ads

Search This Blog

Sunday, 12 January 2025

ಸಮನ್ವಯ ಸಂತ ತಾತನವರಿಗೆ ಸಂದ ಗೌರವ ಫೆಲೋಶಿಪ್

ದೇವದುರ್ಗ:ದರ್ಗಾ ಸೂಫಿ ಸಂತರ ಪರಂಪರೆಯ ಮುಂದುವರಿಕೆಯಾಗಿ ಶರಣರು,ದಾಸರು,ಸಂತರು, ಅನುಭಾವಿಗಳ ಪರಂಪರೆ ಜೊತೆಗೆ ಸರ್ವಧರ್ಮ, ಜಾತ್ಯತೀತ ನಿಲುವುಗಳ ಮೂಲಕ ಸಮನ್ವಯ ಸಂತರಾದ ಪೂಜ್ಯ ಸೈಯದ್ ಜಹೀರ್ ಪಾಷಾ ಖಾದ್ರಿ ಅವರ ಕಾರ್ಯ ಅನುಕರಣೀಯ ಎಂದು ಕಲಬುರಗಿ ಹಿರಿಯ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಅಭಿಪ್ರಾಯ ಪಟ್ಟರು


 ಹಜರತ್ ಸೈಯದ್ ಜಹೀರುದ್ದೀನ್ ಪಾಶಾ ಖಾದ್ರಿ ದರ್ಗಾದಲ್ಲಿ ಏರ್ಪಡಿಸಿದ ಸಮಸ್ತ ಭಕ್ತಾದಿಗಳು ಮತ್ತು ಜಿಲ್ಲಾ ಅಹಿಂದ ಸಹಯೋಗದಲ್ಲಿ ಏರ್ಪಡಿಸಿದ ಡಾ.ಬಿ. ಆರ್.ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್-೨೦೨೪
ಪುರಸ್ಕೃತರಾದ ಪೂಜ್ಯ ಶ್ರೀ ಸೈಯದ್ ಜಹೀರಪಾಶಾ ಖಾದ್ರಿ ಅವರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನ ನುಡಿ ಆಡುತ್ತಾ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ,ಸಾಂಸ್ಕೃತಿಕ ಕಾರ್ಯಗಳು ಮೂಲಕ ಜನ ಮಾನಸದ ಜನಪರ ನಿಲುವಿನ ತಾತನವರಾಗಿ ಅವರ ಸೇವೆಗೆ ಸಂದ ಪುರಸ್ಕಾರ ಎಂದು ಬಣ್ಣಿಸಿದರು.
          ಸಿಪಿಐ ಎನ್.ವೈ ಗುಂಡುರಾವ್‌ ಜ್ಯೋತಿ ಬೆಳಗಿ‌ಸಿ ಉದ್ಘಾಟಿಸಿ ತಾತನವರ ಕೊಡುಗೆ ಇಲ್ಲಿಯ ಸದ್ಭಕ್ತರಿಗೆ ಕೊಟ್ಟ ಕಾಣಿಕೆ ಭಕ್ತಿ ಭಾವದಿಂದ ಕೂಡಿದೆ ಎಂದರು.ರಾಜ್ಯ ಉಪಾಧ್ಯಕ್ಷ ರೈತ ಸಂಘದ ಲಕ್ಷ್ಮಿಕಾಂತ ಪಾಟೀಲ,ಮಾತನಾಡಿದರು.ಪುರಸಭೆ ಮುಖ್ಯಾಧಿಕಾರಿ  ಹಂಪಣ್ಣ, ಜಿಲ್ಲಾ ಅಹಿಂದ ಸಂಚಾಲಕ ಮಾನಶಯ್ಯ ನಾಯಕ,ಪುರಸಭೆ ಸದಸ್ಯ ಮಾನಪ್ಪ ಮೇತ್ರಿ,ಉಪಸ್ಥಿತಿ
ಅಧ್ಯಕ್ಷತೆಯನ್ನು ಎಚ್.ಪಿ.ಜಡ್ ದ ಸೈಯದ್ ಭಾಷಾ ಸಾಬ್ ವಹಿಸಿದ್ದರು.ಮರಡಿ ಸಣ್ಣ ಫಕೀರ ಸಾಹೆಲಿನ ತಾತ,ಸಲ್ತಾನಪುರ,ಷ.ಬ್ರ.ಸಂಗಮನಾಥ ಸ್ವಾಮೀಜಿ‌ ಅಥಣಿ ಸಾನಿಧ್ಯವಹಿಸಿದ್ದರು
ಎಂ.ಡಿ ಇಸಾಕ್ ಗೌರಂಪೇಟೆ ಸ್ವಾಗತಿಸಿದರು ಪತ್ರಕರ್ತ ಬಸನಗೌಡ ಪಾಟೀಲ ಪ್ರಾಸ್ತಾವಿಕ ನುಡಿ ಆಡಿದರು.ಮಾನಿಶಯ್ಯ ನಿರೂಪಿಸಿದರು. ಡಾ.ಮಲ್ಲಯ್ಯ ಅತ್ತನೂರ,ಡಾ.ರಾಜಕುಮಾರ ಮಾಳಗೆ ಸೇರಿದಂತೆ ಅಪಾರ ಭಕ್ತ ಸಮುದಾಯ ಸೇರಿ ವಿಜೃಂಭಣೆಯಿಂದ ಸಮಾರಂಭ ಜರುಗಿತು. 

Saturday, 11 January 2025

ಅಖಾಡಕ್ಕಿಳಿದ BSY, ಪಕ್ಷ ಬಲಬಡಿಸಲು ರಾಜ್ಯ ಪ್ರವಾಸಕ್ಕೆ

 ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಭಿನ್ನಮತ, ಬಣ ರಾಜಕೀಯ ತಾರಕಕ್ಕೇರಿರುವ ನಡುವಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಖಾಡಕ್ಕಿಳಿದಿದ್ದು, ಶೀಘ್ರದಲ್ಲೇ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.

ಪಕ್ಷದ ಮಾಜಿ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಾರದಿಂದ ಪಕ್ಷದ ಮುಖಂಡರೊಂದಿಗೆ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಬಲವರ್ಧನೆ ಕುರಿತು ಸಮಾಲೋಚನೆ ನಡೆಸಲಾಗಿದೆ. ಮುಂದಿನ ವಾರದಿಂದ ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಭೇಟಿ ನೀಡಲಾಗುವುದು. ಪ್ರತಿ ದಿನ 2 ಜಿಲ್ಲೆಯಂತೆ ಪ್ರವಾಸ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರವಾಸದ ವೇಳೆ ಸಾರ್ವಜನಿಕ ಸಭೆ ನಡೆಸುವುದಿಲ್ಲ. ಬದಲಿಗೆ ಕಾರ್ಯಕರ್ತರನ್ನು ಸೇರಿಸಿ ಚರ್ಚೆ ನಡೆಸಲಾಗುವುದು. ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಸನ್ನದ್ದಗೊಳಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲಾಗುವುದು. ಸುಮಾರು 500-600 ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಗುವುದು. ದಿನಕ್ಕೆ ಎರಡು ಜಿಲ್ಲೆಗಳಿಗೆ ಭೇಟಿ ನೀಡುವ ಚಿಂತನೆಗಳಿದ್ದು, ಈ ಕುರಿತ ದಿನಾಂಕಗಳನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಹೇಳಿದರು.

ಇನ್ನು ಸಭೆ ಕುರಿತು ಮಾತನಾಡಿದ ವಿಜಯೇಂದ್ರ ಅವರು ಯಡಿಯೂರಪ್ಪ ಸೇರಿದಂತೆ ಪಕ್ಷದ ಹಿರಿಯ ನಾಯಕರು 2023 ರ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳು, ಪಕ್ಷದ ನಾಯಕರೊಂದಿಗೆ ಸಭೆ ನಡೆಸಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಿಗೆ ಮುಂಚಿತವಾಗಿ ಪಕ್ಷವನ್ನು ಬಲಪಡಿಸುವ ಕ್ರಮಗಳ ಕುರಿತು ಚರ್ಚಿಸಿದ್ದೇವೆಂದು ಹೇಳಿದರು.

ಇದು ಶಕ್ತಿ ಪ್ರದರ್ಶನ ಅಥವಾ ಯಾರನ್ನೂ ಪಕ್ಷದಿಂದ ಹೊರಹಾಕುವ ಉದ್ದೇಶದಿಂದ ನಡೆಸಿಲ್ಲ. ಪಕ್ಷವನ್ನು ಹೇಗೆ ಸರಿಪಡಿಸಬೇಕೆಂಬುದು ನನ್ನ ಕರ್ತವ್ಯವಬೂ ಆಗಿದೆ. ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚಿಸಿದ್ದೇವೆಂದು ಹೇಳಿದರು.

ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ರಾಜ್ಯವನ್ನು ಅಧೋಗತಿಗೆ ತೆಗೆದುಕೊಂಡು ಹೋಗುತ್ತಿದೆ. ರಾಜ್ಯವು ಅಭಿವೃದ್ಧಿ ಶೂನ್ಯವಾಗಿದೆ. ಬಾಣಂತಿಯರು, ನವಜಾತ ಶಿಶುಗಳ ಸರಣಿ ಸಾವು ಸಂಭವಿಸುತ್ತಿದೆ. ಭ್ರಷ್ಟಾಚಾರ, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದೆ. ಈ ಸರ್ಕಾರದ ಬಗ್ಗೆ ರಾಜ್ಯದ ಜನ ಬೇಸತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರು ಕೂಡ ಮುಖ್ಯಮಂತ್ರಿಗಳ ಬಗ್ಗೆ, ಆಡಳಿತ ಪಕ್ಷದ ಬಗ್ಗೆ ಬೇಸತ್ತಿದ್ದಾರೆಂದು ಹೇಳಿದರು.

ಕಾಂಗ್ರೆಸ್‌ನ ಡಿನ್ನರ್‌ ಪಾಲಿಟಿಕ್ಸ್‌ ಬಗ್ಗೆ ಮಾತನಾಡಿ, ಡಿಕೆ ಶಿವಕುಮಾರ್‌ ಅವರು ಬೆಳಗಾವಿಯ ಅಧಿವೇಶನದಲ್ಲಿ ಒಂದು ಮಾತು ಹೇಳಿದ್ದಾರೆ. ಎಸ್‌ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸ್ಥಾನ ಸಿಗದಿದ್ದ ವೇಳೆ ಅಧಿಕಾರ ಸಿಗದಿದ್ದರೆ ಒದ್ದು ಕಿತ್ಕೋಬೇಕು ಎಂದು ಅವರ ಗುರುಗಳು ಹೇಳಿದ್ದರು ಎಂದು ಹೇಳಿದ್ದರು. ಅದನ್ನು 15 ವರ್ಷಗಳ ಬಳಿಕ ಡಿಕೆ ಶಿವಕುಮಾರ್‌ ಅವರು ಸದನದ ಒಳಗಡೆ ನೆನಪು ಮಾಡಿಕೊಂಡಿದ್ದಾರೆ. ಆ ಮಾತಿನ ಮರ್ಮ ನಿಮಗೂ ಗೊತ್ತಿದೆ. ಇದರ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಪವರ್‌ ಶೇರಿಂಗ್ ಫಾರ್ಮುಲಾ ಅಂತ್ಯಗೊಂಡಿದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ.

ಅರಮನೆ ಮೈದಾನದಲ್ಲಿ ಜ.14, 15 ರಂದು ಸಿದ್ದರಾಮೇಶ್ವರರ ಜಯಂತಿ ಉದ್ಘಾಟನೆಗೆ ಯಡಿಯೂರಪ್ಪ, ಸಮಾರೋಪದಲ್ಲಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: 852ನೇ ಶ್ರೀ ಗುರು ಸಿದ್ದರಾಮೇಶ್ವರ ಜಯಂತಿ ಈ ಬಾರಿ ಬೆಂಗಳೂರಿನಲ್ಲಿ ಅರಮನೆ ಆವರಣದಲ್ಲಿ ಜ.14 ಮತ್ತು 15ರಂದು ಎರಡು ದಿನಗಳ ಕಾಲ ಆಯೋಜನೆ ಮಾಡಲಾಗಿದೆ ಎಂದು ಜಯಂತಿ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎನ್.ಸಿದ್ದರಾಮಪ್ಪ ಹೇಳಿದ್ದಾರೆ.

ಪ್ರೆಸ್ ಕ್ಲಬ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಯಂತಿಯ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಕರ್ಮಯೋಗಿ ಸಿದ್ಧರಾಮೇಶ್ವರರ ಜಯಂತಿಯನ್ನು ನೊಳಂಬ ಲಿಂಗಾಯಿತ ಸಂಘದಿಂದ ಪ್ರತಿ ವರ್ಷವೂ ಮಾಡಿಕೊಂಡು ಬರಲಾಗುತ್ತಿದೆ ಎಂದರು.


12ನೇ ಶತಮಾನದಲ್ಲಿ ಕೆರೆ ಕಟ್ಟೆಗಳನ್ನು ಕಟ್ಟಿಸುವ ಮೂಲಕ ತನ್ನದೇ ಆದ ಕಾಯಕ ಮಾಡುತ್ತಿದ್ದ ಸಿದ್ದರಾಮ, ಅಲ್ಲಮಪ್ರಭುಗಳಿಂದ ದೀಕ್ಷೆ ಪಡೆದು ಬಸವಾದಿ ಶಿವಶರಣರ ಜತೆಯಲ್ಲಿ ಶರಣ ತತ್ವಗಳನ್ನು ಅನುಷ್ಠಾನ ಮಾಡುತ್ತಿದ್ದ. ಅಂದಿನಿಂದಲೂ ಸಿದ್ದರಾಮನ ಭಕ್ತರು ಮತ್ತು ಅನುಯಾಯಿಗಳು ನಾಡಿನ ಉದ್ದಗಲಕ್ಕೂ ನೆಲೆಸಿದ್ದಾರೆ ಎಂದರು.
ನೊಳಂಬರು ಎಂದರೆ ಶ್ರಮಜೀವಿಗಳು. ರಾಜ್ಯದಲ್ಲಿ 12ನೇ ಶತಮಾನದಿಂದ 18ನೇ ಶತಮಾನದ ತನಕ ಸುಧೀಘವಾಗಿ ಆಳಿದ ಸಾಮಂತ ಮನೆತನಗಳಲ್ಲಿ ನೊಳಂಬ ಅರಸು ಮನೆತನವೂ ಒಂದು. ಈ ಸಂದರ್ಭದಲ್ಲಿ ನೊಳಂಬ ಸ್ಮರಣ ಸಂಚಿಕೆಯನ್ನು ಹೊರತರಲಾಗುತ್ತಿದೆ. ನೊಳಂಬ ಇತಿಹಾಸ ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದ್ದು, ನೊಳಂಬ ವೆಬ್ ಸೈಟ್ ಅನಾವರಣ ಮಾಡಲಾಗುವುದು ಎಂದರು.
14 ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆರಗೋಡಿ ರಂಗಾಪುರದ ಪೀಠಾಧ್ಯಕ್ಷ ಶ್ರೀ ಗುರು ಪರದೇಶಿ ಕೇಂದ್ರ ಸ್ವಾಮೀಜಿ, ಪಂಡಿತಾರಾಧ್ಯ ಸ್ವಾಮೀಜಿ,ಗೋಡೆಕೆರೆ ಸ್ವಾಮೀಜಿ, ಕುಪ್ಪೂರು ತಮ್ಮಡಿಹಳ್ಳಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ. ಮಾಜಿ ಎಂಪಿ ಜಿ.ಎಸ್.ಬಸವರಾಜು ಅಧ್ಯಕ್ಷತೆ ವಹಿಸಲಿದ್ದು, ಅರಣ್ಯ ಸಚಿವ ಈಶ್ವರ ಖಂಡ್ರೆ, ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
15ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಿಡ್ಲೇಹಳ್ಳಿ ಮಠದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ, ಬೆಟ್ಟದಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರೋ ಭಾಷಣ ಮಾಡಲದಿದಾರೆ. ಸಚಿವರಾದ ಎಂ.ಬಿ.ಪಾಟೀಲ್, ಭೈರತಿ ಸುರೇಶ್, ಶಾಸಕ ಶಾಮನೂರು ಶಿವಶಂಕರಪ್ಪ ಎವರು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.


ಇದೇ ಸಂದರ್ಭದಲ್ಲಿ ಸಾಹಿತ್ಯ ಗೋಷ್ಠಿ ಏರ್ಪಡಿಸಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತಿತರರು ಭಾಗವಹಿಸಲಿದ್ದಾರೆ. ಮಹಿಳಾ ಮತ್ತು ಕೃಷಿ ಗೋಷ್ಠಿಯನ್ನು ಏರ್ಪಡಿಸಲಾಗಿದೆ. ಎರಡೂ ದಿನಗಳು ಸಾಂಸ್ಕೃತಿಕ ಕಾರ್ಯಕ್ರಮ, ಇಷ್ಠಲಿಂಗಪೂಜೆ, ಲಿಂಗಧಾರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನೊಳಂಬ ಸಂಘದ ಮಾಜಿ ಅಧ್ಯಕ್ಷ ಕಾಮನಕೆರೆ ಶಶಿಧರ್, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಬೆಟ್ಟದಹಳ್ಳಿ ರೇಣುಕಾರಾಧ್ಯ, ವೈ.ಎಸ್.ಸಿದ್ದರಾಮೇಗೌಡ, ಎಚ್.ಆರ್. ಮಲ್ಲಿಕಾರ್ಜುನಯ್ಯ, ನೊಳಂಬ ಸಂಘದ ಕಾಮನಕೆರೆ ಶಶಿಧರ್, ಪದಾಧಿಕಾರಿಗಳಾದ ಎಚ್.ರಾಮಲಿಂಗಪ್ಪ, ರುದ್ರಪ್ಪ, ಎಸ್.ಆರ್.ನಟರಾಜ್, ಕುಬೇರಪ್ಪ, ಜಿ.ಎಸ್.ಧನಂಜೇಯ ಮತ್ತಿತರರು ಹಾಜರಿದ್ದರು.

