ads

Search This Blog

Thursday, 16 January 2025

ಎಟಿಎಂಗೆ ಹಣ ಹಾಕಲು ಬಂದ ಬ್ಯಾಂಕ ಸಿಬ್ಬಂದಿ ಮೇಲೆ ಗುಂಡಿನ ದಾಳಿ, ಇಬ್ಬರು ಸಾವು

ಬೀದರ್: ಎಟಿಎಂಗೆ ಹಣ ಹಾಕಲು ಬಂದ ಬ್ಯಾಂಕ್ ಸಿಬ್ಬಂದಿ ಮೇಲೆ ಹಾಡಹಗಲೇ ಗುಂಡಿನ ದಾಳಿ ನಡೆಸಿರುವ ಘಟನೆಯೊಂದು ಬೀದರ್‌ನ ಎಸ್‌ಬಿಐ ಮುಖ್ಯ ಕಚೇರಿ ಮುಂದೆ ಗುರುವಾರ ನಡೆದಿದೆ.

ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಎಟಿಎಂಗೆ ಹಣ ಹಾಕುವ ಸಿಬ್ಬಂದಿಗಳ ಮೇಲೆ ೮ ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದು, ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಗಿರಿ ವೆಂಕಟೇಶ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಶಿವಕುಮಾರ (೨೬) ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಎಟಿಎಂಗೆ ಹಣ ಹಾಕಲು ಸಿಬ್ಬಂದಿಗಳು ವಾಹನದಿಂದ ಹಣದ ಪೆಟ್ಟಿಗೆ ಹೊರ ತೆಗೆಯುತ್ತಿದ್ದಂತೆಯೇ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ೯೩ ಲಕ್ಷ ರೂಪಾಯಿಗಳಿದ್ದ ಹಣದ ಪೆಟ್ಟೆಗೆಯನ್ನು ಬೈಕ್‌ನಲ್ಲಿ ತೆಗೆದುಕೊಂಡು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿದ್ದು, ಈ ಕೃತ್ಯದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಸುದ್ದಿ ತಿಳಿದು ಎಸ್‌ಪಿ ಪ್ರದೀಪ್ ಗುಮಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಪತ್ತೆಗೆ ಮೂರು ವಿಶೇಷ ತಂಡ ರಚಿಸಲಾಗಿದ್ದು, ೨೪ ಗಂಟೆಯೊಳಗೆ ದುಷ್ಕರ್ಮಿಗಳನ್ನು ಬಂಧಿಸಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.

ಎಟಿಎಂಗೆ ಹಣ ಹಾಕಲು ಬಂದ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ, ಗುಂಡು ಹಾರಿಸಿ ಹಣದ ಸಮೇತ ಪರಾರಿಯಾಗಿದ್ದಾರೆ. ಗುಂಡಿನ ದಾಳಿ ಪರಿಣಾಮ ಇಬ್ಬರು ಎಸ್‌ಬಿಐ ಬ್ಯಾಂಕ್ ಸಿಬ್ಬಂದಿಗಳು ಸ್ಥಳದಲ್ಲೇ ಸಾವನ್ನಪ್ಪಿರುವು ದಾರುಣ್ಯ ಘಟನೆ ಹಾಡುಹಗಲಲ್ಲೆ ಜರುಗಿರುವುದು ಬೀದರ ಜಿಲ್ಲೆಯ ಜನರ ನಿದ್ದೆಯನ್ನು ಹಾರಿಸಿದೆ.

   ಬ್ಯಾಂಕ ಸಿಬ್ಬಂದಿಯ ಮಾಹಿತಿ ಪ್ರಕಾರ ಒಟ್ಟು ೯೩ ಲಕ್ಷ ರೂಪಾಯಿ ಆ ಪೆಟ್ಟಿಗೆಯಲ್ಲಿ ಇರುವುದ್ದಾಗಿ ಮಾಹಿತಿ ನೀಡಿದ್ದಾರೆ. ದರೋಡೆಕೊರರು ದ್ವೀಚಕ್ರ ವಾಹನದ ಮೇಲೆ ಇಟ್ಟುಕೊಂಡು ಹೋಗಿದ್ದಾಗಿ ಸಿಸಿ ಟಿವಿ ದೃಶ್ಯ ಮಾಹಿತಿ ನೀಡುತ್ತಿವೆ. ಈ ಘಟನೆಯನ್ನು ಬೀದರ ಜಿಲ್ಲೆಯ ಪೊಲೀಸರಿಗೆ ಸವಾಲಿನಂತೆ ಇದೆ. ಈ ನಿಟ್ಟಿನಲ್ಲಿ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಪ್ರದೀಪ ಯಾವ ರೀತಿ ಈ ಪ್ರಕರಣ ಭೇದಿಸುತ್ತಾರೆ ಎಂಬುದು ಜಿಲ್ಲೆಯ ಜನರು ನಿರೀಕ್ಷಿಸುತ್ತಿದ್ದಾರೆ. ಶೀಘ್ರವೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಾರ ಎಂಬುದು ನೋಡಬೇಕಾಗಿದೆ. 

ಎಸ್‌ಬಿಐ ಬ್ಯಾಂಕ್ ಸಿಬ್ಬಂದಿ ಜಿಎಸ್'ಸಿ ವಾಹನದಲ್ಲಿ ಲಕ್ಷಾಂತರ ಹಣವನ್ನು ತೆಗೆದುಕೊಂಡು ಬಂದಿದ್ದರು. ಇನ್ನೇನು ಎಟಿಎಂಗೆ ಹಣ ಹಾಕಬೇಕು ಎನ್ನುವಷ್ಟರಲ್ಲಿ ಸ್ಥಳಕ್ಕೆ ಬಂದ ದುಷ್ಕರ್ಮಿಗಳು, ಏಕಾಏಕಿ ಐದು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಓರ್ವ ಸಿಬ್ಬಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಮತ್ತೋರ್ವ ಸಿಬ್ಬಂದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಖರೀಮರು ಹಣದ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸ್ಥಳೀಯರ ಫೋನ್‌ನಲ್ಲಿ ಸೆರೆಯಾಗಿದೆ. ಈ ವಿಚಾರ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Sunday, 12 January 2025

ನಿಜ ಶರಣ ಪೂಜ್ಯ ಡಾ ಬೆಲ್ದಾಳ ಸಿದ್ದರಾಮ ಶರಣರು:

 


