ads

Search This Blog

Wednesday, 16 February 2022

ಬಂಜಾರ ಬುಡಕಟ್ಟು ಸಮುದಾಯದ ಕುಲಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರು ಸಿದ್ಧಿ ಪುರುಷರು

 ಬಂಜಾರ ಬುಡಕಟ್ಟು ಸಮುದಾಯದ ಕುಲಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರು ಸಿದ್ಧಿ ಪುರುಷರು

 ಭಾರತದ ನೆಲದಲ್ಲಿ ತಾಂಡವಾಡುತಿದ್ದ ಸಾಮಾಜಿಕ ಅಸಮಾನತೆ, ಧಾರ್ಮಿಕ ಕಂದಾಚಾರಗಳನ್ನು ಹೊಡೆದುರುಳಿಸಲು ಮಿಂಚಿನ ಬಳ್ಳಿಯಂತೆ ಧುತ್ತನೆ ಬೆಳಕು ನೀಡಿದವರು ಶಾಂತಿ ಸಮತಾ ದೂತ ಬುದ್ದ, ವಿಶ್ವ ಭಾತೃತ್ವ ವಚನ ರಚನಾಕಾರ ಬಸವಾದಿ ಪ್ರಮಥ ಶಿವ ಶರಣರು, ಸಾಮರಸ್ಯದ ಕೊಂಡಿ ಕನಕದಾಸರಾದಿ ಹರಿದಾಸರು ಮೌಢ್ಯದ ಮಾರಿ ವಿರುದ್ದ ಬಂಡೆತ್ತಿ; ನೊಂದ ಶೋಷಿತರಿಗೆ ಜೀವದನಿಯಾದವರು. ಹೀಗೆ ಈ ಭಕ್ತಿಯುಗದ ಮಹಾಸಂತರಾದ ಕಬೀರದಾಸ, ಗುರುನಾನಕ ನಂತರವು ನಿರಂಕುಶ ಪ್ರಭುತ್ವ ಮತ್ತು ಅವ್ಯವಸ್ಥೆಯ ವಿರುದ್ದ ಹೋರಾಟ ಮಾಡುವಲ್ಲಿ ಬುಡಕಟ್ಟು ಜನಾಂಗದ ಕೆಲವು ಮಹನೀಯರ ಹೆಸರು ಉಲ್ಲೇಖಿಸುವುದಾದರೆ ದೊಂಡಿಯ ವಾಘ, ಕನ್ನೇಶ್ವರ ರಾಯ, ಜುಂಜಪ್ಪ, ಸೇವಾಲಾಲ ಇವರುಗಳ ಜನಪರ ಕೈಂಕರ್ಯ ಅಮೂಲಾಗ್ರವಾದದ್ದು.

        ಹರಪ್ಪ ನಾಗರಿಕತೆಯಿಂದ ಬೆಳೆದು ಬಂದ ಬಂಜಾರಾ (ಲಂಬಾಣಿ) ಸಮುದಾಯದವರು ಸಹಸ್ರಾರು ವರ್ಷಗಳಿಂದ ಅಜ್ಞಾನ - ಅಂಧಕಾರದಲಲ್ಲಿ ತೊಳಲಿ ಕಾಡು ಮೇಡುಗಳಲ್ಲಿ ವಾಸಿಸುತಿದ್ದರು. ಸೇವಾಲಾಲರ ಪೂರ್ವಜರು ಉತ್ತರ ಭಾರತದಿಂದ ವಲಸೆ ಬಂದು ಪರಾಕ್ರಮಿ ರಾಜ ರಾಣಾ ಪ್ರತಾಪರ ವೀರಮರಣದ ನಂತರ ಕಾಡುವಾಸಿಗಳಾಗಿ; ಮೊಘಲರ ಸೈನ್ಯದೊಂದಿಗೆ ದಕ್ಷಿಣಕ್ಕೆ ಬಂದ ರಾಮಸಿ ರಾಮಾವತ್ (ರಾಠೋಡ) ಗೋತ್ರದ ರಾಮಜೀ ನಾಯಕರದು ಬಹುದೊಡ್ಡ ಸಂಸಾರ. ಅವರ ಹಿರಿಮಗ ಭೀಮಾ ನಾಯಕರವರ ಪತ್ನಿ ಧರ್ಮಿಣಿ ಬಾಯಿಯವರಿಗೆ ಹುಟ್ಟಿದ ಹಿರಿಯ ಕುಲಪತ್ರರೇ ಸಂತ ಸೇವಾಲಾಲರು.
     
