ads

Search This Blog

Saturday, 27 September 2025

ಪ್ರವಾಸೋದ್ಯಮದಿಂದ ದೇಶದ ಆರ್ಥಿಕ ಪ್ರಗತಿ ಹೆಚ್ಚಳ: ಪ್ರವಾಸೋದ್ಯಮ ಅಧಿಕಾರಿ ನಜೀರ ಅಹ್ಮದ

 ರಾಯಚೂರು : ಪ್ರವಾಸೋದ್ಯಮವು ವಿವಿಧ ದೇಶಗಳ ಸಂಸ್ಕೃತಿ, ವೈವಿಧ್ಯತೆಯ ಬಗ್ಗೆ ಪ್ರವಾಸಿಗರಿಗೆ ತಿಳಿದುಕೊಳ್ಳಲು ಸಹಾಯವಾಗಿದೆ. ಅಲ್ಲದೆ ದೇಶದ ಆರ್ಥಿಕತೆಯನ್ನು ಹೆಚ್ಚಿಸುಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ನಜೀರ ಅಹ್ಮದ್ ಕನವಳ್ಳಿ ಅವರು ಹೇಳಿದರು.

ಸೆ.27ರ ಶನಿವಾರ ದಂದು ನಗರದ ಹಮದರ್ದ್ ಪ್ರೌಢ ಶಾಲೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ, ಶಿಕ್ಷಣ ಇಲಾಖೆ, ಪುರಾತತ್ವ ಸಂಗ್ರಹಾಲಯಗಳು & ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2025ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇವಲ ಪ್ರವಾಸಿ ತಾಣಗಳನ್ನು ಗುರುತಿಸುವುದು ಮಾತ್ರವಲ್ಲ; ಅವುಗಳನ್ನು ಮೇಲ್ದರ್ಜೆಗೇರಿಸುವುದು, ಆಕರ್ಷಣೆಯಗೊಳಿಸುವುದು ಪ್ರವಾಸೋದ್ಯಮ ಇಲಾಖೆಯ ಮುಖ್ಯಉದ್ದೇಶವಾಗಿದೆ. ಪ್ರವಾಸಿ ತಾಣಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿ ಇಲಾಖೆಯ ಮೇಲಿದೆ ಎಂದರು.
ಜಿಲ್ಲೆಯಲ್ಲಿರುವ ಐತಿಹಾಸಿಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಇಲಾಖೆಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿರುತ್ತದೆ ಎಂದರು.
ಈ ವೇಳೆ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಚೆನ್ನಾರೆಡ್ಡಿ ಅವರು ಉಪನ್ಯಾಸ ನೀಡಿ, ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಅವುಗಳನ್ನು ಅಭಿವೃದ್ಧಿಪಡಿಸುವುದು ಅತೀ ಅಗತ್ಯವಾಗಿದೆ. ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ವಿಶ್ವದ್ಯಾಂತ ಆಚರಣೆ ಮಾಡಲಾಗುತ್ತದೆ. ಈ ದಿನಾಚರಣೆಯು ಕಾರ್ಯಕ್ರಮಕ್ಕೆ ಸೀಮಿತವಾಗಬಾರದು ಎಂದರು.
ಅನೇಕ ಐತಿಹಾಸಿಕ ಸ್ಥಳಗಳು ಜಿಲ್ಲೆಯಲ್ಲಿದ್ದು, ಅವುಗಳನ್ನು ಅಭಿವೃದ್ಧಿಪಡಿಸುವ ಕಾರ್ಯವಾಗಬೇಕು. ಪ್ರವಾಸಿ ತಾಣಗಳು ಅಭಿವೃದ್ಧಿಯಾದಲ್ಲಿ ಸ್ಥಳೀಯರಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ. ಪ್ರವಾಸೋದ್ಯಮ ಕಾರ್ಯಚಟುವಟಿಕೆಯಿಂದ ಇತಿಹಾಸದ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ ಎಂದರು.
ಪ್ರವಾಸೋದ್ಯಮ ಅಭಿವೃದ್ಧಿಯಾದಾಗ, ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತದೆ ಮತ್ತು ಕರಕುಶಲಕಾರರು ಕೂಡ ಆರ್ಥಿಕವಾಗಿ ಸಬಲರಾಗುತ್ತಾರೆ ಎಂದು ತಿಳಿಸಿದರು.
ಜಿಲ್ಲೆಯು 4000 ವರ್ಷಗಳ ಇತಿಹಾಸ ಹೊಂದಿದ್ದು, ಜಿಲ್ಲೆಯ ಮಸ್ಕಿಯಲ್ಲಿ ಇತಿಹಾಸಕಾರರು ಭೂ ಉತ್ಪನನೆ ಮಾಡಿದ್ದಾರೆ. ಇದರಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆ ಜನರು ವಾಸಿಸುತ್ತಿದ್ದರು ಎಂದು ತಿಳಿಬಂದಿದೆ.
ಗಬ್ಬೂರಿನಲ್ಲಿ 20 ಪ್ರಾಚೀನ ದೇವಾಲಯಗಳಿವೆ. 21 ಶಿಲಾಶಾಸನಗಳಿವೆ. ಮುದಗಲ್‌ನಲ್ಲಿ ಎರಡು ಸುತ್ತಿನ ಕೋಟೆಯಲ್ಲಿ ಶಿಲಾಶಾಸನಗಳಿವೆ. ಕವಿತಾಳ, ಕೋಟೆಕಲ್ ಸೇರಿದಂತೆ ಹಲವೆಡೆ ಬೆಟ್ಟ ಗುಡ್ಡಗಳ ಮೇಲೆ ರೇಖಾ ಚಿತ್ರಗಳಿವೆ. ಇವು ಆದಿಮಾನವರ ವಾಸಸ್ಥಾನಗಳು ಎಂಬುದು ತಿಳಿಯುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಥಮ ದರ್ಜೆ ಪದವಿ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಡಾ.ಸುಗುಣಾ, ಪುರಾತತ್ವ ಸಂಗ್ರಹಾಲಯ, ಪರಂಪರೆ ಇಲಾಖೆಯ ಕ್ಯೂರೇಟರ್ ಶಿವಪ್ರಕಾಶ, ಹಮದರ್ದ್ ಕಾಲೇಜಿನ ಪ್ರಾಂಶುಪಾಲರಾದ ಕಾಶಪ್ಪ, ಚಿತ್ರಕಲಾ ಶಿಕ್ಷಕ ಚಂದ್ರಶೇಖರ ಸೇರಿದಂತೆ ಇತರರಿದ್ದರು. ಶಿಕ್ಷಕ ಡಾ.ದಂಡಪ್ಪ ಬಿರಾದಾರ ನಿರೂಪಿಸಿದರು.

ಭೀಮಾನದಿ ಪ್ರವಾಹ ಪೀಡಿತ ಗ್ರಾಮಗಳಿಗೆ ಸಿಂದಗಿ ಶಾಸಕರು-ಜಿಲ್ಲಾಧಿಕಾರಿಗಳು ಭೇಟಿ ಪರಿಶೀಲನೆ: ಸಂತ್ರಸ್ಥರ ಸಮಸ್ಯೆ ಆಲಿಕೆ

 ವಿಜಯಪುರ :  ಭೀಮಾನದಿ ಪ್ರವಾಹಕ್ಕೆ ಒಳಗಾಗಿರುವ ಸಿಂದಗಿ ಮತಕ್ಷೇತ್ರದ ವಿವಿಧ ಗ್ರಾಮಗಳಿಗೆ ಕ್ಷೇತ್ರದ ಶಾಸಕರಾದ ಅಶೋಕ ಮನಗೂಳಿ, ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ. ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ಥರ ಸಮಸ್ಯೆಗಳನ್ನು ಆಲಿಸಿದರು. 


ಶನಿವಾರ ಭೀಮಾನದಿ ಪ್ರವಾಹ ಪೀಡಿತ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಅವರು, ಪ್ರವಾಹಕ್ಕೊಳಗಾಗಿರುವ ಪ್ರದೇಶಗಳಲ್ಲಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ ಶಾಸಕರು, ಈ ಕಾರ್ಯವನ್ನು ಪ್ರಥಮಾದ್ಯತೆ ಮೇಲೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅವರು ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂತ್ರಸ್ಥರ ಸಮಸ್ಯೆಗಳನ್ನು ಆಲಿಸಿ, ಪರಿಹಾರಕ್ಕೆ ಭರವಸೆ ನೀಡಿದರು. 

ತಾಲೂಕಿನ ದೇವರನಾವದಗಿ ಗ್ರಾಮ ಪಂಚಾಯತಿಯ ಕುಮಸಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಮತ್ತು ಶ್ರೀ ಕಲ್ಲಾಲಿಂಗಶ್ವರ ಪ್ರಾಥಮಿಕ ಶಾಲೆಯಲ್ಲಿ ಹಾಗೂ ದೇವಣಗಾವ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಕಾಳಜಿ ಕೇಂದ್ರಗಳಲ್ಲಿ ಕಲ್ಪಿಸಿರುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ಅಲ್ಲಿನ ಸಂತ್ರಸ್ಥರೊAದಿಗೆ ಮಾತನಾಡಿ, ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.ಯಾರು ಸಹ ಭಯ ಪಡುವ ಅವಶ್ಯಕತೆ ಇಲ್ಲ. ಜಿಲ್ಲಾಡಳಿತ ನಿಮ್ಮ ಜೊತೆಗಿದ್ದು, ಅಗತ್ಯ ಸಹಕಾರ ಒದಗಿಸುವಂತೆ ಕೋರಿ, ಸಂತ್ರಸ್ಥರಿಗೆ ಧೈರ್ಯ ತುಂಬಿದ ಜಿಲ್ಲಾಧಿಕಾರಿಗಳು, ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧರಾಗಿದ್ದು, ಯಾವದೇ ಜನ ಮತ್ತು ಜಾನುವಾರಗಳ ಪ್ರಾಣ ಹಾನಿಯಾಗದಂತೆ ಎಲ್ಲಾ ರೀತಿಯ ಸಕಲ ಸುರಕ್ಷತಾ ಕ್ರಮಗಳನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿದೆ. ಈವರೆಗೆ ಜಿಲ್ಲೆಯ ಆಲಮೇಲ ತಾಲೂಕಿನಲ್ಲಿ ೦೯, ಇಂಡಿ ತಾಲೂಕಿನಲ್ಲಿ ೦೭ ಸೇರಿದಂತೆ ಒಟ್ಟು ೧೬ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕಾಳಜಿ ಕೇಂದ್ರಗಳಲ್ಲಿ ೮೬೭ ಜನರಿಗೆ ಆಶ್ರಯ ಒದಗಿಸಲಾಗಿದೆ. ಆಯಾ ಕಾಳಜಿ ಕೇಂದ್ರಗಳಿಗೆ ಓರ್ವ ನೊಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರವಾಹ ಪರಿಸ್ಥಿತಿಯನ್ನು ಎಲ್ಲರೂ ಒಟ್ಟಾಗಿ ಸಮರ್ಥವಾಗಿ ಎದುರಿಸಲು, ಅಧಿಕಾರಿಗಳು ಸಹ ಜವಾಬ್ದಾರಿಯುತವಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚನೆ ನೀಡಿದರು. 

ಸುಮಾರು ೫೩ ವರ್ಷದ ಹಳೆಯದಾದ ದೇವಣಗಾವ ಬ್ರಿಡ್ಜಗೆ ಭೇಟಿ ನೀಡಿ, ಈ ಬ್ರಿಡ್ಜ್ ಹಳೆಯದಾಗಿರುವದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ದುರಸ್ತಿಗೆ ಸಾರ್ವಜನಿಕರು ಒತ್ತಾಯಿಸಿದ ಹಿನ್ನಲೆಯಲ್ಲಿ ಶೀಘ್ರವೇ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು. 

ನಿರಂತರವಾಗಿ ಸುರಿದ ಮಳೆಯಿಂದಾಗಿ ಅನೇಕ ಮನೆ ಮತ್ತು ಬೆಳೆಹಾನಿ ಸಂಭವಿಸಿರುವ ಕುರಿತು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ, ಕೂಡಲೇ ಬೆಳೆ ಸಮೀಕ್ಷೆ ಕಾರ್ಯ ಕೈಗೊಂಡು ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದರು. 

ಈ ಸಂದರ್ಭದಲ್ಲಿ ಇಂಡಿ ಉಪವಿಬಾಗಾಧಿಕಾರಿ ಶ್ರೀಮತಿ ಅನುರಾಧಾ ವಸ್ತ್ರದ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮು ಜಿ ಅಗ್ನಿ, ಕರೆಪ್ಪ ಬೆಳ್ಳಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಸಂತ್ರಸ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಸೊನ್ನಬ್ಯಾರೇಜಿಗೆ ಭೇಟಿ ಪರಿಶೀಲನೆ : ಸೊನ್ನ ಬ್ಯಾರೇಜಿಗೆ ಭೇಟಿ ನೀಡಿ ನೀರಿನ ಪ್ರವಾಹ ಪರಿಸ್ಥಿತಿ ಮಾಹಿತಿ ಪಡೆದುಕೊಂಡರು ಜಿಲ್ಲಾಡಳಿತದೊಂದಿಗೆ ಸತತ ಸಂಪರ್ಕದಲ್ಲಿದ್ದು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಿಷಿ ಆನಂದ, ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಪಾಟೀಲ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.


