ads

Search This Blog

Wednesday, 16 February 2022

ಬಂಜಾರ ಬುಡಕಟ್ಟು ಸಮುದಾಯದ ಕುಲಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರು ಸಿದ್ಧಿ ಪುರುಷರು

 ಬಂಜಾರ ಬುಡಕಟ್ಟು ಸಮುದಾಯದ ಕುಲಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರು ಸಿದ್ಧಿ ಪುರುಷರು

 ಭಾರತದ ನೆಲದಲ್ಲಿ ತಾಂಡವಾಡುತಿದ್ದ ಸಾಮಾಜಿಕ ಅಸಮಾನತೆ, ಧಾರ್ಮಿಕ ಕಂದಾಚಾರಗಳನ್ನು ಹೊಡೆದುರುಳಿಸಲು ಮಿಂಚಿನ ಬಳ್ಳಿಯಂತೆ ಧುತ್ತನೆ ಬೆಳಕು ನೀಡಿದವರು ಶಾಂತಿ ಸಮತಾ ದೂತ ಬುದ್ದ, ವಿಶ್ವ ಭಾತೃತ್ವ ವಚನ ರಚನಾಕಾರ ಬಸವಾದಿ ಪ್ರಮಥ ಶಿವ ಶರಣರು, ಸಾಮರಸ್ಯದ ಕೊಂಡಿ ಕನಕದಾಸರಾದಿ ಹರಿದಾಸರು ಮೌಢ್ಯದ ಮಾರಿ ವಿರುದ್ದ ಬಂಡೆತ್ತಿ; ನೊಂದ ಶೋಷಿತರಿಗೆ ಜೀವದನಿಯಾದವರು. ಹೀಗೆ ಈ ಭಕ್ತಿಯುಗದ ಮಹಾಸಂತರಾದ ಕಬೀರದಾಸ, ಗುರುನಾನಕ ನಂತರವು ನಿರಂಕುಶ ಪ್ರಭುತ್ವ ಮತ್ತು ಅವ್ಯವಸ್ಥೆಯ ವಿರುದ್ದ ಹೋರಾಟ ಮಾಡುವಲ್ಲಿ ಬುಡಕಟ್ಟು ಜನಾಂಗದ ಕೆಲವು ಮಹನೀಯರ ಹೆಸರು ಉಲ್ಲೇಖಿಸುವುದಾದರೆ ದೊಂಡಿಯ ವಾಘ, ಕನ್ನೇಶ್ವರ ರಾಯ, ಜುಂಜಪ್ಪ, ಸೇವಾಲಾಲ ಇವರುಗಳ ಜನಪರ ಕೈಂಕರ್ಯ ಅಮೂಲಾಗ್ರವಾದದ್ದು.

        ಹರಪ್ಪ ನಾಗರಿಕತೆಯಿಂದ ಬೆಳೆದು ಬಂದ ಬಂಜಾರಾ (ಲಂಬಾಣಿ) ಸಮುದಾಯದವರು ಸಹಸ್ರಾರು ವರ್ಷಗಳಿಂದ ಅಜ್ಞಾನ - ಅಂಧಕಾರದಲಲ್ಲಿ ತೊಳಲಿ ಕಾಡು ಮೇಡುಗಳಲ್ಲಿ ವಾಸಿಸುತಿದ್ದರು. ಸೇವಾಲಾಲರ ಪೂರ್ವಜರು ಉತ್ತರ ಭಾರತದಿಂದ ವಲಸೆ ಬಂದು ಪರಾಕ್ರಮಿ ರಾಜ ರಾಣಾ ಪ್ರತಾಪರ ವೀರಮರಣದ ನಂತರ ಕಾಡುವಾಸಿಗಳಾಗಿ; ಮೊಘಲರ ಸೈನ್ಯದೊಂದಿಗೆ ದಕ್ಷಿಣಕ್ಕೆ ಬಂದ ರಾಮಸಿ ರಾಮಾವತ್ (ರಾಠೋಡ) ಗೋತ್ರದ ರಾಮಜೀ ನಾಯಕರದು ಬಹುದೊಡ್ಡ ಸಂಸಾರ. ಅವರ ಹಿರಿಮಗ ಭೀಮಾ ನಾಯಕರವರ ಪತ್ನಿ ಧರ್ಮಿಣಿ ಬಾಯಿಯವರಿಗೆ ಹುಟ್ಟಿದ ಹಿರಿಯ ಕುಲಪತ್ರರೇ ಸಂತ ಸೇವಾಲಾಲರು.
     
           ತಮ್ಮ ಬಂಜಾರ ಬುಡಕಟ್ಟಿನ ಜನರಲ್ಲಿ ಧೈರ್ಯ, ಸಾಹಸ, ಆತ್ಮಸ್ಥೈರ್ಯವನ್ನು ಹುಟ್ಟುಹಾಕಿದ ವೀರ ವೀರಾಗಿ, ಕಾಲಜ್ಞಾನಿ ಸಂತ ಸೇವಾಲಾಲರ ಕಾಲಘಟ್ಟ, ಜನನ - ಅಮರ, ಜೀವನ ವೃತ್ತಾಂತದ ಕುರಿತು ಚಾರಿತ್ರಿಕ ಮೂಲಾಧಾರಗಳು ಖಚಿತವಾಗಿ ಲಭ್ಯವಾಗಿಲ್ಲ. ಆದಾಗ್ಯೂ ಮೌಖಿಕ ಕಥನ ಕವನಗಳು, ಲಾವಣಿಗಳು, ಭಜನಾ ಗೀತೆಗಳು, ಭೌಗೋಳಿಕ ಪ್ರದೇಶವನ್ನಾಧರಿಸಿ ಬೆಣ್ಣೆನಗರಿ ದಾವಣಗೆರೆ ಜಿಲ್ಲೆ, ಹೊನ್ನಾಳಿ (ನ್ಯಾಮತಿ) ತಾಲ್ಲೂಕಿನ ಬೆಳಗುತ್ತಿ ಹೊಬಳಿಯ 'ಸೂರಗೊಂಡನ ಕೊಪ್ಪ' (ಭಾಯಾಗಡ್, ಸೂರ ಖಂಡ) ದಲ್ಲಿ ೧೫ ಫೆಬ್ರವರಿ ೧೭೩೯ರಲ್ಲಿ ಜನಿಸಿದರೆಂದು ನಂಬಲಾಗಿದೆ. ಸೇವಾಲಾಲರ ತಂದೆ ಭೀಮಾ ನಾಯ್ಕ ಮಾತೆ ಧರ್ಮಿಣಿ ಬಾಯಿಯೆಂದು ಜನಪದ ಸಾಹಿತ್ಯ, ಧಾರ್ಮಿಕ ಆಚಾರಣೆಗಳಿಂದ ಖಾತರಿಪಡಿಸಲಾಗಿದೆ.