 ಬೆಲ್ದಾಳ ಸಿದ್ದರಾಮ ಶರಣರು ಎಂದು ಖ್ಯಾತಿ ಪಡೆದ 21ನೇ ಶತಮಾನದ ನಿಜ ಶರಣರು, 12ನೇ ಶತಮಾನದ ಶರಣರ ಸಂಪೂರ್ಣ ಜ್ಞಾನ ಇವರಲ್ಲಿ ಕಾಣಬಹುದು. ಇವರ ಬಗ್ಗೆ ಎಷ್ಟು ಬರೆದರೂ ಕೂಡ ಕಡಿಮೆ ಅನ್ನಿಸಬಹುದು. 1948ರಲ್ಲಿ ಬೀದರ ಜಿಲ್ಲೆಯ ಔರಾದ ತಾಲೂಕ್ಕಿನ ತೆಲಂಗಾಣ ಗಡಿ ಭಾಗದ ಕುಗ್ರಾಮ ಬೆಲ್ದಾಳದಲ್ಲಿ ಶಿವ ಭಕ್ತರಾದ ದಲಿತ ಹರಿಜನ ಕುಟುಂಬದ ಶ್ರೀ ಲಾಲಾಪ್ಪ ಮತ್ತು ಶ್ರೀಮತಿ ಲಕ್ಷ್ಮಿದೇವಿ ಉದರದಲ್ಲಿ ಹುಟ್ಟಿದ್ದರು. ಇವರು ಹುಟ್ಟಿದ್ದಾಗ ಗ್ರಾಮದಲ್ಲಿ ಶಾಲೆ ಇದ್ದಿಲ್ಲ, ಗ್ರಾಮದ ಒಬ್ಬ ಶಿಕ್ಷಿತ ಅಯ್ಯನವರು ಹುಡುಗರಿಗೆ ಅಕ್ಷರ ಜ್ಞಾನ ಕೊಡುತ್ತಿದ್ದರಂತೆ, ಇವರ ತಂದೆ ಅಯ್ಯನವರಿಗೆ ಮಗುವಿಗೆ ಅಕ್ಷರ ಜ್ಞಾನ ಕೊಡಲು ವಿನಂತಿ ಮಾಡಿದ್ದರಂತೆ. ಅದರಂತೆ ಮಗ ವಿಠಲ ದಿನಾಲು ಅಕ್ಷರ ಜ್ಞಾನಕ್ಕೆ ಹೋದಾಗ ಇವರನ್ನು ಸವರ್ಣಿಯರಿಂದ ದೂರ ಕೂಡಿಸಿ ವಿಧ್ಯಾಭ್ಯಾಸ ಕೊಡುತ್ತಿದ್ದರಂತೆ. ಚಿಕ್ಕ ಹುಡುಗ ಇದ್ದಾಗ ಇವರಿಗೆ ಅರಿವಾಗಿದ್ದು ಅಶಪುರುಷತೆ ಜಾತಿಯತೆ ಎನ್ನುವ ಪಿಡುಗು, ಇವರು ಮೂರನೇ ತರಗತಿ ನಂತರ ಶಾಲೆ ಬಿಟ್ಟು ಬಡ ತಂದೆ ತಾಯಿ ಜೊತೆಗೆ ಕೆಲಸದಲ್ಲಿ ಕೈಜೋಡಿಸಿದರು. ತಂದೆ ಜೊತೆ ಭಜನೆ ಮಾಡುವದು ಹಾಡುವದು ಕಲಿತರು. ಆವಾಗ ಇವರ ಮೇಲೆ ಆಧ್ಯಾತ್ಮಿಕ ಪ್ರಭಾವ ಆಗಿತ್ತು. ಇವರಿಗೆ ಎಳೆ ವಯಸ್ಸಿನಲ್ಲಿ ಮದುವೆ ಮಾಡಿದ್ದರು, ಜೀವನೋಪಾಯಕ್ಕೆ ಬಟ್ಟೆ ಹೊಲಿಯುವ ಕಾಯಕ ಪ್ರಾರಂಭ ಮಾಡಿದ್ದರು. ಇವರು ರಾಮಾಯಣ ,ಮಹಾಭಾರತ, ಶಿವಪುರಾಣ ಹೀಗೆ ಭಾರತೀಯ ಸಂಸ್ಕೃತಿ ಪುರಾಣ, ಕಥೆಗಳು ಓದುತ್ತಿದ್ದರು. ಒಬ್ಬ ವೀರಶೈವ ಲಿಂಗಾಯತ ಮಠಾಧಿಪತಿ ಇವರಿಗೆ ಲಿಂಗ ದೀಕ್ಷೆ ಕೊಟ್ಟರು. ಹಾಗೆಯ ವಚನ ಸಾಹಿತ್ಯ ತಿಳಿದುಕೊಂಡು ಅಭಿರುಚಿ ಬೆಳೆದು ಅಧ್ಯಯನ ಪ್ರಾರಂಭ ಮಾಡಿದರು.

ಒಂದು ಸಲ ಪೂಜ್ಯ ಡಾ ಚೆನ್ನಬಸವ ಪಟ್ಟದೇವರು ಭಾಲ್ಕಿಯವರು ಔರಾದ ಪಟ್ಟಣ ಆಗಮಿಸುತ್ತಾರೆ ಎಂದು ಸುದ್ದಿ ತಿಳಿದು ಶರಣರು ಔರಾದ ಪಟ್ಟಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯಾರೋ ಒಬ್ಬರು ಪಟ್ಟದೇವರಿಗೆ ಬೆಲ್ದಾಳ ಗ್ರಾಮದ ದಲಿತ ಯುವಕ ಲಿಂಗ ದೀಕ್ಷೆ ಪಡೆದವರು ಬಸವಾದಿ ಶರಣರ ಬಗ್ಗೆ ಒಳ್ಳೆಯ ಮಾತಾಡುತ್ತಾರೆ ಎಂದು ಹೇಳಿದ್ದಾಗ, ಅವರು ವಿಠಲ ಅವರಿಗೆ ಮಾತಾಡಲು ವೇದಿಕೆ ಮೇಲೆ ಕರೆದು ಮೈಕ್ ಕೊಟ್ಟರಂತೆ. ಅವರು ಸುಮಾರು ಅರ್ಧ ಗಂಟೆ ಬಸವಾದಿ ಶರಣರ ಬಗ್ಗೆ ಅವರ ವಚನಗಳು ಹೇಳಿ ಮಾತಾಡಿದ್ದು ನೆರೆದ ಸಭಿಕರಿಗೆ ಮತ್ತು ಪೂಜ್ಯರಿಗೆ ದಿಗ್ಭ್ರಮೆ ಆಗಿತ್ತಂತೆ. ಆವಾಗ ಪೂಜ್ಯ ಚೆನ್ನಬಸವ ಪಟ್ಟದೇವರು ವಿಠಲ ಅವರಿಗೆ ಅಪ್ಪಿಕೊಂಡು ಹೂ ಮಾಲೆ ಹಾಕಿ ಇಂದಿನಿಂದ ನೀನು ವಿಠಲ ಅಲ್ಲ ನಮ್ಮ ಸಾಕ್ಷಾತ್ ಸಿದ್ದರಾಮೇಶ್ವರ ಎಂದು ಕರೆದು ಸಿದ್ದರಾಮ ಎಂದು ಹೆಸರಿಟ್ಟರಂತೆ.ಅಂದಿನಿಂದ ಸಿದ್ದರಾಮ ಶರಣರು ಬೆಲ್ದಾಳ ಎಂದು ಖ್ಯಾತಿ ಪಡೆದರು. ನಂತರ ಪೂಜ್ಯ ಚೆನ್ನಬಸವ ಪಟ್ಟದೇವರು ಭಾಲ್ಕಿ ಹಿರೇಮಠಕ್ಕೆ ಆಹ್ವಾನಿಸಿ ಸಿದ್ದರಾಮ ಶರಣರಿಗೆ ಇಷ್ಟಲಿಂಗ ದೀಕ್ಷೆ ಮತ್ತು ಜಂಗಮ ದೀಕ್ಷೆ ಕೊಟ್ಟಿದ್ದರು.ಮುಂದೆ ಎಲ್ಲಾ ಆಗಿದ್ದು ಬಸವ ಪರಂಪರೆಯ ಇತಿಹಾಸ, ಒಬ್ಬ ದಲಿತ ಯುವಕ ಉನ್ನತ ಸಾಧನೆ ಮಾಡಿ ಹೆಸರಾಂತ ಶರಣ ಆಗಿದ್ದು, ಆಧ್ಯಾತ್ಮಿಕ ಜೀವಿ ಆಗಿದ್ದು.