           ತಮ್ಮ ಬಂಜಾರ ಬುಡಕಟ್ಟಿನ ಜನರಲ್ಲಿ ಧೈರ್ಯ, ಸಾಹಸ, ಆತ್ಮಸ್ಥೈರ್ಯವನ್ನು ಹುಟ್ಟುಹಾಕಿದ ವೀರ ವೀರಾಗಿ, ಕಾಲಜ್ಞಾನಿ ಸಂತ ಸೇವಾಲಾಲರ ಕಾಲಘಟ್ಟ, ಜನನ - ಅಮರ, ಜೀವನ ವೃತ್ತಾಂತದ ಕುರಿತು ಚಾರಿತ್ರಿಕ ಮೂಲಾಧಾರಗಳು ಖಚಿತವಾಗಿ ಲಭ್ಯವಾಗಿಲ್ಲ. ಆದಾಗ್ಯೂ ಮೌಖಿಕ ಕಥನ ಕವನಗಳು, ಲಾವಣಿಗಳು, ಭಜನಾ ಗೀತೆಗಳು, ಭೌಗೋಳಿಕ ಪ್ರದೇಶವನ್ನಾಧರಿಸಿ ಬೆಣ್ಣೆನಗರಿ ದಾವಣಗೆರೆ ಜಿಲ್ಲೆ, ಹೊನ್ನಾಳಿ (ನ್ಯಾಮತಿ) ತಾಲ್ಲೂಕಿನ ಬೆಳಗುತ್ತಿ ಹೊಬಳಿಯ 'ಸೂರಗೊಂಡನ ಕೊಪ್ಪ' (ಭಾಯಾಗಡ್, ಸೂರ ಖಂಡ) ದಲ್ಲಿ ೧೫ ಫೆಬ್ರವರಿ ೧೭೩೯ರಲ್ಲಿ ಜನಿಸಿದರೆಂದು ನಂಬಲಾಗಿದೆ. ಸೇವಾಲಾಲರ ತಂದೆ ಭೀಮಾ ನಾಯ್ಕ ಮಾತೆ ಧರ್ಮಿಣಿ ಬಾಯಿಯೆಂದು ಜನಪದ ಸಾಹಿತ್ಯ, ಧಾರ್ಮಿಕ ಆಚಾರಣೆಗಳಿಂದ ಖಾತರಿಪಡಿಸಲಾಗಿದೆ.