        ಭೀಮಾ ನಾಯ್ಕ ಮತ್ತು ಧರ್ಮಿಣಿ ಬಾಯಿ ದಂಪತಿಗಳಿ ಮದುವೆಯಾಗಿ ೧೨ ವರ್ಷಕಳೆದರು ಮಕ್ಕಳಾಗದ ಕಾರಣ ತಮಗೆ ಜನಿಸುವ ಹಿರಿಯ ಸಂತಾನವನ್ನು ಜಗನ್ಮಾತೆ ಮರಿಯಮ್ಮ ದೇವಿಯ ಸೇವೆಗೆ ನೀಡುವುದಾಗಿ ಹರಿಕೆ ಹೊತ್ತು ಜನ್ಮವಿತ್ತ ಕಂದನೆ ಸೇವಾಲಾಲರು. ಸೇವಾ ಹುಟ್ಟಿ ಬೆಳೆದು ೧೨ ವರ್ಷದವನಾದರೂ ದಂಪತಿಗಳು ತಾವು ಜಗನ್ಮಾತೆಗೆ ಕೊಟ್ಟ ಮಾತನ್ನು ಮರೆತುಬಿಟ್ಟರು. ಆಗ ದೇವಿ ಧರ್ಮಿಣಿಯವರ ಕನಸಿನಲ್ಲಿ ಬಂದು ತಾವು ಹರಿಕೆ ತಿರಿಸಬೇಕಾಗಿರುವುದರ ಕುರಿತು ನೆನಪಿಸಿದರು. ಆಗ ಧರ್ಮಣಿ ಸಹಜ ಪುತ್ರ ವ್ಯಾಮೋಹದಿಂದ ಅಲ್ಲಗಳೆಯುತ್ತಾರೆ. ಆಗ ದೇವಿ ನೆರವಾಗಿ ಸೇವಾರ ಜೊತೆ ಭೂತಕಾಲದ ವೃತ್ತಾಂತವನ್ನು ಹೇಳಿದರೂ ಶಿವನ ಆರಾಧಕರಾಗಿದ್ದ ಸೇವಾಲಾಲರು ಮರಿಯಮ್ಮ ದೇವಿಯನ್ನು ಪೂಜಿಸಲು ನಿರಾಕರಿಸುತ್ತಾರೆ. ಆಗ ದೇವಿ ಇಡಿ ಪರಿವಾರವನ್ನು ಬಲಿ ತೆಗೆದುಕೊಳ್ಳುವುದಾಗಿ ಶಪತ ಗೈದು; ಕುಟುಂಬದಲ್ಲಿ ರೋಗ - ರುಚಿನ, ಸಾವು - ನೋವು ತಂದಿಡುತ್ತಾಳೆ. ಬೇರೆ ದಾರಿ ಕಾಣದೆ ಸೇವಾಲಾಲರು ಮರಿಯಮ್ಮ ದೇವಿಯ ಭಕ್ತರಾಗಿ ಆರಾಧನೆಗೆ ಮುಂದಾಗುತ್ತಾರೆ. ಕಾಲಗತಿಯಲ್ಲಿ ಹತ್ತಾರು ವರ್ಷಗಳವರೆಗೆ ಮರಿಯಮ್ಮನ ಸೇವೆಗೆ ತೊಡಗಿಸಿಕೊಂಡ ಸೇವಾಲಾಲರು ಮಹಾನ ಸಾಧಕರಾಗಿ ಮೆರೆಯುತ್ತಾರೆ. ಐತಿಹ್ಯದ ಪ್ರಕಾರ ದೇವಿಯೊಡ್ಡುವ ಕಠಿಣಾತಿ ಕಠಿಣ ಪರೀಕ್ಷೆಗಳನ್ನು ಗೆದ್ದು  ಮಹಾರಾಷ್ಟ್ರದ ವಾಸಿಮ್ ಜಿಲ್ಲೆಯ ಅಕ್ಕೋಲ ತಾಲ್ಲೂಕಿನ ಸಮೀಪದಲ್ಲಿರುವ ಪೋಹರಾಗಢ ಎಂಬಲ್ಲಿ ಐಕ್ಯರಾದರು. ಈಗ ಅಲ್ಲಿ ಸೇವಾಲಾಲ ಮತ್ತು ದೇವಿ ಮರಿಯಮ್ಮಳ ಬೃಹತ್ ಮಂದಿರವಿದ್ದು; ಅದು ಸಮಸ್ತ ಬಂಜಾರಿಗರ ಪುಣ್ಯಕ್ಷೇತ್ರವಾಗಿದೆ.