ನಂತರ ಕೌಠ ಗ್ರಾಮದ ಮಾಂಜರಾ ನದಿ ದಂಡೆಯಲ್ಲಿ ಆಶ್ರಮ ಸ್ಥಾಪಿಸಿ, ಅಲ್ಲಿಯ ಬಡ ಮಕ್ಕಳಿಗೆ ಶಾಲೆ ತೆರೆದು, ವಸತಿ ಗೃಹ ಸ್ಥಾಪಿಸಿ, ಗ್ರಂಥಾಲಯ ಸ್ಥಾಪಿಸಿದರು. ಅವರು ಭಾರತ ದೇಶದ ಎಲ್ಲ ಗ್ರಂಥಗಳು ಶಿವಲೀಲಾಮೃತ, ಶಿವಪುರಾಣ, ರಾಮಾಯಣ, ಮಹಾಭಾರತ, ಭಾಗವಾದ ಗೀತೆ, ಮನುಸ್ಮೃತಿ, ಎಲ್ಲಾ ವೇದ, ಉಪನಿಷತ್ತು, ಆಗಮಗಳು, ಪುರಾಣ, ಪೋತಿ, ಕಥೆಗಳು, ಬೌದ್ಧ ಜೈನ ಸಿಖ್ ಕ್ರಿಶ್ಚಿಯನ್ ಇಸ್ಲಾಂ ಪಾರ್ಸಿ ಧರ್ಮಗ್ರಂಥಗಳು, ಅಂಬೇಡ್ಕರ್ ಬರೆದ ಎಲ್ಲಾ ಸಂಪುಟಗಳು, ಗಾಂಧೀಜಿ ಜೀವನ ಚರಿತ್ರೆ , ನೆಹರೂ ಬರೆದ ಗ್ರಂಥಗಳು ಅಧ್ಯಯನ ಮಾಡಿದ್ದರು. ಅವರು ದೇಶ ವಿದೇಶದವರು ಬರೆದ ಸಾವಿರಾರು ಗ್ರಂಥಗಳನ್ನು ಅಧ್ಯಯನ ಮಾಡಿ ಜ್ಞಾನ ಪಡೆದರು.

ಬಸವಾದಿ ಶರಣರ ಸಂಪೂರ್ಣ ವಚನ ಸಾಹಿತ್ಯ ಅಧ್ಯಯನ ಮಾಡಿದ್ದರು, ಸುಮಾರು 22 ಸಾವಿರ ವಚನಗಳನ್ನು ಅಧ್ಯಯನ ಮಾಡಿ, ಅವಗಳ ಸಾರ ತಿಳಿದುಕೊಂಡರು. ಇದರಿಂದ ಅವರಿಗೆ ಜ್ಞಾನ ಸಂಪಾದನೆ ಆಯಿತು. ವಚನ ಸಾಹಿತ್ಯ ಅಧ್ಯಯನ ಮಾಡದಲ್ಲದೆ ನಿಜ ಜೀವನದಲ್ಲಿ ಅವನು ಮೈಗೂಡಿಸಿಕೊಂಡರು. ವಚನ ಸಾಹಿತ್ಯ ತಿಳಿದುಕೊಂಡು ಶೋಷಣೆಗೆ ಮೂಲವಾದ ವಿಷಯಗಳು ಬಸವಾದಿ ಶರಣರು ತಿರಸ್ಕಾರ ಮಾಡಿದ್ದ ಪಾಪ ಪುಣ್ಯ, ಸ್ವರ್ಗ ನರಕ, ಚಾತುರ್ವರ್ಣ, ಕರ್ಮಸಿದ್ಧಾಂತ, ಪುನರ್ಜನ್ಮ ಎಲ್ಲವೂ ತಿಳಿಸಿ ಹೇಳಿದ್ದಾರೆ, ಈ ವಿಷಯಗಳ ಬಗ್ಗೆ ಪುಸ್ತಕ ರಚನೆ ಮಾಡಿದ್ದಾರೆ. ವೀರಶೈವ ಧರ್ಮ ಅಲ್ಲ ಸುಳ್ಳು, ಸಿದ್ಧಾಂತ ಶಿಖಾಮಣಿ ಗ್ರಂಥ ಪುರಾತನ ಅಲ್ಲ, ಆಗಮ ವೇದ ಉಪನಿಷತ್ತುಗಳಲ್ಲಿ ಬಸವಾದಿ ಶರಣರು ಹೇಳಿದ್ದ ಪಂಚಚಾರ ಶಟಸ್ಥಲ ಅಷ್ಟಾವರಣ ಯಾವ ವಿಷಯಗಳು ಇಲ್ಲ, ಪಂಚಾಚಾರ್ಯರು ಬಸವ ಯುಗಕಿಂತ ಮೊದಲಿನವರು ಅಲ್ಲ, ಬಸವಣ್ಣನವರಿಗೆ ಯಾರು ಇಷ್ಟಲಿಂಗ ದೀಕ್ಷೆ ನೀಡಿಲ್ಲ, ಬಸವಣ್ಣನವರೆ ಇಷ್ಟಲಿಂಗ ಶೋಧನೆ ಮಾಡಿದ್ದವರು, ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಕರು ಎಂದು ಪುಸ್ತಕ ಬರೆದಿದ್ದಾರೆ. ಆ ಪುಸ್ತಕ ಕೆಲವೇ ದಿನಗಳಲ್ಲಿ ಬಿಡುಗಡೆ ಗೋಳಲಿದ್ದು, ಎಲ್ಲಾ ಸಂಶಯಗಳಿಗೆ ಅಪಪ್ರಚಾರಕ್ಕೆ ತೆರೆ ಎಳೆಯುತ್ತದೆ.