        ಭೀಮಾ ನಾಯ್ಕ ಮತ್ತು ಧರ್ಮಿಣಿ ಬಾಯಿ ದಂಪತಿಗಳಿ ಮದುವೆಯಾಗಿ ೧೨ ವರ್ಷಕಳೆದರು ಮಕ್ಕಳಾಗದ ಕಾರಣ ತಮಗೆ ಜನಿಸುವ ಹಿರಿಯ ಸಂತಾನವನ್ನು ಜಗನ್ಮಾತೆ ಮರಿಯಮ್ಮ ದೇವಿಯ ಸೇವೆಗೆ ನೀಡುವುದಾಗಿ ಹರಿಕೆ ಹೊತ್ತು ಜನ್ಮವಿತ್ತ ಕಂದನೆ ಸೇವಾಲಾಲರು. ಸೇವಾ ಹುಟ್ಟಿ ಬೆಳೆದು ೧೨ ವರ್ಷದವನಾದರೂ ದಂಪತಿಗಳು ತಾವು ಜಗನ್ಮಾತೆಗೆ ಕೊಟ್ಟ ಮಾತನ್ನು ಮರೆತುಬಿಟ್ಟರು. ಆಗ ದೇವಿ ಧರ್ಮಿಣಿಯವರ ಕನಸಿನಲ್ಲಿ ಬಂದು ತಾವು ಹರಿಕೆ ತಿರಿಸಬೇಕಾಗಿರುವುದರ ಕುರಿತು ನೆನಪಿಸಿದರು. ಆಗ ಧರ್ಮಣಿ ಸಹಜ ಪುತ್ರ ವ್ಯಾಮೋಹದಿಂದ ಅಲ್ಲಗಳೆಯುತ್ತಾರೆ. ಆಗ ದೇವಿ ನೆರವಾಗಿ ಸೇವಾರ ಜೊತೆ ಭೂತಕಾಲದ ವೃತ್ತಾಂತವನ್ನು ಹೇಳಿದರೂ ಶಿವನ ಆರಾಧಕರಾಗಿದ್ದ ಸೇವಾಲಾಲರು ಮರಿಯಮ್ಮ ದೇವಿಯನ್ನು ಪೂಜಿಸಲು ನಿರಾಕರಿಸುತ್ತಾರೆ. ಆಗ ದೇವಿ ಇಡಿ ಪರಿವಾರವನ್ನು ಬಲಿ ತೆಗೆದುಕೊಳ್ಳುವುದಾಗಿ ಶಪತ ಗೈದು; ಕುಟುಂಬದಲ್ಲಿ ರೋಗ - ರುಚಿನ, ಸಾವು - ನೋವು ತಂದಿಡುತ್ತಾಳೆ. ಬೇರೆ ದಾರಿ ಕಾಣದೆ ಸೇವಾಲಾಲರು ಮರಿಯಮ್ಮ ದೇವಿಯ ಭಕ್ತರಾಗಿ ಆರಾಧನೆಗೆ ಮುಂದಾಗುತ್ತಾರೆ. ಕಾಲಗತಿಯಲ್ಲಿ ಹತ್ತಾರು ವರ್ಷಗಳವರೆಗೆ ಮರಿಯಮ್ಮನ ಸೇವೆಗೆ ತೊಡಗಿಸಿಕೊಂಡ ಸೇವಾಲಾಲರು ಮಹಾನ ಸಾಧಕರಾಗಿ ಮೆರೆಯುತ್ತಾರೆ. ಐತಿಹ್ಯದ ಪ್ರಕಾರ ದೇವಿಯೊಡ್ಡುವ ಕಠಿಣಾತಿ ಕಠಿಣ ಪರೀಕ್ಷೆಗಳನ್ನು ಗೆದ್ದು  ಮಹಾರಾಷ್ಟ್ರದ ವಾಸಿಮ್ ಜಿಲ್ಲೆಯ ಅಕ್ಕೋಲ ತಾಲ್ಲೂಕಿನ ಸಮೀಪದಲ್ಲಿರುವ ಪೋಹರಾಗಢ ಎಂಬಲ್ಲಿ ಐಕ್ಯರಾದರು. ಈಗ ಅಲ್ಲಿ ಸೇವಾಲಾಲ ಮತ್ತು ದೇವಿ ಮರಿಯಮ್ಮಳ ಬೃಹತ್ ಮಂದಿರವಿದ್ದು; ಅದು ಸಮಸ್ತ ಬಂಜಾರಿಗರ ಪುಣ್ಯಕ್ಷೇತ್ರವಾಗಿದೆ.