ಬದುಕಿನ ಭವ್ಯತೆ ಅರಿತವರು ಸಿದ್ಧೇಶ್ವರ ಶ್ರೀಗಳು: ಸತ್ಯಂಪೇಟೆ


ಸಿದ್ಧೇಶ್ವರ ಸ್ಮರಣೆಯಲ್ಲಿ ಸ್ವರ ನಮನ

ಕಲಬುರಗಿ: ಅಧಿಕಾರ, ಅಂತಸ್ತು, ಸಂಪತ್ತು ಪ್ರಧಾನವಾದ ಬದುಕಿಗಿಂತ ನೆಮ್ಮದಿ ಪ್ರಧಾನ ಬದುಕು ಅತ್ಯುತ್ತಮ ಎಂದು ಹೇಳುತ್ತ ಮಾನವರನ್ನು ಜಗದ ಜಂಜಡದಿಂದ ಮೇಲೆತ್ತುವ ಪ್ರಯತ್ನ ಮಾಡುತ್ತಿದ್ದ ಸಿದ್ಧೇಶ್ವರ ಶ್ರೀಗಳು ನುಡಿದು ನಡೆದ ಬದುಕು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿದೆ ಎಂದು ಪತ್ರಕರ್ತ- ಸಾಹಿತಿ ಶಿವರಂಜನ ಸತ್ಯಂಪೇಟೆ ಹೇಳಿದರು.

ಸದ್ಗುರು ಕಲಾ ಸಂಸ್ಥೆ 14ನೇ ವಾರ್ಷಿಕೋತ್ಸವ ಹಾಗೂ ಶತಮಾನದ ಸಂತ ಸಿದ್ಧೇಶ್ವರ ಮಹಾಸ್ವಾಮಿಗಳ ದ್ವಿತೀಯ ಪುಣ್ಯ ಸ್ಮರಣೋತ್ಸವ ನಿಮಿತ್ತ ಇಲ್ಲಿನ ಶಿವಾಜಿ ನಗರದ ಶ್ರೀ ಬಸವಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಸ್ವರ ನಮನ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ಧೇಶ್ವರ ಶ್ರೀಗಳು ಬದುಕಿನ ದಿವ್ಯತೆ, ಭವ್ಯತೆಯನ್ನು ಅರಿತ ಶತಮಾನದ ಸಂತ ಎಂದು ಅಭಿಪ್ರಾಯಪಟ್ಟರು.

ಸಂಸಾರವನ್ನು ಅನುಭಾವದ ನೆಲೆಯಲ್ಲಿ ನೋಡಿದಾಗಲೇ ಜೀವನದ ಸೌಂದರ್ಯ ದರ್ಶನವಾಗುವುದು, ಸತ್ಯಂ, ಶಿವಂ, ಸುಂದರಂ, ಯಾವುದನ್ನು ತೆಗೆದು ಹಾಕಲು ಬರುವುದಿಲ್ಲವೋ ಅದುವೇ ಸತ್ಯ, ಮನಸ್ಸನ್ನು ತಿಕ್ಕಿ ತೊಳೆಯಬೇಕು, ಸತ್ಯ, ಸ್ಥಿರವಾಗಿರುವುದೇ ದೇವರು ಎಂಬ ಅವರ ಪ್ರವಚನದ ಮಾತುಗಳು ಜನರ ಬದುಕಿಗೆ ತಂಪು ಹಾಗೂ ಆತ್ಮಾನಂದ ನೀಡುವ ಸಾಧನಗಳಾಗಳಾಗಿವೆ ಎಂದು ವಿವರಿಸಿದರು.

ಬಸವಕಲ್ಯಾಣ ಗುಣತೀರ್ಥವಾಡಿ ಕಲ್ಯಾಣ ಮಹಾ ಮನೆಯ ಬಸಸವಪ್ರಭು ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ನೀಲಮ್ಮನ ಬಳಗದ ಜಿಲ್ಲಾ ಘಟಕದ ಅಧ್ಯಕ್ಷೆ ಜಯಶ್ರೀ ಚಟ್ನಳ್ಳಿ ಉಪನ್ಯಾಸ ನೀಡಿದರು. 

ಚಲನಚಿತ್ರ ಸಂಗೀತ ನಿರ್ದೇಶಕ ಅಮರ ಹಿರೇಮಠ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು. ಉದ್ದಿಮೆದಾರ ಸುಖದೇವ ಎಚ್. ಪೂಜಾರಿ, ಮಂಜುನಾಥ ಜಮಾದಾರ ವೇದಿಕೆಯಲ್ಲಿದ್ದರು.

ಸೂರ್ಯಕಾಂತ ಡುಮ್ಮಾ, ಬಸಯ್ಯ ಗುತ್ತೇದಾರ, ಸೈದಪ್ಪ ಸಪ್ಪನಗೋಳ್, ಸಂಗಮೇಶ ನೀಲಾ, ಭಗವಂತರಾವ ಕಣ್ಣೂರ ಬಸವಕುಮಾರ ಕೆಂಗನಾಳ ಮುಂತಾದವರು ಸ್ವರ ನಮನ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. 

ಬಂಡಯ್ಯ ಶಾಸ್ತ್ರೀ ನಿರೂಪಿಸಿದರು. ಶಿವಲಿಂಗಪ್ಪ ಕೆಂಗನಾಳ ಸ್ವಾಗತಿಸಿದರು. ವಿಜಯಲಕ್ಷ್ಮೀ ಕೆಂಗನಾಳ ವಂದಿಸಿದರು.‌ ಸುಪ್ರಿಯಾ ಸುತಾರ ವಚನ ನೃತ್ಯ ಮಾಡಿದರು. ಇದೇವೇಳೆಯಲ್ಲಿ ಶ್ರೀಗಳ ಸ್ಮರಣೋತ್ಸವ ನಿಮಿತ್ತ ಆಯೋಜಿಸಿದ್ದ ಪ್ರಬಂಧ ಹಾಗೂ ಗಾಯನ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

shodhavani Kannada Daily 11-01-2025

 

https://drive.google.com/file/d/1KFjk8ggB75Z0jic5AugmUNBEzYq8FehV/preview?

ಹಾವೇರಿ ಜಿಲ್ಲೆಯ ಹೆಮ್ಮೆಯ ನಾರಿಮಣಿ ಪ್ರತಿಭಾ ಶಿರೋಮಣಿ ಲೇಖಕಿ ಸಂಕಮ್ಮ ಜಿ. ಸಂಕಮ್ಮ

 ಹಾವೇರಿ ಜಿಲ್ಲೆಯ ಹೆಮ್ಮೆಯ ನಾರಿಮಣಿ ಪ್ರತಿಭಾ ಶಿರೋಮಣಿ ಲೇಖಕಿ ಸಂಕಮ್ಮ ಜಿ. ಸಂಕಮ್ಮನವರ

(ಸಂಕಷ್ಟಗಳಿಗೆ ಎದೆಗುಂದದ ಬ್ಯಾಡಗಿಯ ಸುವರ್ಣ ಕನ್ನಡತಿ ಲೇಖಕಿ ಸಂಕಮ್ಮ ಸಂಕಣ್ಣನವರ ಜೀವನ ಚಿತ್ರಣ)
(ಎಡರು ತೊಡರುಗಳನ್ನೆ ಸೊಡರಾಗಿಸಿ ಸಮೃದ್ಧಿ ಪ್ರಕಾಶನ ಹುಟ್ಹಾಕಿ ಸಹಜ ಸಮೃದ್ಧ ಸಾಹಿತ್ಯವನ್ನು ಕೃಷಿಮಾಡುತ್ತಾ, ಮೌಲಿಕ ಸಂದೇಶವನ್ನು ನೀಡುತ್ತಿರುವ ಪ್ರತಿಭಾ ಶಿರೋಮಣಿ, ಬ್ಯಾಡಗಿ ಕೆಂಪು ಮೆಣಸಿನಕಾಯಿ ನಾಡಿನ ನಾಡರತ್ನ ಕವಯಿತ್ರಿ, ವೈಚಾರಿಕ ಪ್ರಬುದ್ಧ ಲೇಖಕಿ, ದಾಂಪತ್ಯ ಮತ್ತು ಸಮಾಜಕ್ಕೆ ನ್ಯಾಯೋಚಿತ ಕೊಡುಗೆ ನೀಡಿದ ಸಮಾಜಮುಖಿ ಚಿಂತಕಿ, ಸರಳತೆಯ ಸಾಕಾರಮೂರ್ತಿ, ಕ್ರಿಯಾಶೀಲ ಸಂಘಟಕಿ, ಮಹಿಳೆರಿಗೆಲ್ಲಾ ಮಾದರಿಯ ನಾರಿ, ಶೋಷೀತೃ ಧ್ವನಿ, ಸಾಹಿತ್ಯ ಧ್ಯೇನಿ, ಪ್ರಬುದ್ಧ ಉಪನ್ಯಾಸಕಿ, ಗೋಣೇಶ ಪ್ರಿಯೆ ವಚನಾಂಕಿತೆ, ನಾಡೋಜ ಪಾಟೀಲ ಪುಟ್ಟಪ್ಪನವರ ಮಾನಸ ಪುತ್ರಿ, ಮಾತೃಹೃದಯಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಂಕಮ್ಮ ಗೋಣೇಶ ಸಂಕಣ್ಣನವರು ಹಿರೇಕೆರೂರಿನ ಪೋಲಿಸ್ ಮೈದಾನದಲ್ಲಿ ೧೦ ಮತ್ತು ೧೧ ಜನವರಿ ೨೦೨೫ರ ಗುರುವಾರ ವ ಶುಕ್ರವಾರ ಎರಡುದಿನ ಆಯೋಜನೆಯಾಗಿರುವ ಹಾವೇರಿ ಜಿಲ್ಲಾ ೧೪ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಯಾಗಿರುವ ಸನ್ಮಾನ್ಯರ ಬಹುಮುಖ ಜೀವನ ಶೋಧನಾ ಬದುಕು ಬರಹದ ಮೇಲೆ ಬೆಳಕು ಚೆಲ್ಲುವ ಕಿರು ಲೇಖನ)
 

ಸಾಮರಸ್ಯದ ನಾಡಾದ ಹಾವೇರಿ ಜಿಲ್ಲೆಯ ಐತಿಹಾಸಿಕ, ಸಾಹಿತ್ಯಿಕ, ಸಾಂಸ್ಕೃತಿಕ ಹಿನ್ನಲೆ

ಹಾವೇರಿ ಜಿಲ್ಲೆಯ ಇತಿಹಾಸವು ಇತಿಹಾಸಪೂರ್ವ ಕಾಲಕ್ಕೆ ಸೇರಿದೆ. ತುಂಗಭದ್ರಾ ಮತ್ತು ವರದಾ ನದಿಯ ಜಲಾನಯನ ಪ್ರದೇಶಗಳಲ್ಲಿ ಇತಿಹಾಸಪೂರ್ವ ನಾಗರಿಕತೆಗಳ ಅಸ್ತಿತ್ವದ ಬಗ್ಗೆ ಪುರಾವೆಗಳು ಲಭ್ಯವಿವೆ. ಶಿಲಾಯುಗದ ನಾಗರಿಕತೆಗಳನ್ನು ಬಿಂಬಿಸುವ ಕಲ್ಲಿನ ಕೆತ್ತನೆಗಳು ಜಿಲ್ಲೆಯ ಹಲವೆಡೆ ಕಂಡುಬರುತ್ತವೆ. ಚಾಲುಕ್ಯರು, ರಾಷ್ಟ್ರಕೂಟರಂತಹ ವಿವಿಧ ಅರಸರ ಸುಮಾರು 1300 ಶಿಲಾ ಬರಹಗಳು ಜಿಲ್ಲೆಯಲ್ಲಿ ಕಂಡುಬರುತ್ತವೆ. ಕರ್ನಾಟಕದ ಯಾವುದೇ ಪ್ರಮುಖ ಸಾಮ್ರಾಜ್ಯಗಳು ಹಾವೇರಿಯಲ್ಲಿ ತಮ್ಮ ಕೇಂದ್ರ ಕಚೇರಿಯನ್ನು ಹೊಂದಿರದಿದ್ದರೂ, ಅನೇಕ ಮಾಂಡಲಿಕರು ಈ ಜಿಲ್ಲೆಯಲ್ಲಿ ಆಳ್ವಿಕೆ ನಡೆಸಿದರು.