ಬಸವಾದಿ ಶರಣರ ಯೋಗ ಮಾಡಿದ್ದರು, ಬಸವಾದಿ ಶರಣರ ಯೋಗಗಳು ಜಗತ್ತಿನಲ್ಲಿ ಶ್ರೇಷ್ಟ ಎಂದು ಜಗತ್ತಿಗೆ ಪರಿಚಯ ಮಾಡಿಸಿದ್ದು ಬೆಲ್ದಾಳ ಸಿದ್ದರಾಮ ಶರಣರು. ಬಸವಾದಿ ಶರಣರ ಯೋಗಗಳ ಬಗ್ಗೆ ಬರೆದ ವಚನಗಳನ್ನು ಅಧ್ಯಯನ ಮಾಡಿ, ಯೋಗ ಕಲಿತುಕೊಂಡರು. ಪತಂಜಲಿ ಯೋಗಕಿಂತ ಬಸವಾದಿ ಶರಣರ ಯೋಗಗಳು ಶ್ರೇಷ್ಟ ಎಂದು ಅರಿತು ದಿನಾಲು ಅಭ್ಯಾಸ ಮಾಡಿದ್ದರು. ಹಠಯೋಗ ರಾಜಯೋಗಕಿಂತ ಶರಣರ ಅಂಗಲಿಂಗಾಂಗ ಸಾಮರಸ್ಯ ಶಿವಯೋಗ ಅತಿ ಶ್ರೇಷ್ಠ ಎಂದು ಸ್ವತಃ ಯೋಗ ಮಾಡಿ ಅರಿತುಕೊಂಡು ಸಮಾಜಕ್ಕೆ ತಿಳಿಸಿ ಹೇಳಿದರು. ಶರಣರ ಯೋಗಗಳ ಬಗ್ಗೆ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದರು. ದೃಷ್ಟಿಯೋಗ ಯಾವಾಗ ಹೇಗೆ ಮಾಡಬೇಕು ಎನ್ನುವದು ವಚನಗಳನ್ನು ಹಾಡುತ್ತಾ, ಪ್ರಾಯೋಗಿಕವಾಗಿ ತಾನೇ ಮಾಡಿ ಶರಣರಿಗೆ ತೋರಿಸಿ ಕೊಡುತ್ತಾರೆ. ಅವರು ಎಷ್ಟು ಶ್ರೇಷ್ಟ ಎಂದರೆ ವಚನಗಳಲ್ಲಿ ಬರುವ ಯೋಗಗಳ ಮುಖಾಂತರ ಘಂಟಾನಾದವನ್ನು ಕೇಳಿ ಮತ್ತೊಬ್ಬರಿಗೆ ಕೇಳಿಸುತ್ತಾರೆ. ಅತಿ ಶ್ರೇಷ್ಠ ಯೋಗ ಅಂದರೆ ಉಸಿರಾಟ ನಿಲ್ಲಿಸಿ ಮಾನವನಲ್ಲಿ ಇರುವ ಒಂಬತ್ತು ಬಾಗಿಲಗಳನ್ನು ಮುಚ್ಚಿ, ಸಂಪೂರ್ಣ ವಾಯು ಇಲ್ಲದೆ ಹಲವಾರು ನಿಮಿಷ ಮಗ್ನರಾಗಿ ಪ್ರಾಣ ಶ್ರೆಸ್ತಾಸತ್ರಕ್ಕೆ ಒಯ್ಯದು ಕುಂಡಲಿನಿ ಯೋಗ ಮುಖಾಂತರ ಮಿದುಳಿನಲ್ಲಿ ಇರುವ ಮೇಲಾತಿನ ಅಮೃತ ಧಾರೆ ಮಾರ್ಗ ತೆರೆದು ಆನಂದಿಸುವ ಯೋಗ ಕಂಡುಕೊಂಡಿದ್ದಾರೆ. ಬಸವಾದಿ ಶರಣರು ಶಟಸ್ಥಲ ಸಾಧನೆ ಮಾಡಲು ಯೋಗಾಭ್ಯಾಸವು ಮುಖ್ಯ ಎಂದು ಸವಿಸ್ತಾರವಾಗಿ ಪ್ರಸ್ತುತ ಪಡಿಸುತ್ತಾರೆ, ಆದರಿಂದ ಭಕ್ತ ಸ್ಥಲದಿಂದ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗ ಶರಣ ಮತ್ತು ಐಕ್ಯ ಸ್ಥಳಕ್ಕೆ ಹೋಗಿ ಶರಣರು ಜೀವಂತ ಇದ್ದಾಗ ಬಯಲಲ್ಲಿ ಬಯಲಾಗುತ್ತಾರೆ, ಆತ್ಮ ಪರಮಾತ್ಮ ಮಿಲನ ಆಗಿ ಐಕ್ಯ ಸ್ಥಳ ಸೇರುತ್ತಾರೆ ಎಂದು ವಚನಗಳ ಮೂಲಕ ಬಹು ಮಾರ್ಮಿಕವಾಗಿ ತಿಳಿಸಿ ಹೇಳುತ್ತಾರೆ.

ಇಡೀ ವಿಶ್ವದಲ್ಲಿ ಬಸವಣ್ಣ ಮಾತ್ರ ಜಾತಿ ಲಿಂಗ ವರ್ಣ ವರ್ಗ ಭೇದಕ್ಕಾಗಿ ಹೋರಾಟ ಮಾಡಿದ್ದ ಏಕೈಕ ಮತ್ತು ಪ್ರಥಮ ವ್ಯಕ್ತಿ ಎಂದು ವಚನ ಸಾಹಿತ್ಯ ಮೂಲಕ ತಮ್ಮ ಜ್ಞಾನ ಮೂಲಕ ಘೋಷಣ ಮಾಡುತ್ತಾರೆ.ಜಗತ್ತಿನಲ್ಲಿ ಬಸವಣ್ಣ ಮಾತ್ರ ಏಕದೇವೋಪಾಸನೆಯನ್ನು ಕಠೋರವಾಗಿ ಜಾರಿಗೆ ತಂದಿದ್ದಾರೆ, ಕಾಯಕ ಮುಖಾಂತರ ಕರ್ಮಸಿದ್ಧಾಂತವನ್ನು ತಿರಸ್ಕರಿಸಿದ್ದಾರೆ, ಕಾಯಕ ಮತ್ತು ದಾಸೋಹವನ್ನು ಈ ಜಗತ್ತಿಗೆ ಕೊಟ್ಟ ಬಹು ದೊಡ್ಡ ಕೊಡುಗೆ ಎಂದು ಪ್ರಚಾರ ಮಾಡುತ್ತಾರೆ. ಬಸವಾದಿ ಶರಣರ ಯಾವುದೇ ವಚನ ಅರ್ಥ ಆಗದಿದ್ದರೆ ಬೆಲ್ದಾಳ ಶರಣರನ್ನು ವಿಚಾರಿಸಿದಾಗ ಕೂಡಲೇ ಅದನ್ನು ನಿರ್ವಚನ ಮಾಡಿ ತಿಳಿಸಿ ಹೇಳುತ್ತಾರೆ. ಇದೆಲ್ಲ ಒಬ್ಬ ಕಡಿಮೆ ಶಿಕ್ಷಣ ಪಡೆದ ವ್ಯಕ್ತಿಗೆ ಸಾಧ್ಯ ಆಗಿದ್ದು ಕೇವಲ ಬಸವಾದಿ ಶರಣರ ವಚನಗಳು ಮತ್ತು ಬಸವದಿಂದ ಸಾಧ್ಯ. 