            ಬಾಲ ಬ್ರಹ್ಮಚಾರಿ ಸೇವಾಲಾಲರು ಬಡತನದ ಮನೆತನದಲ್ಲಿ ಹುಟ್ಟಿರುವುದರಿಂದ ಮೂಲ ಕೆಲಸವಾದ ಗೋವುಗಳನ್ನು ಕಾಯುತ್ತಾ; ಹುಲ್ಲನ್ನು ಕೊಯ್ದು ತಂದು ದನಗಳಿಗೆ ಹಾಕುವ ಕೆಲಸವನ್ನು ಆನಂದಿಂದ ಮಾಡುತಿದ್ದರು. ಶಿವನ ಪರಮ ಭಕ್ತರಾಗಿದ್ದ ಸೇವಾಲಾಲರು ಪ್ರಕೃತಿಯ ಮಡಿಲಲ್ಲಿ ಶಿವನ ಧ್ಯಾನದಲ್ಲಿ ಉಲ್ಲಾಸ ಭರಿತರಾಗಿರುತ್ತಿದ್ದರು. ಮುಂದೆ ದೇವಿಯ ಪ್ರಭಾವಕೊಳಗಾಗಿ ಧ್ಯಾನ, ತಪಸ್ಸು, ಕೃಪೆಯಿಂದ ಪಡೆದ ದೈವಿ ಶಕ್ತಿಯನ್ನು ಸಂತಾನ ಹೀನರಿಗೆ ಸಂತಾನ ಭಾಗ್ಯ ನೀಡಲು, ಬೇಡಿ ಬಂದವರಿಗೆ ವ್ಯಾದಿಗಳ ನಿವಾರಣೆ ಮಾಡಲು, ಹಸಿದವರಿಗೆ ಅನ್ನ ಹಾಕಲು ಹೀಗೆ ಜನೋಪಕಾರಿ ಕಾರ್ಯಗಳಿಗೆ ಬಳಸಿದರು. ತಮ್ಮ ಪವಾಡಗಳಿಂದ ಕೆಸರನ್ನು ಹುಗ್ಗಿ - ಪಾಯಸವನ್ನಾಗಿ ಮಾರ್ಪಡಿಸಿ; ನೀರನ್ನು ತುಪ್ಪವಾಗಿಸಿ ಯಜ್ಞ - ಯಾಗಾದಿಗಳನ್ನು ಮಾಡುವುದು; ಬಂಡೆಗಲ್ಲು ಗಳನ್ನು ನಗಾರಿಯಾಗಿ ಬಾರಿಸುವುದು ಮಾಡುತ್ತ ಪವಾಡ ಪುರುಷರೆಂದು ಜನರಲ್ಲಿ ನಂಬಿಕೆ ಬೀಜ ಬಿತ್ತಿದರು.

          ಮುಂಬೈಯಿಯ ಸ್ಮಿತ್ ಭಾವುಚಾ ಎಂಬ ಸ್ಥಳದಲ್ಲಿ ಪೋರ್ಚುಗೀಸರ್ ಹಡಗು ಸಿಕ್ಕಿಹಾಕಿಕೊಂಡಿತ್ತು. ಇದನ್ನು ಸೇವಾಲಾಲರು ಜಾಣತನದಿಂದ ದಡ ಸೇರಿಸಿದ ವೀರತನಕ್ಕಾಗಿ ಇವರಿಗೆ ಮುತ್ತಿನ ಹಾರವವನ್ನು ಕಾಣಿಕೆಯನ್ನಾಗಿ ನೀಡಿದ್ದರು; ಹಾಗಾಗಿ ಇವರನ್ನು 'ಮೋತಿವಾಳೊ', 'ಲಾಲ್ ಮೋತಿ', 'ಗಾದಿವಾಳೊ' ಅಂತ ಭಕ್ತರು ಅಭಿಮಾನದಿಂದ ಕರೆಯುತ್ತಾರೆ. ಇವರ ದೈವಿ ಶಕ್ತಿ ತಿಳಿದು ನಿಜಾಮರು ಅರಮನೆಗೆ ಕರೆದು ಪಾದಪೂಜೆಯನ್ನು ಮಾಡಿ, ಕಾಣಿಕೆಯನ್ನು ನೀಡಿ, ನೆಲೆಯೂರಲು ಒಂದಿಷ್ಟು ಜಾಗ ಬಂಜಾರರಿಗೆ ನೀಡಿದ್ದರು. ಆ ಪ್ರದೇಶ 'ಬಂಜಾರ ಹಿಲ್ಸ', 'ಮಹಾರಾಜ ಗಂಜ' ಎಂದು ಕರೆಯಲ್ಪಟ್ಟಿದೆ.