            ಬಾಲ ಬ್ರಹ್ಮಚಾರಿ ಸೇವಾಲಾಲರು ಬಡತನದ ಮನೆತನದಲ್ಲಿ ಹುಟ್ಟಿರುವುದರಿಂದ ಮೂಲ ಕೆಲಸವಾದ ಗೋವುಗಳನ್ನು ಕಾಯುತ್ತಾ; ಹುಲ್ಲನ್ನು ಕೊಯ್ದು ತಂದು ದನಗಳಿಗೆ ಹಾಕುವ ಕೆಲಸವನ್ನು ಆನಂದಿಂದ ಮಾಡುತಿದ್ದರು. ಶಿವನ ಪರಮ ಭಕ್ತರಾಗಿದ್ದ ಸೇವಾಲಾಲರು ಪ್ರಕೃತಿಯ ಮಡಿಲಲ್ಲಿ ಶಿವನ ಧ್ಯಾನದಲ್ಲಿ ಉಲ್ಲಾಸ ಭರಿತರಾಗಿರುತ್ತಿದ್ದರು. ಮುಂದೆ ದೇವಿಯ ಪ್ರಭಾವಕೊಳಗಾಗಿ ಧ್ಯಾನ, ತಪಸ್ಸು, ಕೃಪೆಯಿಂದ ಪಡೆದ ದೈವಿ ಶಕ್ತಿಯನ್ನು ಸಂತಾನ ಹೀನರಿಗೆ ಸಂತಾನ ಭಾಗ್ಯ ನೀಡಲು, ಬೇಡಿ ಬಂದವರಿಗೆ ವ್ಯಾದಿಗಳ ನಿವಾರಣೆ ಮಾಡಲು, ಹಸಿದವರಿಗೆ ಅನ್ನ ಹಾಕಲು ಹೀಗೆ ಜನೋಪಕಾರಿ ಕಾರ್ಯಗಳಿಗೆ ಬಳಸಿದರು. ತಮ್ಮ ಪವಾಡಗಳಿಂದ ಕೆಸರನ್ನು ಹುಗ್ಗಿ - ಪಾಯಸವನ್ನಾಗಿ ಮಾರ್ಪಡಿಸಿ; ನೀರನ್ನು ತುಪ್ಪವಾಗಿಸಿ ಯಜ್ಞ - ಯಾಗಾದಿಗಳನ್ನು ಮಾಡುವುದು; ಬಂಡೆಗಲ್ಲು ಗಳನ್ನು ನಗಾರಿಯಾಗಿ ಬಾರಿಸುವುದು ಮಾಡುತ್ತ ಪವಾಡ ಪುರುಷರೆಂದು ಜನರಲ್ಲಿ ನಂಬಿಕೆ ಬೀಜ ಬಿತ್ತಿದರು.

          ಮುಂಬೈಯಿಯ ಸ್ಮಿತ್ ಭಾವುಚಾ ಎಂಬ ಸ್ಥಳದಲ್ಲಿ ಪೋರ್ಚುಗೀಸರ್ ಹಡಗು ಸಿಕ್ಕಿಹಾಕಿಕೊಂಡಿತ್ತು. ಇದನ್ನು ಸೇವಾಲಾಲರು ಜಾಣತನದಿಂದ ದಡ ಸೇರಿಸಿದ ವೀರತನಕ್ಕಾಗಿ ಇವರಿಗೆ ಮುತ್ತಿನ ಹಾರವವನ್ನು ಕಾಣಿಕೆಯನ್ನಾಗಿ ನೀಡಿದ್ದರು; ಹಾಗಾಗಿ ಇವರನ್ನು 'ಮೋತಿವಾಳೊ', 'ಲಾಲ್ ಮೋತಿ', 'ಗಾದಿವಾಳೊ' ಅಂತ ಭಕ್ತರು ಅಭಿಮಾನದಿಂದ ಕರೆಯುತ್ತಾರೆ. ಇವರ ದೈವಿ ಶಕ್ತಿ ತಿಳಿದು ನಿಜಾಮರು ಅರಮನೆಗೆ ಕರೆದು ಪಾದಪೂಜೆಯನ್ನು ಮಾಡಿ, ಕಾಣಿಕೆಯನ್ನು ನೀಡಿ, ನೆಲೆಯೂರಲು ಒಂದಿಷ್ಟು ಜಾಗ ಬಂಜಾರರಿಗೆ ನೀಡಿದ್ದರು. ಆ ಪ್ರದೇಶ 'ಬಂಜಾರ ಹಿಲ್ಸ', 'ಮಹಾರಾಜ ಗಂಜ' ಎಂದು ಕರೆಯಲ್ಪಟ್ಟಿದೆ.

        ಸೇವಾಲಾಲರು ಕಾಲಾನಂತರದಲ್ಲಿ ಮಹಾಸಾಧಕನಾಗಿ, ವೀರ ವೈರಾಗಿಯಾಗಿ, ಆಜನ್ಮ ಬ್ರಹ್ಮಚಾರಿಯಾಗಿ ದೇವಿಯ ಭಕ್ತರಾಗಿ, ಭೂಲೋಕದ ಎಲ್ಲಾ ಭಕ್ತಾದಿಗಳಿಗೆ ಗುರುವಾಗಿ ತನ್ನ ನಂಬಿದವರ ಸಂಸಾರವನ್ನು ಉದ್ಧರಿಸುತ; ಅಲ್ಲಲ್ಲಿ ಗುರುಪೀಠ, ಶಕ್ತಿಪೀಠ, ಮಠ - ಮಂದಿರಗಳನ್ನು ಕಟ್ಟಿಸುತ್ತ, ಕರ್ನಾಟಕ ಸೇರಿದಂತೆ ದೇಶದ ಇತರೆ ಪ್ರದೇಶಗಳಿಗೆ ಪರ್ಯಟನೆ ಮಾಡುತ್ತ, ಭಕ್ತಗಣದ ದುಃಖ - ದುಮ್ಮಾನಗಳನ್ನು ಪರಿಹರಿಸುತ್ತ, ಲೋಕ ಕಲ್ಯಾಣ ಮಾಡುತ್ತ, ಆಧ್ಯಾತ್ಮದಲ್ಲಿ ಪರಾಕಾಷ್ಠೆ ಮುಟ್ಟಿ ನಂಬಿದವರ ಮನದಲ್ಲಿ ಸದಾ ಸ್ಮರಣೀಯರಾಗಿದ್ದಾರೆ.
   