ಬಸವಕಲ್ಯಾಣದಲ್ಲಿ ಬಸವ ಮಹಾಮನೆ ಸ್ಥಾಪನೆ ಮಾಡಿದ್ದಾರೆ ಹಾಗು ಐಕ್ಯತಾ ಸಮಾವೇಶಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಶಾಂತಿ ಮತ್ತು ಭಾತೃತ್ವ ನೆಲೆಗೊಳಲ್ಲೂ ಶ್ರಮ ವಹಿಸುತ್ತಿದ್ದಾರೆ. ನೀಲಾಂಬಿಕೆ ಬಸವ ಯೋಗಶ್ರಮ ಸ್ಥಾಪನೆ ಮಾಡಿ ವರ್ಷಕ್ಕೆ ಮೂರು ದಿವಸ ಯೋಗ ಶಿಬಿರ ಹಮ್ಮಿಕೊಳ್ಳುತ್ತಾರೆ. ನಾಡಿನ ಮತ್ತು ಪರ ರಾಜ್ಯದ ಶರಣು ಶರಣೆಯರು ಯೋಗ ಶಿಬಿರದಲ್ಲಿ ಭಾಗವಹಿಸಿ ಯೋಗ ಅಭ್ಯಾಸ ಮಾಡುತ್ತಾರೆ.

ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ ಅದರಲ್ಲಿ ಮುಖ್ಯವಾದವು ವಚನ ತತ್ವ ಸಾರ, ಕರುಳ ಕಲೆ, ಇಷ್ಟಲಿಂಗಾರ್ಚನೆ ವಿಧಾನ, ಬಸವಣ್ಣನವರಿಂದಲೇ ಇಷ್ಟಲಿಂಗ, ಶಟಸ್ಥಲ ಸಂಪತ್ತು, ಶರಣರ ಬೆಡಗಿನ ಬೆಳಕು, ಬಸವ ತತ್ವ ಪ್ರದಿಪಿಕೆ, ವಚನ ತತ್ವ ಅನುಭವ, ಶಿವಯೋಗ ಸುಖ, ಶೂನ್ಯ ಸಂಪಾದನೆ ರಹಸ್ಯ ( ನಾಲ್ಕು ಸಂಪುಟ), ವಚನಗಳಲ್ಲಿ ಶಿವಯೋಗ ಸುಖ, ಹೀಗೆ ಹಲವಾರು ಪುಸ್ತಕ ಬರೆದಿದ್ದಾರೆ.

ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ದಿಂದ ಸಾಹಿತ್ಯ ಕ್ಷೇತ್ರದಲ್ಲಿ ಸೇವೆಗಾಗಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದರೆ, ಚಿತ್ರದುರ್ಗ ಮಠದಿಂದ ಕೊಡುವ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಹಲವಾರು ಸಂಘ ಸಂಸ್ಥೆಗಳು  ಹಲವಾರು ಪ್ರಶಸ್ತಿ ಬಿರುದು ಕೊಟ್ಟು ಸನ್ಮಾನ ಮಾಡಿದ್ದಾರೆ. ಇವರ ಬಗ್ಗೆ ವಿಧ್ಯಾರ್ಥಿ ಎಂ ಫಿಲ್ ಮಾಡಿದ್ದಾರೆ, ಮತ್ತೊಬ್ಬರು ಪಿಎಚ್ಡ್ ಮಾಡಿದ್ದು ದೊಡ್ಡ ಸಾಧನೆ. 

ಅವರಿಗೆ ವಚನ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಸರ್ವಾಧ್ಯಕ್ಷ ಮಾಡಿದ್ದು ಅವರ ಸಾಧನೆಗೆ ತಂದ ಗೌರವ, ಮತ್ತು ಇಂತಹ ವಿಷಮ ಸಂದಿಗ್ಧ ಸ್ಥಿತಿಯಲ್ಲಿ ಅವರನ್ನು ಅಧ್ಯಕ್ಷ ಮಾಡಿದಕ್ಕೆ ವಚನ ಸಾಹಿತ್ಯ ಪರಿಷತ್ ಸಮ್ಮೇಳನಕ್ಕೆ ಒಂದು ಮೆರಗು ಬಂದಂತಾಗಿದೆ.

-ಶ್ರೀಕಾಂತ ಸ್ವಾಮಿ ಬೀದರ, ಕರ್ನಾಟಕ ರಾಜ್ಯ ಸಂಚಾಲಕ, 

ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.

ಸಮನ್ವಯ ಸಂತ ತಾತನವರಿಗೆ ಸಂದ ಗೌರವ ಫೆಲೋಶಿಪ್

ದೇವದುರ್ಗ:ದರ್ಗಾ ಸೂಫಿ ಸಂತರ ಪರಂಪರೆಯ ಮುಂದುವರಿಕೆಯಾಗಿ ಶರಣರು,ದಾಸರು,ಸಂತರು, ಅನುಭಾವಿಗಳ ಪರಂಪರೆ ಜೊತೆಗೆ ಸರ್ವಧರ್ಮ, ಜಾತ್ಯತೀತ ನಿಲುವುಗಳ ಮೂಲಕ ಸಮನ್ವಯ ಸಂತರಾದ ಪೂಜ್ಯ ಸೈಯದ್ ಜಹೀರ್ ಪಾಷಾ ಖಾದ್ರಿ ಅವರ ಕಾರ್ಯ ಅನುಕರಣೀಯ ಎಂದು ಕಲಬುರಗಿ ಹಿರಿಯ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಅಭಿಪ್ರಾಯ ಪಟ್ಟರು