        ಸೇವಾಲಾಲರು ಕಾಲಾನಂತರದಲ್ಲಿ ಮಹಾಸಾಧಕನಾಗಿ, ವೀರ ವೈರಾಗಿಯಾಗಿ, ಆಜನ್ಮ ಬ್ರಹ್ಮಚಾರಿಯಾಗಿ ದೇವಿಯ ಭಕ್ತರಾಗಿ, ಭೂಲೋಕದ ಎಲ್ಲಾ ಭಕ್ತಾದಿಗಳಿಗೆ ಗುರುವಾಗಿ ತನ್ನ ನಂಬಿದವರ ಸಂಸಾರವನ್ನು ಉದ್ಧರಿಸುತ; ಅಲ್ಲಲ್ಲಿ ಗುರುಪೀಠ, ಶಕ್ತಿಪೀಠ, ಮಠ - ಮಂದಿರಗಳನ್ನು ಕಟ್ಟಿಸುತ್ತ, ಕರ್ನಾಟಕ ಸೇರಿದಂತೆ ದೇಶದ ಇತರೆ ಪ್ರದೇಶಗಳಿಗೆ ಪರ್ಯಟನೆ ಮಾಡುತ್ತ, ಭಕ್ತಗಣದ ದುಃಖ - ದುಮ್ಮಾನಗಳನ್ನು ಪರಿಹರಿಸುತ್ತ, ಲೋಕ ಕಲ್ಯಾಣ ಮಾಡುತ್ತ, ಆಧ್ಯಾತ್ಮದಲ್ಲಿ ಪರಾಕಾಷ್ಠೆ ಮುಟ್ಟಿ ನಂಬಿದವರ ಮನದಲ್ಲಿ ಸದಾ ಸ್ಮರಣೀಯರಾಗಿದ್ದಾರೆ.
   
         ಜನರಲ್ಲಿರುವ ಮಿಥ್ಯಾಚರಣೆಗಳನ್ನು ತೊಲಗಿಸಿ ಅವರ ಬದುಕನ್ನು ಉದ್ಧರಿಸಿದ ಕಾಲಜ್ಞಾನಿ ಅವರು. ಇಂದು ಬಂಜಾರರು ಸಾಂಸ್ಕೃತಿಕ ನೆಲೆಯಲ್ಲಿ ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ಈ ಮಹಾನುಭಾವರ ಸತ್ಕಾರ್ಯಗಳೇ ಕಾರಣ. ಹೀಗಾಗಿ ಬಂಜಾರ ಸಮುದಾಯದಲ್ಲಿ ಸೇವಾಲಾಲರು ಒಬ್ಬ ಶ್ರೇಷ್ಠ ದಾರ್ಶನಿಕರಾಗಿ ಮತ್ತು ಸಾಂಸ್ಕೃತಿಕ ನಾಯಕರಾಗಿ ಚಿರಸ್ಥಾಯಿಯಾಗಿದ್ದಾರೆ. ಮನುಕುಲಕ್ಕೆ ಸಂತ ಸೇವಾಲಾಲರು ಬೋಧಿಸಿದ ಹಿತೋಪದೇಶಗಳಲ್ಲಿ ಕೆಲವನ್ನು ಈ ಕೆಳಗಾಣಿಸಿದಂತೆ ಉಲ್ಲೇಖಿಸಬಹುದು:

* "ಬೋಲ ಜೋ ಮತ್ ಲುಚಿ (ಲಾಟಿ) ಲಬಾಡಿ"

ಅರ್ಥ: ಸುಳ್ಳನ್ನು ಯಾರು ನುಡಿಯ ಬಾರದು; ಸತ್ಯವನ್ನೆ ನುಡಿಯಿರಿ ಎಂದು ಜಗತ್ತಿಗೆ ಸಾರಿದರು.