ಬಳ್ಳಾರಿಯಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರವಾಸಿ ತಾಣಗಳನ್ನು ಉಳಿಸಿ ಬೆಳೆಸಿ ಸಂರಕ್ಷಿಸೋಣ: ಮುಂಡರಗಿ ನಾಗರಾಜ

 ಬಳ್ಳಾರಿ : ನಮ್ಮ ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳನ್ನು ಉಳಿಸಿ ಬೆಳೆಸಿ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ ಹಾಗೂ ಹೋಟೆಲ್ ಮಾಲೀಕರ ಸಂಘ, ರಾಬರ್ಟ್ ಬ್ರೂಸ್‌ಫೂಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಸಂಡೂರು ಡೈರೀಸ್ ಇವರ ಸಹಯೋಗದಲ್ಲಿ “ಪ್ರವಾಸೋದ್ಯಮ ಹಾಗೂ ಸುಸ್ಥಿರ ಪರಿವರ್ತನೆ” ಎಂಬ ಸಂದೇಶದಡಿಯಲ್ಲಿ ನಗರದ ಐತಿಹಾಸಿಕ ಕೋಟೆ ಮುಂಭಾಗದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯವು ಹಲವಾರು ಐತಿಹಾಸಿಕ ಪ್ರವಾಸಿ ತಾಣಗಳು ಮತ್ತು ವಿಸ್ಮಯಕಾರಿ ತಾಣಗಳನ್ನು ಹೊಂದಿದೆ. ವಿಶ್ವ ವಿಖ್ಯಾತ ಹಂಪಿ ಹಾಗೂ ತುಂಗಭದ್ರಾ ಡ್ಯಾಂ ಪ್ರವಾಸಿ ತಾಣಗಳು ಇದೀಗ ನೆರೆಯ ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟಿವೆ. ಆದರೂ ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ ಸಂಡೂರಿನ ಕುಮಾರಸ್ವಾಮಿ ದೇವಸ್ಥಾನ, ಸ್ವಾಮಿಮಲೈ ಅರಣ್ಯ ಕ್ಷೇತ್ರ, ನಾರಿಹಳ್ಳ ಜಲಾಶಯ, ವಿಶ್ವದ 2 ನೇ ಏಕಶಿಲಾ ಬೆಟ್ಟ ಬಳ್ಳಾರಿಯ ಐತಿಹಾಸಿಕ ಕೋಟೆ, ಮಿಂಚೇರಿ ಬೆಟ್ಟ,  ಸಂಗನಕಲ್ಲು ಗುಡ್ಡ, ಸಿರುಗುಪ್ಪದ ತೆಕ್ಕಲಕೋಟೆ, ಕೆಂಚನಗುಡ್ಡ, ಕುರುಗೋಡಿನ ದೊಡ್ಡ ಬಸವೇಶ್ವರ ದೇವಸ್ಥಾನ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿದ್ದು, ಜನರು ಈ ಸ್ಥಳಗಳಿಗೆ ಭೇಟಿ ನೀಡಿ ಸ್ಥಳೀಯ ಪ್ರವಾಸಿ ತಾಣಗಳನ್ನು ವೀಕ್ಷಿಸಬೇಕು ಎಂದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಮ್ಮ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಒಂದು ದಿನದ ಪ್ರವಾಸ ಕರೆದುಕೊಂಡು ಹೋಗಿ ಐತಿಹಾಸಿಕ ಸ್ಥಳಗಳ ಬಗ್ಗೆ ಶಿಕ್ಷಕರು ಮಾಹಿತಿ ನೀಡಿದರೆ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡುತ್ತದೆ ಎಂದು ಹೇಳಿದರು.
  ಇಂದಿನ ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ದುಶ್ಚಟಕ್ಕೆ ಒಳಗಾಗದೇ ವಿದ್ಯಾಭ್ಯಾಸದ ಕಡೆ ಗಮನ ಹರಿಸುವುದರ ಜೊತೆಗೆ ಪ್ರವಾಸಿ ತಾಣಗಳನ್ನು ವೀಕ್ಷಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದ ಸದಸ್ಯ ಅಹೀ ರಾಜ್.ಎಂ ಅವರು ಮಾತನಾಡಿ, ಐದು ಸಾವಿರ ವಷÀðಗಳ ಇತಿಹಾಸ ಹೊಂದಿದ ಸಂಗನಕಲ್ಲು ಗುಡ್ಡ ಪ್ರದೇಶವು ನವಶಿಲಾಯುಗದ ಕುರುಹುಗಳ ತಾಣವಾಗಿದ್ದು, ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ಜನವಸತಿ ಪ್ರದೇಶವಾಗಿತ್ತು ಎಂಬ ಇತಿಹಾಸವನ್ನು ಹೊಂದಿದೆ. ಇಂತಹ ಐತಿಹಾಸಿಕ, ನೈಸರ್ಗಿಕ ತಾಣಗಳ ವೀಕ್ಷಣೆಯಿಂದ ಇತಿಹಾಸದ ಕುರಿತು ಕುತೂಹಲ ಸೃಷ್ಟಿಯಾಗಿ ಜ್ಞಾನ ವೃದ್ಧಿಯಾಗಲಿದೆ ಎಂದು ಹೇಳಿದರು.
ಇದೇ ವೇಳೆ ಪ್ರವಾಸಿ ಮಿತ್ರ ರಕ್ಷಣಾ ಸಿಬ್ಬಂದಿಗಳಿಗೆ ಪ್ರಶಂಸೆ ಪತ್ರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಗಣ್ಯರಿಗೆ ನೆನಪಿನ ಕಾಣಿಕೆಯನ್ನು ನೀಡÀಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪೋಟೋ ಪಾಯಿಂಟ್ ಮತ್ತು ಕೋಟೆ ಮುಂಭಾಗ ನಿಂತು ಪೋಟೋ ತೆಗೆದುಕೊಂಡು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಜಂಟಿ ಕಾರ್ಯದರ್ಶಿ ಜಿತೇಂದ್ರ, ಸಸಅ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಸಪ್ಪ.ಕೆ,  ಪ್ರವಾಸೋದ್ಯಮ ಇಲಾಖೆಯ ಹಿರಿಯ ಪ್ರವಾಸಿ ಪ್ರವರ್ತಕ ಶ್ರೀಹರಿ ಮಾಸನೂರು, ಪ್ರವಾಸಿ ಮಿತ್ರರು ಸೇರಿದಂತೆ  ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.

ಜಾತಿ ಸಮೀಕ್ಷೆ ; ಒಂದಾದ ಒಕ್ಕಲಿಗರು-ಒಂದಾಗದ ಲಿಂಗಾಯತರರು...!


ಪರ-ವಿರೋಧ, ವಿವಾದಗಳೊಂದಿಗೆ ಈಗಾಗಲೇ ಜಾತಿ ಸಮೀಕ್ಷೆ ಆರಂಭವಾಗಿದೆ. ಸಮೀಕ್ಷೆಗೆ ಬರುವ ಶಿಕ್ಷಕರು ತಮಗೆ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದೇನೂ ಇಲ್ಲ. ಗಣಿತಿಯಲ್ಲಿ ಭಾಗವಹಿಸುವುದೂ ಕಡ್ಡಾಯವಲ್ಲವೆಂದು ಹೈಕೋರ್ಟ್ ಹೇಳಿದೆ. ಆದರೆ ಧರ್ಮ ಮತ್ತು ಜಾತಿ ಕಾಲಂನಲ್ಲಿ ಏನು ಬರೆಸಬೇಕೆಂಬ ಬಗ್ಗೆ ವಿವಿಧ ಸಮುದಾಯಗಳ ಮಧ್ಯೆ ಒಳಜಗಳಕ್ಕೆ ಹುಟ್ಟುಹಾಕುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ರಾಜ್ಯದ ಪ್ರಮುಖ ಕೋಮುಗಳಲ್ಲಿ ಒಕ್ಕಲಿಗ ಮತ್ತು ವೀರಶೈವ ಲಿಂಗಾಯತ ಸಮುದಾಯ. ರಾಜಕೀಯವಾಗಿಯೂ ಪ್ರಾಬಲ್ಯ ಹೊಂದಿರುವ ಈ ಸಮುದಾಯದ ನಾಯಕರುಗಳು ವಿವಿಧ ಮಠಾಧೀಶರ ನೇತೃತ್ವದಲ್ಲಿ ಸಭೆಗಳನ್ನು ನಡೆಸಿಯಾಗಿದೆ. ಒಕ್ಕಲಿಗ ಸಮುದಾಯ ಮಾತ್ರ ನಿರ್ಮಲಾನಂದನಥ ಗುರುಗಳ ನೇತೃತ್ವದಲ್ಲಿ ಧರ್ಮ ಹಿಂದೂ, ಜಾತಿ ಒಕ್ಕಲಿಗೆ ಎಂದು ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ. ಆದರೆ, ವೀರಶೈವ-ಲಿಂಗಾಯತರಲ್ಲಿ ಮಾತ್ರ ಇನ್ನೂ ಒಮ್ಮತ ಮೂಡದೇ ನಾವು ಹಿಂದೂಗಳೇ ಅಲ್ಲ ಎಂದು ಒಂದು ಗುಂಪು ಹೇಳಿದರೆ, ಮತ್ತೊಂದು ಗುಂಪು ನಾವು ವೀರಶೈವರೇ ಅಲ್ಲ, ಬಸವಧರ್ಮದವರು ಎಂದು ಹೇಳುತ್ತಿದ್ದಾರೆ. ಇನ್ನೊಂದು ಗು:ಉ ಹಿಂದೂ ಧರ್ಮ, ವೀರಶೈವ-ಲಿಂಗಾಯತ ಜಾತಿ ಎಂದು ಹೇಳಿಕೊಳ್ಳುತ್ತಿದೆ. ರಾಜಕೀಯವಾಗಿ ಪ್ರಾಬಲ್ಯವಿರುವ ಒಂದು ಪ್ರಬಲ ಸಮುದಾಯವನ್ನು ಜಾತಿಗಣತಿಹೆಸರಿನಲ್ಲಿ ಒಡೆಯುವುದರಲ್ಲಿ ಈ ಗಣತಿ ಯಶಸ್ವಿಯಾಗಿದೆ ಎನ್ನಬಹುದು.

ಜಾತಿ ಸಮೀಕ್ಷೆ ; ಒಂದಾದ ಒಕ್ಕಲಿಗರು-ಒಂದಾಗದ ಲಿಂಗಾಯತರರು...!

`ಜಾತಿ ಗಣತಿ' ಎಂಬ ಭೂತ ಈಗ ರಾಜ್ಯದಲ್ಲಿ ಎಲ್ಲ ಜಾತಿಗಳನ್ನೂ ಜಾಗೃತಗೊಳಿಸಿದೆ. ಎಲ್ಲ ಜಾತಿಯವರೂ ತಮ್ಮ ಸಂಖ್ಯೆ ಹೆಚ್ಚಿಸಿಕೊಳ್ಳುವ ತವಕ ಒಂದೆಡೆಯಾದರೆ, ಇನ್ನೊಂದೆಡೆ ತಮ್ಮದು ಪ್ರತ್ಯೇಕ ಧರ್ಮವೆಂದು ಗುರುತಿಸಿಕೊಳ್ಳಬೇಕೆಂಬ ಹಠಮಾರಿತನ. ಇನ್ನುಳಿದ ಸಣ್ಣ ಜಾತಿಗಳವರು ತಮ್ಮ ಮೀಸಲಾತಿಗೆ ಪೆಟ್ಟು ಹಾಕಲು ಸರ್ಕಾರ ಹವಣಿಸುತ್ತಿದೆ ಎಂಬ ಆತಂಕ. ಮತ್ತೊಂದಡೆ ಜಾತಿ ಗಣತಿ ಇಡೀ ರಾಜ್ಯದ ಎಲ್ಲ ಜಾತಿಗಳಲ್ಲೂ ತಳಮಳ - ಜಾತಿ ಹೆಸರಿನ ಅರಾಜಕತೆ ಸೃಷ್ಟಿಸಿದ್ದಂತೂ ನಿಜ. ಎಲ್ಲ ಜಾತಿ  ಸಮುದಾಯಗಳು ಸಭೆ-ಸಮಾವೇಶ ನಡೆಸಿ, ಉಪ ಜಾತಿಗಳ ಹೆಸರು ಬರೆಸಲು ಮನವಿ ಮಾಡಿದರೆ, ಕೆಲವರು ಅದಕ್ಕೆ ವಿರೋಧ ಮಾಡುತ್ತಿವೆ. ಇನ್ನೂ ಕೆಲವರು ಹಿಂದೂ ಧರ್ಮ ಎನ್ನುವ ಕಾಲಂನಲ್ಲೇ ಬರೆಸಬೇಕು ಎನ್ನುವ ವಿವಾದಗಳನ್ನು ಸೃಷ್ಟಿಸುತ್ತಿವೆ. ಇವೆಲ್ಲದರ ನಡುವೆಯೇ ಸರ್ಕಾರ ಈಗಾಗಲೇ ಜಾತಿ ಗಣತಿ ಆರಂಭಿಸಿದೆ. ಕೆಲವರು ಇದನ್ನು ತೀವ್ರ ವಿರೋಧ ವ್ಯಕ್ತಪಡಿಸುದರೆ, ಕೆಲವರು ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. 