 ಹಜರತ್ ಸೈಯದ್ ಜಹೀರುದ್ದೀನ್ ಪಾಶಾ ಖಾದ್ರಿ ದರ್ಗಾದಲ್ಲಿ ಏರ್ಪಡಿಸಿದ ಸಮಸ್ತ ಭಕ್ತಾದಿಗಳು ಮತ್ತು ಜಿಲ್ಲಾ ಅಹಿಂದ ಸಹಯೋಗದಲ್ಲಿ ಏರ್ಪಡಿಸಿದ ಡಾ.ಬಿ. ಆರ್.ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್-೨೦೨೪
ಪುರಸ್ಕೃತರಾದ ಪೂಜ್ಯ ಶ್ರೀ ಸೈಯದ್ ಜಹೀರಪಾಶಾ ಖಾದ್ರಿ ಅವರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನ ನುಡಿ ಆಡುತ್ತಾ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ,ಸಾಂಸ್ಕೃತಿಕ ಕಾರ್ಯಗಳು ಮೂಲಕ ಜನ ಮಾನಸದ ಜನಪರ ನಿಲುವಿನ ತಾತನವರಾಗಿ ಅವರ ಸೇವೆಗೆ ಸಂದ ಪುರಸ್ಕಾರ ಎಂದು ಬಣ್ಣಿಸಿದರು.
          ಸಿಪಿಐ ಎನ್.ವೈ ಗುಂಡುರಾವ್‌ ಜ್ಯೋತಿ ಬೆಳಗಿ‌ಸಿ ಉದ್ಘಾಟಿಸಿ ತಾತನವರ ಕೊಡುಗೆ ಇಲ್ಲಿಯ ಸದ್ಭಕ್ತರಿಗೆ ಕೊಟ್ಟ ಕಾಣಿಕೆ ಭಕ್ತಿ ಭಾವದಿಂದ ಕೂಡಿದೆ ಎಂದರು.ರಾಜ್ಯ ಉಪಾಧ್ಯಕ್ಷ ರೈತ ಸಂಘದ ಲಕ್ಷ್ಮಿಕಾಂತ ಪಾಟೀಲ,ಮಾತನಾಡಿದರು.ಪುರಸಭೆ ಮುಖ್ಯಾಧಿಕಾರಿ  ಹಂಪಣ್ಣ, ಜಿಲ್ಲಾ ಅಹಿಂದ ಸಂಚಾಲಕ ಮಾನಶಯ್ಯ ನಾಯಕ,ಪುರಸಭೆ ಸದಸ್ಯ ಮಾನಪ್ಪ ಮೇತ್ರಿ,ಉಪಸ್ಥಿತಿ
ಅಧ್ಯಕ್ಷತೆಯನ್ನು ಎಚ್.ಪಿ.ಜಡ್ ದ ಸೈಯದ್ ಭಾಷಾ ಸಾಬ್ ವಹಿಸಿದ್ದರು.ಮರಡಿ ಸಣ್ಣ ಫಕೀರ ಸಾಹೆಲಿನ ತಾತ,ಸಲ್ತಾನಪುರ,ಷ.ಬ್ರ.ಸಂಗಮನಾಥ ಸ್ವಾಮೀಜಿ‌ ಅಥಣಿ ಸಾನಿಧ್ಯವಹಿಸಿದ್ದರು
ಎಂ.ಡಿ ಇಸಾಕ್ ಗೌರಂಪೇಟೆ ಸ್ವಾಗತಿಸಿದರು ಪತ್ರಕರ್ತ ಬಸನಗೌಡ ಪಾಟೀಲ ಪ್ರಾಸ್ತಾವಿಕ ನುಡಿ ಆಡಿದರು.ಮಾನಿಶಯ್ಯ ನಿರೂಪಿಸಿದರು. ಡಾ.ಮಲ್ಲಯ್ಯ ಅತ್ತನೂರ,ಡಾ.ರಾಜಕುಮಾರ ಮಾಳಗೆ ಸೇರಿದಂತೆ ಅಪಾರ ಭಕ್ತ ಸಮುದಾಯ ಸೇರಿ ವಿಜೃಂಭಣೆಯಿಂದ ಸಮಾರಂಭ ಜರುಗಿತು. 

Saturday, 11 January 2025

ಅಖಾಡಕ್ಕಿಳಿದ BSY, ಪಕ್ಷ ಬಲಬಡಿಸಲು ರಾಜ್ಯ ಪ್ರವಾಸಕ್ಕೆ

 ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಭಿನ್ನಮತ, ಬಣ ರಾಜಕೀಯ ತಾರಕಕ್ಕೇರಿರುವ ನಡುವಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಖಾಡಕ್ಕಿಳಿದಿದ್ದು, ಶೀಘ್ರದಲ್ಲೇ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.

ಪಕ್ಷದ ಮಾಜಿ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಾರದಿಂದ ಪಕ್ಷದ ಮುಖಂಡರೊಂದಿಗೆ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಬಲವರ್ಧನೆ ಕುರಿತು ಸಮಾಲೋಚನೆ ನಡೆಸಲಾಗಿದೆ. ಮುಂದಿನ ವಾರದಿಂದ ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಭೇಟಿ ನೀಡಲಾಗುವುದು. ಪ್ರತಿ ದಿನ 2 ಜಿಲ್ಲೆಯಂತೆ ಪ್ರವಾಸ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರವಾಸದ ವೇಳೆ ಸಾರ್ವಜನಿಕ ಸಭೆ ನಡೆಸುವುದಿಲ್ಲ. ಬದಲಿಗೆ ಕಾರ್ಯಕರ್ತರನ್ನು ಸೇರಿಸಿ ಚರ್ಚೆ ನಡೆಸಲಾಗುವುದು. ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಸನ್ನದ್ದಗೊಳಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲಾಗುವುದು. ಸುಮಾರು 500-600 ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಗುವುದು. ದಿನಕ್ಕೆ ಎರಡು ಜಿಲ್ಲೆಗಳಿಗೆ ಭೇಟಿ ನೀಡುವ ಚಿಂತನೆಗಳಿದ್ದು, ಈ ಕುರಿತ ದಿನಾಂಕಗಳನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಹೇಳಿದರು.

ಇನ್ನು ಸಭೆ ಕುರಿತು ಮಾತನಾಡಿದ ವಿಜಯೇಂದ್ರ ಅವರು ಯಡಿಯೂರಪ್ಪ ಸೇರಿದಂತೆ ಪಕ್ಷದ ಹಿರಿಯ ನಾಯಕರು 2023 ರ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳು, ಪಕ್ಷದ ನಾಯಕರೊಂದಿಗೆ ಸಭೆ ನಡೆಸಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಿಗೆ ಮುಂಚಿತವಾಗಿ ಪಕ್ಷವನ್ನು ಬಲಪಡಿಸುವ ಕ್ರಮಗಳ ಕುರಿತು ಚರ್ಚಿಸಿದ್ದೇವೆಂದು ಹೇಳಿದರು.

ಇದು ಶಕ್ತಿ ಪ್ರದರ್ಶನ ಅಥವಾ ಯಾರನ್ನೂ ಪಕ್ಷದಿಂದ ಹೊರಹಾಕುವ ಉದ್ದೇಶದಿಂದ ನಡೆಸಿಲ್ಲ. ಪಕ್ಷವನ್ನು ಹೇಗೆ ಸರಿಪಡಿಸಬೇಕೆಂಬುದು ನನ್ನ ಕರ್ತವ್ಯವಬೂ ಆಗಿದೆ. ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚಿಸಿದ್ದೇವೆಂದು ಹೇಳಿದರು.

ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ರಾಜ್ಯವನ್ನು ಅಧೋಗತಿಗೆ ತೆಗೆದುಕೊಂಡು ಹೋಗುತ್ತಿದೆ. ರಾಜ್ಯವು ಅಭಿವೃದ್ಧಿ ಶೂನ್ಯವಾಗಿದೆ. ಬಾಣಂತಿಯರು, ನವಜಾತ ಶಿಶುಗಳ ಸರಣಿ ಸಾವು ಸಂಭವಿಸುತ್ತಿದೆ. ಭ್ರಷ್ಟಾಚಾರ, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದೆ. ಈ ಸರ್ಕಾರದ ಬಗ್ಗೆ ರಾಜ್ಯದ ಜನ ಬೇಸತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರು ಕೂಡ ಮುಖ್ಯಮಂತ್ರಿಗಳ ಬಗ್ಗೆ, ಆಡಳಿತ ಪಕ್ಷದ ಬಗ್ಗೆ ಬೇಸತ್ತಿದ್ದಾರೆಂದು ಹೇಳಿದರು.