* ಮತ ಲೋ ಜೀವ; ಕಾಡೋ ಮತ್ ಕೋಯಿ ಲೋಯಿ"

ಅರ್ಥ: ಯಾವುದೆ ಜೀವಿಯನ್ನು ಕೋಲ್ಲಬೇಡಿ; ಅದರ ರಕ್ತವನ್ನು ತೆಗೆಯಬೇಡಿ (ಅಹಿಂಸೆಯನ್ನು ಪ್ರತಿಪಾದಿಸಿದರು)

* ಸೇನ ಸಾಯಿ ವೇಸ್, ಜೀವ ಜನಗಾನಿನ ಸಾಯಿವೇಸ್, ಖೂಂಟಾ ಮುಂಗ್ರಿನ್ ಸಾಯಿ ವೇಸ್, ಕೊರೆ – ಗೋರೂನ ಸಾಯಿವೇಸ್, ಕೀಡಾ ಮಕೋಡಾನ ಸಾಯಿವೇಸ್.

ಅರ್ಥ : ಮನುಷ್ಯನಿಗೆ ಮಾತ್ರವಲ್ಲದೆ ಜೀವ
ಜಂತುಗಳಿಗೆ ಕ್ರೀಮಿ ಕೀಟಗಳಿಗೆ ಒಳ್ಳೆದಾಗಲಿ ಎಂದು (ಇಲ್ಲಿ ತನ್ನ ಸ್ವಾರ್ಥಕ್ಕಿಂತ ಇಡಿ ಭೂಮಿಗೆ ಒಳ್ಳೆಯದನ್ನು ಬಯಸುತ್ತರೆ)

* ಚೋರಿ ಮತ್ತ್ ಕರೋ, ಕರಿಯೇ ಚೋರಿ ಖಾಂಯೆ ಕೋರಿ, ಹಾತೆ ಮಾಯಿ ಹತಕಡಿ, ಪಗಮಾಯಿ ಬೇಡಿ
ಡೋರಿ ಡೋರಿ ಹಿಂಡಿಯೇ…..,

ಅರ್ಥ : ಕಳ್ಳತನ ಮಾಡಬೇಡಿ, ಕಳ್ಳತನ ಮಾಡುವವರನ್ನು ಬೇಡಿ ಹಾಕಿ ಓಡಾಡಿಸುತ್ತರೆ ಎಂದು ಎಚ್ಚರಿಸಿದ್ದಾರೆ.

* ” ದಾರೂ, ಗಾಂಜಾ ಮತ್ ಪೀವೋ”

ಅರ್ಥ : ಮಾದಕ ದ್ರವ್ಯ ವ್ಯಸನ ಮುಕ್ತರಾಗಿ.

* “ಜೋರ್, ಜುಲೂಮ್ ಗೋರ್ ಗರೀಬ ದಾಂಡನ್ ಖಾಯೇ, ವೋರಿ ಸಾತ್ ಪೀಡೀ ಪರ ದಾಗ್ ಲಗ ಜಾಯೆ, ವಂಶ ಪರ ದೀವೋ ಕೋನಿ ರೀಯೇ.

ಅರ್ಥ : ಬಡವರಿಗೆ ಎಂದು ದಂಡ ಹಾಕಬೇಡಿ. ದಂಡ ಹಾಕಿದರೇ ಅವರ ವಂಶವಳಿ ನರಳಿತು. ಅಂದಕಾರ ಕವಿದಿತು. ಅವರ ಬಗ್ಗೆ ಕನಿಕರವಿರಲಿ ಎಂದಿದ್ದಾರೆ.

* ಕಾಮಾ, ಕ್ರೋಧೇರಿ, ಧೂಣಿ ಬಾಳೋ, ಸತ್ಯ, ಧರ್ಮೆನ ಆಂಗ ಚಲಾವೋ, ಭೂಕ ಜೇನ ಅನ್ನ ಖೊರಾವೋ, ತರಸ ಜೇನ ಪಾಣಿ ಪಿರಾವೋ.