         ಜನರಲ್ಲಿರುವ ಮಿಥ್ಯಾಚರಣೆಗಳನ್ನು ತೊಲಗಿಸಿ ಅವರ ಬದುಕನ್ನು ಉದ್ಧರಿಸಿದ ಕಾಲಜ್ಞಾನಿ ಅವರು. ಇಂದು ಬಂಜಾರರು ಸಾಂಸ್ಕೃತಿಕ ನೆಲೆಯಲ್ಲಿ ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ಈ ಮಹಾನುಭಾವರ ಸತ್ಕಾರ್ಯಗಳೇ ಕಾರಣ. ಹೀಗಾಗಿ ಬಂಜಾರ ಸಮುದಾಯದಲ್ಲಿ ಸೇವಾಲಾಲರು ಒಬ್ಬ ಶ್ರೇಷ್ಠ ದಾರ್ಶನಿಕರಾಗಿ ಮತ್ತು ಸಾಂಸ್ಕೃತಿಕ ನಾಯಕರಾಗಿ ಚಿರಸ್ಥಾಯಿಯಾಗಿದ್ದಾರೆ. ಮನುಕುಲಕ್ಕೆ ಸಂತ ಸೇವಾಲಾಲರು ಬೋಧಿಸಿದ ಹಿತೋಪದೇಶಗಳಲ್ಲಿ ಕೆಲವನ್ನು ಈ ಕೆಳಗಾಣಿಸಿದಂತೆ ಉಲ್ಲೇಖಿಸಬಹುದು:

* "ಬೋಲ ಜೋ ಮತ್ ಲುಚಿ (ಲಾಟಿ) ಲಬಾಡಿ"

ಅರ್ಥ: ಸುಳ್ಳನ್ನು ಯಾರು ನುಡಿಯ ಬಾರದು; ಸತ್ಯವನ್ನೆ ನುಡಿಯಿರಿ ಎಂದು ಜಗತ್ತಿಗೆ ಸಾರಿದರು.

* ಮತ ಲೋ ಜೀವ; ಕಾಡೋ ಮತ್ ಕೋಯಿ ಲೋಯಿ"

ಅರ್ಥ: ಯಾವುದೆ ಜೀವಿಯನ್ನು ಕೋಲ್ಲಬೇಡಿ; ಅದರ ರಕ್ತವನ್ನು ತೆಗೆಯಬೇಡಿ (ಅಹಿಂಸೆಯನ್ನು ಪ್ರತಿಪಾದಿಸಿದರು)

* ಸೇನ ಸಾಯಿ ವೇಸ್, ಜೀವ ಜನಗಾನಿನ ಸಾಯಿವೇಸ್, ಖೂಂಟಾ ಮುಂಗ್ರಿನ್ ಸಾಯಿ ವೇಸ್, ಕೊರೆ – ಗೋರೂನ ಸಾಯಿವೇಸ್, ಕೀಡಾ ಮಕೋಡಾನ ಸಾಯಿವೇಸ್.

ಅರ್ಥ : ಮನುಷ್ಯನಿಗೆ ಮಾತ್ರವಲ್ಲದೆ ಜೀವ
ಜಂತುಗಳಿಗೆ ಕ್ರೀಮಿ ಕೀಟಗಳಿಗೆ ಒಳ್ಳೆದಾಗಲಿ ಎಂದು (ಇಲ್ಲಿ ತನ್ನ ಸ್ವಾರ್ಥಕ್ಕಿಂತ ಇಡಿ ಭೂಮಿಗೆ ಒಳ್ಳೆಯದನ್ನು ಬಯಸುತ್ತರೆ)

* ಚೋರಿ ಮತ್ತ್ ಕರೋ, ಕರಿಯೇ ಚೋರಿ ಖಾಂಯೆ ಕೋರಿ, ಹಾತೆ ಮಾಯಿ ಹತಕಡಿ, ಪಗಮಾಯಿ ಬೇಡಿ
ಡೋರಿ ಡೋರಿ ಹಿಂಡಿಯೇ…..,

ಅರ್ಥ : ಕಳ್ಳತನ ಮಾಡಬೇಡಿ, ಕಳ್ಳತನ ಮಾಡುವವರನ್ನು ಬೇಡಿ ಹಾಕಿ ಓಡಾಡಿಸುತ್ತರೆ ಎಂದು ಎಚ್ಚರಿಸಿದ್ದಾರೆ.

* ” ದಾರೂ, ಗಾಂಜಾ ಮತ್ ಪೀವೋ”

ಅರ್ಥ : ಮಾದಕ ದ್ರವ್ಯ ವ್ಯಸನ ಮುಕ್ತರಾಗಿ.

* “ಜೋರ್, ಜುಲೂಮ್ ಗೋರ್ ಗರೀಬ ದಾಂಡನ್ ಖಾಯೇ, ವೋರಿ ಸಾತ್ ಪೀಡೀ ಪರ ದಾಗ್ ಲಗ ಜಾಯೆ, ವಂಶ ಪರ ದೀವೋ ಕೋನಿ ರೀಯೇ.

ಅರ್ಥ : ಬಡವರಿಗೆ ಎಂದು ದಂಡ ಹಾಕಬೇಡಿ. ದಂಡ ಹಾಕಿದರೇ ಅವರ ವಂಶವಳಿ ನರಳಿತು. ಅಂದಕಾರ ಕವಿದಿತು. ಅವರ ಬಗ್ಗೆ ಕನಿಕರವಿರಲಿ ಎಂದಿದ್ದಾರೆ.