ಕಾಂಗ್ರೆಸ್‌ನ ಡಿನ್ನರ್‌ ಪಾಲಿಟಿಕ್ಸ್‌ ಬಗ್ಗೆ ಮಾತನಾಡಿ, ಡಿಕೆ ಶಿವಕುಮಾರ್‌ ಅವರು ಬೆಳಗಾವಿಯ ಅಧಿವೇಶನದಲ್ಲಿ ಒಂದು ಮಾತು ಹೇಳಿದ್ದಾರೆ. ಎಸ್‌ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸ್ಥಾನ ಸಿಗದಿದ್ದ ವೇಳೆ ಅಧಿಕಾರ ಸಿಗದಿದ್ದರೆ ಒದ್ದು ಕಿತ್ಕೋಬೇಕು ಎಂದು ಅವರ ಗುರುಗಳು ಹೇಳಿದ್ದರು ಎಂದು ಹೇಳಿದ್ದರು. ಅದನ್ನು 15 ವರ್ಷಗಳ ಬಳಿಕ ಡಿಕೆ ಶಿವಕುಮಾರ್‌ ಅವರು ಸದನದ ಒಳಗಡೆ ನೆನಪು ಮಾಡಿಕೊಂಡಿದ್ದಾರೆ. ಆ ಮಾತಿನ ಮರ್ಮ ನಿಮಗೂ ಗೊತ್ತಿದೆ. ಇದರ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಪವರ್‌ ಶೇರಿಂಗ್ ಫಾರ್ಮುಲಾ ಅಂತ್ಯಗೊಂಡಿದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ.

ಅರಮನೆ ಮೈದಾನದಲ್ಲಿ ಜ.14, 15 ರಂದು ಸಿದ್ದರಾಮೇಶ್ವರರ ಜಯಂತಿ ಉದ್ಘಾಟನೆಗೆ ಯಡಿಯೂರಪ್ಪ, ಸಮಾರೋಪದಲ್ಲಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: 852ನೇ ಶ್ರೀ ಗುರು ಸಿದ್ದರಾಮೇಶ್ವರ ಜಯಂತಿ ಈ ಬಾರಿ ಬೆಂಗಳೂರಿನಲ್ಲಿ ಅರಮನೆ ಆವರಣದಲ್ಲಿ ಜ.14 ಮತ್ತು 15ರಂದು ಎರಡು ದಿನಗಳ ಕಾಲ ಆಯೋಜನೆ ಮಾಡಲಾಗಿದೆ ಎಂದು ಜಯಂತಿ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಎನ್.ಸಿದ್ದರಾಮಪ್ಪ ಹೇಳಿದ್ದಾರೆ.

ಪ್ರೆಸ್ ಕ್ಲಬ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಯಂತಿಯ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಕರ್ಮಯೋಗಿ ಸಿದ್ಧರಾಮೇಶ್ವರರ ಜಯಂತಿಯನ್ನು ನೊಳಂಬ ಲಿಂಗಾಯಿತ ಸಂಘದಿಂದ ಪ್ರತಿ ವರ್ಷವೂ ಮಾಡಿಕೊಂಡು ಬರಲಾಗುತ್ತಿದೆ ಎಂದರು.


12ನೇ ಶತಮಾನದಲ್ಲಿ ಕೆರೆ ಕಟ್ಟೆಗಳನ್ನು ಕಟ್ಟಿಸುವ ಮೂಲಕ ತನ್ನದೇ ಆದ ಕಾಯಕ ಮಾಡುತ್ತಿದ್ದ ಸಿದ್ದರಾಮ, ಅಲ್ಲಮಪ್ರಭುಗಳಿಂದ ದೀಕ್ಷೆ ಪಡೆದು ಬಸವಾದಿ ಶಿವಶರಣರ ಜತೆಯಲ್ಲಿ ಶರಣ ತತ್ವಗಳನ್ನು ಅನುಷ್ಠಾನ ಮಾಡುತ್ತಿದ್ದ. ಅಂದಿನಿಂದಲೂ ಸಿದ್ದರಾಮನ ಭಕ್ತರು ಮತ್ತು ಅನುಯಾಯಿಗಳು ನಾಡಿನ ಉದ್ದಗಲಕ್ಕೂ ನೆಲೆಸಿದ್ದಾರೆ ಎಂದರು.
ನೊಳಂಬರು ಎಂದರೆ ಶ್ರಮಜೀವಿಗಳು. ರಾಜ್ಯದಲ್ಲಿ 12ನೇ ಶತಮಾನದಿಂದ 18ನೇ ಶತಮಾನದ ತನಕ ಸುಧೀಘವಾಗಿ ಆಳಿದ ಸಾಮಂತ ಮನೆತನಗಳಲ್ಲಿ ನೊಳಂಬ ಅರಸು ಮನೆತನವೂ ಒಂದು. ಈ ಸಂದರ್ಭದಲ್ಲಿ ನೊಳಂಬ ಸ್ಮರಣ ಸಂಚಿಕೆಯನ್ನು ಹೊರತರಲಾಗುತ್ತಿದೆ. ನೊಳಂಬ ಇತಿಹಾಸ ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದ್ದು, ನೊಳಂಬ ವೆಬ್ ಸೈಟ್ ಅನಾವರಣ ಮಾಡಲಾಗುವುದು ಎಂದರು.
14 ರಂದು ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆರಗೋಡಿ ರಂಗಾಪುರದ ಪೀಠಾಧ್ಯಕ್ಷ ಶ್ರೀ ಗುರು ಪರದೇಶಿ ಕೇಂದ್ರ ಸ್ವಾಮೀಜಿ, ಪಂಡಿತಾರಾಧ್ಯ ಸ್ವಾಮೀಜಿ,ಗೋಡೆಕೆರೆ ಸ್ವಾಮೀಜಿ, ಕುಪ್ಪೂರು ತಮ್ಮಡಿಹಳ್ಳಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ. ಮಾಜಿ ಎಂಪಿ ಜಿ.ಎಸ್.ಬಸವರಾಜು ಅಧ್ಯಕ್ಷತೆ ವಹಿಸಲಿದ್ದು, ಅರಣ್ಯ ಸಚಿವ ಈಶ್ವರ ಖಂಡ್ರೆ, ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
15ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಿಡ್ಲೇಹಳ್ಳಿ ಮಠದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ, ಬೆಟ್ಟದಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರೋ ಭಾಷಣ ಮಾಡಲದಿದಾರೆ. ಸಚಿವರಾದ ಎಂ.ಬಿ.ಪಾಟೀಲ್, ಭೈರತಿ ಸುರೇಶ್, ಶಾಸಕ ಶಾಮನೂರು ಶಿವಶಂಕರಪ್ಪ ಎವರು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.