ಇಲ್ಲಿ ಸಮರ್ಥನೆ, ವಿರೋಧ ಮುಖ್ಯವಲ್ಲ, ಈಗಾಗಲೇ ಜಾತಿ ಗಣತಿ ಆರಂಭವಾಗಿದೆ. ಮನೆ ಮನೆಗೆ ಶಿಕ್ಷಕರು ತೆರಳಿ ಪ್ರಶ್ನೆಗಳನ್ನು ಕೇಳಿ ಧರ್ಮ, ಜಾತಿ ಕಾಲಂನಲ್ಲಿ ಜಾತಿಯ ಸೂಚಕವನ್ನು ಮಾಡಿಕೊಳ್ಳುತ್ತಿದ್ದಾರೆ. ಅದು ದಸರಾ ರಜೆಯ ಸಂದರ್ಭದಲ್ಲಿ ಸಿಕ್ಕ ರಜೆಯಲ್ಲಿ ಶಿಕ್ಷಕರು ಮಾಡುವ ಈ ಕೆಲಸಕ್ಕೂ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ಅದೇನೇ ಇರಲಿ, ಈಗ ಜಾತಿ ಹೆಸರು ಬರೆಸುವ ಮೂಲಕ ಜಾತಿಯ ಹುನ್ನಾರದ  ರಾಜಕೀಯ ನಡೆ ಎಂಬುದರಲ್ಲಿ ಅನುಮಾನವಿಲ್ಲ. ಈ ಮಧ್ಯೆ ಹೊಸ ಜಾತಿಯೊಂದು ಹುಟ್ಟಿಕೊಂಡಿದೆ ಅದು ಯಾಕೆ? ಎನ್ನುವ ಪ್ರಶ್ನೆಯೂ ಈಗ ಉದ್ಭವವಾಗಿದೆ. ಈ ಜಾತಿ ಸಮೀಕ್ಷೆ ಹಿನ್ನೆಲೆಯಲ್ಲಿ ಎರಡು ಪ್ರಮುಖ ಜಾತಿಗಳು ನಡೆಸಿದ ಸಭೆ-ಸಮಾವೇಶಗಳಲ್ಲಿ ಗೊಂದಲಗಳು ಕೂಡ ಜಾತಿಯ ನಾಯಕರ ನಿದ್ದೆಗೆಡಿಸಿದೆ. ಹೌದು ಈಗ ವೀರಶೈವ-ಲಿಂಗಾಯಿತ ಸಮುದಾಯದ ನಾಯಕರಲ್ಲಿ ಒಮ್ಮತ ಮೂಡದೆ ಆ ನಾಯಕರಿಗೆ ಗೊಂದಲಗಳು ಸೃಷ್ಟಿಯಾಗಿ ಮುಂದೇನು? ಎಂಬ ಪ್ರಶ್ನೆಗಳು ಕಾಡುತ್ತಿದೆ.

ಒಂದಾದ ಒಕ್ಕಲಿಗರು : ರಾಜ್ಯದಲ್ಲಿ ಪ್ರಮುಖವಾಗಿ ರಾಜಕೀಯ ಪ್ರಾಬಲ್ಯ ಹೊಂದಿರುವ ಎರಡು ಜಾತಿಗಳು ಪ್ರಭಲವಾಗಿದ್ದು, ಒಂದು ವೀರಶೈವ-ಲಿಂಗಾಯತ ಮತ್ತೊಂದು ಒಕ್ಕಲಿಗ ಸಮುದಾಯ. ಈ ಎರಡೂ ಸಮುದಾಯದ ನಾಯಕರು ಮಠಾಧಿಪತಿಗಳೊಂದಿಗೆ ಸಭೆಗಳನ್ನು ನಡೆಸಿದ್ದಾರೆ. ಒಕ್ಕಲಿಗ ಸಮುದಾಯದ ನಾಯಕರು ನಡೆಸಿದ ಸಭೆಯಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬಂದಿದ್ದಾರೆ. ರಾಜಕೀಯವಾಗಿ ಬದ್ಧವೈರಿಗಳಾಗಿದ್ದ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಅವರು ಒಂದೇ ವೇದಿಕೆಯಲ್ಲಿ ಪರಸ್ಪರ ಹಸ್ತ ಲಾಘವ ಮಾಡುವ ಮೂಲಕ ಒಮ್ಮತ ಪ್ರದರ್ಶಿಸಿದ್ದಾರೆ. ಎಲ್ಲರೂ ಧರ್ಮದ ಕಾಲಂನಲ್ಲಿ ಹಿಂದೂ ಎಂದು, ಜಾತಿ ಕಲಂನಲ್ಲಿ ಒಕ್ಕಲಿಗ ಎಂದು ಬರೆಸಬೇಕೆಂದು ಒಕ್ಕಲಿಗ ಮಠದ ನಿರ್ಮಲಾನಂದನಾಥ ಸ್ವಾಮಿಗಳ ನೇತೃತ್ವದಲ್ಲಿ ಸೂಚನೆ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಕ್ರಿಶ್ಚಿಯನ್ ಒಕ್ಕಲಿಗ ಎನ್ನುವುದನ್ನು ತಗೆದುಹಾಕಬೇಕು ಎನ್ನುವ ಒತ್ತಾಯವನ್ನೂ ಮಾಡಿದ್ದಾರೆ. ಈ ಸಭೆಯಲ್ಲಿದ್ದ ಉಪ ಮುಖ್ಯಮಂತ್ರಿ ಕೂಡ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಮತ್ತು ಜಾತಿ ಸಮೀಕ್ಷೆ ಬಗ್ಗೆ ಏನನ್ನು ಮಾತನಾಡುವುದಿಲ್ಲ ಎಂದಿದ್ದಾರೆ. ಅಲ್ಲಿಗೆ ಆ ಸಮುದಾಯದ ಒಗ್ಗಟ್ಟು ಪ್ರದರ್ಶವಾಗಿದೆ. ಡಿಕೆಶಿ ತಮ್ಮ ಮುಂದಿನ ರಾಜಕೀಯ ಹಾದಿಗೆ ಈ ಸಭೆ ಒಂದು ರೀತಿಯ ಅನುಕೂಲಕವಾಗಿದೆ ಎನಿಸುತ್ತದೆ. ಹಾಗಾಗಿಯೇ ಸಹಮತ ವ್ಯಕ್ತಪಡಿಸಿ ಸರ್ಕಾರದ ಜಾತಿ ಸಮೀಕ್ಷೆಗೆ ಅವರ ಸಹಮತ ಇದ್ದಂತೆ ಕಂಡುಬರುವದಿಲ್ಲ ಎನಿಸುತ್ತದೆ.

ಇನ್ನು ವೀರಶೈವ-ಲಿಂಗಾಯತ-ವೀರಶೈವ ಸಮಾಜದ ಸಭೆ ವಿವಿಧ ಮಠಾಧೀಶರ ನೇತೃತ್ವದಲ್ಲಿ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆಯಿತಾದರೂ, ಅಲ್ಲಿ ಕೆಲವರು ಹಿಂದೂ ಧರ್ಮದ ಕಲಂನಲ್ಲಿ ವೀರಶೈವ-ಲಿಂಗಾಯತಿ ಅಂತಬರೆಸಿ ಎಂದರೆ ಇನ್ನೂ ಕೆಲವರು ಹಿಂಧೂ ಧರ್ಮ ಬೇಡ ಕೇವಲ ವೀರಶೈವ ಲಿಂಗಾಯತ ಅಂತ ಬರೆಸಿ ಎಂದರೆ, ಕೆಲವರು ಅದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆ ಸಮುದಾಯದಲ್ಲಿ ಈಗ

ಸಮಾವೇಶದಲ್ಲಿ ಕೊನೆಗೆ ವೀರಶೈವ-ಲಿಂಗಾಯತರನ್ನು ಜಾತಿ ಅಂಕಣದಲ್ಲಿ ಮತ್ತು ಆಯಾ ಪಂಗಡಗಳನ್ನು ಉಪಜಾತಿ ಅಂಕಣದಲ್ಲಿ ನೋಂದಾಯಿಸುವ ಬಗ್ಗೆ ನಾಯಕರು ಸಂದೇಶ ರವಾನಿಸಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು `ಧರ್ಮ'ದ ಕಾಲಂ ಅನ್ನು ವೀರಶೈವ-ಲಿಂಗಾಯತ ಸಮುದಾಯದ ಸದಸ್ಯರ ವಿವೇಚನೆಗೆ ಬಿಟ್ಟಿದೆ. ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕರು ಪರೋಕ್ಷವಾಗಿ ಹಿಂದೂ ತಮ್ಮ ಧರ್ಮವೆಂದು ನಮೂದಿಸುವಂತೆ ಸಮುದಾಯದ ಜನರಿಗೆ ಸೂಚಿಸಿದರು. ಧರ್ಮ ಕಾಲಂನಲ್ಲಿ ವೀರಶೈವ-ಲಿಂಗಾಯತವನ್ನು ನಿರ್ದಿಷ್ಟ ಪಡಿಸದ ಹೊರತು, ಉಲ್ಲೇಖಿಸುವ ಅಗತ್ಯವಿಲ್ಲ ಎಂಬುದು ಬಿಜೆಪಿ ನಾಯಕರ ವಾದವಾಗಿದೆ.

ಬಸವ ಧರ್ಮದ ವಾದ : ಮಾಜಿ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್ ನೇತೃತ್ವದ ಜಾಗತಿಕ ಲಿಂಗಾಯತ ಮಹಾಸಭಾವು, ಬಸವ ಸಂಸ್ಕೃತಿ ಅಭಿಯಾನದ ಜೊತೆಗೆ ಸಮುದಾಯವನ್ನು ಸಜ್ಜುಗೊಳಿಸುತ್ತಿದ್ದು, ಧರ್ಮವು ಸೂಕ್ಷ್ಮ ವಿಷಯವಾಗಿರುವುದರಿಂದ, ಸಮುದಾಯದ ಜನರು ಯಾವುದೇ ನಿರ್ಧಾರ ರಬೇಕು ಮತ್ತು ಮಹಾಸಭಾ ಅದರಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಕಾನೂನು ತಜ್ಞರ ಸಭೆಯನ್ನು ಕರೆದು ಈ ವಿಷಯದ ಬಗ್ಗೆ ಚರ್ಚಿಸಿ, ಸಾಮಾನ್ಯ ಜನರಲ್ಲಿನ ಗೊಂದಲ ನಿವಾರಿಸಲು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂಬ ಒತ್ತಡವು ಸಮುದಾಯದ ಪ್ರಮುಖರಿಂದ ಕೇಳಿ ಬಂದಿದೆ.

ವೀರಶೈವ-ಲಿAಗಾಯತ್ ಮಹಾಸಭಾದ ಈಶ್ವರ ಖಂಡ್ರೆ ಅವರಂತಹ ಪ್ರಭಾವಿ ನಾಯಕರ ನೇತೃತ್ವದ ವೀರಶೈವ-ಲಿಂಗಾಯತ ಮಹಾಸಭಾವು ಧಾರ್ಮಿಕ ಗುರುತು ವೀರಶೈವ-ಲಿಂಗಾಯತ ಎಂದು ಹೇಳುವಂತೆ ಒತ್ತಾಯಿಸುತ್ತಿದೆ. ಹೀಗಾಗಿ ಹಲವು ನಾಯಕರು ಹಲವು ರೀತಿಯಲ್ಲಿ ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲ ಸೃಷ್ಟಿಸಿ ಭಿನ್ಮಮತಕ್ಕೆ ಆಸ್ಪದಮಾಡಿಕೊಟ್ಟಿದ್ದಾರೆ. ವೀರಶೈವ ಅಥವಾ ಲಿಂಗಾಯತ ಎರಡೂ ಪಂಗಡಗಳಲ್ಲಿ ಒಮ್ಮತ ಏರ್ಪಟ್ಟಿಲ್ಲ. ಎರಡೂ ಪಂಗಡಗಳು ಹಿಂದೂ ಎಂಬ ಪದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ, ವೀರಶೈವ-ಲಿಂಗಾಯತಕ್ಕೂ ವಿರೋಧ, ಬರೀ ಲಿಂಗಾಯತಕ್ಕೂ ವಿರೋಧ. ಹೀಗಾಗಿ ಯಾವುದೇ ಸ್ಪಷ್ಟತೆಯಿಲ್ಲದೇ ಇಡೀ ಸಮಾಜವನ್ನು ಗೊಂದಲದಲ್ಲಿ ಸಿಲುಕಿಸಿದ ಮಧ್ಯೆಯೇ ಗಣತಿ ಆರಂಭವಾಗಿದೆ. ಯಾರು ಏನು ಬರೆಸುತ್ತರೋ ಗೊತ್ತಿಲ್ಲ. ಯಾವ ನಾಯಕರ ಕೈಯಲ್ಲೂ ಸಮಾಜದವರು ಇಲ್ಲ ಎಂಬುದು ಇವರುಗಳ ನಡವಳಿಕೆಯಿಂದ ಸ್ಪಷ್ಟವಾಗಿದೆ.