* ಕಾಮಾ, ಕ್ರೋಧೇರಿ, ಧೂಣಿ ಬಾಳೋ, ಸತ್ಯ, ಧರ್ಮೆನ ಆಂಗ ಚಲಾವೋ, ಭೂಕ ಜೇನ ಅನ್ನ ಖೊರಾವೋ, ತರಸ ಜೇನ ಪಾಣಿ ಪಿರಾವೋ.

ಅರ್ಥ : ತಮ್ಮ ಜೀವನದಲ್ಲಿ ಅರಿಷಡ್ ವರ್ಗಗಳನ್ನು ಸುಟ್ಟು ಹಾಕಿ. ಸತ್ಯ ಧರ್ಮವನ್ನು ಮುನ್ನೆಡೆಸಿ. ಹಸಿದವರಿಗೆ ಅನ್ನ ನೀಡಿ. ಬಾಯಾರಿದವರಿಗೆ ನೀರು ಪ್ರಾಪ್ತಿ ಮಾಡಿ

          ಭಕ್ತಿ ಭಂಡಾರಿ ಬಸವಣ್ಣನವರ ತತ್ವಗಳಿಗೂ ಸೇವಾಲಾಲರ ತತ್ವಗಳಿಗೂ ವ್ಯತ್ಯಾಸವೆನಿಲ್ಲಾ. ಒಂದೇ ದೀಪದ ಬೆಳಕು ಹೊಳಪಿನ ಅರ್ಥವನ್ನು ನೀಡಬಹುದಾಗಿದೆ. ಆದರೆ ಬಸವಣ್ಣನವರ ತತ್ವ ಸಾರುವುದಕ್ಕೆ ಸರ್ಕಾರದ ಸಹಕಾರ ಎಷ್ಟಿದೆಯೋ; ಅಷ್ಟೇ  ಮಹತ್ವ ಪೂಜ್ಯನೀಯ ಸೇವಾಲಾಲರ ತತ್ವಗಳಿಗೂ ಒತ್ತುನೀಡಬೇಕು ಎಂಬುದು ಈ ಲೇಖನದ ಸದಾಶಯ. ನಾವೆಲ್ಲರೂ ಸೇರಿ ಇವರ ತತ್ವಾದರ್ಶಗಳ ಚಿಂತನ - ಮಂಥನವನ್ನು ದೇಶದ ಗಡಿ ದಾಟಿ ವಿಶ್ವಮಯವಾಗಿಸೋಣ.

          ಪ್ರತಿ ವರ್ಷ ಸೇವಾಲಾಲರ ಜಯಂತಿ ನಿಮಿತ್ಯ ಪ್ರತಿ ವರ್ಷ ೧೩, ೧೪, ೧೫ ಫೆಬ್ರವರಿಯಂದು ೩ ದಿನ ಅವರ ಜನ್ಮಕ್ಷೇತ್ರವಾದ ಸೂರಗೊಂಡನಕೊಪ್ಪದಲ್ಲಿ ಜಾತ್ರಾ ಉತ್ಸವ ನಡೆಯುತ್ತದೆ. ಸಾವಿರಾರು ಮಾಲಾಧಾರಿಗಳು ಭಾಯಾ ಮತ್ತು ಮರಿಯಮ್ಮ ದೇವಿಯ ದರ್ಶನ ಪಡೆಯುತ್ತಾರೆ. ಅಂಗಾಪೂಜೆ, ಅಭಿಷೇಕ, ಮಹಾ ಮಂಗಳಾರತಿ, ಉತ್ಸವ ಮೂರ್ತಿಗಳ ಪಲ್ಲಕ್ಕಿ ಮೆರವಣಿಗೆ, ಇರುಮುಡಿಗಳ ಸಮರ್ಪಣೆ, ಮಾಲಾ ವಿಸರ್ಜನೆ ಭಕ್ತಿ ಕಾರ್ಯ ವಿಜೃಂಭಣೆಯಿಂದ ನಡೆಯುತ್ತದೆ. ಭಕ್ತಾದಿಗಳಿಗೆ ಊಟ, ವಸತಿಯ ಸಕಲ ಸೌಕರ್ಯಗಳನ್ನು ಮಾಡಿಕೊಡುತ್ತಾರೆ. ಕರೋನಾ ಸೋಂಕಿನ ಕಾರಣ ಸೇವಾಲಾಲರ ೨೮೩ ನೇ ಜಯಂತಿಯನ್ನು ಸಾವಿರಾರು ಜನ ಸೇರಿ ಸಾಮೂಹಿಕವಾಗಿ ಮಾಡುವುದಕ್ಕೆ ತಡೆಹೇರಲಾಗಿದೆ.


     ಸುಹೇಚ ಪರಮವಾಡಿ
ಶ್ರೀ. ಸುಭಾಷ್ ಹೇ. ಚವ್ಹಾಣ, ಶಿಕ್ಷಕ ಸಾಹಿತಿಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಜುನಾಥ ನಗರ, ಹುಬ್ಬಳ್ಳಿ ಶಹರ, ಧಾರವಾಡ. 