ಇದೇ ಸಂದರ್ಭದಲ್ಲಿ ಸಾಹಿತ್ಯ ಗೋಷ್ಠಿ ಏರ್ಪಡಿಸಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತಿತರರು ಭಾಗವಹಿಸಲಿದ್ದಾರೆ. ಮಹಿಳಾ ಮತ್ತು ಕೃಷಿ ಗೋಷ್ಠಿಯನ್ನು ಏರ್ಪಡಿಸಲಾಗಿದೆ. ಎರಡೂ ದಿನಗಳು ಸಾಂಸ್ಕೃತಿಕ ಕಾರ್ಯಕ್ರಮ, ಇಷ್ಠಲಿಂಗಪೂಜೆ, ಲಿಂಗಧಾರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನೊಳಂಬ ಸಂಘದ ಮಾಜಿ ಅಧ್ಯಕ್ಷ ಕಾಮನಕೆರೆ ಶಶಿಧರ್, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಬೆಟ್ಟದಹಳ್ಳಿ ರೇಣುಕಾರಾಧ್ಯ, ವೈ.ಎಸ್.ಸಿದ್ದರಾಮೇಗೌಡ, ಎಚ್.ಆರ್. ಮಲ್ಲಿಕಾರ್ಜುನಯ್ಯ, ನೊಳಂಬ ಸಂಘದ ಕಾಮನಕೆರೆ ಶಶಿಧರ್, ಪದಾಧಿಕಾರಿಗಳಾದ ಎಚ್.ರಾಮಲಿಂಗಪ್ಪ, ರುದ್ರಪ್ಪ, ಎಸ್.ಆರ್.ನಟರಾಜ್, ಕುಬೇರಪ್ಪ, ಜಿ.ಎಸ್.ಧನಂಜೇಯ ಮತ್ತಿತರರು ಹಾಜರಿದ್ದರು.

ಬದುಕಿನ ಭವ್ಯತೆ ಅರಿತವರು ಸಿದ್ಧೇಶ್ವರ ಶ್ರೀಗಳು: ಸತ್ಯಂಪೇಟೆ


ಸಿದ್ಧೇಶ್ವರ ಸ್ಮರಣೆಯಲ್ಲಿ ಸ್ವರ ನಮನ

ಕಲಬುರಗಿ: ಅಧಿಕಾರ, ಅಂತಸ್ತು, ಸಂಪತ್ತು ಪ್ರಧಾನವಾದ ಬದುಕಿಗಿಂತ ನೆಮ್ಮದಿ ಪ್ರಧಾನ ಬದುಕು ಅತ್ಯುತ್ತಮ ಎಂದು ಹೇಳುತ್ತ ಮಾನವರನ್ನು ಜಗದ ಜಂಜಡದಿಂದ ಮೇಲೆತ್ತುವ ಪ್ರಯತ್ನ ಮಾಡುತ್ತಿದ್ದ ಸಿದ್ಧೇಶ್ವರ ಶ್ರೀಗಳು ನುಡಿದು ನಡೆದ ಬದುಕು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿದೆ ಎಂದು ಪತ್ರಕರ್ತ- ಸಾಹಿತಿ ಶಿವರಂಜನ ಸತ್ಯಂಪೇಟೆ ಹೇಳಿದರು.

ಸದ್ಗುರು ಕಲಾ ಸಂಸ್ಥೆ 14ನೇ ವಾರ್ಷಿಕೋತ್ಸವ ಹಾಗೂ ಶತಮಾನದ ಸಂತ ಸಿದ್ಧೇಶ್ವರ ಮಹಾಸ್ವಾಮಿಗಳ ದ್ವಿತೀಯ ಪುಣ್ಯ ಸ್ಮರಣೋತ್ಸವ ನಿಮಿತ್ತ ಇಲ್ಲಿನ ಶಿವಾಜಿ ನಗರದ ಶ್ರೀ ಬಸವಲಿಂಗೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಸ್ವರ ನಮನ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ಧೇಶ್ವರ ಶ್ರೀಗಳು ಬದುಕಿನ ದಿವ್ಯತೆ, ಭವ್ಯತೆಯನ್ನು ಅರಿತ ಶತಮಾನದ ಸಂತ ಎಂದು ಅಭಿಪ್ರಾಯಪಟ್ಟರು.

ಸಂಸಾರವನ್ನು ಅನುಭಾವದ ನೆಲೆಯಲ್ಲಿ ನೋಡಿದಾಗಲೇ ಜೀವನದ ಸೌಂದರ್ಯ ದರ್ಶನವಾಗುವುದು, ಸತ್ಯಂ, ಶಿವಂ, ಸುಂದರಂ, ಯಾವುದನ್ನು ತೆಗೆದು ಹಾಕಲು ಬರುವುದಿಲ್ಲವೋ ಅದುವೇ ಸತ್ಯ, ಮನಸ್ಸನ್ನು ತಿಕ್ಕಿ ತೊಳೆಯಬೇಕು, ಸತ್ಯ, ಸ್ಥಿರವಾಗಿರುವುದೇ ದೇವರು ಎಂಬ ಅವರ ಪ್ರವಚನದ ಮಾತುಗಳು ಜನರ ಬದುಕಿಗೆ ತಂಪು ಹಾಗೂ ಆತ್ಮಾನಂದ ನೀಡುವ ಸಾಧನಗಳಾಗಳಾಗಿವೆ ಎಂದು ವಿವರಿಸಿದರು.

ಬಸವಕಲ್ಯಾಣ ಗುಣತೀರ್ಥವಾಡಿ ಕಲ್ಯಾಣ ಮಹಾ ಮನೆಯ ಬಸಸವಪ್ರಭು ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ನೀಲಮ್ಮನ ಬಳಗದ ಜಿಲ್ಲಾ ಘಟಕದ ಅಧ್ಯಕ್ಷೆ ಜಯಶ್ರೀ ಚಟ್ನಳ್ಳಿ ಉಪನ್ಯಾಸ ನೀಡಿದರು. 

ಚಲನಚಿತ್ರ ಸಂಗೀತ ನಿರ್ದೇಶಕ ಅಮರ ಹಿರೇಮಠ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು. ಉದ್ದಿಮೆದಾರ ಸುಖದೇವ ಎಚ್. ಪೂಜಾರಿ, ಮಂಜುನಾಥ ಜಮಾದಾರ ವೇದಿಕೆಯಲ್ಲಿದ್ದರು.

ಸೂರ್ಯಕಾಂತ ಡುಮ್ಮಾ, ಬಸಯ್ಯ ಗುತ್ತೇದಾರ, ಸೈದಪ್ಪ ಸಪ್ಪನಗೋಳ್, ಸಂಗಮೇಶ ನೀಲಾ, ಭಗವಂತರಾವ ಕಣ್ಣೂರ ಬಸವಕುಮಾರ ಕೆಂಗನಾಳ ಮುಂತಾದವರು ಸ್ವರ ನಮನ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. 

ಬಂಡಯ್ಯ ಶಾಸ್ತ್ರೀ ನಿರೂಪಿಸಿದರು. ಶಿವಲಿಂಗಪ್ಪ ಕೆಂಗನಾಳ ಸ್ವಾಗತಿಸಿದರು. ವಿಜಯಲಕ್ಷ್ಮೀ ಕೆಂಗನಾಳ ವಂದಿಸಿದರು.‌ ಸುಪ್ರಿಯಾ ಸುತಾರ ವಚನ ನೃತ್ಯ ಮಾಡಿದರು. ಇದೇವೇಳೆಯಲ್ಲಿ ಶ್ರೀಗಳ ಸ್ಮರಣೋತ್ಸವ ನಿಮಿತ್ತ ಆಯೋಜಿಸಿದ್ದ ಪ್ರಬಂಧ ಹಾಗೂ ಗಾಯನ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

shodhavani Kannada Daily 11-01-2025

 

https://drive.google.com/file/d/1KFjk8ggB75Z0jic5AugmUNBEzYq8FehV/preview?

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...