ಹಾಗೆಯೇ ಲಿಂಗಾಯತ ಸಮುದಾಯಗಳಲ್ಲಿಯೂ ಹಲವು ರೀತಿಯ ಅಸಮಾಧಾನಗಳಿವೆ. ಮುಖ್ಯವಾಗಿ ವೀರಶೈವ ಮತ್ತು ಲಿಂಗಾಯತರ ನಡುವೆ ದೊಡ್ಡ ಭಿನ್ನಾಭಿಪ್ರಾಯಗಳಿವೆ. ಕೆಲವರು ವೀರಶೈವ-ಲಿಂಗಾಯತ ಒಂದೇ ಧರ್ಮವಲ್ಲ ಎಂದು ವಾದಿಸುತ್ತಿದ್ದರೆ, ಹಿಂದುತ್ವವಾದಿ ಶಕ್ತಿಗಳು ಲಿಂಗಾಯತವು ಹಿಂದೂ ಧರ್ಮದ ಒಂದು ಭಾಗ ಎಂದು ವಾದಿಸುತ್ತಿವೆ. ಇದೇ ಸಂದರ್ಭದಲ್ಲಿ ಲಿಂಗಾಯತ ಸಂಘಟನೆಗಳು, 'ಲಿಂಗಾಯತ ಎನ್ನುವುದು ಸ್ವತಂತ್ರ ಧರ್ಮ. ಅದು ಹಿಂದೂ ಧರ್ಮದ ಭಾಗವಲ್ಲ' ಎಂದು ಘೋಷಿಸಿಕೊಂಡಿವೆ. ಇವೆಲ್ಲದರ ನಡುವೆ ಬಲಾಢ್ಯ ಜಾತಿಗಳಿಗೆ ತಮ್ಮ ತಮ್ಮ ಜಾತಿಗಳ ಅಂಕಿಸ0ಕಿಗಳ ಬಂಡವಾಳ ಬಯಲಾಗುತ್ತದೆ ಎನ್ನುವ ಭಯವೂ ಇದೆ. ಆದುದರಿಂದ, ಜಾತಿಗಣತಿ ಮುಂದೂಡಬೇಕು ಎಂಬ ಒತ್ತಡದ ಮಧ್ಯೆಯೇ ಗಣಿತಿ ನಡೆಯುತ್ತಿದ್ದು, ಇವರ ಆಕ್ಷೇಪಗಳನ್ನು ಸರ್ಕಾರ ಕ್ಯಾರೇ ಅನ್ನದೇ ತನ್ನ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಕೇವಲ ಬಲಾಢ್ಯ ಜಾತಿಗಳ ಮೂಗಿನ ನೇರಕ್ಕೆ ಗಣತಿ ಮಾಡುವುದೇ ಆಗಿದ್ದರೆ, ಜಾತಿಗಣತಿಯ ಅಗತ್ಯವಾದರೂ ಏನಿದೆ? ಎನ್ನುವ ಪ್ರಶ್ನೆ ಇದೀಗ ಎದ್ದಿದೆ.

ಗಣತಿಯಲ್ಲಿ ಜಾತಿ ಏಕೆ? : ಸರ್ಕಾರ ಅಧಿಕೃತವಾಗಿ ಹೇಳಿಕೊಂಡಿರುವ0ತೆ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಡೆಸುವ ಸಮೀಕ್ಷೆಯ ಹೆಸರು ಸಾಮಾಜಿಕ ಆರ್ಥಿಕ ಸಮೀಕ್ಷೆ. ಆದರೆ ಅಸಲಿನಲ್ಲಿ ನಡೆಯುತ್ತಿರುವುದೇನೆಂದರೆ ಜನರ ಜಾತಿ ಗಣತಿ. ಜನರ ಜಾತಿಯ ವಿಚಾರವನ್ನು ಸಮೀಕ್ಷೆಯ ಹೆಸರಲ್ಲಿ ಕಲೆ ಹಾಕಲು ಹಿಂದುಳಿದ ವರ್ಗದ ಆಯೋಗಕ್ಕೆ ಅಧಿಕಾರ ಇದೆಯೆ? ಪ್ರಾಯಶಃ ನ್ಯಾಯಾಲಯ ಇದನ್ನು ಪರಿಗಣಿಸಬಹುದು. ಜಾತಿ ಗಣತಿ ತಡೆ ಕೋರಿ ಕೆಲವೊಂದು ಸಮಾಜದವರು ಹೈಕೋರ್ಟ್ ಮೊರೆ ಹೋಗಿದ್ದರೂ, ಮಾಹಿತಿ ರಹಸ್ಯ ಕಾಪಾಡುವಂತೆ ಸೂಚಿಸಿ, ಜಾತಿ ಗಣತಿಗೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಆದರೆ ಕಡ್ಡಾಯವಾಗಿ ಯಾರೂ ಮಾಹಿತಿ ಪಡೆಯಬೇಕೆಂದೇನೂ ಇಲ್ಲ. ಯಾರನ್ನೂ ಒತ್ತಾಯಿಸುವಂತೆಯೂ ಇಲ್ಲ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂದೂ ಕೋರ್ಟ್ ತಿಳಿಸಿದ್ದರಿಂದ, ಜಾತಿ ಗಣತಿದಾರರಿಗೆ ಮಾಹಿತಿ ನೀಡುವುದು ಬಿಡುವುದು ಜನತೆಗೆ ಬಿಟ್ಟ ವಿಷಯ ಎಂದು ಹೇಳಿರುವುದರಿಂದ ಈಗ ನಡೆಯುತ್ತಿರುವ ಜಾತಿ ಗಣತಿ ಅಪೂರ್ಣವಾಗುವದಿಲ್ಲವೇ? ಅನೇಕರು ಗಣತಿದಾರರಿಗೆ ಮಾಹಿತಿ ನೀಡದಿದ್ದರೆ, ಗಣತಿಯ ಉಪಯೋಗವೇನು? ಎಂಬ ಪ್ರಶ್ನೆಗೆ ಉತ್ತರವಿಲ್ಲದಂತಾಗಿದೆ.

ಇದು ಜಾತಿ ಸಮೀಕ್ಷೆ ಅಲ್ಲವೆಂದಾದರೆ, ಸಾಮಾಜಿಕ ಆರ್ಥಿಕ ಸಮೀಕ್ಷೆಯ ಸಂದರ್ಭದಲ್ಲಿ ಜಾತಿ ಬಗ್ಗೆ ಮಾಹಿತಿ ಕಲೆ ಹಾಕುವ ಅಗತ್ಯವಾದರೂ ಏನಿದೆ? ಸರಕಾರದ ವಾದವೇನೆಂದರೆ, ಜಾತಿಯ ಬಗೆಗೆ ಮಾಹಿತಿಯನ್ನು ಹಂಚಿಕೊಳ್ಳಲು ಇಷ್ಟವಿಲ್ಲದವರು ಕೊನೆಯ ಕಾಲಂನಲ್ಲಿ ಅದನ್ನು ನಮೂದಿಸಬಹುದು. ಜಾತಿಯ ಮಾಹಿತಿಯನ್ನು ಕೊಡಬೇಕು ಎನ್ನುವುದು ಕಡ್ಡಾಯವಲ್ಲ. ಆದರೆ ಸಾಮಾಜಿಕ ಆರ್ಥಿಕ ಸಮೀಕ್ಷೆಯ ವಿಚಾರದ ಸಂದರ್ಭದಲ್ಲಿ, ಜಾತಿಗೆ ಸಂಬAಧಿಸಿದ ಮಾಹಿತಿಯನ್ನು ಕಲೆ ಹಾಕುವುದೇ ತಪ್ಪು. ಮತ್ತು ಜಾತಿಗೆ ಸಂಬ0ಧಿಸಿ ಕಾಲಂನ್ನು ಈ ಸಮೀಕ್ಷೆಯ ಪ್ರಶ್ನಾವಳಿಗೆ ಸೇರಿಸಿದ್ದು ತಪ್ಪು ಎಂಬುದು ಹಲವರ ವಾದವಿದೆ. ಈ ಕುರಿತು ನ್ಯಾಯಾಲಯ ಈಗಾಗಲೇ ಸ್ಪಷ್ಟನೆ ನೀಡಿದ್ದರಿಂದ ಗಣತಿಯಲ್ಲಿ ಯರೂ ಏನೇನು ದಾಖಲಿಸುತ್ತಾರೋ, ಏನಾಗುತ್ತಿದೆಯೋ ಎಲ್ಲವೂ ಅಯೋಮಯವಾಗಿದ್ದು, ಸರ್ಕಾರದ ನಡೆಯೇ ಗೊಂದಲಮಯ ಆಗಿರುವುದೂ ಇಲ್ಲಿ ಸ್ಪಷ್ಟವಾಗುತ್ತದೆ.

ಒಡೆಯುವಲ್ಲಿ ಯಶಸ್ಸು : ಎಲ್ಲದಕ್ಕಿಂತ ಹೆಚ್ಚಿನ ಮತ್ತು ಗಂಭೀರ ವಿಷಯವೆಂದರೆ, ಭಾರತದಲ್ಲಿ ಈಗಿರುವ ಜಾತಿಗಳನ್ನು ಬಿಟ್ಟು ಹೊಸ ಜಾತಿಗಳಿಗೆ ಸರ್ಕಾರ ಹುಟ್ಟು ಹಾಕಲು ಸಾಧ್ಯವೇ? ಅದಂತೂ ಸಾಧ್ಯವಿಲ್ಲ. ಹಾಗಾದರೆ ಜಾತಿಗಳ ಹೆಸರಿನೊಂದಿಗೆ ಕ್ರಿಶ್ಚಿಯನ್, ಮುಸ್ಲಿಮ್ ಎಂದು ಬರೆಸುವ ಅಗತ್ಯವದರೂ ಏನಿತ್ತು? ಈಗ ಅವುಗಳ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತೆಗೆದುಹಾಕಲಾಗಿದೆ. ಆದರೂ ಇಲ್ಲದ ಹೊಸ ಜಾತಿಗಳನ್ನು ಪಟ್ಟಿ ಮಾಡಲು ಆಯೋಗಕ್ಕೆ ಅಧಿಕಾರ ನೀಡಿದವರು ಯಾರು? ಜಾತಿಯೊಳಗೆ ಬರುವ ಉಪ ಪಂಗಡಗಳನ್ನು ಬೇರೆ ಜಾತಿಯೆಂದು ಪರಿಗಣಿಸುವ ಆಯೋಗಕ್ಕೆ ಅಧಿಕಾರವಿದೆಯೇ? ಹಲವಾರು ಜಾತಿಗಳನ್ನು ವಿಭಜಿಸಿ, ಒಡೆದಾಳುವ ನೀತಿಯನ್ನು ಆಯೋಗ ಅನುಸರಿಸಿದಂತೆ ಕಾಣುತ್ತಿದೆ. ಆಯೋಗದ ಕುರಿತು ಜನರಿಗೆ ತಪ್ಪು ಅಭಿಪ್ರಾಯ ಮೂಡಲು ಇದು ಪ್ರಮುಖ ಕಾರಣವಾಗಿದೆ. ಇದನ್ನೂ ಸಹ ನ್ಯಾಯಾಲಯ ಪರಾಮರ್ಶಿಸಿ, ಅದನ್ನೆಲ್ಲ ತೆಗೆದುಹಾಕುವಂತೆ ನಿರ್ದೇಶನ ನೀಡಿದೆ. ಈ ಎಲ್ಲ ವಿಚಾರಗಳನ್ನು ಗಮನಿಸಿದಾಗ, ಸಾಮಾಜಿಕ ಆರ್ಥಿಕ ಸಮೀಕ್ಷೆಯ ಹೆಸರಿನಲ್ಲಿ ಈಗಾಗಲೇ

ಹಲವು ಜಾತಿಗಳಲ್ಲಿ ಒಳಜಗಳ ಆರಂಭವಾಗುವ0ತೆ ಮಾಡಲೂ ಸರ್ಕಾರವೇ ನೇರ ಕಾರಣ ಎನ್ನಬಹುದು. ಇದರೊಂದಿಗೆ ಜಾತಿಗಳನ್ನು ವಿಭಜಿಸಿ ಹಇಂದೂಗಳ ಸಂಖ್ಯೆ ಕುಗ್ಗಿಸುವ ಮೂಲಕ ಜಾತಿ ಕುರಿತಾದ ಮಾಹಿತಿ ರಾಜಕೀಯ ಲಾಭಕ್ಕೋಸ್ಕರವೇ ವಿನಃ ಯಾವುದೇ ಸಮುದಾಯದ ಅಭಿವೃದ್ಧಿಗೋಷ್ಕರ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ.