ಭಾವೈಕ್ಯಕವಿ ಸಂತ ಶಿಶುನಾಳ ಶರೀಫರು, ಸಾಮರಸ್ಯ ಕವಿ ಭಕ್ತಶ್ರೇ಼ಷ್ಟ ಕನಕದಾಸರು, ಸೌಹಾರ್ದ ಕವಿ ವರಕವಿ ಸರ್ವಜ್ಞ, ಹಾನಗಲ್ ಕುಮಾರ ಶಿವಯೋಗಿಗಳು, ವಾಗೀಶ ಪಂಡಿತಾರಾಧ್ಯರು, ಕಾದಂಬರಿ ಪಿತಾಮಹ ಗಳಗನಾಥರು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು, ಪಂಡಿತ ಪುಟ್ಟರಾಜ ಗವಾಯಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ:ವಿನಾಯಕ ಕೃಷ್ಣ ಗೋಕಾಕರು ಮುಂತಾದ ಮಹನಿಯರುಗಳಿಗೆ ಜನ್ಮನೀಡಿದ ಹೆಮ್ಮೆಯ ಜಿಲ್ಲೆ ಹಾವೇರಿ. ದಾಸಸಾಹಿತ್ಯದ ಹೆಗ್ಗಳಿಕೆ ಹೆಳವನಕಟ್ಟೆ ಗಿರಿಯಮ್ಮ ಕ್ರಿ.ಶ.೧೭೫೦ರ ಸುಮಾರಿಗೆ ರಾಣೆಬೆನ್ನೂರಿನಲ್ಲಿ ಜೀವಿಸಿದ್ದಳು. ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ಹುತಾತ್ಮ ಮೈಲಾರ ಮಹದೇವಪ್ಪನವರು ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನವರು. ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿವಂಗತ ಹಳ್ಳಿಕೇರಿ ಗುದ್ಲೆಪ್ಪನವರು ಹಾವೇರಿ ಜಿಲ್ಲೆಯ ಹೊಸರಿತ್ತಿಯವರು. ಮುದ್ರಣಕಾಸಿ ಗದಗ ಜಿಲ್ಲೆ ಜೊತೆಗೆ ಏಲಕ್ಕಿ ನಗರಿ ಹಾವೇರಿ ಜಿಲ್ಲೆ ಹಿಂದೆ ಅವಿಭಜಿತ ವಿದ್ಯಾಕಾಸಿ ಧಾರವಾಡ ಜಿಲ್ಲೆಯ ಭಾಗವಾಗಿತ್ತು. ಜನರ ಬೇಡಿಕೆಯ ಮೇರೆಗೆ ಹಾವೇರಿ ಜಿಲ್ಲೆಯನ್ನು ಹಳೆಯ ಧಾರವಾಡ ಜಿಲ್ಲೆಯಿಂದ ಬೇರ್ಪಡಿಸಿ ೨೪.೦೮.೧೯೯೭ ರಂದು ಹಾವೇರಿ ನೂತನ ಜಿಲ್ಲೆ ರಚಿಸಲಾಯಿತು. ಅಂದಿನಿಂದ ಇಂದಿನವರೆಗೆ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ೦೫ ಜನ ದಿಗ್ಗಜ ಅಧ್ಯಕ್ಷರುಗಳ ಸಾಹಿತ್ಯ ಪರಿಚಾರಿಕೆಯಲ್ಲಿ ೧೩ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳು, ೦೧ ಮಹಿಳಾ ಸಾಹಿತ್ಯ ಸಮ್ಮೇಳನ ರಸ ಪೂರ್ಣವಾಗಿ ಜನಮಾನಸದಲ್ಲಿ ನಾಡು ನುಡಿ ಸಂಸ್ಕೃತಿಯ ಚಿಂತನೆ ಪ್ರವಹಿಸಿದೆ. ಅವುಗಳಲ್ಲಿ ಡಾ. ಕೆ. ಎಚ್. ಮುಕ್ಕಣ್ಣನವರ (೧೯೯೮ – ೨೦೦೧) ರವರ ಅವಧಿಯಲ್ಲಿ ಡಾ. ಬೋಜ ರಾಜ ಪಾಟೀಲ ಸರ್ವಾಧ್ಯಕ್ಷತೆಯಲ್ಲಿ ೦೧ ನೇ ಸಮ್ಮೇಳನವು ೨೧ – ೨೨ ಜನವರಿ ೨೦೦೦ರಂದು ರಾಣೇಬೆನ್ನೂರಲ್ಲಿ ನಡೆದು ಅಂದಿನಿಂದ ೧೩ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ರಾಣೇಬೆನ್ನೂರಲ್ಲಿ ನಡೆದಾಡುವ ಗ್ರಂಥಾಲಯ ಜೆ.ಎಮ್. ಮಠದರವರ ಸರ್ವಾಧ್ಯಕ್ಷತೆಯಲ್ಲಿ ೨೦೨೪ ರ ಪೆಬ್ರವರಿ ೧೧-೧೨ ರಂದು ನಡೆದು ಯಶಕಮಡಿದ್ದು. ಅವುಗಳಲ್ಲಿ ಪ್ರೊ. ಮಾರುತಿ ಶಿಡ್ಲಾಪುರ (೨೦೦೮ – ೨೦೧೧) ರವರ ಕಾಲಾವಧಿಯಲ್ಲಿ * ೦೪ ನೇ ಸಮ್ಮೇಳನವು ಡಾ. ಚನ್ನಕ್ಕ ಪಾವಟೆ ಮುಂದಾಳತ್ವದಲ್ಲಿ ಬಮ್ಮನ ಹಳ್ಳಿಯಲ್ಲಿ ೫ – ೬ ಪೆಬ್ರವರಿ ೨೦೦೯ನೇ ಇಸ್ವಿಯಲ್ಲಿ ಜರುಗಿದೆ. ಪ್ರಥಮ ಮಹಿಳಾ ಅಧ್ಯಕ್ಷತೆ ಗೌರವ ಒಲಿದಂತಾಯಿತು. ಹಾವೇರಿ ಜಿಲ್ಲಾ ಮೊದಲ ಮಹಿಳಾ ಸಾಹಿತ್ಯ ಸಮ್ಮೇಳನವು ಪ್ರೊ. ಗಿರಿಜಾದೇವಿ ದುರ್ಗದಮಠರ ಮುಖಂಡತ್ವದಲ್ಲಿ ಹಾವೇರಿಯಲ್ಲಿ ೨೪ ಪೆಬ್ರವರಿ ೨೦೧೮ನೇ ಇಸ್ವಿಯಲ್ಲಿ ಜರುಗಿದ್ದು ಐತಿಹಾಸಿಕ ದಾಖಲೆಯಾಗಿದೆ. ಪ್ರಸುತ್ತ ಹಿರೇಕೆರೂರುರಿನ ಪೋಲಿಸ್ ಮೈದಾನದಲ್ಲಿ ೧೦ ವ ೧೧ ಜನವರಿ ೨೦೨೫ರ ಶುಕ್ರವಾರ ಮತ್ತು ಶನಿವಾರ ನಡೆಯುವ ಹಾವೇರಿ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ ಬ್ಯಾಡಗಿಯ ಬಹುಮುಖ ಪ್ರತಿಭಾ ಸಂಪನ್ನ ಲೇಖಕಿ ಸಂಕಮ್ಮ ಗೋಣೇಶ ಸಂಕಮ್ಮನವರಿಗೆ ಒಲಿದು ಬಂದಿರುವುದು ಮಹಿಳಾ ಸಬಲೀಕರಣಕ್ಕೆ ಹಿಡಿದ ನಿದರ್ಶನವಾಗಿದೆ. ಈ ಸಂದರ್ಭದಲ್ಲಿ ಹಾವೇರಿ ನೆಲ ಮೂಲದ ಮಹಿಳಾ ಸಾಧಕಿಯರ ಕುರಿತು ಉಲ್ಲೇಖಿಸುವುದು ಸಂದರ್ಭೋಚಿತವಾಗಿದೆ. ಹಾವೇರಿ ಜಿಲ್ಲೆಯ ಮಹಿಳಾ ಸಾಧಕಿಯರ ಕ್ಲುಪ್ತ ಚಿತ್ರಣ ಸ್ವಾತಂತ್ರ್ಯ ಹೊರಾಟಗಾರ್ತಿ ಸಿದ್ಧಮ್ಮ ಮೈಲಾರ ಮೋಟೆಬೆನ್ನೂರಿನವರು. ಕಾದಂಬರಿ ಪಿತಾಮಹ ಗಳಗನಾಥರ ಮೊಮ್ಮಗಳಾದ ಸುರೇಖಾ ಕುಲಕರ್ಣಿ ಅವರು ಕಾದಂಬರಿಕಾರನ ಕಾದಂಬರಿ ಕೃತಿ ಬರೆದಿದ್ದಾರೆ. ಹಾವೇರಿ ಮೂಲದ ಕುಲಶೇಖರಿ ಕಾವ್ಯನಾಮದ ಲೇಖಕಿ ಉಷಾ ಪಾಟೀಲ್ ಈಗ ಮೈಸೂರಿನಲ್ಲಿ ನೆಲೆಸಿದ್ದಾರೆ. ಕನ್ನಡದಿಂದ ಹಿಂದಿ ಭಾಷೆಗೆ ಅನುವಾದಿಸುವ ಮಹಾದೇವಿ ಕಣವಿಯವರು ಹಾವೇರಿ ನೆಲದವರು. ಕವಯತ್ರಿ ಸಿದ್ದುಮತಿ ನೆಲುಗಿ ರಾಣಿ ಚೆನ್ನಮ್ಮನ ಮೇಲೆ ಮಹಾಕಾವ್ಯವನ್ನು ರಚಿಸಿದ್ದಾರೆ. ಹಿಂದಿ ಚಲನಚಿತ್ರ ನಿರ್ದೇಶಕಿ ಅರುಣ ರಾಜ ಪಾಟೀಲ್ ಅವರು ಆರು ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಬಿ. ಜಿ. ಬಣಕಾರರ ಮಗಳಾದ ರೂಪಾ ತಂಬಾಕರ ಕವಿತ್ರಿಯಾಗಿದ್ದಾರೆ. ದೀಪ ಗೋನಾಳ್ ಇವರು ಕೂಡ ಕವಯಿತ್ರಿಯಾಗಿದ್ದಾರೆ. ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ಪುರಸ್ಕೃತೆ ಯುವ ಕವಯತ್ರಿ ಮಧು ಕಾರಗಿ ಬ್ಯಾಡಗಿಯವರು. ದಿವಂಗತ ಗಿರಿಜಾ ದುರ್ಗದಮಠ ಇವರು ಕೂಡ ಕವಯಿತ್ರಿ ಮತ್ತು ಲೇಖಕಿಯಾಗಿದ್ದರು. ಇನ್ನೂ ಹಲವು ವನಿತೆಯರು ದೇಶದಾದ್ಯಂತ ಹಾವೇರಿ ಹಿರಿಮೆಯನ್ನು ಮೆರೆಸಿದ್ದಾರೆ. ಇವರೆಲ್ಲರಲ್ಲಿ ಲೇಖಕಿ ಸಂಕಮ್ಮ ಸಂಕಮ್ಮನವರ ಬಹುಮುಖ ಸಾಹಿತ್ಯ ಸಾಧನೆ ಕರುನಾಡಿನ ಸಾರಸ್ವತ ಲೋಕಕ್ಕೆ ವಿಶಿಷ್ಟವಾದ ಕೊಡುಗೆದಾಗಿದೆ. ಈ ಪಾದರಸದಂತ ಚಲನಶೀಲ ವ್ಯಕ್ತಿತ್ವ ಹೊಂದಿರುವ ಸಂಕಮನ್ನವರಿಗೆ ೨೭ ಡಿಸೆಂಬರ್ ೨೦೧೬ರಲ್ಲಿ ನಡೆದ ಬ್ಯಾಡಗಿ ತಾಲ್ಲೂಕು ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜನೆಯಾಗಿ ನೇಮಕವಾದದನ್ನು ಸ್ಮರಿಸಲು ಯೋಗ್ಯವಾದದ್ದು. ಕೆಂಪು ಮೆಣಸಿನಕಾಯಿಗೆ ವಿಶ್ವಖ್ಯಾತಿವೆತ್ತ ಸಂಕಮ್ಮನವರ ಕಾರ್ಯಕ್ಷೇತ್ರ ಬ್ಯಾಡಗಿಯ ವಿಶೇಷತೆ ಕರುನಾಡ ರಾಜ್ಯ ರಾಜ್ಯಧಾನಿ ಸಿಲಿಕಾನ್ ಸಿಟಿ ಬೆಂಗಳೂರು, ಸಾಂಸ್ಕೃತಿಕ ರಾಜ್ಯಧಾನಿ ಮೈಸೂರು ಮತ್ತು ವಾಣಿಜ್ಯ ರಾಜ್ಯಧಾನಿ ಹುಬ್ಬಳ್ಳಿಯಿಂದ ಬ್ಯಾಡಗಿಗೆ ರೈಲು ನಿಲ್ದಾಣವಿದ್ದು; ಮೋಟೆಬೆನ್ನೂರಿಗೆ ಹೋಗಿ ಅಲ್ಲಿಂದ ೫ ಕಿ. ಮೀ ದೂರದಲ್ಲಿ ಬ್ಯಾಡಗಿ ಪಟ್ಟಣಕ್ಕೆ ಹೋಗಲು ಸುಲಭಸಾಧ್ಯ. ಯಾಲಕ್ಕಿ ನಾಡಾದ ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿಗೆ ಒಳ್ಳೆಯ ಕೆಂಪು ಬಣ್ಣ ಇದೆ. ಹಾಗೆಯೇ ಒಳ್ಳೆಯ ರುಚಿಯೂ ಕೂಡ ಇದೆ. "ಬ್ಯಾಡಗಿ ಮೆಣಸಿನಕಾಯಿ" ವಿಶ್ವ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನಸಹಿತ ಪ್ರಸಿದ್ಧಿ ಪಡೆದಿದೆ. ಹಾಗೆಯೇ ಸುತ್ತೇಳು ಹಳ್ಳಿಗಳ ಸಾವಿರಾರು ಜನರಿಗೆ ಜೀವನ ನಡೆಸಲು ಕೆಲಸ ನೀಡಿ ಜನರ ಜೀವನಾಡಿಯಾಗಿದೆ. ಇಲ್ಲಿನ ಮೆಣಸಿನಕಾಯಿ ತಳಿಗಳಾದ ಬ್ಯಾಡಗಿ ಡಬ್ಬಿ ಮತ್ತು ಕಡ್ಡಿ ತಮ್ಮದೇ ಆದ ಬಣ್ಣ, ರುಚಿ ಗಳಿಂದ ಪ್ರಖ್ಯಾತವಾಗಿದೆ. ಕಾಗಿನೆಲೆ ಕನಕದಾಸರ ಕರ್ಮಭೂಮಿ, ಕದರಮಂಡಲಗಿ ಕಾಂತೇಶ ಇಲ್ಲಿಯ ಮತ್ತೊಂದು ಪ್ರಸಿದ್ಧ ದೇವಸ್ಥಾನ. ಜೊತೆಗೆ, ಮಹಾತ್ಮ ಗಾಂಧೀಜಿ ಕರೆಕೊಟ್ಟಿದ್ದ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಏಕೈಕ ಕನ್ನಡಿಗ ಮೈಲಾರ ಮಹದೇವಪ್ಪ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದವರು. ಕಬ್ಬು, ಭತ್ತ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಇಲ್ಲಿನ ರೈತರು ಬೆಳೆಯುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಹಾವೇರಿ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಭಾವೈಕ್ಯತಾ ನಾಡು ಹಿರೇಕೆರೂರಿನ ವಿಶೇಷತೆ ಹಾವೇರಿ ಜಿಲ್ಲಾ ಕೇಂದ್ರದಿಂದ ೪೪ ಕಿಲೋಮೀಟರ್ ದೂರದಲ್ಲಿರುವ ಹಿರೇಕೆರೂರು ತಾಲ್ಲೂಕು ಒಂದು ಪಂಚಾಯತ್ ಪಟ್ಟಣವಾಗಿದೆ.​ಭಾವೈಕ್ಯ ಕವಿ ಸರ್ವಜ್ಞನ ಜನ್ಮಸ್ಥಳ ಅಬಲೂರು ಗ್ರಾಮ ಹಿರೇಕೆರೂರು ತಾಲ್ಲೂಕಿನಲ್ಲಿ ಇದ್ದು; ಪಟ್ಟಣದದಿಂದ 12 ಕಿಮೀ ದೂರದಲ್ಲಿದೆ. ಹರಿಭಕ್ತ ದಾಸರಾದ ಸಾಮರಸ್ಯ ಕವಿ ಸಂತ ಶ್ರೀ ಕನಕದಾಸರ ಜನ್ಮಸ್ಥಳವಾದ ಕಾಗಿನೆಲೆ ಪೀಠವು ಹಿರೇಕೆರೂರಿನಿಂದ ೨೪.೫. ಕಿಮೀ ದೂರದಲ್ಲಿದೆ. "ದೊಡ್ಡ ಕೊಳದ ಗ್ರಾಮ" ಎಂಬ ಹೆಸರು (ಘಟಕಗಳಿಂದ ಬಾಡಿಗೆ "ಹಿರೆ", ದೊಡ್ಡದು; "ಕೆರೆ", ಕೊಳ; ಮತ್ತು ಊರು, ಗ್ರಾಮ). ಈ ಹೆಸರನ್ನು "ಹೀ ರೇ ಕೇ ರೂರ್" ಎಂದು ಉಚ್ಚರಿಸಲಾಗುತ್ತದೆ. ನಗರಕ್ಕೆ ಸಮೀಪದಲ್ಲಿರುವ ರಾಣೆಬೆನ್ನೂರು ಬೀಜಗಳು ಮತ್ತು ಸಗಟು ಬಟ್ಟೆ ಮಾರುಕಟ್ಟೆಯಲ್ಲಿ ಶ್ರೀಮಂತ ಸರಕು ಮಾರುಕಟ್ಟೆಯಾಗಿದೆ. ಹಿರೇಕೆರೂರು ತಾಲೂಕಿನ ಜನರು ಪ್ರತಿನಿತ್ಯ ೩೭ ಕಿಲೋಮೀಟರ್ ದೂರದಲ್ಲಿರುವ ರಾಣೇಬೆನ್ನೂರಿಗೆ ಖರೀದಿಗೆ ಬರುತ್ತಾರೆ. ಲೇಖಕಿ ಸಂಕಮ್ಮ ಸಂಕಣ್ಣವರ ರವರ ಬಾಲ್ಯ, ಶಿಕ್ಷಣ ದಾಂಪತ್ಯ ಜೀವನದ ವ ವ್ಯಕ್ತಿತ್ವದ ಕಿರು ಪರಿಚಯ ಸಮೃದ್ಧಿ ೩೭ ನಿಸರ್ಗನಗರ, ಟೀಚರ್ಸ್ ಕಾಲೋನಿ ಕದರಮಂಡಲಗಿ ರಸ್ತೆ ಬ್ಯಾಡಗಿ (ಪಿ.ಕ್ರ.೫೮೧೧೦೬) ಯಲ್ಲಿ ವಾಸವಾಗಿರುವ ಗಟ್ಟಿಗಿತ್ತಿ ಸಂಕಮ್ಮನವರು ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ೧೦ ಅಗಸ್ಟ್ ೧೯೫೬ ರಂದು ಜನಿಸಿದರು. ತಂದೆ ಪುಟ್ಟಪ್ಪ ಮೋಟೆಬೆನ್ನೂರ (ಸ್ವಾತಂತ್ರ್ಯ ಹೋರಾಟಗಾರರು, ಬಹುಭಾಷಾ ಪಂಡಿತರು, ಉತ್ತಮ ವಾಗ್ಮಿಗಳು), ತಾಯಿ- ಪಾರ್ವತಮ್ಮ (ಗೃಹಿಣಿ). ಇವರ ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಬ್ಯಾಡಗಿಯಲ್ಲಿ ಸಂಪನ್ನಗೊಂಡಿತ್ತು. ಪಿ. ಯು. ಸಿ. ಶಿಕ್ಷಣ ಹಾವೇರಿಯ ಜಿ .ಹೆಚ್. ಕಾಲೇಜಿನಲ್ಲಿ, ಬಿ. ಎಸ್ಸಿ ಪದವಿ ಹಂಸಭಾವಿ ಕಾಲೇಜ್‌ನಲ್ಲಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಜಾನಪದ (ಬಾಹ್ಯ) ಪದವಿಯನ್ನು ಪಡೆದರು. ೧೯೮೦ ಮೇ ೪ ರಂದು ಮೆಣಸಿನಕಾಯಿ ವ್ಯಾರಿಗಳಾದ ಬ್ಯಾಡಗಿಯ ಶ್ರೀ ಗೋಣೇಶ ಬಿ. ಸಂಕಣ್ಣನವರ (ಬಿ.