Saturday, 12 February 2022

ಸವಣೂರ ಏತ ನೀರಾವರಿ ಯೋಜನೆ ಲೋಕಾರ್ಪಣೆ ರೂ.638 ಕೋಟಿ ವೆಚ್ಚದಲ್ಲಿ ಶಿಗ್ಗಾಂವ- ಹಾನಗಲ್ ಕ್ಷೇತ್ರದ 230ಕ್ಕೂ ಅಧಿಕ ಗ್ರಾಮಗಳಿಗೆ ತುಂಗಭದ್ರಾ ನೀರು -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


ಸವಣೂರ ಏತ ನೀರಾವರಿ ಯೋಜನೆ ಲೋಕಾರ್ಪಣೆ ರೂ.638 ಕೋಟಿ ವೆಚ್ಚದಲ್ಲಿ ಶಿಗ್ಗಾಂವ- ಹಾನಗಲ್ ಕ್ಷೇತ್ರದ 230ಕ್ಕೂ ಅಧಿಕ ಗ್ರಾಮಗಳಿಗೆ ತುಂಗಭದ್ರಾ ನೀರು -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹಾವೇರಿ. : ಶಿಗ್ಗಾಂವ ಕ್ಷೇತ್ರದ ಪ್ರತಿ ಹಳ್ಳಿಗೆ ನಳದ ನೀರು ಕೊಡುವ ನಿಟ್ಟಿನಲ್ಲಿ ರೂ.638 ಕೋಟಿ ವೆಚ್ಚದಲ್ಲಿ ಶಿಗ್ಗಾಂವ ಹಾಗೂ ಹಾನಗಲ್ ಕ್ಷೇತ್ರದ 230ಕ್ಕೂ ಅಧಿಕ ಹಳ್ಳಿಗೆ ತುಂಗಭದ್ರಾ ನೀರು ಒದಗಿಸುವ ಬೃಹತ್ ಯೋಜನೆಗೆ ಮಂಜೂರಾತಿ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಶಿಗ್ಗಾಂವ ತಾಲೂಕು ಹಿರೇಬೆಂಡಿಗೇರಿ ಗ್ರಾಮದಲ್ಲಿ ಸವಣೂರ ಏತ ನೀರಾವರಿ ಯೋಜನೆಯಡಿ 48 ಕೆರೆಗಳ ತುಂಬಿಸುವ ರೂ. 90.57 ಕೋಟಿ ವೆಚ್ಚದ  ಕಾಮಗಾರಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಹಿರೇಬೆಂಡಿಗೇರಿ ಕೆರೆ ನೈಸರ್ಗಿಕವಾಗಿ ತುಂಬುತ್ತಿತ್ತು. ಸತತ ಮೂರು ವರ್ಷಗಳ ಬರಗಾಲದಿಂದ ಈ ಕೆರೆ ಬತ್ತಿದ ಕಾರಣ  ಹಿರಿಯ ಮನಸ್ಸಿಗೆ ಬಹಳ ನೋವಾಗಿತ್ತು. ಆಗ ನಾನು ತೀರ್ಮಾನಿಸಿ 40 ಕಿ.ಮೀ.ದೂರದಿಂದ ವರದೆ ಇಂದು ಹಿರೇಬೆಂಡಿಗೇರಿಗೆ ಹರಿದು ಬಂದಿದ್ದು, ವರದಾನವಾಗಿದೆ. ನಾನು ಕೊಟ್ಟಮಾತು ಮಾತು ಉಳಿಸಿಕೊಂಡಿದ್ದು ಸಮಾಧಾನವಾಗಿದೆ ಎಂದು ಹೇಳಿದರು.

ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ  ರಾಜ್ಯದಲ್ಲಿ 7.5 ಲಕ್ಷ ಎಕರೆ ನೀರಾವರಿ ಮಾಡಲಾಗಿದೆ.  ಒಂದು ಪ್ರಯತ್ನವಾಗಿ ಶಿಗ್ಗಾಂವ ಏತ ನೀರಾವರಿ ಯೋಜನೆಯಡಿ ಮೈಕ್ರೋ ಇರಿಗೇಷನ್  ಮಾಡಲಾಯಿತು. ರಾಜ್ಯ ಮತ್ತು ಕೇಂದ್ರಕ್ಕೆ ಮಾದರಿ ಕೆಲಸವಾಗಿದೆ. ಶಿಗ್ಗಾಂವ ಮತ್ತು ಸವಣೂರ ಏತ ನೀರಾವರಿ ಯೋಜನೆ ಮೂಲಕ ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕನಸು ಕಂಡಿದ್ದೆ, ನನ್ನ ಅವ್ವ ಗಂಗಮ್ಮನ ಆಶೀರ್ವಾದಿಂದ ಇಂದು ನನಸಾಗಿದೆ. ನೀರು ಬಹಳ ಮುಖ್ಯ ನೀರು ಇಲ್ಲದೆ ಬದುಕಿಲ್ಲ, ದಿನನಿತ್ಯದ ಬದುಕಿಗೆಮ ವ್ಯವಸಾಯಕ್ಕೆ ಹಾಗೂ ಕಾರ್ಖಾನೆಗಳಿಗೂ ನೀರು ಬೇಕು.  ನೀರನ್ನು ಸದ್ಬಳಕೆ ಮಾಡಬೇಕು ಎಂದು ಹೇಳಿದರು.

ಪಕ್ಷದ ಹಿರಿಯರ ಹಾಗೂ ಕ್ಷೇತ್ರದ ಜನತೆ ಆಶೀರ್ವಾದಿಂದ ಮುಖ್ಯಮಂತ್ರಿಯಾದಮೇಲೆ ಜವಾಬ್ದಾರಿ ಹೆಚ್ಚಾಗಿದೆ. ದಿನದ 15 ತಾಸು ಕೆಲಸ ನಿರ್ವಹಿಸುತ್ತೇನೆ. ಕಳೆದ ಎರಡು ವರ್ಷದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟದ ನಡುವೆಯೂ ಕರ್ನಾಟಕದ ಸಂಪನ್ಮೂಲ ಕ್ರೋಢಿಕರಿಸಿ  ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗಿದೆ.  ಬಜೆಟ್ ಪೂರ್ವದಲ್ಲಿ ರೈತ ಮಕ್ಕಳಿಗೆ ವಿದ್ಯಾನಿಧಿ ಜಾರಿಗೆ ತರಲಾಗಿದೆ. ರಾಜ್ಯದ ಐದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಿದಾರೆ. ಕೃಷಿ, ತೋಟಗಾರಿಕೆ ಹಾಗೂ ನೀರಾವರಿ ಬೆಳೆಹಾನಿ ಪರಿಹಾರವನ್ನು ದ್ವಿಗುಣಗೊಳಿಸಲಾಗಿದೆ. ಗ್ರಾಮೀಣ ಪ್ರದೇಶಕ್ಕೆ ಐದು ಲಕ್ಷ ಮನೆಗಳನ್ನು ಮಂಜೂರಲಾಗಿದೆ.  ಪರಿತರ ವಿತರಣೆಗೆ ಹೆಚ್ಚಿಸಲಾಗಿದೆ. ರೂ.700 ಕೋಟಿ ಅನುದಾನ ನೀಡಲಾಗಿದೆ. ನೀರಾವರಿಗೆ ಹೆಚ್ಚು ಒತ್ತುನೀಡಲಾಗಿದೆ ಎಂದರು.

ಬರುವ ದಿನಗಳಲ್ಲಿ ಬಾಕಿ ಯೋಜನೆಗಳನ್ನು ಪೂರ್ಣಗೊಳಿಸಿ ಕನ್ನಡನಾಡಿನ ಭೂಮಿತಾಯಿಗೆ ಹಸಿರು ಸೀರೆ ಉಡಿಸುವ ಸಂಕಲ್ಪಮಾಡಲಾಗಿದೆ. ಇದರ ಜವಾಬ್ದಾರಿಯನ್ನು ಸಚಿವರಾದ ಕಾರಜೋಳ ಅವರಿಗೆ ವಹಿಸಲಾಗಿದೆ. ಕಾರ್ಮಿಕರ ಹಿತದೃಷ್ಟಿಯಿಂದ ರೂ. 400 ಕೋಟಿ  ಮಂಜೂರು ಮಾಡಿ ಕಾರ್ಮಿಕರ ಮಕ್ಕಳ ಖಾತೆಗೆ  ಜಮೆ ಮಾಡಲಾಗಿದೆ.  ಸರ್ಕಾರದ ಹೃದಯಮಿಡಿತ ರೈತರು, ಕಾರ್ಮಿಕರು ಹಾಗೂ ಬಡವರ  ಬಗ್ಗೆ ಇದೆ. ಇದು ನಮ್ಮ ಧ್ಯೇಯ ಹಾಗೂ ನೀತಿಯಾಗಿದೆ ಎಂದರು.

ಇದರ ಜೊತೆಗೆ ರಾಷ್ಟ್ರೀಯ ಅಭಿವೃದ್ಧಿಮ ಸೇತುವೆ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ.  ಕುಡಿಯುವ ನೀರಿನ ಜಲಜೀವನ ಮಿಷನ್ ಯೋಜನೆಗೆ ರೂ.7000 ಕೋಟಿ ನೀಡಲಾಗಿದೆ.  ಇನ್ನೂ ಹೆಚ್ಚಿನ ಕೆಲಸಮಾಡುವ ಉತ್ಸಾಹವಿದೆ. ಅಭಿವೃದ್ಧಿ ನಿರಂತರ ಚಕ್ರ, ದನಿವರಿಯದೆ ಕೆಲಸ ಮಾಡಬೇಕು.  ದುಡಿಮೆಯಲ್ಲಿ ದೇವರು ಹಾಗೂ ಯಶಸ್ಸು ಇರುವುದಾಗಿ ನಂಬಿದ್ದೇವೆ ಎಂದು ಹೇಳಿದರು.

  ಜಲಸಂಪನ್ಮೂಲ ಸಚಿವರಾದ ಗೋವಿಂದ ಎಂ.ಕಾರಜೋಳ ಅವರು ಮಾತನಾಡಿ, 2013ರಲ್ಲಿ ಬೃಹತ್ ನೀರವಾರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ತಮ್ಮ ದೂರ ದೃಷ್ಟಿಯಿಂದ ರೂ.690 ಕೋಟಿ ವೆಚ್ಚದ 30 ಹಳ್ಳಿಗಳ 38 ಸಾವಿರ ಎಕರೆ ನೀರಾವರಿ ಯೋಜನೆಗೆ ಅನುಮೋದನೆ ನೀಡಿದ್ದರು. ಇಂದು ಮುಖ್ಯಮಂತ್ರಿಗಳಾಗಿ ಲೋಕರ್ಪಾಣೆ ಮಾಡಿದ್ದಾರೆ. ಇದರಿಂದ ಕುಡಿಯುವ ನೀಡಿನ ಸಮಸ್ಯೆ ಪರಿಹಾರವಾಗುತ್ತದೆ ಹಾಗೂ ದನಕರುಗಳಿಗೆ ಅನುಕೂಲವಾಗಲಿದೆ.  ಒಟ್ಟಾರೆ ತಾಲೂಕನ್ನು ಹಸಿರು ಮಾಡಿದ್ದಾರೆ. ಐದು ವರ್ಷಗಳ ಕಾಲ ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ರಾಜ್ಯದ ಉದ್ದಗಲಕ್ಕೂ ಅನೇಕ ನೀರಾವರಿ ಯೋಜನೆಗಳನ್ನು ಆರಂಭಿಸಿದ್ದರು ಎಂದರು.