-ಎಸ್. ಆರ್. ಮಣೂರ ಕಲಬುರಗಿ

ಕರ್ನಾಟಕ ಮೂಲದ ವಿ.ಸಿ. ಸಜ್ಜನರ ಹೈದರಾಬಾದ್ ಪೊಲೀಸ್ ಆಯುಕ್ತರಾಗಿ ನೇಮಕ


ಹೈದರಾಬಾದ : ಕರ್ನಾಟಕ ರಾಜ್ಯಕ್ಕೆ ಸೇರಿದ ಹುಬ್ಬಳ್ಳಿ ಮೂಲದ ೧೯೯೬ನೇ ಬ್ಯಾಚ್ ಐಪಿಎಸ್ ಅಧಿಕಾರಿ ಶ್ರೀ ವಿ.ಸಿ. ಸಜ್ಜನರ್ ಅವರನ್ನು ಹೈದರಾಬಾದ್ ನಗರ ಪೊಲೀಸ್ ಆಯುಕ್ತರಾಗಿ ತೆಲಂಗಾಣ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಅವರು ಆರಂಭದಲ್ಲಿ ಆಂಧ್ರ ಪ್ರದೇಶ ಕ್ಯಾಡರ್‌ಗೆ ಸೇರಿದ್ದು, ರಾಜ್ಯ ವಿಭಜನೆಯ (೨೦೧೪)ನಂತರ ತೆಲಂಗಾಣ ಕ್ಯಾಡರ್‌ಗೆ ಸೇರ್ಪಡೆಯಾದರು.

ಶ್ರೀ ಸಜ್ಜನರ್ ಹುಬ್ಬಳ್ಳಿಯವರಾಗಿದ್ದು, ತಂದೆ ಶ್ರೀ ಸಿ.ಬಿ. ಸಜ್ಜನರ್ ಮತ್ತು ತಾಯಿ ಶ್ರೀಮತಿ ಗಿರಿಜಾ ಸಜ್ಜನರ್. ಅವರು ಹುಬ್ಬಳಿಯ ಜೆ.ಜಿ. ವಾಣಿಜ್ಯ ಮಹಾವಿದ್ಯಾಲಯದಿಂದ ಬಿ.ಕಾಂ ಪದವಿ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಬಿ.ಎ ಪದವಿ ಪಡೆದಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ (ಮಸೂರಿ) ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿ (ಹೈದರಾಬಾದ್) ಯಲ್ಲಿ ಪೊಲೀಸ್ ತರಬೇತಿ ಪಡೆದ ಬಳಿಕ ತಮ್ಮ ವೃತ್ತಿಜೀವನ ಆರಂಭಿಸಿದರು. ಪೊಲೀಸ್ ಸೇವೆಯ ಆರಂಭದಲ್ಲಿ ಅವರು ಜಂಗಾ (ವಾರಂಗಲ್ ಜಿಲ್ಲೆ) ಮತ್ತು ಪುಳಿವೇಂದ್ರು (ಕಡಪಾ ಜಿಲ್ಲೆ)ಗಳಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ (ASP) ಕಾರ್ಯ ನಿರ್ವಹಿಸಿದರು. ನಂತರ ನಾಲ್ಗೊಂಡ, ಕಡಪಾ, ಗುಂಟೂರು, ವಾರಂಗಲ್ ಮತ್ತು ಮೆದಕ್ ಜಿಲ್ಲೆಗಳಲ್ಲಿ ಪೊಲೀಸ್ ಅಧೀಕ್ಷಕರಾಗಿ (SP) ಸೇವೆ ಸಲ್ಲಿಸಿದರು. ಇದಲ್ಲದೆ, ಅಪರಾಧ ತನಿಖಾ ವಿಭಾಗದ ಆರ್ಥಿಕ ಅಪರಾಧ ವಿಭಾಗ (EOW), OCTOPUS ದಾಳಿಕೋರರ ವಿರುದ್ಧದ ಕಾರ್ಯಾಚರಣೆ ವಿಭಾಗದ SP ಹಾಗೂ ೬ನೇ ಬಟಾಲಿಯನ್ ಆಂಧ್ರ ಪ್ರದೇಶ ವಿಶೇಷ ಪೊಲೀಸ್ (APSP) ಮಂಗಳಗಿರಿಯ ಕಮಾಂಡಾ0ಟ್ ಆಗಿಯೂ ಕೆಲಸ ಮಾಡಿದರು.
ಅನಂತರ ಡಿಐಜಿ ಹಾಗೂ ಐಜಿ ಹುದ್ದೆಗಳಿಗೆ ಬಡ್ತಿ ಪಡೆದು ಮಾರ್ಚ್ ೨೦೧೮ರವರೆಗೆ ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ಮಾರ್ಚ್ ೨೦೧೮ರಿಂದ ಆಗಸ್ಟ್ ೨೦೨೧ರವರೆಗೆ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸಿದರು. ಬಳಿಕ ಸೆಪ್ಟೆಂಬರ್ ೨೦೨೧ರಲ್ಲಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ( TSRTC ) ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು. ಸಾರಿಗೆ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತಂದು ನಷ್ಟದಲ್ಲಿದ್ದ ಆರ್‌ಟಿಸಿ ಲಾಭದಾಯಕ ಸಾರಿಗೆ ನಿಗಮವಾಗಿಸಿದ ಕಾರ್ಯದ ಶ್ರೇಯಸ್ಸು ಸಜ್ಜನರ ಅವರಿಗೆ ಸಲ್ಲುತ್ತದೆ. ಇದೀಗ ಹೈದರಾಬಾದ್ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ವಿ.ಸಿ. ಸಜ್ಜನರ್, ಕಾನೂನು-ಸುವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆಗೆ ಮತ್ತಷ್ಟು ಬಲ ತುಂಬಲಿದ್ದಾರೆ. ಬರುವ ದಿನಗಳಲ್ಲಿ ತೆಲಂಗಾಣ ರಾಜ್ಯದ ಡಿಜಿಪಿ ಹುದ್ದೆಗೆ ಬಡ್ತಿ ಪಡೆಯಲಿ ಎಂದು ಸಜ್ಜನರ ಅವರ ಅಭಿಮಾನಿಗಳ ಹಾರೈಕೆಯಾಗಿದೆ. ಕಾದು ನೋಡೋಣ..

Monday, 22 September 2025

ಕರ್ನಾಟಕದಲ್ಲಿವೆ ಬರೋಬ್ಬರಿ ೧೫೬೧ ಜಾತಿಗಳು....!


 ಹಿಂದೆ ಬ್ರಿಟೀಷರು ಧರ್ಮ, ಜಾತಿಗಳನ್ನು ಒಡೆದು ನಮ್ಮೊಳಗೆ ಜಗಳ ಹಚ್ಚಿ ಆಡಳಿತ ನಡೆಸುತ್ತಿದ್ದರು. ಇದೀಗ ಪ್ರಜಾ ಪ್ರುತ್ವದಲ್ಲಿ ನಾವೇ ಆಯ್ಕೆ ಮಾಡಿರುವ ಸರ್ಕಾರ ಆ ಕೆಲಸ ಮಾಡುತ್ತಿದೆಯೇ? ಎಂಬ ಅನುಮಾನ ಬರುತ್ತಿದೆ. ಇನ್ನೇನು ಇದೇ ಸೆಪ್ಟೆಂಬರ್ ೨೨ರಿಂದ ಜಾತಿ ಗಣತಿ ಆರಂಭವಾಗಲಿದ್ದು, ಧರ್ಮ ವಿಭಜಿಸುವುದರೊಂದಿಗೆ ಪ್ರತಿಯೊಂದು ಜಾತಿಯೊಂದಿಗೆ ಕ್ರಿಶ್ಚಿಯನ್ ಪದ ಅಂಟಿಸಿರುವ ಮತ್ತು ಉಪಜಾತಿಗಳನ್ನು ವಿಂಗಡಿಸಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರವು ಜಾತಿ ಗಣತಿಗೆ ಜಾತಿ-ಉಪಜಾತಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕರ್ನಾಟಕದಲ್ಲಿ ಬರೋಬ್ಬರಿ ೧೫೬೧ ಕ್ಕೂ ಹೆಚ್ಚು ಜಾತಿಗಳು ಇದೆ ಎಂದು ಸರ್ಕಾರವೇ ಅಧಿಕೃತ ಮಾಹಿತಿ ನೀಡಿದೆ. 

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಕೊಂಡಿದೆ. ೨೦೧೫ರಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ಅವರು ವರದಿ ಸಲ್ಲಿಸಿದ್ದರು. ಕಾಂತರಾಜ್ ವರದಿ ಸಲ್ಲಿಸಿ ೧೦ ವರ್ಷಗಳ ನಂತರ ಹೊಸ ಸಮೀಕ್ಷೆಗೆ ತೀರ್ಮಾನ ಮಾಡಿ,  ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಈ ಕೆಲಸವನ್ನು ವಹಿಸಲಾಗಿದೆ.  ಆದರೆ, ಪ್ರತಿಯೊಂದು ಜಾತಿಯೊಂದಿಗೆ ಕ್ರಿಶ್ಚಿಯನ್ ಪದ ಅಂಟಿಸಿರುವುದು ಮತ್ತು ಉಪಜಾತಿಗಳನ್ನು ಗುರುತಿಸುವ ಮೂಲಕ ಸರ್ಕಾರ ಜಾತಿ ವಿಭಜನೆ ಮಾಡಲು ಹೊರಟಿದೆ ಎಂಬುದು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಆರೋಪವಾಗಿದೆ. 

ರಾಜ್ಯದಲ್ಲಿ ವೀರಶೈವ-ಲಿಂಗಾಯತ ಮತ್ತು ಒಕ್ಕಲಿಗರೇ ಜನಸಂಖ್ಯೆ ಮತ್ತು ರಾಜಕೀಯವಾಗಿಯೂ ಪ್ರಬಲರೆಂದು ಮೊದಲಿಂದಲೂ ತಿಳಿದಿರುವ ಸಂಗತಿ. ಆದರೆ, ಕಾಂತರಾಜ ಹಿಂದುಳಿದ ಶಾಶ್ವತ ಆಯೋಗ ಕಳೆದ ದಶಕದಲ್ಲಿ ನೀಡಿರುವ ವರದಿಯಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಿಗೆ ತೋರಿಸಿ, ವೀರಶೈವ-ಲಿಂಗಾಯತ ಮತ್ತು ಒಕ್ಕಲಿಗರ ಸಂಖ್ಯೆಯನ್ನು ಎರಡು ಮತ್ತು ಮೂರನೇ ಸ್ಥಾನಕ್ಕೆ ಇಳಿಸಿದ್ದು, ಇದು ಉದ್ದೇಶಪೂರ್ವಕವಾಗಿ ತಮ್ಮ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂದು ಎರಡೂ ಕೋಮಿನವರು ಕಾಂತರಾಜ್ ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಹೊಸ ಮೀಕ್ಷೆಗೆ ಸರ್ಕಾರ ಆದೇಶಿಸಿದೆ. ಹಿಂದಿನ ಸಮೀಕ್ಷೆಗೆ ಸುಮಾರು ೧೪೬ ಕೋಟಿಗಳಷ್ಟು ಖರ್ಚು ಮಾಡಿರುವ ಸರ್ಕಾರ ಈಗ ಮತ್ತೆ ಜಾತಿ ಗಣತಿಗೆ ೪೨೦ ಕೋಟಿ ರೂಗಳಷ್ಟು ಖರ್ಚು ಮಾಡುತ್ತಿದೆಯಂತೆ! ಇದೆಲ್ಲ ಯಾರ ಉದ್ಧಾರಕ್ಕಾಗಿ? 


ವಿಭಜನೆ ತಂತ್ರವೇ?

ಸಮೀಕ್ಷೆಯ ಮೂಲಕ ಜಾತಿ-ಉಪಜಾತಿಗಳನ್ನು ವಿಂಗಡಿಸಲು ಹೊರಟಿದೆಯೇ? ಅಥವಾ ಪ್ರಬಲ ಜಾತಿಗಳನ್ನು ವಿಂಗಡಿಸುವ ಮೂಲಕ ಅವರ ರಾಜಕೀಯ ಮತ್ತು ಸಮಾಜಿಕ ಶಕ್ತಿಯನ್ನು ಕುಗ್ಗಿಸಲು ಹೊರಟಿದೆಯೇ? ಕಳೆದ ಬಾರಿ ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂದು ಒಂದೇ ಜಾತಿಯಲ್ಲಿ ಒಡಕು ಹುಟ್ಟಿಸುವ ಕೆಲಸ ವ್ಯವಸ್ಥಿತವಗಿ ನಡೆದಿದ್ದು, ಇದೀಗ ಮತ್ತೆ ಅದರಲ್ಲೇ ಹಲವು ಉಪಜಾತಿಗಳನ್ನು ವಿಭಜಿಸುವ ಮೂಲಕ ನಮ್ಮ ಸಮಾಜದಲ್ಲಿ ಒಡೆದು ಸರ್ಕಾರವೇ ಛಿದ್ರ ಛಿದ್ರಗೊಳಿಸಲು ಹೊರಟಿದೆ ಎಂಬುದು ಆಡಳಿತ ಪಕ್ಷದ ಸಚಿವರುಗಳ ವಿರೋಧ ಮತ್ತು ಇದನ್ನು ಗುರುವಾರ ನಡೆದ ಸಚಿವ ಸಂಪುಟದಲ್ಲಿ ನೇರವಾಗಿ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಈಗ ರಾಜ್ಯ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದೆ.