ಎಸ್ಸಿ) ಇವರೊಂದಿಗೆ ವಿವಾಹವಾದರು. ಇವರ ಉದರದಲ್ಲಿ ಜನ್ಮದಳೆದ ಎರಡು ಗಂಡು ಮಕ್ಕಳಲ್ಲಿ ಹರ್ಷ ವ್ಯಾಪಾರಮಾಡುತಿದ್ದು; ಭಾರತ ಬ್ಯಾಂಕ್ ಉದ್ಯೋಗಿಯಾಗಿ ಸಾರ್ಥಕ ಜೀವನ ನಡೆಸುತ್ತಿದ್ದಾರೆ. ಅಪರಾ ಜೀವನಾನುಭವ ಪಡೆದಿರುವ ಇವರರಿಗೆ ಓದು, ಬರಹ, ಪೇಂಟಿಂಗ್ಸ್ ಮಾಡುವುದು ಮತ್ತು, ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ ನೀಡುವುದು, ಜಾಗೃತಿ ಶಿಬಿರ, ಉಪನ್ಯಾಸ ಮತ್ತಿತರ ಹವ್ಯಾಸಗಳಿಂದ ಬದುಕನ್ನು ಹಸನುಗಿಳಿಸಿಕೊಂಡವರು. ೧೯೯೬ರಲ್ಲಿ ಗಂಭೀರ ಅಪಘಾತಕ್ಕೀಡಾಗಿ ಆರೋಗ್ಯದಲ್ಲಿ ಏರುಪೇರಾದರು ಧೃತಿಗೆಡದೆ ಜೀವನ ಸಾರ್ಥಕ್ಯಕ್ಕಾಗಿ ಪರಿಶ್ರಮಿಸಿದವರು. ೨೦೦೪ರಲ್ಲಿ ಸಮೃದ್ಧಿ ಪ್ರಕಾಶನ ಸ್ಥಾಪನೆ ಮಾಡಿ ಹತ್ತು ಹಲವಾರು ಗ್ರಂಥಗಳನ್ನು ಪ್ರಕಟಿಸಿ, ಸಾಹಿತ್ಯ ಕೃಷಿ ಮತ್ತು ಪ್ರಕಟಣೆಯ ಆಗು ಹೋಗುಗಳ ಹೊಣೆಗಾರಿಕೆಯ ಬಗ್ಗೆ ಆಳವಾಗಿ ಬಲ್ಲವರ ಮುಂದೆ ಸೈ ಎನಿಸಿಕೊಂಡಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ತಮ್ಮ ಅಸ್ತಿತ್ವವನ್ನು ಅಚ್ಚೊತ್ತಿದ ಛಲದಂಕ ಮಲ್ಲೆಯಾಗಿ ಸಾಹಿತ್ಯ ಕೃಷಿ ಮೂಲಕ ನಾಡಿಗೆ ಖುಷಿಯ ಸಂದೇಶವನ್ನು ನೀಡಿದ ಸುವರ್ಣ ಕನ್ನಡತಿ ಎಂದರೆ ಅತಿಶೋಕ್ತಿ ಆಗದು. "ನಾ ಹುಟ್ಟಿ ಮೆಟ್ಟಿದ ನನ್ನೂರು ಮೂಕವಾಗಿ ಕಂಡಿತು ನನ್ನ ಬದುಕು ಅದು ಹರಿಸಿ ಹಾರೈಸಿತ್ತು ಅದಕು ಇದಕು ಎದಕು" ಎಂಬ ತನ್ನ ಜನ್ಮಭೂಮಿಯ ಉಪಕಾರವನ್ನು ಹೃದಯಾಂತರಾಳದಿಂದ ಸ್ಮರಿಸುವ ಮಾನವ್ಯ ಕಾರುಣ್ಯದ ಮಾತೆ. ಭೀಕರ ಅಪಘಾತಕ್ಕೀಡಾಗಿ ದೈಹಿಕ ಅನಾರೋಗ್ಯದಿಂದ ಬಳಲುತ್ತಿದ್ದರೂ ಧೃತಿಗೆಡದೇ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡ ಗಟ್ಟಿಗಿತ್ತಿ. ಇವರು ಸಿರಿಬರಲಿ, ಉರಿ ಬರಲಿ ಜೀವನ ಮಾತ್ರ ಸಿಹಿಯನ್ನು ಹಂಚುತ್ತಾ ಸಾಗಲಿ ಎಂಬ ನೀತಿ ಇವರದು. ಸದಾ ಸಮವಿನಯದ ಹಸನ್ಮುಖಿ ಸಂಕಮ್ಮನವರು ಆಸ್ಥೆಯಿಂದ ಸ್ವದೇಶ - ಪರದೇಶಗಳಲ್ಲಿ ಭಾಗವಹಿಸಿದ, ಆಯೋಜಿಸಿದ ಸಾಹಿತ್ಯ ಸಮ್ಮೇಳನಗಳ ಪಕ್ಷಿನೋಟ ಇವರು ಯಾವತ್ತು ವೇದಿಕೆ ಹಾರಾ ತುರಾಯಿ ಮತ್ತು ಹೆಚ್ಚುಗಾರಿಕೆ ಬಯಸಿದವರಲ್ಲ ಆದರೆ ಇವರ ಪ್ರತಿಭೆಗೆ ಸಾವಿರಾರೂ ವೇದಿಕೆಗಳು ಕೈ ಬಿಸಿ ಕರೆದು ಅವರಿಂದ ಜ್ಣಾನ ದಾಸೋಹ ಪಡೆದಿವೆ. ಅವರ ಕವಿತೆಗಳು ಜನಮನ್ನಣೆ ಪಡೆದಿವೆ. ಅವುಗಳಲ್ಲಿ ಕೆಲವೊಂದನ್ನು ಉಲ್ಲೇಖಿಸುವುದಾದರೆ. ಮೂಡಬಿದರೆ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ, ಮಾರಿಷಸ್ದಲ್ಲಿ ಅಂತರಾಷ್ಟ್ರೀಯ ಕವಿಯಿತ್ರಿ ಸಮ್ಮೇಳನ, ಭತ್ತಿಸಗಢದಲ್ಲಿ ಜರುಗಿದ ಅಖಿಲ ಭಾರತ ಕವಿಯಿತ್ರಿ ಸಮ್ಮೇಳನ, ಹೈದ್ರಾಬಾದ ಅಖಿಲ ಭಾರತ ಕವಿಯಿತ್ರಿ ಸಮ್ಮೇಳನ, ಬರೋಡಾ ಅಖಿಲ ಭಾರತ ಕವಿಯಿತ್ರಿ ಸಮ್ಮೇಳನ, ದೆಹಲಿ ಅಖಿಲ ಭಾರತ ಕವಿಯಿತ್ರಿ ಸಮ್ಮೇಳನ, ಬಿಜಾಪೂರ ಅಖಿಲ ಭಾರತ ಕವಿಯಿತ್ರಿ ಸಮ್ಮೇಳನ, ಬೆಂಗಳೂರ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಮೈಸೂರು ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ, ಬೆಳಗಾಂ ವಿಶ್ವಕನ್ನಡ ಸಮ್ಮೇಳನದಲ್ಲಿ ಕವಿ ಗೋಷ್ಠಿಯಲ್ಲಿ ಭಾಗಿ, ಅನೇಕ ಕವಿಗೋಷ್ಠಿ ಅಧ್ಯಕ್ಷತೆ, ಆಶಯ ಭಾಷಣ, ಉಪನ್ಯಾಸ, ಪ್ರಬಂಧ ಮಂಡನೆ, ಅನೇಕ ಸಮಾರಂಭಗಳ ಆಯೋಜಕಿ, ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಜನ ಮೆಚ್ಚುಗೆ ಗಳಿಸಿದ ಕವನ ವಾಚನ, ಉತ್ತರಕನ್ನಡ ಲೇಖಕಿಯರ ಸಂಘದ ಬೆಳ್ಳಿ ಹಬ್ಬದಲ್ಲಿ ಜನ ಮೆಚ್ಚುಗೆ ಗಳಿಸಿದ ಕವನ ವಾಚನ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕವಿಗೋಷ್ಠಿಯಲ್ಲಿ ಮೆಚ್ಚುಗೆ ಗಳಿಸಿದ ಕವನ ವಾಚನ, ಬಿಜಾಪುರ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ವಷನ ಗೋಷ್ಠಿಯಲ್ಲಿ ವಚನವಾಚನ, ದೆಹಲಿಯ ಹೊರನಾಡಕನ್ನಡಿಗರ ಸಮ್ಮೇಳನದ ಕವಿಗೋಷ್ಠಿಗೆ ಆಯ್ಕೆ. ರಾಯಚೂರ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ವಾಚನ, ಪ್ರಬುದ್ಧ ಉಪನ್ಯಾಸಕಿಯಾಗಿ, ಪ್ರಬಂಧ ಮಂಡನಾಕಾರಳಾಗಿ, ಜನ ಜೀವನಕ್ಕೆ ಸ್ಪಂದಿಸುವ ಕವಯತ್ತಿಯಾಗಿ ರಾಜ್ಯ ಮತ್ತು ರಾಷ್ಟ್ರ ರಾಜ್ಯಧಾನಿಗಳನ್ಮು ದಾಟಿ ಸಪ್ತಸಾಗರದಾಚೆಗೂ ಕರುನಾಡಿನ ಹಿರಿಮೆ ಗರಿಮೆಯನ್ನು ಪಸರಿಸಿ ಕರುನಾಡಿನ ಹೆಮ್ಮೆಯ ಪುತ್ರಿಯಾಗಿದ್ದಾರೆ. ಕ್ರಿಯಾಶೀಲ ಸಂಘಟಕಿಯಾಗಿ ಪ್ರಬಂಧಕಿಯಾಗಿ ಸಂಕಮ್ಮನವರು ನಿರ್ವಹಿಸಿದ ಸೇವಾ ಕ್ಷೇತ್ರಗಳು ಬದುಕಿನ ಕಷ್ಟ ನಷ್ಟಗಳಿಗೆ ಎದೆಗುಂದದೆ ದಾಂಪತ್ಯ ಮತ್ತು ಸಾಮಾಜ ಎರಡನ್ಮು ಸರಿದೂಗಿಸಿ. ಎಲ್ಲಾರಂಗಗಳಲ್ಲೂ ತಮ್ಮ ಅತ್ಯಮೂಲ್ಯ ಅವಿಸ್ಮರಣೀಯ ಕೊಡುಗೆಗಳನ್ನು ನೀಡಿರುವುದು ಪುರುಷ ಪ್ರಧಾನ ಸಮಾಜ ಅಚ್ಚರಿ ಪಡುವಂತದಾಗಿದೆ. ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷೆ, ಹಾವೇರಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯೆ, ವಿಶ್ವಾಸ ಫೌಂಡೇಶನ್ (ರಿ) ಬ್ಯಾಡಗಿ ಅಧ್ಯಕ್ಷೆ, ೧೯೮೪ ರಲ್ಲಿ ನೆಹರೂ ನಗರ ಸಂಗೀತ ಮಹಿಳಾ ಮಂಡಲದ ಕಾರ್ಯದರ್ಶಿ, ೧೯೮೪ ರಲ್ಲಿ ನೆಹರೂ ನಗರ ಸಂಗೀತ ಮಹಿಳಾ ಮಂಡಲದ ಕಾರ್ಯದರ್ಶಿ. ೧೯೯೦ರಲ್ಲಿ ರಾಣೇಬೆನ್ನೂರ ಸ್ಪಂದನ ಸೇವಾ ಸಂಸ್ಥೆಯುಪಾಧ್ಯಕ್ಷೆ ಹಾಗೂ ೧೯೯೬ರಲ್ಲಿ ಅಧ್ಯಕ್ಷೆ, ೧೯೯೬ರಲ್ಲಿ ಸುವರ್ಣ ಸ್ತ್ರೀ ಸೇವಾ ಸಂಸ್ಥೆ ಬ್ಯಾಡಗಿಅಧ್ಯಕ್ಷೆ ಮತ್ತು ಹುಬ್ಬಳ್ಳಿಯ ಬ್ಯಾಡಗಿ ಮೆಣಸಿನಕಾಯಿ ಸಂಸ್ಕರಣ ಮಹಿಳಾ ಸಹಕಾರ ಗಿರಣಿಯ ನಿರ್ದೇಶಕಿ.೨೦೦೧ರಲ್ಲಿ ರಲ್ಲಿ ಇದರ ನಿರ್ದೇಶಕರ ನಿಯೋಗದೊಂದಿಗೆ ದೆಹಲಿಗೆ ಭೇಟಿ, ೨೦೦೨ ರಲ್ಲಿ ಕರ್ನಾಟಕ ಮಹಿಳಾ ಅಭಿವೃದ್ಧಿಗೆ ಮಾನ್ಯ ಮೋಟವರಿಂದ ಹಾವೇರಿ ಜಿಲ್ಲೆ ಪ್ರತಿನಿಧಿಯಾಗಿ ಆಯ್ಕೆ, ಹಾವೇರಿ ಜಿಲ್ಲಾ ಚುಟುಕು ಸಾಹಿತ್ಯಾ ಪರಿಷತ್ ಅಧ್ಯಕ್ಷೆ. ಅಖಿಲ ಭಾರತ ಕವಯಿತ್ರಿ ಸಂಘದ ಸದಸ್ಯೆ, ಕನ್ನಡಸಾಹಿತ್ಯ ಪರಿಷತ್ ಆಜೀವ ಸದಸ್ಯೆ, ಕರ್ನಾಟಕ ಲೇಖಕಿಯರ ಸಂಘದ ಸದಸ್ಯೆ,ಉತ್ತರಕನ್ನಡ ಲೇಖಕಿಯರ ಸಂಘದ ಸದಸ್ಯೆ, ಕರ್ನಾಟಕ ಚಲನಚಿತ್ರ ಅಕಾಡಮಿಯ ಹಾವೇರಿ ಜಿಲ್ಲಾ ಬೆಳ್ಳಿ ಮಂಡಲದ ಅಧ್ಯಕ್ಷೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸದಸ್ಯೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಸಂಸ್ಥೆ, ಬ್ಯಾಡಗಿ ಸೇವಾದಳದ ಉಪಾಧ್ಯಕ್ಷೆ. ಹಾವೇರಿ ಜಿಲ್ಲಾ ಸೈಟ್ ಮತ್ತು ಗೈಡ್ನ ಜಿಲ್ಲಾ ಸಹಾಯಕ ಆಯುಕ್ತ. ಹಾವೇರಿ ಜಿಲ್ಲಾ ಮಹಿಳಾ ದೂರು ನಿವಾರಣಾ ಸಮಿತಿ ಸದಸ್ಯೆ. ಹಾವೇರಿ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ. ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯ ಬ್ಯಾಡಗಿ ತಾಲೂಕ ಅಧ್ಯಕ್ಷೆ, ಸ್ತ್ರೀ ಮಾಸ ಪತ್ರಿಕೆಯ ವರದಿಗಾರ್ತಿ, ಜಾನಪದ ವಿಶ್ವ ವಿದ್ಯಾಲಯದ ಶಬ್ದ ಕೋಶರಚನೆಗೆ ಕ್ಷೇತ್ರ ತಜ್ಞಳಾಗಿ ಸೇವೆ. ಬ್ಯಾಡಗಿಯ ಬಿ ಆರ್ ಸಿ ಗೆ ಗೌರವ ಸಲಹೆಗಾರ್ತಿ ಸೇವೆ ಸಂದಿದೆ. ಧಾರವಾಡ ವಿದ್ಯಾವರ್ಧಕ ಸಂಘದ ಅಜೀವ ಸದಸ್ಯೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮಹಿಳಾ ಪ್ರತಿನಿಧಿಯಾಗಿ ಈ ದಿಸೆಯಲ್ಲಿ ಸಂಕಮ್ಮನವರು ವಿವಿಧ ಸ್ತರದ ಸಮಾಜಮುಖಿ ಕಾರ್ಯದಲ್ಲಿ ತೊಡಗಿ "ಮನೆಗೆದ್ದು ಮಾರು ಗೆಲ್ಲು" ಎಂಬ ಗಾದೆಮಾತಿಗೆ ತಕ್ಕ ಅರ್ಥವಂತಿಕೆ ನೀಡಿದ ಬಹುಶೃತ ಸಮಾಜಿಕ, ಸಾಹಿತ್ಯಿಕ ಶೈಕ್ಷಣಿಕ ಮಾರ್ಗದರ್ಶಿ ಸುಭದ್ರಸಂಪನ್ನಶೀಲ ವ್ಯಕ್ತಿತ್ವ ಹೊಂದಿ ಕರುನಾಡಿನ ಹೆಮ್ಮೆಯ ಕನ್ನಡತಿಯಾಗಿದ್ದಾರೆ. ಕನ್ನಡದ ದಿಟ್ಟ ಬರಹಗಾರ್ತಿಯರಾದ ಸಂಕಮ್ಮನವರ ವೈವಿಧ್ಯಮಯ ಕೃತಿ ತೋರಣಗಳ ನೋಟ : ಅಂಕಣಗಾತಿ ಸಂಕಮ್ಮನವರು ತಾವು ಬದುಕಿನಲ್ಲಿ ಕಂಡುಂಡ ನೋವು - ನಲಿವು, ತಮ್ಮ ಬದುಕಿನ ಸುತ್ತ - ಮುತ್ತ ಅನುಭವಿಸಿದ ಘಟನಾವಳಿಗಳನ್ನು ಹಾಗೂ ನಾಡಿನ ಒಳಿತಿಗಾಗಿ ತಮ್ಮ ಜೀವನವನ್ನು ಮೇಣದಂತೆ ಕರಗಿಸಿ ಬೆಳಕಾದವರ ಬಾಳಿನ ಮೌಲ್ಯಗಳಿಗೆ ಅಕ್ಷರರೂಪ ನೀಡಿ ಕವನ ಸಂಕಲನ, ಜೀವನಚರಿತ್ರೆ, ಅಭಿನಂದನಗ್ರಂಥ ಕೃತಿಗಳನ್ನು ಹೊರತಂದು, ಜನಾರ್ಪಣೆಮಾಡಿ ಪ್ರಾಥ: ಸ್ಮರಣಿಯರನ್ನಾಗಿಸಿದ್ದಾರೆ. ಪ್ರತಿಮೆ ರೂಪಕ ಮುಖೇನ ಜನರ ಎದೆಯಲ್ಲಿ ಸೇತುವೆ ಕಟ್ಟಿರುವ ಮಾತೃಸ್ವರೂಪಿ ಅವರ ಎದೆಯಾಳದಿಂದ ಮೂಡಿ ಬಂದ ಬಹು ಆಯಾಮಗಳ ಕೃತಿಗಳ ನೋಟ ಈ ಕೆಳಕಾಣಿಸಿದಂತಿವೆ. ಜೋಡಿಹಕ್ಕಿ (2004-ಕವನ ಸಂಕಲನ), ಮುತ್ತಿನ ತೆನೆ (2005 - ಹನಿಗವನ), ವಚನಸೃಷ್ಟಿ (2005 - ಆಧುನಿಕ ವಚನಗಳು), ವಚನ ವೃಕ್ಷ (ಆಧುನಿಕ ವಚನಗಳು), ಸೂರ್ಯಪ್ರಭ (2009 - ಅಭಿನಂದನಾ ಗ್ರಂಥ), ಧರೆಗಿಳಿದ ಧನ್ವಂತರಿ (2009 -ಸಂಪಾದನಾ ಗ್ರಂಥ), ಕನ್ನಡದ ಕಣ್ಮಣಿ - ಡಾ. ಮಹದೇವ ಬಣಕಾರ (2009- ಜೀವನ ಚರಿತ್ರೆ), ವಚನ (2010 -ಆಧುನಿಕ ವಚನಗಳು), ಬ್ಯಾಡಗಿರಾಯರು (2011- ಸಂಪಾದನಾ ಗ್ರಂಥ), ಹೋರಾಟದ ಒಂದು ನೋಟ (2011- ಸಿದ್ದಮ್ಮ ಮೈಲಾರರ ಬದುಕು), ನುಡಿ ಬಾಗಿನ (ಅಭಿನಂದನ ಗ್ರಂಥ), "ಕನಕ " ಜಿಲ್ಲಾ ಉತ್ಸವ ಸ್ಮರಣ ಸಂಚಿಕೆ ಸಂಪಾದನೆ, ನೆಲದ ನಕ್ಷತ್ರಗಳು (ಹಾವೇರಿ ಜಿಲ್ಲಾ ಸಾಧಕರು ಗದ್ಯಕೃತಿ), ಜಿಲ್ಲೆಯ ಮಹಿಳಾ ರತ್ನಗಳು (ಭಾರತ ಜ್ಞಾನ ವಿಜ್ಞಾನ ಸಮಿತಿ ಪ್ರಕಟಣೆ), ಜಿಲ್ಲೆಯ ಜಾನಪದ ಆಟಗಳು, ಸಿದ್ದಮ್ಮ ಮೈಲಾರ (ಗದಗ ಅಧ್ಯಯನ ಸಂಸ್ಥೆ), ಮಾಸದ ಹೆಜ್ಜೆಗಳು (ಅಂಕಣ ಬರಹ), ಹರಿದಾಡತಾವ ಭಾವ (ಕವನ ಸಂಕಲನ), ಬ್ಯಾಡಗಿ ರಾಯರು ಬೇಟಗೇರಿ ಮೃತ್ಯುಂಜಯಪ್ಪನವರು (ಅಭಿನಂದನಾ ಗ್ರಂಥ). ಪಾಪು ಪ್ರಪಂಚದ ಇಂಪು (ಇಂದುಮತಿ ಪುಟ್ಟಪ್ಪ ಪಾಟೀಲರ ಜೀವನ ಚರಿತ್ರೆ) ಬಹುಮುಖ ಪ್ರತಿಭಾನ್ವಿತ ಸಂಕಮ್ಮನವರ ಬಹುವಿಧ ಪ್ರತಿಭಾದರ್ಶನ ಜೀವನ ಚರಿತ್ರೆ ಬರಹಗಾರ್ತಿ ಸಂಕಮ್ಮನವರ 'ಹೋರಾಟದ ಒಂದು ನೋಟ' ಜೀವನ ಚರಿತ್ರೆ ಕೃತಿಯು 'ಸ್ವಾತಂತ್ರ್ಯ ಸೇನಾನಿ ಸಿದ್ದಮ್ಮ ಮೈಲಾರ' ಎಂಬ ಶೀರ್ಷಿಕೆಯ ಅಡಿಯಲ್ಲಿ ಹಿಂದಿ ಭಾಷೆಗೆ ಲೀಲಾ ಕಲಕೋಟಿಯವರು ಅನುವಾದಿಸಿದ್ದಾರೆ. ಅಲ್ಲದೆ ಈ ಕೃತಿ ಆಧರಿಸಿ ೨೦೧೬ರಲ್ಲಿ "ಕನ್ನಡದ ಹುಲಿ ಮಹದೇವ ಮೈಲಾರ" ಚಲನಚಿತ್ರವಾಗಿ ಬೆಳ್ಳಿ ತೆರೆಯ ಮೂಲಕ ನಾಡಿನ ಜನತೆಯಲ್ಲಿ ನಾಡಪ್ರೇಮವನ್ನು ಬಿತ್ತರಿಸಿದೆ. ಚಂದನ ಟಿವಿಯ ಬೆಳಗು ಕಾರ್ಯಕ್ರಮದಲ್ಲಿ ಸಂದರ್ಶನ, ಓ ಸಖಿ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಮೂರು ಸಾರಿ ಭಾಗವಹಿಸಿದ್ದು. ಶುಭೋದಯ ಕರ್ನಾಟಕದಲ್ಲಿ ಸಂದರ್ಶನ. ಹಾವೇರಿಯೇ ಕೆ. ಎಫ್ ಚಾನೆಲ್ ನಲ್ಲಿ ಸಂದರ್ಶನ. ಧಾರವಾಡ ಆಕಾಶವಾಣಿಯಲ್ಲಿ ಹಲವಾರು ಚಿಂತನ ಕಾರ್ಯಕ್ರಮ, ಉಪನ್ಯಾಸ ಮತ್ತು ಕವನ ವಾಚನ ಪ್ರಸಾರವಾಗಿವೆ. ಪ್ರಸನ್ನ ಭೋಜರಾಜರ ಸಂಗೀತದಲ್ಲಿ ನವನವೀನ ಸ್ವರ - ಮಧು ಮಧುರ ಗಾನಾಂಕುರ (ಭಾವಗೀತೆಗಳು), ನನ್ನ ಓದು ನನ್ನ ಕವಿತೆ (ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು) ಈ ಎರಡು ಅಡಕ (ಧ್ವನಿ ಮುದ್ರಿಕೆ) ಮುದ್ರಿಕೆಗಳು ಹೊರಬಂದು ಅಭಿಮಾನಿ ಬಳಗಕ್ಕೆ ಸಂತೋಷ ತಂದಿದೆ. ಅಚ್ಚಿನಲ್ಲಿರುವ ಕೃತಿಗಳು ನಂಗನಿಸಿದ್ದು ಅಂಕಣಬರಹ, ಓದೊಳಗಿನ ಓದು, ವೀರಮ್ಮ ಕರಿಯಪ್ಪ ಸಂಗೂರ (ಜೀವನ ಚರಿತ್ರೆ) ಅಂಗಣಗಾರ್ತಿ ಸಂಕಮ್ಮನವರ ಪತ್ರಿಕಾ ನಂಟು ಮತ್ತು ಉದಯೋನ್ಮುಖ ಬರಹಗಾರಿಗೆ ಮಾರ್ಗದರ್ಶಿ ಬೆನ್ನುಡಿ ಸೇವೆ ಸಂಯುಕ್ತ ಕರ್ನಾಟಕ, ಸುಧಾ, ತರಂಗ, ವಿಜಯ ಕರ್ನಾಟಕ, ಪ್ರಜಾ ವಾಣಿ, ಕಸ್ತೂರಿ, ಹಾಯ್ ಬೆಂಗಳೂರು, ಪಿಸುಮಾತು, ಹೊನ್ನಾರು, ದಲಿತ ಕ್ರಾಂತಿ, ಸ್ತ್ರೀ ಪತ್ರಿಕೆ ಇನ್ನೂ ಅನೇಕ ಪತ್ರಿಕೆಗಳಲ್ಲಿ ಲೇಖನ ಪ್ರಕಟ. ಕೌರವ ದಿನ ಪತ್ರಿಕೆಯಲ್ಲಿ ' ಹೆಣ್ಣು ಹೆಜ್ಜೆ ' ಮತ್ತು 'ನಂಗನಿಸಿದ್ದು' ಅಂಕಣಗಳು ಪ್ರಕಟವಾಗಿವೆ. ಅನೇಕ ಅಭಿನಂದನಾ ಗ್ರಂಥಗಳಿಗೆ ಲೇಖನಗಳನ್ನು ಬರೆದುದ್ದಾರೆ. ಅನೇಕ ಉದಯೋನ್ಮುಖ ಲೇಖಕರ ಪುಸ್ತಕಗಳಿಗೆ ಮುನ್ನುಡಿ, ಬೆನ್ನುಡಿ ಶುಭಹಾರೈಕೆ ನುಡಿ ಬರೆದು ಪ್ರೋತ್ಸಾಹಿಸಿ ಮಾರ್ಗದರ್ಶಸಿದ್ದಾರೆ. ಸಂಪನ್ನ ಶರಣಜೀವಿ ಸಂಕಮ್ಮನವರ ಬದುಕು ಮತ್ತು ಕೃತಿಗಳ ಸಾಹಿತಿ ಒಡನಾಡಿಗಳ ಸದಾಭಿಪ್ರಾಯಗಳು ಮಾಸದ ಹೆಜ್ಜೆಗಳು ಕೃತಿಯ ಬೆನ್ನುಡಿಯಲ್ಲಿ.....ಪಾಪುರವರು ಅವರ ಎಲ್ಲ ಕೃತಿಗಳನ್ನು, ಲೇಖನಗಳನ್ನು ನಾನು ಮತ್ತು ನನ್ನ ಪತ್ನಿ ಇಂದುಮತಿ ತಪ್ಪದೇ ಓದುತ್ತಿದ್ದೆವು. ಅವರ ಬರಹದಲ್ಲಿ ಜೀವಂತಿಕೆಯಿದೆ. ಚಿಕಿತ್ಸಕ ಬುದ್ಧಿಶಕ್ತಿಯಿದೆ. ಸದಾ ಸಜ್ಜನರ ಸಂಗದೊಳಿದ್ದು ಮಾಡಿದ ಸಾಧನೆ ಸ್ವಯಾರ್ಜಿತವಾದದ್ದು. ಎಲ್ಲವನ್ನೂ ಅರಿತು. ಎಲ್ಲರೊಡನೆ ಬೆರೆತು ಒಂದಾಗಬಲ್ಲ ಹೃದಯವೈಶಾಲ್ಯತೆ ಅವರಲ್ಲಿದೆ. ನಮ್ಮ ಪ್ರೀತಿಯ ಮಗಳಾದ ಸಂಕಮ್ಮ ಸಾಹಿತ್ಯಲೋಕದಲ್ಲಿ ಇನ್ನೂ ಎತ್ತರಕ್ಕೇರಬಲ್ಲಳೆಂಬ ನಂಬಿಕೆ ನನಗಿದೆ. ಬ್ಯಾಡಗಿ ಬಾಗಿನ ಅಭಿನಂದನಾ ಗ್ರಂಥ ಕುರಿತು ಡಾ. ಮೈತ್ರೇಯಿಣಿ ಗದಿಗೆಪ್ಪ ಗೌಡರ, ಬೆಳಗಾವಿ ಅಕ್ಕನ ಭಲ, ಅಂಡಾಳಲ ನಿರ್ಮೋಹ, ನಾಗಲಾಂಬಿಕೆಯ ಹಿರಿತನ, ಬಸವನ ತಾಯ್ತನ, ಬುದ್ಧನ ಪ್ರೀತಿ, ಅಂಬೇಡ್ಕರರ ಸ್ವಾಭಿಮಾನ, ಅಲ್ಲಾಹುವಿನ ಸಮತೆ, ವಿಸುವಿನ ಕರುಣೆ, ಗಾಂಧೀಜಿಯವರ ಅಹಿಂಸೆಯಂತಹ ಗುಣಗ್ರಾಹಿಗಳಾಗಿದ್ದಾರೆ. ಸದಾ ಕಾಂತಸ್ವಭಾವ, ತಣ್ಣನೆಯ ಬದುಕು, ಸಹೃದಯತೆಯ ಆಕ್ಕರೆಗಳಿಂದ ಎಲ್ಲರ ಪ್ರೀತಿಗೆ ಪಾತ್ರರಾದವರು. ಇವರೊಬ್ಬ ಅಪೂರ್ವ ಕಲಾವಿದೆ, ಜನಮೆಚ್ಚಿದ ಸ್ನೇಹಿತ, ಜಗಮೆಚ್ಚಿದ ಸಹೃದಯಿ, ಲೇಖಕಿ, ಕವಿಯತ್ರಿ ಸಾಹಿತಿಯೂ ಆದ ಶರಣಜೀವಿ, ತಮ್ಮ ಅಭಿವ್ಯಕ್ತಿ ಕೃತಿಗಳಿಂದ ಕನ್ನಡ ಸಾರಸ್ವತ ಲೋಕಕ್ಕೆ ಅಪೂರ್ವ ಸೇವೆಸಲ್ಲಿಸಿದ್ದಾರೆ. ಎಲೆಮರೆಯ ಕಾಯಿಯಂತಿರುವ ಅನೇಕ ಸೃಜನಶೀಲ ಪ್ರತಿಭಾನ್ವಿತರನ್ನು ತಮ್ಮ ಬರವಣಿಗೆಯ ಮೂಲಕ ಪರಿಚಯಸಿದ ಶ್ರೇಯಸ್ಸು "ಕಾವ್ಯ ಅಂತರಂಗದ ಬೆಳಕು" ಎನ್ನುವುದಕ್ಕೆ 'ಹರಿದಾಡುತಾವ ಭಾವ' ಕವನ ಸಂಕಲನದ ಕವಿತೆಗಳು ಸಾಕ್ಷಿಯಾಗಿವೆ. ...... ಡಾ. ಪಂಚಾಕ್ಷರಿ ಹಿರೇಮಠ. "ರಕ್ತ ಸಂಬಂಧವಲ್ಲದ ಬಳಗ ತಲೆಗೂದಲಿಗೊಂದಿಹುದು ಸಂಕಮ್ಮಗ" ......ಪಿ. ಮನೋಹರಿ ಪಾರ್ಥಸಾರಥಿ. ಸುವರ್ಣ ಕನ್ನಡತಿ ಸಂಕಮ್ಮನವರಿಗೆ ಒಲಿದುಬಂದ ಪ್ರಶಸ್ತಿ ಪುರಸ್ಕಾರ ಗೌರವಾಧಾರಗಳು ಸಂಪನ್ನ ಶರಣ ಜೀವಿಯಾದ ಇವರು ಎಂದೂ ಯಾವ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಗೆ ಹಪಪಪಿಸಿದವರಲ್ಲ. ತಾವಾಯಿತು, ತಮ್ಮ ಕೆಲಸವಾಯಿತು. ಫಲಾಪೇಕ್ಷೆ ಬಯಸದೆ ಪರೋಪಕಾರಿಯಾಗಿ ಬಾಳಿದವರಿಗೆ ಪ್ರಶಸ್ತಿ ಸನ್ಮಾನಗಳು ತಾವಾಗಿ ಒಲಿದುಬಂದು ತಮ್ಮ ಘನತೆಯನ್ನು ಹೆಚ್ವಿಸಿಕೊಂಡಿವೆ. ಬೆಂಗಳೂರಿನ ಶಾಂತಕಲಾ ಕಲಾಮಿತ್ರರಿಂದ 'ನಾಡರತ್ನ' ಪ್ರಶಸ್ತಿ, ಬೆಂಗಳೂರಿನ ಕಸ್ತೂರ ಬಾ ಸಂಘದಿಂದ 'ಕಸ್ತೂರ ಬಾ' ಪ್ರಶಸ್ತಿ, ಛತ್ತೀಸಗಡದಲ್ಲಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಇಂದಿರಾ ಗೋಸ್ವಾಮಿಜಿಯವರಿಂದ 'ಕೌದೆ ಅಂಡಾಳ್' (೨೦೦೫ ರಲ್ಲಿ )ಪ್ರಶಸ್ತಿ, ಬಿಜಾಪುರದಲ್ಲಿ ಅಖಿಲ ಭಾರತ ಕವಿಯತ್ರಿ ಸಮ್ಮೇಳನದಲ್ಲಿ 'ತಪನಿ' ಪ್ರಶಸ್ತಿ, ಬರೋಡಾದಲ್ಲಿ ಅಖಿಲ ಭಾರತ ಕವಿಯತ್ರಿ ವಿಶೇಷ ಪುರಸ್ಕಾರ, ಬೆಂಗಳೂರು ಅತ್ತಿಮಬ್ಬೆ ಪ್ರತಿಷ್ಠಾನದಿಂದ 'ಅತ್ತಿಮಬ್ಬೆ' ಪ್ರಶಸ್ತಿ, ಹಾವೇರಿ ಜಿಲ್ಲಾ ಬಿ. ಜಿ. ಬಣಕಾರ 'ದತ್ತಿ' ಪ್ರಶಸ್ತಿ, ಹಾವೇರಿ ಜಿಲ್ಲಾಡಳಿತದಿಂದ 'ರಾಜ್ಯೋತ್ಸವ' ಪ್ರಶಸ್ತಿ, ಬೆಂಗಳೂರ ಗಾಂಧೀ ಭವನದ 'ಮಹದೇವ ಮೈಲಾರ ದತ್ತಿ' ಪ್ರಶಸ್ತಿ, ಹಾವೇರಿ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಸನ್ಮಾನ, ಹಾವೇರಿ ಜಿಲ್ಲಾಡಳಿತದಿಂದ ಗಣರಾಜ್ಯೋತ್ಸವ ಸನ್ಮಾನ, ಶಿವಮೊಗ್ಗ ಪತ್ರಮಿತ್ರ ಸಂಘಟನೆಯಿಂದ 'ಪ್ರತಿಭಾ ಶಿರೋಮಣಿ' ಪ್ರಶಸ್ತಿ, ಉತ್ತರ ಕನ್ನಡ ಲೇಖಕಿಯರ ಸಂಘದ ಬೆಳ್ಳಿ ಹಬ್ಬದಲ್ಲಿ ಸಾಹಿತ್ಯ ಸತ್ಕಾರ, ಅಖಿಲ ಭಾರತ ಶರಣ ಸಾಹಿತ್ಯ ಪರಿಸರ ರಾಜ್ಯ ಮಟ್ಟದ ಮಹಿಳಾ ಸಮಾವೇಶದಲ್ಲಿ ಸತ್ಕಾರ, ತುಮಕೂರಲ್ಲಿ ಕವಿತಾ ಕೃಷ್ಣರಿಂದ ಸತ್ಕಾರ, ಹಾವೇರಿಯ ಮಹದೇವ ಬಣಕಾರ ಪ್ರತಿಷ್ಠಾನದಿಂದ ಬಿ.ಜಿ. ಬಣಕಾರ ಪ್ರಶಸ್ತಿ- (2009), ಇಂದಿರಾ ಪ್ರಶಸ್ತಿ, ಬ್ಯಾಡಗಿಯ ಶ್ರೀ ಆಂಜನೇಯ ಯುವಕ ಸಂಘದಿಂದ ಸತ್ಕಾರ, ಬ್ಯಾಡಗಿಯ ಗ್ರಾಮದೇವತಾ ಜಾತ್ರಾ ಸುವರ್ಣ ಸಂಸ್ಕೃತಿ ದಿಬ್ಬಣದ ಮಹೋತ್ಸವದಲ್ಲಿ ಸತ್ಕಾರ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು "ವತ್ಸಲಾ ನಂಜುಂಡಪ್ಪ ದತ್ತಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಮಘದಿಂದ 'ನೀಳಾದೇವಿ' ದತ್ತಿ ಪ್ರಶಸ್ತಿ, ಚಿಕ್ಕಮಗಳೂರಲ್ಲಿ ಹಿರೇಮಗಳೂರು ಕಣ್ಣನವರಿಂದ ಸತ್ಕಾರ, ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಸಾಧನಾ ರಾಷ್ಟ್ರೀಯ ಲೇಖಕಿ ಪ್ರಶಸ್ತಿ, ನೂರಾರು ಶಾಲಾ ಕಾಲೇಜುಗಳಲ್ಲಿ, ಹಲವಾರು ಸಂಘ ಸಂಸ್ಥೆಗಳಳ್ಲಿ ಗೌರವ ಸನ್ಮಾನಗಳು, ಬೆಳಗಾವಿ ಸಾರ್ವಜನಿಕ ಗ್ರಂಥಾಲಯದಿಂದ 'ಕನ್ನಡ ಅಂಕಣಗಾರ್ತಿ' ಪುರಸ್ಕಾರ ಸಂದಿದ್ದು; ಇವರ ಮಾಸದ ಕನ್ನಡ ಕಾಯಕದ ಜೀವಮಾನ ಸಾಧನೆಗಾಗಿ ಪ್ರಸ್ತುತ ಕರ್ನಾಟಕ ನಾಮಕರಣವಾಗಿ ೫೦ ವರ್ಷ ಸಂದಿರುವ ಸುಸಂದರ್ಭದಲ್ಲಿ ಸುವರ್ಣಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೦೧ ನವೆಂಬರ್ ೨೦೨೪ರಲ್ಲಿ) ಪ್ರಧಾನ ಮಾಡಿ ಕರ್ನಾಟಕ ಸರ್ಕಾರವು ಸತ್ಕರಿಸಿರುವುದು ಉಚಿತವಾಗಿದೆ. ಹಾವೇರಿ ಜಿಲ್ಲೆಯ ಹೆಮ್ಮೆಯ ಗರಿ ಸಂಕಮ್ಮನವರಿಗೆ ಹಿತೈಷಿ ಬಂಧುಗಳು, ಅಪಾರ ಶಿಷ್ಯ ಬಳಗ, ಸಾಹಿತ್ಯಾಭಿಮಾನಿಗಳು 'ಬ್ಯಾಡಗಿ ಬಾಗಿನ' ಎಂಬ ಅಭಿನಂದನಾ ಗ್ರಂಥ ಸಮರ್ಪಿಸಿರುವುದು ಇವರ ಸಾಹಿತ್ಯಿಕ, ಶೈಕ್ಷಣಿಕ, ಸಾಮಾಜಿಕ ಕೊಡುಗೆಗೆ ಸಂದ ವಿಶಿಷ್ಟ ಗೌರವಾಧಾರವಾಗಿದೆ. ಸಕಾರಾತ್ಮಕ ಚಿಂತನೆಯಿಂದ ತನ್ನ ಸುತ್ತಲಿನ ಪರಿಸರದಲ್ಲಿ ಸಾಹಿತ್ಯಕ, ಸಾಂಸ್ಕೃತಿಕ ಎಚ್ಚರವನ್ನು ಬೆಚ್ಚಗಿಡುತ್ತ ಬಂದಿರುವ ಸಂಕಮ್ಮನವರ ಕನ್ನಡ ನಾಡು ನುಡಿ ಸೇವೆಯನ್ನು ಗುರುತಿಸಿ ಹಾವೇರಿ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಸಂವಿಧಾನದ ಶೀಲವಾಗಿದೆ. ಹಿರೇಕೆರೂರುರಿನಲ್ಲಿರುವ ಪೋಲಿಸ್ ಮೈದಾನದಲ್ಲಿ ೧೦ ವ ೧೧ ಜನವರಿ ೨೦೨೫ ರಂದು ನಡೆಯುವ ನುಡಿ ಜಾತ್ರೆಯು (ಚಿಂತನಮಂಥನ, ಕವಿಗೋಷ್ಠಿ, ಸಂವಾದ, ಚರ್ಚೆ, ಸಂಗೀತ..) ಹಾವೇರಿ ಜಿಲ್ಲಾ, ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆಯಲು ಕನ್ನಡಿಗರನ್ನು ಕೈ ಬಿಸಿ ಕರೆಯುತಿದೆ. ಕೇಂದ್ರ ಸಾಹಿತ್ಯ ಪರಿಷತ್ತ ಅಧ್ಯಕ್ಷರಾದ ನಾಡೋಜ ಮಹೇಶ ಜೋಶಿ, ಹಾವೇರಿ ಜಿಕಸಾಪ ಅಧ್ಯಕ್ಷರಾದ ಲಿಂಗಯ್ಯ ಹಿರೇಮಠ, ಹಿರೇಕೆರೂರು ವ ರಟ್ಟಿಹಳ್ಳಿ ತಾಕಸಾಪ ಅಧ್ಯಕ್ಷದ್ವಯರಾದ ಎನ್ ಸುರೇಶಕುಮಾರ, ಎನ್ ಸಿ ಕಠಾರೆ, ಗೌರವ ಕಾರ್ಯದರ್ಶಿಗಳಾದ ಮಹೇಂದ್ರ ಬಡಳ್ಳಿ, ಪಿ. ಎಸ್. ಸಾಲಿ, ಎಂ. ಎಂ ಮತ್ತೂರ, ರಾಜು ಹರವಿಶೆಟ್ಟರ, ಕರಿಯಣ್ಣನವರ ಮತ್ತು ಪದಾಧಿಕಾರಿಗಳು ವ ಅಪಾರ ಸಾಹಿತ್ಯಾಭಿಮಾನಿ ಬಂಧುಗಳ ಕನ್ನಡ ಪ್ರೇಮ ಮತ್ತು ಸಾಹಿತ್ಯ ಸೇವೆಯನ್ನು ನೆನೆಯದಿರೆ ಪ್ರಮಾದವಾದಿತು. ಸಾಮರಸ್ಯದೆಡೆಗೆ ಸಾಹಿತ್ಯ ಪಯಣ... ಬನ್ನಿ ಜೊತೆ ಸಾಗೋಣ ಜೈ ಕನ್ನಡ, ಜೈ ಕರುನಾಡು, ಜೈ ಕನ್ನಡ ಸಾಹಿತ್ಯ ಸಮ್ಮೇಳನ
-ಸುಹೇಚ ಪರಮವಾಡಿ
ಶ್ರೀ. ಸುಭಾಷ್ ಹೇಮಣ್ಣಾ ಚವ್ಹಾಣ ಶಿಕ್ಷಕರು
ಪರಮವಾಡಿ ತಾಂಡೆ, ಯಲವಿಗಿ ಅಂಚೆ, ಸವಣೂರು ತಾ, ಹಾವೇರಿ ಜಿ,
(ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಜುನಾಥ ನಗರ, ಹುಬ್ಬಳ್ಳಿ