ಅರ್ಥ : ತಮ್ಮ ಜೀವನದಲ್ಲಿ ಅರಿಷಡ್ ವರ್ಗಗಳನ್ನು ಸುಟ್ಟು ಹಾಕಿ. ಸತ್ಯ ಧರ್ಮವನ್ನು ಮುನ್ನೆಡೆಸಿ. ಹಸಿದವರಿಗೆ ಅನ್ನ ನೀಡಿ. ಬಾಯಾರಿದವರಿಗೆ ನೀರು ಪ್ರಾಪ್ತಿ ಮಾಡಿ

          ಭಕ್ತಿ ಭಂಡಾರಿ ಬಸವಣ್ಣನವರ ತತ್ವಗಳಿಗೂ ಸೇವಾಲಾಲರ ತತ್ವಗಳಿಗೂ ವ್ಯತ್ಯಾಸವೆನಿಲ್ಲಾ. ಒಂದೇ ದೀಪದ ಬೆಳಕು ಹೊಳಪಿನ ಅರ್ಥವನ್ನು ನೀಡಬಹುದಾಗಿದೆ. ಆದರೆ ಬಸವಣ್ಣನವರ ತತ್ವ ಸಾರುವುದಕ್ಕೆ ಸರ್ಕಾರದ ಸಹಕಾರ ಎಷ್ಟಿದೆಯೋ; ಅಷ್ಟೇ  ಮಹತ್ವ ಪೂಜ್ಯನೀಯ ಸೇವಾಲಾಲರ ತತ್ವಗಳಿಗೂ ಒತ್ತುನೀಡಬೇಕು ಎಂಬುದು ಈ ಲೇಖನದ ಸದಾಶಯ. ನಾವೆಲ್ಲರೂ ಸೇರಿ ಇವರ ತತ್ವಾದರ್ಶಗಳ ಚಿಂತನ - ಮಂಥನವನ್ನು ದೇಶದ ಗಡಿ ದಾಟಿ ವಿಶ್ವಮಯವಾಗಿಸೋಣ.

          ಪ್ರತಿ ವರ್ಷ ಸೇವಾಲಾಲರ ಜಯಂತಿ ನಿಮಿತ್ಯ ಪ್ರತಿ ವರ್ಷ ೧೩, ೧೪, ೧೫ ಫೆಬ್ರವರಿಯಂದು ೩ ದಿನ ಅವರ ಜನ್ಮಕ್ಷೇತ್ರವಾದ ಸೂರಗೊಂಡನಕೊಪ್ಪದಲ್ಲಿ ಜಾತ್ರಾ ಉತ್ಸವ ನಡೆಯುತ್ತದೆ. ಸಾವಿರಾರು ಮಾಲಾಧಾರಿಗಳು ಭಾಯಾ ಮತ್ತು ಮರಿಯಮ್ಮ ದೇವಿಯ ದರ್ಶನ ಪಡೆಯುತ್ತಾರೆ. ಅಂಗಾಪೂಜೆ, ಅಭಿಷೇಕ, ಮಹಾ ಮಂಗಳಾರತಿ, ಉತ್ಸವ ಮೂರ್ತಿಗಳ ಪಲ್ಲಕ್ಕಿ ಮೆರವಣಿಗೆ, ಇರುಮುಡಿಗಳ ಸಮರ್ಪಣೆ, ಮಾಲಾ ವಿಸರ್ಜನೆ ಭಕ್ತಿ ಕಾರ್ಯ ವಿಜೃಂಭಣೆಯಿಂದ ನಡೆಯುತ್ತದೆ. ಭಕ್ತಾದಿಗಳಿಗೆ ಊಟ, ವಸತಿಯ ಸಕಲ ಸೌಕರ್ಯಗಳನ್ನು ಮಾಡಿಕೊಡುತ್ತಾರೆ. ಕರೋನಾ ಸೋಂಕಿನ ಕಾರಣ ಸೇವಾಲಾಲರ ೨೮೩ ನೇ ಜಯಂತಿಯನ್ನು ಸಾವಿರಾರು ಜನ ಸೇರಿ ಸಾಮೂಹಿಕವಾಗಿ ಮಾಡುವುದಕ್ಕೆ ತಡೆಹೇರಲಾಗಿದೆ.


     ಸುಹೇಚ ಪರಮವಾಡಿ
ಶ್ರೀ. ಸುಭಾಷ್ ಹೇ. ಚವ್ಹಾಣ, ಶಿಕ್ಷಕ ಸಾಹಿತಿಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಜುನಾಥ ನಗರ, ಹುಬ್ಬಳ್ಳಿ ಶಹರ, ಧಾರವಾಡ. 


No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...