ಈಗಾಗಲೇ ಲಮಾಣಿ ಸಮುದಾಯದವರು ರಾಜ್ಯ ಮಟ್ಟದಲ್ಲಿ ಮ್ಮ ಜಾತಿಯೊಂದಿಗೆ ಕ್ರಿಶ್ಚಿಯನ್ ಸೇರ್ಪಡೆ ಸ್ಪೃಶ್ಯ-ಅಸ್ಪೃಶ್ಯ ಎಂದು ವಿಭಜಿಸಿರುವದನ್ನು ವಿರೋಧಿಸಿ ಪ್ರತಿ ಜಿಲ್ಲೆಗಳಿಂದ ರಾಜ್ಯ ಮಟ್ಟದಲ್ಲಿ ದೊಡ್ಡ ಪ್ರಮಣದಲ್ಲಿ ಪ್ರತಿಭಟನೆಗಳನ್ನು ನಡೆಸಿ, ಅದನ್ನು ಕೈಬಿಡಬೇಕೆಂದು ಆಗ್ರಹಿತು. ಇದರೊಂದಿಗೆ ಬ್ರಾಹ್ಮಣ ಸಮಾಜವೂ ಕೂಡ ತಮ್ಮ ಬ್ರಾಹ್ಮಣ ಸಮಾಜವೆಂದರೆ ಒಂದೇ ಇದ್ದು, ಅದರಲ್ಲೂ ಉಪಜಾತಿಗಳನ್ನು ವಿಂಗಡಿಸಿ, ಅದರೊಂದಿಗೆ ಕ್ರಿಶ್ಚಿಯನ್ ಪದ ಅಂಟಿಸಿರುವುದನ್ನು ವಿರೋಧಿಸಿ ಅದನ್ನು ಕೈಬಿಡುವಂತೆ ಸಿಎಂ ಮತ್ತು ಆಯೋಗಕ್ಕೆ ಮನವಿ ಸಲ್ಲಿಸಿಯಾಗಿದೆ. ಇದೀಗ ವೀರಶೈವ ಮತ್ತು ಲಿಂಗಾಯತರೊAದಿಗೂ ಕ್ರಿಶ್ಚಿಯನ್ ಬಳಕೆ ಮತ್ತು ಉಪಜಾತಿಗಳನ್ನು ವಿಭಜಿಸಿ ಅವುಗಳಿಗೂ ಕ್ರಿಶ್ಚಿಯನ್ ಪದ ಅಂಟಿಸಿರುವುದನ್ನು ರಾಜ್ಯ ಸಚಿವ ಸಂಪುಟದಲ್ಲಿರುವ ಈ ಸಮಾಜದ ಸಚಿವರುಗಳು ಸಂಪುಟ ಸಭೆಯಲ್ಲೇ ವಿರೋಧಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ದಲಿತರೂ ಕೂಡ ತಮ್ಮ ಸಮಾಜದೊಂದಿಗೆ ಕ್ರಿಶ್ಚಿಯನ್ ಪದ ಅಂಟಿಸಿರುವುದನ್ನು ವಿರೋದಿಸಿದ್ದಾರೆ. 


ಬ್ರಾಹ್ಮಣ-ಲಿಂಗಾಯ್ತರಿಗೆಲ್ಲಿದೆ ಮೀಸಲಾತಿ?

ದೇಶದಲ್ಲಾಗಲಿ, ನಮ್ಮ ರಾಜ್ಯದಲ್ಲೇ ಆಗಲಿ, ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಧರ್ಮಗಳಿಗೆ ಮತಾಂತರವಾಗಿರುವುದು ಸಾಮಾನ್ಯ. ಅವರಾರೂ ತಮ್ಮ ಮೂಲ ಜಾತಿಯೊಂದಿಗೆ ಗುರುತಿಸಿಕೊಂಡವರಲ್ಲ. ಯಾವ ಧರ್ಮಕ್ಕೆ ಮತಾಂತರವಾಗಿದ್ದಾರೋ ಅದರೊಂದಿಗೆ ಮಾತ್ರ ಗುರುತಿಸಿಕೊಂಡಿದ್ದಾರೆ. ಅನೇಕರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊAಡರೂ ದಲಿತರ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂಬ ಆರೋಪಗಳಿವೆ. ಅದನ್ನು ಕಡಿತಗೊಳಿಸಲು ಈ ಪದಬಳಕೆ ಮಡಲಾಗಿದೆ ಎಂಬ ಸಮರ್ಥನೆ ಇದೆ. ಆದರೆ, ಬ್ರಾಹ್ಮಣ, ವೀರಶೈವ, ಲಿಂಗಾಯತರಿಗೆ ಸರ್ಕಾರ ಯಾವ ಮೀಸಲಾತಿ ನೀಡುತ್ತಿದೆ? ಅವರು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊAಡು ಯಾವುದೇ ಮೀಸಲಾತಿ ಸೌಲಭ್ಯ ಪಡೆಯಲು ಹೇಗೆ ಸಾಧ್ಯ? ಉದ್ದೇಶಪೂರ್ವಕವಾಗಿ ಸಮಾಜವನ್ನು ಒಡೆಯುವ ಕೆಲಸ ಸರ್ಕಾರದಿಂದಲೇ ನಡೆದಿದೆ ಎಂಬುದು ಸಚಿವರುಗಳ ವಾದವಾಗಿದೆ. ಈಗಾಗಲೇ ಬಿಜೆಪಿ ಮುಖಂಡರೂ ಕೂಡ ಸರ್ಕಾರದ ಈ ನಡೆಯನ್ನು ವಿರೋಧಿಸಿ, ಹಿಂದೂ ಧರ್ಮವನ್ನೇ ಒಡೆದು ಛಿದ್ರ ಛಿದ್ರ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕೆ ನಾವು ಅವಕಾಶ ಕೊಡುವದಿಲ್ಲ ಎಂದು ಈ ರೀತಿಯ ಜಾತಿಗಣತಿಗೆ ತಡೆ ನೀಡುವಂತೆ ಆಗ್ರಹಿಸಿ ಬಿಜೆಪಿ ಮುಖಂಡರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಈ ವಿಷಯದಲ್ಲಿ ರಾಜ್ಯಪಾಲರು ತುರ್ತಾಗಿ ಮಧ್ಯಪ್ರವೇಶಿಸಿ, ನಿಮ್ಮ ಸಾಂವಿಧಾನಿಕ ಅಧಿಕಾರ ಬಳಸಿ ಈ ಹಂತದಲ್ಲಿ ಈ ದೋಷಪೂರಿತ ಮತ್ತು ವಿಭಜಕ ಕಾರ್ಯವನ್ನು ಮುಂದುವರಿಸದAತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಬೇಕೆಂದು ಬಿಜೆಪಿ ನಿಯೋಗ ಒತ್ತಾಯಿಸಿದೆ. 


ಜಾತಿ ಗಣತಿಯ ಪಿತಾಮಹರು

ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ೧೮೮೧ -೧೯೩೧ರ ನಡುವೆ ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ಮಾಡಲಾಗುತ್ತಿತ್ತು. ಅದರಲ್ಲಿ ಜನರ ಜಾತಿ, ಧರ್ಮ, ವೃತ್ತಿ ಮುಂತಾದ ವಿವರಗಳನ್ನು ದಾಖಲಿಸಲಾಗುತ್ತಿತ್ತು. ಬ್ರಿಟಿಷರು ಭಾರತೀಯ ಸಮಾಜದ ಸಂಕೀರ್ಣ ಸ್ವರೂಪವನ್ನು ಅರಿಯುವುದಕ್ಕಾಗಿ ಜಾತಿಗಣತಿ ಮಾಡುತ್ತಿದ್ದರು. ಈ ಮೂಲಕ ಜಾತಿ-ಧರ್ಮಗಳ ಪ್ರಬಲತೆ ಮತ್ತು ಶೈಕ್ಷಣಿಕ ಅರ್ಹತೆಗಳನ್ನು ಗಮನಿಸಿ ಅವರಿಗೆ ಒಂದಷ್ಟು ಅಧಿಕಾರ ನೀಡುವ ಮೂಲಕ ತಮ್ಮ ಆಡಳಿತ ಸುರಳೀತವಾಗಿ ನಡೆಯುವಂತೆ ಈ ವ್ಯವಸ್ಥೆ ಜಾರಿಗೆ ತಂದಿದ್ದರೆನ್ನಲಾಗಿದೆ. ದೇಶಕ್ಕೆ ಸ್ವಾತಂತ್ರ‍್ಯ ಬಂದ ನಂತರ ನಡೆದ ಮೊದಲ ಜನಗಣತಿಯ ವೇಳೆ (೧೯೫೧ರಲ್ಲಿ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆ ಹೊರತುಪಡಿಸಿ, ಅವರಿಗೆ ಸೌಲಭ್ಯಗಳನ್ನು ನೀಡಲು ಇತರೆ ಹಿಂದುಳಿದ ಜಾತಿಗಳ (ಒಬಿಸಿ) ಜಾತಿ, ವೃತ್ತಿ ಇತ್ಯಾದಿ ವಿವರಗಳನ್ನು ಜನಗಣತಿಯಲ್ಲಿ ನಮೂದಿಸದೇ ಇರಲು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು. 

ಆದರೆ, ಎಸ್‌ಸಿ, ಎಸ್‌ಟಿ ಹೊರತುಪಡಿಸಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಇತರೆ ವರ್ಗಗಳ (ಒಬಿಸಿ) ಜನರಿಗೆ ಸರ್ಕಾರದ ಯೋಜನೆಗಳ ಫಲ ದಕ್ಕುವಂತೆ ಮಾಡುವ ದಿಸೆಯಲ್ಲಿ ಅಗತ್ಯವೆನಿಸಿದರೆ, ರಾಜ್ಯಗಳೇ ಒಬಿಸಿ ಗಣತಿ ಮಾಡಿಸಿ, ರಾಜ್ಯವಾರು ಒಬಿಸಿ ಪಟ್ಟಿ ತಯಾರಿಸಿಕೊಳ್ಳಬಹುದು ಎಂದು ೧೯೬೧ರಲ್ಲಿ ಸೂಚಿಸಿತ್ತು. ಆಗ ಒಬಿಸಿಗೆ ಮೀಸಲಾತಿ ಸೌಲಭ್ಯ ಇರಲಿಲ್ಲ. ಭಾರತದಲ್ಲಿ ವಿವಿಧ ಸಮುದಾಯಗಳ ಜಾತಿವಾರು ಜನಸಂಖ್ಯೆಯೂ ಸೇರಿದಂತೆ ಇತರೆ ವಿವರಗಳು ಬೇಕು ಎಂದರೆ, ಲಭ್ಯವಿರುವುದು ೧೯೩೧ರ ಮಾಹಿತಿಯೇ ಮೂಲ. ಅದರ ನಂತರ ೧೯೪೧ರಲ್ಲಿಯೂ ಯುದ್ಧದ ಸಂದರ್ಭದಲ್ಲಿ ಮಾಹಿತಿ ಸಂಗ್ರಹಿಸಲಾಯಿತಾದರೂ ಅದರ ವರದಿ ಬಿಡುಗಡೆಯಾಗಿಲ್ಲ. ೨೦೧೧ರ ಜನಗಣತಿ ವೇಳೆ ಜಾತಿ ವಿವರಗಳನ್ನು ಸಂಗ್ರಹಿಸಲಾಯಿತಾದರೂ, ನಂತರದಲ್ಲಿ ಜನಸಂಖ್ಯೆಯ ಮಾಹಿತಿ ಇರುವ ವರದಿ ಮಾತ್ರ ಬಿಡುಗಡೆಯಾಗಿತ್ತು.      


