರಮ ಇರುತ್ತದೆ. ಪೂಜ್ಯಶ್ರೀ ಅಭಿನವ ಗುರುಲಿಂಗಾರೂಢರು ಹೂವನೂರ, ಮಲಕನಕೊಪ್ಪ ಅಕ್ಕಮಹಾದೇವಿ ಮಠದ ಮಾತೆ ಶಾಂತಾದೇವಿಯವರು ಮತ್ತು ಮುಕ್ತಿನಾಥಯ್ಯ ಮಠ ದೂಮನಸೂರಿನ ಶ್ರೀ ಶಂಕರಲಿoಗ ಸ್ವಾಮಿಗಳು ಮತ್ತು ಸಾನಿಧ್ಯ ವಹಿಸಿದ ಎಲ್ಲಾ ಪೂಜ್ಯರು ಉದ್ಘಾಟನೆ ನೆರವೇರಿಸಲಿದ್ದಾರೆ. ಮಾಜಿ ಸಚಿವ ಮುರಗೇಶ ನಿರಾಣಿ ಅವರ ಧರ್ಮಪತ್ನಿ ಕಮಲಮ್ಮ ಮುರಗೇಶ ನಿರಾಣಿ ಅವರು ಬಸವ ಧ್ವಜಾರೋಹಣ ಮಾಡುವರು. ದಾಸೋಹಿಗಳಾದ ಶರಣೆ ಲೇಪಾಕ್ಷಮ್ಮ ವೀರಭದ್ರಗೌಡರು ಇವರಿಂದ ಗುರುಬಸವ ಪೂಜೆ ನಡೆಯಲಿದೆ. ಕು. ತರಂಗಿಣಿ ಕಲ್ಮೇಶ ರಾಷ್ಟ್ರೀಯ ಬಸವದಳ ಚಿತ್ರದುರ್ಗ, ಕು. ವಾಣಿ – ಕು. ವಚನ ಸಾಹಿತ್ಯ ಸಂತೋಷ ಕಟಾಳೆ ರಾಷ್ಟ್ರೀಯ ಬಸವದಳ ಕಲಬುರಗಿ, ಕು. ಕಾವೇರಿ ಶಿವಕುಮಾರ ಕಟಗಿ ರಾಷ್ಟ್ರೀಯ ಬಸವದಳ ಧಾರವಾಡ ಇವರಿಂದ ವಚನ ನೃತ್ಯ ನಡೆಯಲಿದೆ. ಶರಣೆ ಹರ್ಷಿತಾ ಶಿವರುದ್ರ ದಂಪತಿಗಳು ಜನ್ಯಾ ಆರ್ಕೆಸ್ಟಾç, ಮೈಸೂರು, ಶರಣೆ ಅಕ್ಕಮಹಾದೇವಿ ಶಿವಾನಂದ ಸ್ವಾಮಿ ರಾಷ್ಟ್ರೀಯ ಬಸವದಳ ಬೀದರ ಇವರಿಂದ ವಚನ ಗಾಯನ ನಡೆಯಲಿದೆ. ಅದೇ ರೀತಿ ಶರಣ ಭೀಮರಾವ ಬಿರಾದಾರ ಮತ್ತು ತಂಡದವರು ರಾಷ್ಟಿಯ ಬಸವದಳ ಹೈದ್ರಾಬಾದ, ಶರಣ ರೇಣುಕಪ್ಪನವರು ರಾಷ್ಟ್ರೀಯ ಬಸವದಳ ಬಿಡದಿ, ಶರಣ ಮಹಾದೇವಪ್ಪ ಗುಗ್ಗರಿ ಹಾಗೂ ಸಂಗಡಿಗರು ಭಜನಾ ಮಂಡಳಿ ಅಬ್ಬಿಗೇರಿ ಇವರಿಂದ ವಚನ ಭಜನೆ ನಡೆಯಲಿದೆ.
ಹೀಗೆ ಮೂರು ದಿನಗಳ ಕಾಲ ನಡೆಯಲಿರುವ ಉತ್ಸವಕ್ಕೆ ಆಗಮಿಸುವ ಎಲ್ಲ ಭಕ್ತರಿಗಾಗಿ ವಸತಿ ಮತ್ತು ಪ್ರಸಾದದ ವ್ಯವಸ್ಥೆಯನ್ನು ಸ್ವಾಭಿಮಾನಿ ಶರಣಮೇಳ ಉತ್ಸವ ಸಮಿತಿ ವತಿಯಿಂದ ಮಾಡಲಾಗಿದೆ. ಸುಮಾರು ೫೦ ಸಾವಿರ ಬಸವ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಕರ್ನಾಟಕ, ಮಹಾರಾಷ್ಟ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ಬಸವ ಭಕ್ತರು ಲಿಂಗಾಯತ ಬಾಂಧವರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಉತ್ಸವ ಸಮಿತಿಯ ಕಾರ್ಯದರ್ಶಿ ಪೂಜ್ಯ ಮಾತೆ ಸತ್ಯಾದೇವಿಯವರು ತಿಳಿಸಿದರು. ಕರ್ನಾಟಕ ರಾಜ್ಯ ರಾಷ್ಟ್ರೀಯ ಬಸವದಳದ ಉಪಾಧ್ಯಕ್ಷರಾಗಿರುವ ಅಶೋಕ ಬೆಂಡಿಗೇರಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿರುವ ಚಿತ್ರದುರ್ಗದ ಕಲ್ಮೇಶ ಲಿಂಗಾಯತ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.