Friday, 10 January 2025

ಗುರು ಶಿಷ್ಯ ಪರಂಪರೆಯಲ್ಲಿ ಗುರು ಕಳೆಯ ಮಹತ್ವ

 

ಗುರುಕಳೆಯಿಲ್ಲದೆ ವಾದಿಪೆನೆ ಸಿಂಹ ಶರಣನೊಂದಿಗೆ?

ಗುರುಕಳೆ ಬಸವನೆಂಬ ಗಜದಲ್ಲಿ ಸೇರಿದ ಕಾರಣ

ಲಿಂಗದೇವನ ಶರಣನೆಂಬ ಸಿಂಹದೊಂದಿಗೆ ವಾದದ ಭರವು ಕೇಳಾ. -ಗುರು ಬಸವಣ್ಣನರು

ಭಾರತ ದೇಶದ ಪ್ರಾಗೈತಿಹಾಸಿಕ ಕಾಲದಿಂದಲೂ ಇಲ್ಲಿ ಗುರು ಶಿಷ್ಯ ಪರಂಪರೆ ಅತ್ಯಂತ ಪವಿತ್ರ ಮತ್ತು ಪ್ರಬಲವಾಗಿದೆ. ಈ ಗುರು ಶಿಷ್ಯ ಪರಂಪರೆ ಪ್ರಬಲವಾಗಿರುವುದರಿಂದಲೇ, ಭಕ್ತಿಯೋಗ, ಜ್ಞಾನ ಯೋಗ, ಸಂಗೀತ, ನಾಟ್ಯ, ಆಯುರ್ವೇದ, ಯೋಗ ಮುಂತಾದ ಅನೇಕ ಕಲೆಗಳು ಶತ ಶತಮಾನಗಳಿಂದ ಈ ದೇಶದಲ್ಲಿ ಜೀವಂತವಾಗಿವೆ.

ಸ್ವಯಂ ಸಾಧಕರಾದ ಆದಿಗುರುಗುಳು ತಾವು ಕಲಿತ ಮತ್ತು ಸಾಧಿಸಿದ ವಿದ್ಯೆಯನ್ನು ತಮ್ಮ ಅಹಂ ತೃಪ್ತಿಗಾಗಿ ಬಳಸದೇ ಲೋಕ ಕಲ್ಯಾಣಕ್ಕಾಗಿ ಬಳಸುತ್ತ ಬಂದಿದ್ದಾರೆ. 

ಒಬ್ಬ ಗುರು ತನ್ನ ನಂತರದ ದಿನಗಳಲ್ಲಿ ತನ್ನ ವಿಚಾರ, ತನ್ನ ಧರ್ಮ, ತನ್ನ ವಿದ್ಯೆ ಮತ್ತು ತಾನು ನಡೆದು ಬಂದ ಪರಂಪರೆಯನ್ನು ಮುಂದುರೆಸಿಕೊಂಡು ಹೋಗುವಂತಹ ಒಬ್ಬ ವ್ಯಕ್ತಿಯನ್ನು ತನ್ನ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿಕೊಂಡು, ತನ್ನೆಲ್ಲ ಲೌಕಿಕ ಮತ್ತು ಪಾರಲೌಕಿಕ ಸಂಪತ್ತನ್ನು ಆ ಶಿಷ್ಯನಿಗೆ ಧಾರೆಯೆರೆಯುತ್ತಾರೆ. ತನ್ನ ಗುರು ನಡೆದ ಪಥದಲ್ಲಿ ಆ ಶಿಷ್ಯ ನಡೆದು ಆ ಗುರುವಿನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತ ಆ ಪರಂಪರೆಯ ಅನುಯಾಯಿಗಳನ್ನು ವೃದ್ಧಿಗೊಳಿಸುತ್ತ ಹೋಗುತ್ತಾನೆ. ಇದಕ್ಕಾಗಿ ಆ ಶಿಷ್ಯ ಎಂತಹ ತ್ಯಾಗಕ್ಕಾದರೂ ಸಿದ್ಧನಾಗಿರುತ್ತಾನೆ. ಇಂತಹ ಅನೇಕ ಘಟನೆಗಳನ್ನು ನಾವು ಇತಿಹಾಸದಲ್ಲಿ ನೋಡಬಹುದು.

ಗುರುವಿನಿಂದ ಮಾರ್ಗ ದರ್ಶನ ಪಡೆದ ಶಿಷ್ಯ ತಾನೂ ಗುರುವೇ ಆಗುತ್ತಾನೆ. ಆ ಗುರುವಿನಲ್ಲಿರುವ ಗುರು ಕಳೆಯನ್ನು ತನ್ನ ಅಂತರ್ಬಾಹ್ಯಗಳಲ್ಲಿ ಅಳವಡಿಸಿಕೊಂಡು, ತನ್ನ ಆಸೆ ಆಕಾಂಕ್ಷೆಗಳನ್ನೆಲ್ಲ ಗುರುವಿನ ಆಕಾಂಕ್ಷೆಗಳನ್ನಾಗಿ ಪರಿವರ್ತಿಸಿಕೊಂಡು ಗುರುವಿನ ಸಂಕಲ್ಪಗಳನ್ನು ಈಡೇರಿಸಲು ಶಿಷ್ಯ ತನ್ನ ಪ್ರಾಣವನ್ನಾದರೂ ಕೊಟ್ಟು ಆ ಪಥದಲ್ಲಿ ನಡೆಯುತ್ತಾನೆ. ತನ್ನ ವೈಯಕ್ತಿಕ ಕೀರ್ತಿ ಪ್ರತಿಷ್ಠೆಗಳಿಗೆ ಬೆಲೆಕೊಡದೆ, ಗುರುವಿನ ವಿಚಾರಗಳ ಮೆರೆಸುವಿಕೆಯಲ್ಲಿ ತನ್ನ ಹಿತವನ್ನು ಕಾಣುವ ಶಿಷ್ಯ ಆ ಗುರು ಕಳೆಯನ್ನು ಹೊಂದುತ್ತಾನೆ. ಅಂತಹ ಶಿಷ್ಯ ಗುರು ಶಿಷ್ಯ ಪರಂಪರೆಯ ಶ್ರೇಷ್ಠ ಶಿಷ್ಯ ಮತ್ತು ಮುಂದಿನ ಶ್ರೇಷ್ಠ ಗುರು.

ಇತಿಹಾಸದಲ್ಲಿ ಅನೇಕ ಶಿಷ್ಯರು ತನಗೆ ವಿದ್ಯೆ ನೀಡಿದ ಅನುಗ್ರಹ ನೀಡಿದ ಗುರುವನ್ನೇ ಮರೆತು ತಾನು ಶ್ರೇಷ್ಠ ಎಂದು ಬೀಗಿದ ಘಟನೆಗಳೂ ಇವೆ. ಗುರು ಜೀವಂತವಾಗಿದ್ದಾಗ ಅವರೊಡನೆ ಸ್ಫರ್ಧೆಗಿಳಿದು, ಆ ಗುರುವಿನ ಪರಂಪರೆಯನ್ನು ಹಳಿದು ತಾನು ಬೇರೊಂದು ಪರಂಪರೆಯನ್ನು ಹುಟ್ಟು ಹಾಕಿರುವ ಘಟನೆಗಳೂ ಇತಿಹಾಸದಲ್ಲಿ ಇವೆ. ಆದರೆ ಅಂತಹ ಪರಂಪರೆಗಳು ಅವರ ಕಾಲಕಷ್ಟೇ ಜೀವಂತವಾಗಿದ್ದು ಅವುಗಳನ್ನು ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗಿಲ್ಲ ಎನ್ನುವುದೂ ಅಷ್ಟೇ ಸತ್ಯ. ಇನ್ನೂ ಗುರುವು ಲಿಂಗೈಕ್ಯರಾದ ನಂತರ ಗುರುಗಳನ್ನು ಹಳಿದು ಅವರು ಮಾಡಿದ್ದು ತಪ್ಪು ನಾನು ಮಾಡಿದ್ದು ಸರಿ ಎಂದು ಬೀಗುವ ಶಿಷ್ಯರು ಅವರು ಅತ್ಯಂತ ಅಧಮರೂ ದುಷ್ಟರೂ ಆಗಿದ್ದಾರೆ. ಇಂತಹ ಶಿಷ್ಯ ಗುರು ಶಿಷ್ಯ ಪರಂಪರೆಗೆ ಬಹುದೊಡ್ಡ ಕಳಂಕ. ಗುರು ಮಾಡಿದ್ದು ತಪ್ಪು ಎಂದು ಹೇಳುವ ಶಿಷ್ಯ ಒಂದು ಬಹುದೊಡ್ದ ಮತ್ತು ಶ್ರೇಷ್ಠ ತತ್ವ ಸಿದ್ಧಾಂತಕ್ಕೆ ಬಹುದೊಡ್ಡ ಹೊಡೆತ. 

ಯಾವಾಗ ಯಾವಾಗ ಇತಿಹಾಸದಲ್ಲಿ ಗುರುವಿಗೆ ಉಲ್ಟಾ ಹೊಡೆದ ಶಿಷ್ಯರು, ಗುರುವಿಗೆ ತಿರುಗಿಬಿದ್ದ ಶಿಷ್ಯರು, ಹುಟ್ಟಿದ್ದಾರೋ ಅಂತಹ ಗುರುವಿನ ಅನೇಕ ವಿದ್ಯೆ ಮತ್ತು ಪರಂಪರೆಗಳು ಜಗತ್ತಿನಿಂದ ನಶಿಶಿಹೋಗಿವೆ. ಕಾರಣ ಗುರುವಿಗೆ ತಿರುಗೆ ತಿರುಗಿಬಿದ್ದ ಶಿಷ್ಯನಲ್ಲಿ, ಗುರುವಿನ ಆಶಯಕ್ಕೆ ವಿರುದ್ಧವಾಗಿ ನಡೆಯುವ ಶಿಷ್ಯನಲ್ಲಿ ಗುರುಕಳೆ ನೆಲೆಸಲಿಕ್ಕೆ ಸಾಧ್ಯವೇ ಇಲ್ಲ

ಎನ್ನ ಗುರು ಪರಮಗುರು ನೀವೆ ಕಂಡಯ್ಯ,

ಎನ್ನ ಗತಿಮತಿ ನೀವೆ ಕಂಡಯ್ಯ,

ಎನ್ನ ಅರಿವಿನ ಜ್ಯೋತಿ ನೀವೆ ಕಂಡಯ್ಯ,

*ಎನ್ನಂತರಂಗ ಬಹಿರಂಗದ ಮಹವು ನೀವೆ ಕಂಡಯ್ಯ.

ಲಿಂಗದೇವಾ, ನೀವೆನಗೆ ಗುರು, ನಾ ನಿಮಗೆ ಶಿಷ್ಯನೆಂಬುದನು

ನಿಮ್ಮ ಶರಣ ಸಿದ್ಧರಾಮಯ್ಯದೇವರೆ ಬಲ್ಲರು.