೨೦೧೧ರಲ್ಲಿ ನಡೆದಿತ್ತು ಪ್ರಯತ್ನ

ಜಾತಿಗಣತಿ ನಡೆಸಬೇಕು ಎಂಬ ಕೂಗು ದೇಶದಲ್ಲಿ ದಶಕಗಳಿಂದ ಕೇಳಿಬಂದಿತ್ತು. ೨೦೧೦ರಲ್ಲಿ ಇತರ ಹಿಂದುಳಿದ ವರ್ಗಗಳ ಮುಖಂಡರು ಅಂದಿನ ಯುಪಿಎ ಸರ್ಕಾರದ ಮೇಲೆ ಈ ಕುರಿತು ಒತ್ತಡವನ್ನೂ ತಂದಿದ್ದರು. ಆ ಬಳಿಕ, ೨೦೧೧ರ ಜನಗಣತಿಯ ಭಾಗವಾಗಿ ಜಾತಿಗಣತಿಯನ್ನೂ ನಡೆಸಬೇಕು ಎಂದು ಸಂಸತ್ತಿನ ಎರಡೂ ಸದನಗಳಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ಅದರಂತೆ ೨೦೧೧ರ ಜನಗಣತಿಯೊಂದಿಗೆ ಸಾಮಾಜಿಕ-ಆರ್ಥಿಕ ಮತ್ತು ಜಾತಿಗಣತಿಯನ್ನೂ ನಡೆಸಲಾಗಿತ್ತು. ಆದರೆ, ಸರ್ಕಾರ ಜನಗಣತಿಯ ವಿವರಗಳನ್ನು ಮಾತ್ರ ಬಹಿರಂಗಪಡಿಸಿತ್ತು. ಜಾತಿಗಣತಿ ಪ್ರಕ್ರಿಯೆ, ಮಾಹಿತಿ ಸಂಗ್ರಹ ವೈಜ್ಞಾನಿಕವಾಗಿರಲಿಲ್ಲ. ಸಂಗ್ರಹಿಸಿದ್ದ ಮಾಹಿತಿ ಅಪೂರ್ಣವಾಗಿತ್ತು ಎಂದು ಕೇಂದ್ರ ಸರ್ಕಾರವೇ ಹೇಳಿತ್ತು.  ಗ್ರಾಮೀಣ ಭಾಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ನಗರ ಪ್ರದಶಗಳಲ್ಲಿ ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯಗಳು ಜಾತಿಗಣತಿ ಮಾಡಿದ್ದವು. ಈ ಗಣತಿಯ ವರದಿಯನ್ನು ಬಿಡುಗಡೆ ಮಾಡುವಂತೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ನಿರಂತರ ಒತ್ತಾಯಿಸುತ್ತಲೇ ಬಂದಿದ್ದವು. ಸರ್ಕಾರ ಬಿಡುಗಡೆ ಮಾಡದೇ ಇದ್ದುದರಿಂದ ವಿರೋಧ ಪಕ್ಷಗಳ ಟೀಕೆಗೂ ಗುರಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಸ್ತುತ ರಾಜ್ಯ ಒಳಮೀಸಲಾತಿ ಮೀಸಲಾತಿ ಕುರಿತಂತೆ ಸರ್ಕಾರ ಸಮರ್ಪಕ ಹಾಗೂ ಸರ್ವಸಮ್ಮ ನಿಲುವನ್ನು ತಳೆಯದಿರುವುದು ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದರೆ, ಇದೀಗ ಜಾತಿ ಗಣತಿಯ ಬಗ್ಗೆಯೂ ವಿವಾದ ಮೈಮೇಲೆಳೆದುಕೊಂಡಿದೆ. ಜಾತಿ ಗಣತಿಯ ಬಗ್ಗೆ ರಾಜ್ಯದ ಎಲ್ಲ ಸಮುದಾಯದವರೂ ವಿರೋಧ ವ್ಯಕ್ತಪಡಿಸುತ್ತಿದ್ದು, ಎರಡು ವರ್ಷಗಳಿಂದ ಯಾವುದೇ ನೇಮಕಾತಿ ಮಾಡದಿದ್ದರೂ, ಜಾತಿ ಗಣತಿ ಹೆಸರಿನಲ್ಲಿ ಸಮಾಜ ವಿಭಜನೆಗೆ ಮುಂದಾಗುವ ಮೂಲಕ ಇಡೀ ರಾಜ್ಯದ ಎಲ್ಲ ಸಮುದಾಯಗಳ ವಿರೋಧ ಕಟ್ಟಿಕೊಂಡು ಇದೀಗ ಜಾತಿ ಗಣತಿ ನಡೆಯುವುದೇ ಅನುಮಾನ ಎಂಬ ಸ್ಥಿತಿ ನಿರ್ಮಾಣವಾಗಿದೆ.

-ಎಸ್.ಆರ್. ಮಣೂರ. ಪತ್ರಕರ್ತರು ಕಲಬುರಗಿ


ರಾಜ್ಯದ ಜನತೆಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ನಿಖರ ಮಾಹಿತಿ ಸಂಗ್ರಹಿಸಲು ಜಾತಿ ಗಣತಿ ನಡೆಸುತ್ತಿರುವುದಾಗಿ ಸರ್ಕಾರ ಹೇಳಿಕೊಂಡಿದೆ. ಹಿಂದುಳಿದ ವರ್ಗಗಳ ಆಯೋಗದ ಈ ಗಣತಿಯಲ್ಲಿ ಕ್ರಿಶ್ಚಿಯನ್ ವೀರಶೈವ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಬ್ರಾಹ್ಮಣ, ಕ್ರ‍್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಜಂಗಮ, ಕ್ರಿಶ್ಚಿಯನ್ ಬೇಡ ಜಂಗಮ, ಕ್ರಿಶ್ಚಿಯನ್ ಮೊಗವೀರ, ಕ್ರಿಶ್ಚಿಯನ್ ಕೋಲಿ, ಕ್ರಿಶ್ಚಿಯನ್ ರೆಡ್ಡಿ, ಕ್ರಿಶ್ಚಿಯನ್ ದಲಿತ, ಕ್ರಿಶ್ಚಿಯನ್ ಲಮಾಣಿ, ಕೊರಮ, ಕೊರಚ, ಆದಿ ಕರ್ನಾಟಕ, ಆದಿ ಆಂಧ್ರ ಮುಂತಾದ ಸುಮಾರು ಸಾವಿರದಷ್ಟು ಜಾತಿಗಳೊಂದಿಗೆ ಕ್ರಿಶ್ಚಿಯನ್ ಪದ ಅಂಟಿಸಿದ್ದೇಕೆ? ಜಾತಿ ಗಣತಿ ನಡೆಯುತ್ತಿರುವುದು ಇತರ ಹಿಂದುಳಿದವರದ್ದೋ ಅಥವಾ ಕ್ರಿಶ್ಚಿಯನ್ನರದ್ದೋ? ಜಾತಿ ಉಪಜಾತಿಗಳ ಪಟ್ಟಿಯಲ್ಲಿ ಸರ್ಕಾರ ಸುಮಾರು ೧೫೬೧ ಜಾತಿಗಳನ್ನು ಗುರುತಿಸಿದೆಯಂತೆ! ಅಷ್ಟಾಗಿಯೂ ಮೀಸಲಾತಿಯಲ್ಲಿ ಸೇರ್ಪಡೆಗೆ ಆಗ್ರಹಿಸುವವರೆಲ್ಲರೂ ಸರ್ಕಾರಿ ಉದ್ಯೋಗ ಉದ್ದೇಶದಿಂದ. ಹಲವು ವರ್ಷಗಳಿಂದ ಸರ್ಕಾರ ಎಲ್ಲ ನೇಮಕಾತಿಗಳನ್ನೇ ಸ್ಥಗಿತಗೊಳಿಸಿರುವಾಗ ನೇಮಕಾತಿ ಕೇವಲ ಗಗನ ಕುಸುಮ ಅಲ್ಲವೇ? ಸಾಮಾಜಿಕ ಸ್ಥಿತಿಗತಿಗಳನ್ನು ಅರಿತು ಸರ್ಕಾರ ಅಂಥ ಯಾವ ಯೋಜನೆಗಳನ್ನು ತರಬಯಸಿದೆ? ಈಗಿರುವ ಯೋಜನೆಗಳೇ ಜನರಿಗೆ ತಲುಪಿಸಲು ಸಾಧ್ಯವಾಗದಿರುವಾಗ ಹೊಸ ಯೋಜನೆಗಳು ಬೇಕೇ?

Sunday, 21 September 2025

ಪುರುಷ ಪ್ರಧಾನ ಕುಟುಂಬದೊಳಗೆ ಹೆಣ್ಣೊಂದು ಪಡುವ ಸಂಕಟಗಳೇ; "ಅಂಜನ"

ಕಾದಂಬರಿಗಾರ್ತಿ ಎ.ಪಿ. ಮಾಲತಿ ಬರೆದಿರುವ "ಅಂಜನ" ಕಿರು ಕಾದಂಬರಿಯನ್ನು ಮೈಸೂರು ಗೀತಾ ಬುಕ್ ಹೌಸ್ ಪ್ರಕಟಿಸಿದೆ. ಈ ಹಿಂದೆ ಎ.ಪಿ.ಮಾಲತಿ ಅವರು ಬರೆದಿರುವ "ಸುಖದ ಹಾದಿ" ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.  ಗ್ರಾಮೀಣ ಮಹಿಳೆಯರು, ಹಳ್ಳಿಗೆ ಬಂದ ಎಳೆಯರು, ದೇವ, ಸರಿದ ತೆರೆ, ಅತೃಪ್ತಿ, ಬದಲಾಗದವರು, ಅರ್ಧಾಂಗಿ, ಹೊಸಹೆಜ್ಜೆ, ಮಿನುಗದ ಚುಕ್ಕೆ, ಪುನರ್ಮಿಲನ, ತಿರುಗಿದ ಚಕ್ರ, ಮಂದಾರ ಹೀಗೆ ಇನ್ನೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ. 

ಅಂಜನ ಈ ಕಿರು ಕಾದಂಬರಿಯಲ್ಲಿ ಹಿರಿದಾದ ಬದುಕಿನ ಘಟನೆಯನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಎ.ಪಿ. ಮಾಲತಿಯವರು. 'ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಹೋರಾಟ ಸಹಜವಾದುದಾಗಿದೆ. ಕುಟುಂಬದಲ್ಲಿ ಮಹಿಳೆಯ ಪಾತ್ರ ಪ್ರಮುಖವಾದುದು. ನಡೆಯುವ ಬದುಕಿನ ದಾರಿಯಲ್ಲಿ ಬರುವ ತೊಡಕುಗಳನ್ನು ನಿಭಾಯಿಸುವ ವಿಧಾನದಲ್ಲಿ ವಹಿಸಬೇಕಾದ ಪಾತ್ರದಲ್ಲಿ ಹೆಣ್ಣು ಪಡುವ ಪಡಿಪಾಟಲು, ತನಗಾಗಿಯೇ ಬಂದ ಬದುಕನ್ನು ಸರಿಯಾಗಿಸಿಕೊಳ್ಳುವಲ್ಲಿ ಹೆಣ್ಣು ತೋರುವ ಹೋರಾಟ, ದಿಟ್ಟ ಹೆಜ್ಜೆಯನ್ನು ಈ ಕಾದಂಬರಿ ನಮಗೆ ಪರಿಚಯಿಸುತ್ತದೆ.

 ಒಬ್ಬೊಬ್ಬರ ಬದುಕಿನಲ್ಲಿ ಒಂದೊಂದು ಬಗೆಯ ಸಂಕಟಗಳು, ತಲ್ಲಣಗಳು ನೋವುಗಳು ಬರುವುದಂತೂ ಸಹಜವಾಗಿದೆ. ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು, ಕೆಲವು ಸಮಸ್ಯೆಗಳನ್ನು ಬಿಡಿಸಿಕೊಳ್ಳಲಾಗದೆ ಒದ್ದಾಡುವುದು ಇದೆ. ಕುಟುಂಬದೊಳಗಿನ ಸಂಕಟಗಳನ್ನು ಪರಿಹರಿಸಿಕೊಳ್ಳುವ ವಿಧಾನದಲ್ಲಿ ಹಿರಿಯರ ಪಾತ್ರವೂ ಕೂಡ ಪ್ರಮುಖವಾಗಿರುತ್ತದೆ. ಹಿರಿಯರು ತೋರುವ ಅಡ್ಡ ದಾರಿಯಲ್ಲಿ ಮುಂದುವರಿಯಲಾಗದೆ ಹೋದಾಗ, ನೇರ ದಾರಿಯಲ್ಲಿ ಸಾಗುವುದಕ್ಕೆ ಬರುವ ಅಡ್ಡಿ  ಆತಂಕಗಳಿಗೆ ಹೆಣ್ಣು ಪಡುವ ಸಂಕಟಗಳಿಂದ ಹೊರ ಬರುವ ಅಂಜನಳ ಪಾತ್ರ ನಿಜಕ್ಕೂ ಮನ ಮಿಡಿಯುತ್ತದೆ. 

ಹಿರಿಯರು ತೆಗೆದುಕೊಳ್ಳುವ  ನಿರ್ಧಾರದಲ್ಲಿ  ಒಂದು ಸುಳ್ಳು ಬದುಕನ್ನೇ ಕೊಲ್ಲುತ್ತದೆ. ಸುಭದ್ರ ಮತ್ತು ವೆಂಕಣ್ಣ ತನ್ನ ಮಗ ನಂಜುಂಡನ ಅಸಹಾಯಕತೆ ಗೊತ್ತಿದ್ದರೂ ವಿಶಾಲಾಕ್ಷಿ ಮತ್ತು ಶಿವರಾಮನ ಮಗಳಾದ ಅಂಜನಳನ್ನು  ನಂಜುಂಡನಿಗೆ ಮದುವೆ ಮಾಡಿಕೊಂಡಿದ್ದು ಎಷ್ಟು ಸರಿ? ಇದರಿಂದ ತಮ್ಮ ವಂಶ ಬೆಳೆಯಬೇಕೆಂದು ನಿರೀಕ್ಷೆ ಮಾಡಿದ್ದು ಎಷ್ಟು ಸರಿ? ಪುರುಷತ್ವವೇ ಇಲ್ಲದ ನಂಜುಂಡನಿಂದ ಅಂಜನ ಗರ್ಭಧರಿಸುವುದಾದರೂ ಸಾಧ್ಯವೇ? ಹೀಗಿರುವಾಗ ಆಕೆ ತನ್ನ ಪಾಲಿಗೆ ದೊರಕಿದ ಬದುಕನ್ನು ಪ್ರೀತಿಸುತ್ತಾ ಗಂಡ ಹೆಂಡತಿಯಾಗಿ ಬದುಕಬೇಕಾದ ಸಂಬಂಧ ಸ್ನೇಹಿತರಂತೆ ಬದುಕುವಂತಾದಾಗ ಅಂಜನ ಬುದ್ಧಿವಂತಳಾಗಿ ಈ ಬದುಕಿಗೆ ಒಗ್ಗಿಕೊಂಡದ್ದು, ತನ್ನ ಗಂಡನನ್ನು ಆರೈಕೆ, ಪ್ರೀತಿಯಲ್ಲಿ ನೋಡಿಕೊಂಡು ಬರುತ್ತಿರುವ  ಅಂಜನಳಿಗೆ ತಾನು ಮಾಡಿದ ಮೋಸದ ಬಗ್ಗೆ ತಾನೇ ಪಶ್ಚಾತಾಪ ಪಡುತ್ತಾನೆ ನಂಜುಂಡ. ಹೀಗೆಯೇ ಬದುಕು ಸಾಗಿಸಿ ಬಿಡಬೇಕು ಎನ್ನುವ ನಿರ್ಧಾರಕ್ಕೆ ಬಂದ ಅಂಜನಾಳಿಗೆ ಹಿರಿಯರಾದ ಅತ್ತೆ ಸುಭದ್ರ ಮತ್ತು ಮಾವ ವೆಂಕಣ್ಣ ತೆಗೆದುಕೊಳ್ಳುವ ನಿರ್ಧಾರದಲ್ಲಿ ಅಂಜನ ನಿಜಕ್ಕೂ ಬೆಚ್ಚುತ್ತಾಳೆ. 

ಅತ್ತೆ ಸುಭದ್ರ ತನ್ನ ತಮ್ಮನಾದ ಪ್ರಕಾಶನನ್ನು ಪದೇ ಪದೇ ಮನೆಗೆ ಕರೆಸಿಕೊಂಡು ತನ್ನ ಸೊಸೆ ಅಂಜನಳ ಜೊತೆಗೆ ಸೇರುವ ಬಯಕೆಯನ್ನು ವ್ಯಕ್ತಪಡಿಸಿದಾಗ, ಅಂಜನ ಸಿಡಿದೇಳುತ್ತಾಳೆ; ತನ್ನ ಪತಿಗಾಗಿ ತನ್ನ ಶೀಲ ಮಾತ್ರ ಸೀಮಿತ ಎಂದು ಕೂಗಾಡುತ್ತಾಳೆ. ಪರಪುರುಷನೊಡನೆ ಸೇರಿ ಗರ್ಭ ಧರಿಸಲು ಇಷ್ಟಪಡದ ಅಂಜನ, ಅದು ನಂಜುಂಡನ ಮಗು ಹೇಗಾಗುತ್ತೆ? ನಿಮ್ಮ ವಂಶದ ಕುಡಿ ಆಗಲು ಸಾಧ್ಯವೇ? ಎಂದು ಪ್ರಶ್ನಿಸುತ್ತಾಳೆ ಈ ಹಿಂದೆ ದತ್ತು ಮಗುವನ್ನು ತೆಗೆದುಕೊಂಡು ಸಾಕುವ ಬಗ್ಗೆ ಪ್ರಸ್ತಾಪಿಸಿದ ಅಂಜನಾಳಿಗೆ ಅತ್ತೆ ಅದು ನಮ್ಮ ವಂಶದ್ದು ಹೇಗಾಗುತ್ತದೆ? ಎನ್ನುವ  ಮಾತಿಗೆ ಅಂಜನ ಕೊಟ್ಟ ಈ ಮಾತುಗಳು ಪಾಟೀಸವಾಲಿನಂತೆ ಅವಳ ಎದೆಗೆ ಹಿರಿಯುತ್ತವೆ. 

ಅದೊಂದು ದಿನ ಪ್ರಕಾಶನ ತೆಕ್ಕೆಯಿಂದ ತಪ್ಪಿಸಿಕೊಂಡ ನಂತರ, ತನ್ನ ಗಂಡ ನಂಜುಂಡನೇ ಅಂಜನಳನ್ನು ಆ ಕೋಪದಿಂದ ರಕ್ಷಿಸಿ, ಹೊರಗೆ ಹೋಗುವಂತೆ ಮಾಡುತ್ತಾನೆ. ಅಂಜನ ತನ್ನ ಸ್ನೇಹಿತೆ ದೇವಕಿಯ ತಮ್ಮನಾದ ಹರಿಶ್ಚಂದ್ರನ ಜೊತೆ ಮಾರುವೇಷದಲ್ಲಿ ತನ್ನ ತವರಿಗೆ ಸೇರಿಕೊಳ್ಳುತ್ತಾಳೆ. ಹರಿಶ್ಚಂದ್ರ ಅಲ್ಲಿಂದ ಅಲಹಾಬಾದಿಗೆ ಹೊರಟು ಹೋಗುತ್ತಾನೆ. 

 ಆದರೆ ಗಾಬರಿಯಾದ ಅಂಜನಳ ತಂದೆ, ತಾಯಿ, ಸಹೋದರರು "ಕೊಟ್ಟ ಹೆಣ್ಣು ಕುಲಕ್ಕೆ ಹೊರಗೂ" ಎನ್ನುವಂತೆ ಮಾತನಾಡಲು ಪ್ರಾರಂಭಿಸಿದಾಗ ಅಂಜನ ಆಘಾತಕ್ಕೆ ಒಳಗಾಗುತ್ತಾಳೆ. ನಿಜ ಸ್ಥಿತಿ ತಿಳಿದು ಕೆಲ ದಿನಗಳು ಕಳೆದು ಹೋಗುತ್ತವೆ. ಅತ್ತ ಬಿಟ್ಟು ನಂಜುಂಡನಿಗೆ ಮರು ಮದುವೆಯಾಗಿ ಒಂದು ಗಂಡು ಮಗು ಎನ್ನುವ ಸುದ್ದಿ ಅಂಜನಳಿಗೆ ತಲುಪುತ್ತದೆ. ಈ ಸಂದರ್ಭದಲ್ಲಿ ಅಂಜನಾ "ಹೂವು ಕಾಣದ ಮರದಲ್ಲಿ ಕಾಯಿ ಸಾಧ್ಯವೇ"? ಎಂದು ನಕ್ಕು ಸುಮ್ಮನಾಗುತ್ತಾಳೆ. ಸುಭದ್ರಳ ಹಠದಲ್ಲಿ ಹೊಸದಾಗಿ ಮದುವೆಯಾದ ನಂಜುಂಡನ ಹೆಂಡತಿಯು ಒಂದು ಹೆಣ್ಣಲ್ಲವೇ ಎಂದುಕೊಳ್ಳುತ್ತಾಳೆ. 

ಇತ್ತ ತನ್ನ ಸ್ನೇಹಿತೆ ದೇವಕಿಯ ತಮ್ಮ ಹರಿಶ್ಚಂದ್ರನ ಜೊತೆ ಅಂಜನ ಮರುಮದುವೆಯಾಗುತ್ತಾಳೆ. ಅಂಜನಳು ಈಗ ಗರ್ಭಿಣಿಯಾಗಿದ್ದಾಳೆ ಎಂದು ಕೊನೆಯಾಗುವ ಈ ಕಾದಂಬರಿಯಲ್ಲಿ ನೇರ ದಾರಿಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಹೋರಾಡುವ ಸಂದರ್ಭದಲ್ಲಿ ಎದುರಿಸುವ ಸಂಕಷ್ಟಗಳು ಮತ್ತು ಅಡ್ಡ ದಾರಿಯ ಬದುಕನ್ನು ನೇರ ದಾರಿ ಎಂದು ತಿಳಿದು ಬದುಕುವ ಇವತ್ತಿನ ಅನೇಕ ಘಟನೆಗಳು ನಮ್ಮ ಮುಂದೆ ಇರುವುದನ್ನು ಸಮಾಜದಲ್ಲಿ ನಾವು ಕಾಣುತ್ತೇವೆ. 



ಹಿಂದೆ ಸಾಮ್ರಾಜ್ಯಗಳನ್ನು ಉಳಿಸಿಕೊಳ್ಳಲು ರಾಜನು ಅಸಮರ್ಥನಾದಾಗ ಋಷಿಮುನಿಗಳು ವರದಿಂದಲೋ, ಶಾಪದಿಂದಲೋ ಪುತ್ರ ಸಂತಾನವನ್ನು ಪಡೆಯುವ ಕತೆಗಳನ್ನು ನಾವು ಓದಿದ್ದೇವೆ. ಆದರೆ ನೈಜವಾಗಿ ಒಂದು ಹೆಣ್ಣು ತನ್ನ ಪತಿಯಿಂದಲೇ ಮಕ್ಕಳ ಸಂತಾನ ಪಡೆದಾಗಲೇ ಅದಕ್ಕೊಂದು ಪವಿತ್ರತೆ ಬರುತ್ತದೆ ಎಂದು  ತಿಳಿದುಕೊಳ್ಳುತ್ತಾಳೆ. ಇದನ್ನು ಬಯಸುವ ಹೆಣ್ಣಾಗಿ ಅಂಜನ ಈ ಕಾದಂಬರಿ ಕಾಣಿಸಿಕೊಳ್ಳುತ್ತಾಳೆ. ಸಮಾಜ ಮತ್ತು ಕುಟುಂಬ ವ್ಯವಸ್ಥೆಯೊಳಗೆ ಹೆಣ್ಣು ಪಡುವ ಸಂಕಷ್ಟಗಳು ನಾವು ನೋಡುತ್ತಲೇ ಬರುತ್ತಿದ್ದೇವೆ. ಯಾವುದು ತಪ್ಪು, ಯಾವುದು ಸರಿ ಎನ್ನುವ ದ್ವಂದ್ವದಲ್ಲಿ ಪರಿಹಾರ ಹುಡುಕುತ್ತಲೇ ಇದ್ದೇವೆ ಈ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ!

-ಉದಂತ ಶಿವಕುಮಾರ  ಲೆಖಕರು, ಬೆಂಗಳೂರು-560056

ಬಿದ್ರೂ ಮೀಸೆ ಮಣ್ಣಾಗ್ಲಿಲ್ಲಾ..!' ಅರ್ಧಶತಕ ಸಿಡಿಸಿ 'Gun-Firing' ಸಂಭ್ರಮ ಮಾಡಿದ ಪಾಕ್ ಬ್ಯಾಟರ್!

 ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟರ್ ವಿವಾದಾತ್ಮಕ ಸಂಭ್ರಮಾಚರಣೆ ಮಾಡಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಹೌದು.. ಇಂದು ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಅರ್ಧಶತಕ ಸಿಡಿಸಿದ ಪಾಕಿಸ್ತಾನದ ಬ್ಯಾಟರ್ ಸಾಹಿಬ್‌ಜಾದಾ ಫರ್ಹಾನ್ (58 ರನ್) ಅರ್ಧಶತಕ ಸಿಡಿಸುತ್ತಲೇ ತನ್ನ ಬ್ಯಾಟ್ ಅನ್ನೇ ಗನ್ ರೀತಿಯಲ್ಲಿ ತೋರಿಸಿ 'Gun-Firing' Celebration ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಫರ್ಹಾನ್ ರ ಈ ಗನ್ ಫೈರ್ ಸಂಭ್ರಮ ಪಾಕಿಸ್ತಾನದಲ್ಲಿ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಮಾಡಿದ ಭಾರತೀಯ ಸೇನೆಯನ್ನು ಅಣಕಿಸುವಂತಿತ್ತು. ಅಂದು ರಣಾಂಗಣದಲ್ಲಿ ಪೆಟ್ಟು ತಿಂದಿದ್ದ ಪಾಕಿಸ್ತಾನ ಇಂದು ಮೈದಾನದಲ್ಲಿ ಇಂತಹ ವರ್ತನೆಗಳ ಮೂಲಕ ಭಾರತ ಮತ್ತು ಭಾರತೀಯ ಆಟಗಾರರನ್ನು ಕೆಣಕುವ ಕೆಲಸ ಮಾಡಿದೆ.

ಇನ್ನು ಭಾರತದ ವಿರುದ್ಧ ಉತ್ತಮ ಬ್ಯಾಟಿಂಗ್ ಮಾಡಿದ ಪಾಕ್ ಆರಂಭಿಕ ಬ್ಯಾಟರ್ ಫರ್ಹಾನ್ ಕೇವಲ 45 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ 58 ರನ್ ಕಲೆ ಹಾಕಿದರು. ಬಳಿಕ ಶಿವಂದುಬೆ ಬೌಲಿಂಗ್ ನಲ್ಲಿ ಸೂರ್ಯ ಕುಮಾರ್ ಯಾದವ್ ಬೌಲಿಂಗ್ ನಲ್ಲಿ ಔಟ್ ಆದರು.



Shodhavani: ಕರ್ನಾಟಕ ಜೈಲುಗಳ ಸುಧಾರಣೆ : ಡಿಜಿಪಿ ಅಲೋಕ್ ಕುಮಾರ ಮುಂದಿ...

Shodhavani: ಕರ್ನಾಟಕ ಜೈಲುಗಳ ಸುಧಾರಣೆ : ಡಿಜಿಪಿ ಅಲೋಕ್ ಕುಮಾರ ಮುಂದಿ... :   ಕರ್ನಾಟಕ ಜೈಲುಗಳ ಸುಧಾರಣೆ  : ಡಿಜಿಪಿ ಅಲೋಕ್ ಕುಮಾರ ಮುಂದಿರುವ ಸವಾಲುಗಳು... ರಾಜ್...