-ಗುರು ಬಸವಣ್ಣನವರು

ಗುರು ಬಸವಣ್ಣನವರು ಸ್ವಯಂ ಸಾಧಕರಾಗಿ, ಲಿಂಗದೇವರನ್ನೇ ತಮ್ಮ ಗುರುವನ್ನಾಗಿ ಸ್ವೀಕರಿಸಿ ಆ ಲಿಂಗದೇವನ ಕಳೆಯನ್ನು ತಮ್ಮಲ್ಲಿ ಧರಿಸಿದ ಮಹಾನ್ ಪ್ರವಾದಿ ಅವರು. ಎನ್ನ ಗುರು ಪರಮ ಗುರುವೂ ಲಿಂಗದೇವರು. ಎನ್ನ ಅರಿವಿನಿಂದ ಹೊರಬರುವ ಜ್ಞಾನ ಜ್ಯೋತಿಯೂ ಲಿಂಗದೇವರದ್ದೇ. ಎನ್ನ ನಡೆ ನುಡಿ ಎಲ್ಲವೂ ಲಿಂಗದೇವನಿಂದಲೇ ನಿಯಂತ್ರಿಸಲ್ಪಟ್ಟಿರುವುದು ಎಂದು ಹೇಳುತ್ತಿದ್ದಾರೆ. ಈ ವಿಷಯ ಶರಣ ಸಿದ್ಧರಾಮಯ್ಯನವರಿಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳುತ್ತಿದ್ದಾರೆ. ಏಕೆಂದರೆ ಸಿದ್ಧರಾಮೇಶ್ವರರು ಗುರುವು ನೀನೆ, ಲಿಂಗವೂ ನೀನೆ ಜಂಗಮವೂ ನೀನೆ, ಆದಿಯಾಧಾರದಿತ್ತತ್ತ ನೀನೆ ಎಂದು ಗುರು ಬಸವಣ್ಣನವರ ಗುರುಕಳೆಯನ್ನು ಅರಿತು ಹೊಗಳಿದವರು.

ಗುರುಕಳೆಯಿಲ್ಲದೆ ವಾದಿಪೆನೆ ಸಿಂಹ ಶರಣನೊಂದಿಗೆ? 

ಗುರು ಬಸವಣ್ಣನವರು ತನ್ನ ಅನುಯಾಯಿಗಳನ್ನು ಅತ್ಯಂತ ಗೌರವದಿಂದ ಕಂಡವರು. ತಮ್ಮ ವಿರೋಧಿಗಳನ್ನೂ ಮತ್ತಷ್ಟು ಗೌರವದಿಂದ ಕಂಡ ಮಹಾಗುರು. ತಾನು ಗಜವಾದರೆ ಇದಿರಿಗಿರುವವರು ಸಿಂಹ ಎಂದು ಗೌರವಿಸಿದವರು. ಆನೆ ಮತ್ತು ಸಿಂಹಗಳ ಬಲ ಮತ್ತು ಸಾಮರ್ಥ್ಯದಲ್ಲಿ ಒಂದು ಹೆಚ್ಚು ಒಂದು ಕಡಿಮೆ ಎಂದು ಹೇಳಲಿಕ್ಕಾಗದು. ಒಂದಕ್ಕಿಂತ ಒಂದು ಹೆಚ್ಚು ಎಂದು ಹೇಳಬಹುದಷ್ಟೇ. ನನ್ನಲ್ಲಿ ಗುರು ಕಳೆಯಿಲ್ಲದಿದ್ದರೆ ಸಿಂಹದಂತಹ ಬಲಶಾಲಿ ಶರಣರೊಡನೆ ವಾದ ಮಾಡಲಿಕ್ಕೆ ಸಾಧ್ಯವೇ? ಇಲ್ಲ. 

ಪೂಜ್ಯ ಶ್ರೀ ಲಿಂಗಾನಂದ ಸ್ವಾಮೀಜಿಯವರು ಪೂಜ್ಯ ಶ್ರೀ ಮಾತೆ ಮಹಾದೇವಿಯವರು ಅಪಾರವಾದ ಗುರುಕಳೆಯನ್ನು ಹೊಂದಿದ್ದರು. ಯಾರೇ ಬರಲಿ ಯಾವುದೇ ವಿಷಯ ಚರ್ಚಿಸಲಿ ವಾದ ಮಾಡಲಿ, ತಮ್ಮ ಗುರುಕಳೆಯಿಂದ ಅದನ್ನು ಸಮರ್ಪಕವಾಗಿ ಉತ್ತರಿಸಿ ಎಂತಹದ್ದೇ ಸನ್ನೀವೇಶವನ್ನು ನಿಭಾಯಿಸುತ್ತಿದ್ದರು.

ಗುರು ಕಳೆಯಿಲ್ಲದವರು ಶರಣರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವೇ ಇಲ್ಲ. ಗುರು ಕಳೆಯಿಲ್ಲದವರು ಪೀಠಾಧಿಕಾರಿಯಾದರೆ, ಅವರೊಂದಿಗೆ ಶರಣರು ಮಾತನಾಡಲು ಬಂದರೆ ಅವರು ಹಿಂಬಾಗಿಲಿನಿಂದ ಓಡಿಹೋಗುತ್ತಾರೆ. ಫೋನ್ ಬಂದ್ ಮಾಡಿಟ್ಟುಕೊಳ್ಳುತ್ತಾರೆ. ಮಾತಾಡಲು ಹೆಚ್ಚಿನ ಒತ್ತಡ ತಂದರೆ ಪೋಲಿಸರಿಗೆ ಕೊಡಬೇಕಾದುದನ್ನು ಕೊಟ್ಟು ಶರಣರಿಗೆ ಕೊಡಬಾರದನ್ನು ಕೊಡುತ್ತಾರೆ. ತಾವು ಮಾಡುವ ಕಾರ್ಯಕ್ರಮಗಳಲ್ಲಿ ಶರಣರು ವಾದ ಮಾಡುತ್ತಾರೆ ಎಂದು ಪೋಲಿಸ್ ಕಾವಲಿಡುತ್ತಾರೆ. ವಾದ(ಚರ್ಚೆ)ಮಾಡುವವರನ್ನು ಹೊಡೆದು ಹೊರಗಟ್ಟುತ್ತಾರೆ. ಗುರುಕಳೆಯಿಲ್ಲದ ಇಂತಹ ವೇಷಧಾರಿ ಗುರುವಿನ ಸನ್ನಿಧಿ ಅದೇತಕ್ಕೆ ಬಾತೆಯಯ್ಯಾ? 

ಗುರುಕಳೆ ಬಸವನೆಂಬ ಗಜದಲ್ಲಿ ಸೇರಿದ ಕಾರಣ *ಲಿಂಗದೇವನ ಶರಣನೆಂಬ ಸಿಂಹದೊಂದಿಗೆ ವಾದದ ಭರವು ಕೇಳಾ.

ಮೇಲಿನ ವಚನದಲ್ಲಿ ಲಿಂಗದೇವನ ಗುರು ಕಳೆ ನನ್ನಲ್ಲಿ (ಗುರು ಬಸವಣ್ಣನವರಲ್ಲಿ) ಸೇರಿರುವುದರಿಂದಲೇ ಲಿಂಗದೇವನ ಪ್ರತಿಬಿಂಬವಾದ ಶರಣರೊಡನೆ ವಾದ ಮಾಡಲು ಸಾಧ್ಯವಿದೆ. ವಾದ ಮಾಡಲು ಎಂದರೆ, ಲಿಂಗದೇವನೇ ಆಧಾರವಾಗಿರುವ, ಲಿಂಗದೇವನೇ ಮೂಲಸ್ತಂಭವಾಗಿರುವ ಧರ್ಮವನ್ನು ಎದುರಿಗೆ ಇರುವವರ ಎಲ್ಲ ಪ್ರಶ್ನೆಗಳು ಅನುಮಾನಗಳನ್ನು ಪರಿಹರಿಸಿ; ಬೋಧಿಸಲಿಕ್ಕೆ ಸಾಧ್ಯವಾಯಿತು. ತಮ್ಮ ಪ್ರತಿವಾದಿಗಳಿಗೂ ಮನ ಪರಿವರ್ತನೆ ಮಾಡಲು ಸಾಧ್ಯವಾಯಿತು. ನಿಂದಕರೂ ಸಾಧಕರಾಗುವಂತೆ ಮಾಡಲು ಸಾಧ್ಯವಾಯಿತು ಎಂದು ಗುರು ಬಸವಣ್ಣನವರು ಹೇಳುತ್ತಿದ್ದಾರೆ.

ಗುರು ಬಸವಣ್ಣನವರು ಲಿಂಗದೇವನ ಗುರುಕಳೆಯನ್ನು ಧರಿಸಿ, ಲಿಂಗಾಯತ ಧರ್ಮವನ್ನು ಕೊಟ್ಟು, ಅನುಭಾವ ಮಂಟಪ ಮತ್ತು ಮಹಾಮನೆಯನ್ನು ಕಟ್ಟಿ, ಮೂವತ್ತಾರು ವರ್ಷಗಳ ಕಾಲ ಅದನ್ನು ನಡೆಸಿ, ಕಲ್ಯಾಣವನ್ನು ಬಿಟ್ಟುಹೋಗುವ ಪ್ರಸಂಗ ಬಂದಾಗ ಗುರು ಚೆನ್ನ ಬಸವಣ್ಣನವರು ತಾನು ಮಾಡಿದ ಈ ಧರ್ಮ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವರೆಂಬ ಸಂಪೂರ್ಣ ಭರವಸೆಯಿಂದ 

ಕರೆದು ಆಶೀರ್ವದಿಸಿ, ಹರಸಿ ಒಪ್ಪಿಸಿ ಬಸವ

ವರಚೆನ್ನಬಸವ ಶರಣರಿಗೆ ಕಂಟಕವು

ಹುರಿಯಾಳು ಕಾಯೋ ಹೊಸಮತವ

ಎಂದು ಗುರು ಬಸವಣ್ಣನವರು ತಮ್ಮ ಧರ್ಮ ಪೀಠದ ಸಂಪೂರ್ಣ ಜವಾಬ್ದಾರಿಯನ್ನು ಗುರು ಚೆನ್ನಬಸವಣ್ಣನವರಿಗೆ ವಹಿಸಿ ತಮ್ಮ ಮನಸ್ಸನ್ನು ನಿರ್ಮಳವನ್ನಾಗಿ ಮಾಡಿಕೊಂಡು ಲಿಂಗದೇವನಲ್ಲಿ ಲೀನವಾದರು.

ಅದರಂತೆ ಗುರು ಚೆನ್ನಬಸವಣ್ಣನವರು, ತಮ್ಮ ಪ್ರಾಣ ಪಣಕ್ಕಿಟ್ಟು ವಚನ ಸಾಹಿತ್ಯ ರಕ್ಷಿಸಿದರು. ಗುರು ಬಸವಣ್ಣನವರು ಮಾಡಿದ ಮಹಾಮನೆಯ ಕಾರ್ಯಗಳನ್ನು ಉಳವಿಯಲ್ಲಿ ಮಾಡಿದರು ತತ್ವ ಮಂಟಪವನ್ನು ಮೆರಿಸಿದರು. ತಮ್ಮ ಪ್ರಾಣಾರ್ಪಣೆ ಮಾಡಿ ಲಿಂಗಾಯತ ಧರ್ಮ ಮತ್ತು ಇದರ ಪರಂಪರೆಯನ್ನು ಉಳಿಸಿಕೊಟ್ಟರು. 

ತಾವು ಗುರು ಬಸವಣ್ಣನವರ ಗುರುಕಳೆಯನ್ನು ಧರಿಸಿ ಈ ಎಲ್ಲಾ ಕಾರ್ಯಗಳನ್ನು ಮಾಡಿ ಗುರುವಿನ ಮಾರ್ಗದಲ್ಲಿ ನಡೆದರು. ನಮಗೆ ಆದರ್ಶಪ್ರಾಯರಾದರು.

*ಇದನ್ನು ಬಿಟ್ಟು, ಗುರು ಬಸವಣ್ಣನವರು ಮಾಡಿದ್ದು ತಪ್ಪು, ಕೆಳಜಾತಿಯವರಿಗೆ ಧರ್ಮ ದೀಕ್ಷೆ ಕೊಟ್ಟಿರುವುದು ಈ ನೆಲದ ಕಾನೂನಿನ ಪ್ರಕಾರ ತಪ್ಪು, ಸಹಪಂಕ್ತಿ ಭೋಜನ, ಭಿನ್ನ ಜಾತಿಯ ಸಮಧರ್ಮೀಯರ ವಿವಾಹ ಈ ನೆಲದ ಕಾನೂನಿ ಪ್ರಕಾರ ಅಪರಾಧ, ಅದಕ್ಕಾಗಿ ನಾವು ಇನ್ನು ಮುಂದೆ ಇಂತಹ ಕಾರ್ಯಗಳನ್ನು ಮಾಡುವುದಿಲ್ಲ. ಕೆಳಜಾತಿಯವರಿಗೆ ಲಿಂಗದೀಕ್ಷೆ ನೀಡುವುದಿಲ್ಲ ಅಂತರ್ವಣೀಯ ವಿವಾಹಗಳನ್ನು ಮಾಡುವುದಿಲ್ಲ, ಮಹಿಳೆಯರಿಗೆ ಸಮಾನ ಸ್ಥಾನ ನೀಡುವುದಿಲ್ಲ ಅವರನ್ನು ಶೂದ್ರರನ್ನಾಗಿಯೇ ಕಾಣುತ್ತೇವೆ ಎಂದು ಬಹು ಸಂಖ್ಯಾತರನ್ನು ಮೆಚ್ಚಿಸಲು ಒಂದು ಸುದ್ದಿ ಮಾಡಿದ್ದರೆ, ಇಂದು ಗುರು ಬಸವಣ್ಣನವರ ಹೆಸರು ಇರುತ್ತಿರಲಿಲ್ಲ ಬದಲಿಗೆ ಗುರು ಚೆನ್ನಬಸವಣ್ಣನವರ ಹೆಸರೇ ಇರುತ್ತಿತ್ತು. ಆದರೆ ಅವರು ಧರಿಸಿರುವ ಗುರು ಕಳೆ ಹೀಗೆ ಮಾಡಲು ಬಿಡಲಿಲ್ಲ. ಗುರು ಬಸವಣ್ಣನವರ ಮೆರವಣಿಗೆಯೇ ನನ್ನ ಮೆರವಣಿಗೆ ಅವರಾನಂದವೇ ನನ್ನಾನಂದ ಎಂದು ಭಾವಿಸಿ ಗುರುವಿನ ಮಣಿಹವನ್ನು ಪೂರೈಸಿದ ಮಹಾನ್ ಚೇತನ ಗುರು ಚೆನ್ನಬಸವಣ್ಣನವರು.

ಅವರಿಗೆ ಅನೇಕ ಆಮಿಷ ಬಂದಿರಬಹುದು, ನಿಮಗೆ ಮಹಾನ್ ಗುರುವನ್ನಾಗಿ ಮಾಡುತ್ತೇವೆ ಶೂನ್ಯ ಪೀಠದಲ್ಲಿ ತಾವು ಬಹುಕಾಲದವರೆಗೆ ಮೆರೆಸುತ್ತೇವೆ. ನೀವು ಎಲ್ಲರಿಗೂ, ಗುರು ಬಸವಣ್ಣನವರ ವಿರೋಧಿಗಳಿಗೂ ಗುರುವಾಗಿ ಮೆರೆಯಬಹುದು. ಬಹುಕಾಲದವರೆಗೆ ಪ್ರಧಾನಿಯಾಗಿ ಮೆರೆಯಬಹುದು. ಗುರು ಬಸವಣ್ಣನವರು ತಪ್ಪು ಮಾಡಿದ್ದಾರೆ ಎಂದು ಒಂದೇ ಒಂದು ಮಾತು ಹೇಳಿ ಎಂದು ವೈದಿಕರು ಆಮಿಷ ಒಡ್ಡಿದಂತೆ ತೋರುತ್ತದೆ. ಅದಕ್ಕೆ ಗುರು ಚೆನ್ನಬಸವಣ್ಣನವರು ಕೊಟ್ಟ ಉತ್ತರ ಹೀಗಿದೆ:

ಅರವತ್ತುನಾಲ್ಕು ಶೀಲದಲ್ಲಿ ನಡೆದು ತೋರಿದನೆನಗೆ ಬಸವಣ್ಣ ನೋಡಯ್ಯಾ.

ಆ ನಡೆಯನು ಹಿಡಿದು ಬಿಡದೆ ನಡೆವೆನು, ಲಿಂಗ ಜಂಗಮ ಸಾಕ್ಷಿಯಾಗಿ.

ಈ ನಡೆಯನು ಹಿಡಿದು ನಡೆವೆನು, ಪ್ರಸಾದ ಸಾಕ್ಷಿಯಾಗಿ.

ದೃಢದಿಂದ ಹಿಡಿದು ಬಿಡದೆ ಕಡೆಮುಟ್ಟಿ ಸಲಿಸುವೆ, ಕೂಡಲಚೆನ್ನಸಂಗಮದೇವಾ.

ಎಂದು ಗುರು ಚೆನ್ನಬಸವಣ್ಣನರು ಪ್ರತಿಜ್ಞೆ ಮಾಡಿದರು ಇದರಿಂದ, ಗುರು ಚೆನ್ನಬಸವಣ್ಣನವರೂ ಗುರು ಬಸವಣ್ಣನವರಂತೆ ಪ್ರಧಾನಿಯ ಪಟ್ಟವನ್ನು ಕಳೆದುಕೊಳ್ಳಬೇಕಾಯಿತು. ಕಲ್ಯಾಣವನ್ನು ತೊರೆಯಬೇಕಾಯಿತು ಪ್ರಾಣಾರ್ಪಣೆಯನ್ನೂ ಮಾಡಬೇಕಾಯಿತು. 

ಇದರಿಂದ ದೊರೆತ ಫಲವೇನೆಂದರೆ ನೈಜವಾದ ಲಿಂಗಾಯತ ಧರ್ಮ. ಗುರು ಬಸವಣ್ಣನರ ಹೃದಯಾಂತರಾಳದಿಂದ ಹೊಮ್ಮಿದ ನಿಜ ಲಿಂಗಾಯತ ಧರ್ಮ. ಇದು ಗುರು ಕಳೆಯ ಮಹಿಮೆ.

ಗುರು ಚೆನ್ನಬಸವಣ್ಣನರು ಗುರು ಬಸವಣ್ಣನವರು ಜೀವಂತವಾಗಿದ್ದಾಗಲೂ ಒಂದೇ ಭಾವನೆ ಮತ್ತು ಗುರು ಬಸವಣ್ಣನವರು ಲಿಂಗೈಕ್ಯರಾದಮೇಲೂ ಒಂದೇ ಭಾವನೆಯನ್ನು ಹೊಂದಿದ್ದರು. ಅದೇ ಗುರು ಭಕ್ತಿಯನ್ನು ಹೊಂದಿದರು ಆದ್ದರಿಂದಲೇ ಅವರು ಗುರು ಬಸವಣ್ಣನವರ ನಂತರ ಲಿಂಗಾಯತ ಧರ್ಮದಲ್ಲಿ ಎರಡನೇ ಸ್ಥಾನವನ್ನು ಪಡೆದರು. 

ಹೀಗೆ ಗುರು ಬಸವಣ್ಣನವರು ಆದಿಯಾಗಿ ನೀಡಿದ ಗುರು ಚೆನ್ನಬಸವಣ್ಣನವರ ಬಳಿವಿಡಿದು, ಷಡ್ಗಣಾಧೀಷರ ಬಳುವಳಿಯಾಗಿ ಅಸಂಖ್ಯಾತ ಶರಣರ ಬಳಿಬಳಿವಿಡಿದು ಬಂದ ಲಿಂಗಾಯತ ಧರ್ಮ ಕಾಲಕಾಲಕ್ಕೆ ಗುರುಕಳೆಯಿಲ್ಲದ, ಗುರುವಿನಾಜ್ಞೆಗೆ ವಿರುದ್ಧವಾಗಿ ನಡೆದ ಕೆಲವು ವೇಷಧಾರಿಗಳಿಂದ ಲಿಂಗಾಯತ ಧರ್ಮ ಮಾಸಿದೆ ಕಳೆಗುಂದಿದೆ, ಕಲುಷಿತವಾಗಿದೆ. ಅದನ್ನು ನವೀಕರಿಸಲು, ಶುದ್ಧೀಕರಿಸಲು, ಪುನರುತ್ಥಾನಗೈಯಲು ಗುರುಕಳೆಧರಿಸಿದ ಗುರುಗಳು ಮತ್ತೆ ಬಂದರು. ಅವರೇ ನಮ್ಮ ಪರಮ ಪೂಜ್ಯ ಲಿಂಗಾನಂದ ಗುರುದೇವರು. ಲಿಂಗಾನಂದ ಅಪ್ಪಾಜಿಯವರೂ ಗುರುಕಳೆ ಧರಿಸದೇ ಕೇವಲ ಕಾವಿ ಧರಿಸಿದ್ದರೆ ಅವರಿಂದ ಇಂತಹ ಮಹಾನ್ ಕಾರ್ಯ ಆಗುತ್ತಿರಲಿಲ್ಲ ಕಾವಿಗಿಂತ ಮೇಲು ಅವರು ಧರಿಸಿದ ಗುರುಕಳೆ. 

ತನ್ನ ಧರ್ಮ ಪ್ರಚಾರದ ಮಣಿಹ ಮುಂದು ವರೆಸಿಕೊಂಡು ಹೋಗುವರೆಂಬ ಸಂಪೂರ್ಣ ನಂಬಿಕೆಯಿಂದ ಗುರು ಲಿಂಗಾನಂದರು ಪರಮ ಪೂಜ್ಯ ಮಾತೆ ಮಹಾದೇವಿಯವರನ್ನು ತಮ್ಮ ಆಶೋತ್ತರಗಳನ್ನು ಈಡೇರಿಸುವ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿಕೊಂಡರು. ಪರಮ ಪೂಜ್ಯ ಮಾತೆ ಮಹಾದೇವಿಯವರು ಗುರು ಚೆನ್ನಬಸವಣ್ಣನವರಂತೆ, ಗುರು ಲಿಂಗಾನಂದರಂತೆ ಅದೇ ಗುರುಕಳೆಯನ್ನು ಧರಿಸಿ ಗುರು ಬಸವಣ್ಣನವರ ಮಹಿಮೆಯನ್ನು, ಲಿಂಗಾಯತ ಧರ್ಮವನ್ನು ಬಹುಮುಖವಾಗಿ ವೈವಿಧ್ಯಮಯವಾಗಿ ಬೆಳೆಸಿದರು. ಇವುಗಳನ್ನು ಮತ್ತಷ್ಟು ಬೆಳೆಸಲು ಶರಣಮೇಳ ಕಲ್ಯಾಣ ಪರ್ವಗಳಂತಹ ಬೃಹತ್ ಕಾರ್ಯಕ್ರಮಗಳನ್ನು ಹಾಕಿಕೊಂಡು, ಎಲ್ಲರನ್ನೂ ಕರೆದು ತಮ್ಮ ಆಶ್ರಮ, ತಮ್ಮನ್ನು ತೊರೆದು ಹೋದವರನ್ನೂ ಕರೆದು, ತಮ್ಮನ್ನು ನಿಂದಿಸುವವರನ್ನೂ ಕರೆದು ಒಂದು ಗೂಡಿಸಿಕೊಂಡು ಧರ್ಮ ಪ್ರಚಾರವನ್ನು ಮಾಡುತ್ತ ಬಂದರು.

ತಮ್ಮ ಅಗಾಧವಾದ ಅನುಭಾವ, ಜ್ಞಾನ, ಪಾಂಡಿತ್ಯ ದಿಂದ, ಅಂತರಾತ್ಮದಿಂದುದಯಿಸಿದ ಸಂಶೋಧನೆಗಳನ್ನು ತೆರೆದಿಡುತ್ತ ಲಿಂಗಾಯತ ಧರ್ಮಕ್ಕೆ ಬೇಕಾದ ಎಲ್ಲಾ ಆಯಾಮಗಳನ್ನು ನೀಡುತ್ತ. ಲಿಂಗಾಯತ ಧರ್ಮದ ದೇವರು ಲಿಂಗದೇವರು ಗುರು ಬಸವಣ್ಣನವರು ದೇವರನ್ನು ಲಿಂಗದೇವರೆಂದು ಕರೆದರು. ಕೂಡಲ ಸಂಗಮದೇವ ಎಂದರೆ ಲಿಂಗದೇವ ಎಂದು ಗುರು ಬಸವಣ್ಣನವರು ಜೀವಂತವಾಗಿದ್ದಾಗ ಹೇಳುತ್ತಿದ್ದರು, ಅವರೀಗ ನೇರವಾಗಿ ಹೇಳಲು ಸಾಧ್ಯವಿಲ್ಲದಿರುವುದರಿಂದ ಅವರ ವಚನಗಳನ್ನು ಓದುವವರು ಗುರು ಬಸವಣ್ಣನವರ ವ್ಯಕ್ತಿತ್ವ, ಅವರ ಜ್ಞಾನ, ಅವರ ಹಂಬಲಗಳನ್ನು ಜನ ಅಪಾರ್ಥ ಮಾಡಿಕೊಳ್ಳಬಾರದೆಂದು ಗುರು ಬಸವಣ್ಣನವರ ವಚನಾಂಕಿತವಾಗಿಯೇ ಲಿಂಗದೇವ ಬಳಸಿದರೆ ಗುರು ಬಸವಣ್ಣನವರ ವಚನಗಳಿಗೆ ತೋರಣ ಕಟ್ಟಿದಂತಾಗುತ್ತದೆ ಎಂದು ಮಾತೆ ಮಹಾದೇವಿಯವರು ಗುರು ಬಸವಣ್ಣನವರ ವಚನಾಂಕಿತವಾಗಿ ʼಕೂಡಲ ಸಂಗಮದೇವʼ ಬದಲಿಗೆ ಲಿಂಗದೇವ ಎಂದು ಬಳಸೋಣ ಎಂದು ಅಸಂಖ್ಯಾತ ಶರಣರಿಗೆ ಮನವರಿಕೆ ಮಾಡಿ ಅದನ್ನು ಇಪ್ಪಪತ್ತು ಮೂರು ವರ್ಷಗಳ ವರೆಗೆ ಬಳಸಿದರು ಜನಮನದಲ್ಲಿ ವಿರೋಧಿಗಳ ಎದೆಯಲ್ಲೂ ಲಿಂಗದೇವ ವಚನಾಂಕಿತವನ್ನು ನೆಲೆಗೊಳಿಸಿದರು.

ತಾವು ಲಿಂಗದೇವನಲ್ಲಿ ಲೀನವಾಗುವ ದಿನಗಳು ಹತ್ತಿರ ಬರುವಾಗ, ತಮ್ಮ ಈ ಪರಂಪರೆಯನ್ನು ತಮ್ಮ ಈ ವಿಚಾರ ಧಾರೆಗಳನ್ನು ಮುಂದುವರೆಸುವ ವ್ಯಕ್ಕಿಯನ್ನು ಆಯ್ಕೆ ಮಾಡುವ ಪ್ರಸಂಗ ಬಂದಾಗ ಅವರು ವಿಚಾರ ಮಾಡಿದ್ದು ಹೀಗೆ “ನಾನು ಮಾಡಬೇಕಾದ ಎಲ್ಲಾ ಕಾರ್ಯಗಳನ್ನು ಮಾಡಿದ್ದೇನೆ ನನ್ನ ಆಶಯಗಳನ್ನು ಅರ್ಥ ಮಾಡಿಕೊಂಡ ಅಸಂಖ್ಯಾತರನ್ನು ನಿರ್ಮಿಸಿದ್ದೇನೆ ಗುರು ಕಳೆಯನ್ನು ಧರಿಸಿದ ಅನೇಕ ಮರಿಗಜಗಳನ್ನು ನಿರ್ಮಿಸಿದ್ದೇನೆ. ಭೌತಿಕವಾದ ಪೀಠದ ಅಧಿಕಾರಿ ಯಾರಾದರೇನು ಗುರುಕಳೆಗೆ ಅಸಂಖ್ಯಾತರು ಅಧಿಕಾರಿಗಳಿದ್ದಾರೆ. ಬೌದ್ಧಿಕ ಪೀಠಕ್ಕೆ ಅನೇಕರು ಅಧಿಕಾರಿಗಳಿದ್ದಾರೆ ಜ್ಞಾನ ಪರಂಪರೆಗೆ ಲಿಂಗದೇವನನ್ನು ಆರಾಧಿಸವ ಅನೇಕ ಜ್ಞಾನವಾರಸುದಾರರಿದ್ದಾರೆ” ಎಂದು ಸಾಂಪ್ರದಾಯಿಕವಾಗಿ ಒಬ್ಬರನ್ನು ಪೀಠಾಧಿಕಾರಿಯಾಗಿ ಘೋಷಿಸಿ, ಅಸಂಖ್ಯಾತರು ನನ್ನ ಜ್ಞಾನವಾರಸುದಾರರಿದ್ದಾರೆ ಪೀಠಾಧಿಕಾರಿ ತಪ್ಪು ಮಾಡಿದರೆ ಜ್ಞಾನಾಧಿಕಾರಿಗಳು ತಿದ್ದುತ್ತಾರೆ ಎನ್ನುವ ಅಪಾರವಾದ ನಂಬಿಕೆ ಮಾತಾಜಿಯವರದ್ಧಾಗಿತ್ತು. 

ಅದರಂತೆ ಜ್ಞಾನದ ವಾರಸುದಾರರು ಪರಮಪೂಜ್ಯ ಮಾತಾಜಿಯವರ ಆಶಯಗಳನ್ನು ಅಂತಂಗದಲ್ಲಿ ಅಳವಡಿಸಿಕೊಂಡು, ಭೌತಿಕವಾದ ಪೀಠ ಬಿಡುತ್ತೇವೆಯೇ ಹೊರತು ಬೌದ್ಧಿಕವಾದ ಪೀಠ ಬಿಡಲ್ಲ ಎಂದು ಅವರು ಸಂಶೋದಿಸಿದ “ಲಿಂಗದೇವʼ ವಚನಾಂಕಿತವನ್ನು ಹೃದಯಂಗತ, ಆತ್ಮಗತವನ್ನಾಗಿ ಮಾಡಿಕೊಂಡ, ಆತ್ಮಾನುಸಂಧಾನದಲ್ಲಿ ಅಳವಡಿಸಿಕೊಂಡ ಅಸಂಖ್ಯಾತ ಶರಣರು ವಚನಗಳಲ್ಲಿ ಲಿಂಗದೇವನನ್ನು ಹಾಡಿ ಕೊಂಡಾಡಿ ಆನಂದಿಸುತ್ತಿದ್ದಾರೆ. 

ಮಾತಾಜಿಯವರ ಗುರು ಕಳೆಯನ್ನು ಧರಿಸಿದ ಪೂಜ್ಯರಾದ ಚೆನ್ನಬಸವಾನಂದ ಸ್ವಾಮೀಜಿಯವರು ಮತ್ತು ಪೂಜ್ಯರಾದ ಸತ್ಯಾದೇವಿ ಮಾತೆಯವರು ಮಾತಾಜಿಯವರ ಜ್ಞಾನ ಪೀಠಕ್ಕೆ ಉತ್ತರಾಧಿಕಾರಿಗಳಾಗಿ ಗುರು ಬಸವಣ್ಣನವರಾದಿಯಾಗಿ, ಗುರು ಚೆನ್ನಬಸವಣ್ಣನವರ ಮತ್ತು ಅನೇಕ ಶರಣರ ಪ್ರಾಣಾರ್ಪಣೆಯಿಂದಗಾಗಿ ಅಸಂಖ್ಯಾತ ಶರಣರ ತ್ಯಾಗ ಬಲಿದಾನಗಳ ಬಳಿವಿಡಿದು ಬಂದ ಲಿಂಗಾಯತ ಧರ್ಮವನ್ನು ಕಲುಷಿತ ಮಾಡದೆ ನೈಜ ರೂಪದಲ್ಲಿ ಆಚರಿಸುತ್ತ, ಕಳೆದ ಮೂರು ವರ್ಷಗಳಿಂದ ಸ್ವಾಭಿಮಾನಿ ಕಲ್ಯಾಣಪರ್ವ, ಸ್ವಾಭಿಮಾನಿ ಶರಣಮೇಳಗಳನ್ನು ಮಾಡುತ್ತ ಪರಮ ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಮತ್ತು ಪರಮ ಪೂಜ್ಯ ಮಾತೆ ಮಹಾದೇವಿಯವರ ಗುರುಕಳೆಯನ್ನು ಬಿತ್ತುತ್ತ, ಗುರುದ್ರೋಹಿಯಾಗದೆ, ತತ್ವನಿಷ್ಠೆ, ಗುರು ನಿಷ್ಠೆ, ಧರ್ಮನಿಷ್ಠೆ, ಲಿಂಗದೇವ ನಿಷ್ಠೆಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ನನಗೆ ಜ್ಞಾನದ ವಾರಸುದಾರತ್ವೇ ಸಾಕೆಂದು ಈ ಮಹಾನ್ ಗುರು ಶಿಷ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಬನ್ನಿ ಶರಣರೇ ಇಂತಹ ಗುರುಕಳೆಯ ಸ್ವಾಭಿಮಾನಿ ಶರಣಮೇಳದಲ್ಲಿ ಭಾಗಿಯಾಗಿ ಗುರುಕಳೆಯನ್ನು ಹೊಂದಿ ಗುರು ಬಸವಣ್ಣನವರಾದಿಯಾಗಿ ಅಂಸಂಖ್ಯಾತ ಶರಣರ ಬಳಿವಿಡಿದು, ಪೂಜ್ಯ ಶ್ರೀ ಲಿಂಗಾನಂದ ಅಪ್ಪಾಜಿ ಮತ್ತು ಪೂಜ್ಯ ಶ್ರೀ ಮಾತೆ ಮಹಾದೇವಿ ಮಾತಾಜಿಯವರಿಂದ ಬಳುವಳಿಯಾಗಿ ಬಂದ ಗುರುಕಳೆಯನ್ನು ಕಳೆದುಕೊಳ್ಳದೇ ಅದನ್ನು ಅಳಡಿಸಿಕೊಂಡು ಭಾವ ಪುಳಕಿತಗೊಂಡು ಅನುಸಂಧಾನಿಸೋಣ, ಮುಂದಿನ ಪೀಳಿಗೆಗೂ ಬಳುವಳಿಯಾಗಿ ನೀಡೋಣ ಎಂದು ಆಶಿಸುತ್ತ ತಮ್ಮೆಲ್ಲರನ್ನು ಸ್ವಾಭಿಮಾನಿ ಶರಣಮೇಳಕ್ಕೆ ಆತ್ಮೀಯತೆಯತೆಯಿಂದ ಬರಮಾಡಿಕೊಳ್ಳಲು ಕಾತುರರಾಗಿದ್ದೇವೆ.

ಗುರು ಬಸವಣ್ಣನವರ, ಗುರು ಚೆನ್ನಬಸವಣ್ಣನವರ , ಷಡ್ಗಣಾಧೀಶರು, ಗುರುಲಿಂಗಾನಂದ ಸ್ವಾಮೀಜಿಯವರ ಮತ್ತು ಗುರು ಮಾತೆ ಮಹಾದೇವಿ ಮಾತಾಜಿಯವರ ನಡೆಯನು ಹಿಡಿದು ಬಿಡದೆ ನಡೆಯೋಣ, ಲಿಂಗ ಜಂಗಮ ಸಾಕ್ಷಿಯಾಗಿ.

ಅವರ ನಡೆಯನು ಹಿಡಿದು ನಡೆಯೋಣ, ಪ್ರಸಾದ ಸಾಕ್ಷಿಯಾಗಿ. ದೃಢದಿಂದ ಹಿಡಿದು ಬಿಡದೆ ಕಡೆಮುಟ್ಟಿ ಸಲಿಸೋಣ ಬನ್ನಿ ಶರಣು ಶರಣಾರ್ಥಿ

-ಸಚ್ಚಿದಾನಂದ ಪ್ರಭು ಚಟ್ನಳ್ಳಿ

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...