  ಮಾನ್ಯ ಮುಖ್ಯಮಂತ್ರಿಗಳು ಅನೇಕ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ, ನಾಡಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡೋಣ. ಸ್ವಾತಂತ್ರ್ಯೋತ್ಸವದ 75ನೇ ಅಮೃತ ಮಹೋತ್ಸವ ಅಂಗವಾಗಿ ಅಮೃತ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಕರೋನಾ ಸಂಕಷ್ಟದಲ್ಲಿಯೂ ಸಹ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಕಾರ್ಮಿಕ  ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ ಅವರು ಮಾತನಾಡಿ, ಮುಖ್ಯಮಂತ್ರಿಗಳಾದ ಬಸವರಾಜ  ಬೊಮ್ಮಾಯಿ ಅವರು, ನಾಡಿನ ರೈತರಿಗೆ ಮಾನ್ಯತೆ ನೀಡಿದ್ದಾರೆ.  ದೇಶಕ್ಕೆ ಅನ್ನನೀಡುವ ರೈತರ ಮಕ್ಕಳ ಶಿಕ್ಷಣಕ್ಕಾಗಿ ತಾವು ಅಧಿಕಾರ ವಹಿಸಿಕೊಂಡ ಒಂದು ಗಂಟೆಯೊಳಗೆ ರೂ.ಒಂದುಸಾವಿರ ಕೋಟಿ ಅನುದಾನ ನೀಡಿದ್ದಾರೆ. ನಾಡಿನ ರೈತರ ಕಣ್ಮನಿಯಾಗಿದ್ದಾರೆ, ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ತಮ್ಮ ಛಾಪು ಮೂಡಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಮಾಜಿ ಶಾಸಕ ಶಿವರಾಜ ಸಜ್ಜನರ  ಸೇರಿದಂತೆ ವಿವಿಧ ಗಣ್ಯರು  ಭಾಗವಹಿಸಿದ್ದರು.

ದೊಡ್ಡಕೆರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಣೆ ಜಿಲ್ಲೆಯ ಬ್ಯಾಡಗಿ ಹಾಗೂ ಹಾನಗಲ್ ತಾಲೂಕಿಗೆ ತಲಾ ಎರಡು ಏತ ನೀರಾವರಿ ಯೋಜನೆ -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


ದೊಡ್ಡಕೆರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಣೆ ಜಿಲ್ಲೆಯ ಬ್ಯಾಡಗಿ ಹಾಗೂ ಹಾನಗಲ್ ತಾಲೂಕಿಗೆ ತಲಾ ಎರಡು ಏತ ನೀರಾವರಿ ಯೋಜನೆ -ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹಾವೇರಿ. : ಶಿಗ್ಗಾಂವ ತಾಲೂಕು ಹಿರೇಬೆಂಡಿಗೇರಿ ಗ್ರಾಮದ ದೊಡ್ಡಕೆರೆಗೆ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಶನಿವಾರ ಬಾಗಿನ ಅರ್ಪಿಸಿದರು. 

  ಸಾಂಪ್ರದಾಯಿಕ ವಿಧಿ-ವಿಧಾನ ಪೂಜಾ ಕಾರ್ಯಕ್ರಮದೊಂದಿಗೆ ಭಕ್ತಿಪೂರ್ವಕವಾಗಿ ಮಂತ್ರೋಚ್ಚಾರಗಳ ಮೂಲಕ ಜಲರಾಶಿಗೆ ಬಾಗಿನ ಸಮರ್ಪಿಸಿದರು.

 ಕೆರೆಗೆ ಬಾಗಿನ ಅರ್ಪಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಸವಣೂರು ಏತ ನೀರಾವರಿ ಯೋಜನೆಯಡಿ  ಶಿಗ್ಗಾಂವ ಮತ್ತು ಸವಣೂರು ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ 48 ಕೆರೆಗಳ ತುಂಬಿಸುವ ರೂ. 90.57 ಕೋಟಿ ವೆಚ್ಚದ  ಕಾಮಗಾರಿ ಪೂರ್ಣಗೊಂಡಿದೆ.  ಇದರಿಂದ 14 ಸಾವಿರ ಎಕರೆಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಬರುವ ದಿನಗಳಲ್ಲಿ ಜಿಲ್ಲೆಯ ಬ್ಯಾಡಗಿ  ಹಾಗೂ ಹಾನಗಲ್ ತಾಲೂಕಿನಲ್ಲಿ ತಲಾ ಎರಡು ಏತ ನೀರವಾರಿ ಯೋಜನೆಗಳ ಉದ್ಘಾಟನೆ ನೆರವೇರಿಸಲಾಗುವುದು ಎಂದರು.

ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅಧಿವೇಶನ ಮುಗಿದ ಬಳಿಕ ಉದ್ಘಾಟನೆ ಮಾಡಲಾಗುವುದು. ಸಮಗ್ರ ಕರ್ನಾಟಕ ಅಭಿವೃದ್ಧಿ ಬಜೆಟ್ ಮಂಡಿಸಲಾಗುವುದು ಎಂದು ತಿಳಿಸಿದರು. 

ಶಾಲಾ- ಕಾಲೇಜು ಸೇರಿದಂತೆ ಎಲ್ಲಕಡೆ ಶಾಂತಿ ನೆಲೆಸಬೇಕು. ಹೈಕೋರ್ಟ್ ಆಜ್ಞೆ ಪರಿಪೂರ್ಣವಾಗಿ ಜಾರಿ ಮಾಡಬೇಕು. ಎಲ್ಲ ಮಕ್ಕಳು ಯಾವುದೇ ಬೇಧ ಭಾವವಿಲ್ಲದೆ ಒಮ್ಮನಸ್ಸಿನಿಂದ ಮೊದಲಿನಂತೆ ಸೌಹಾರ್ದತೆಯಿಂದ  ಇರಬೇಕು. ಇದು ನನ್ನ ಮೊದಲನೆ ಕರ್ತವ್ಯವಾಗಿದೆ. ರಾಜ್ಯ ಬಜೆಟ್ ಪ್ರಕ್ರಿಯೆ ಆರಂಭ ಮಾಡಿದ್ದೇನೆ. ಎಲ್ಲ ಇಲಾಖೆಗಳ ಬೇಡಿಕೆ ಬಗ್ಗೆ ಚರ್ಚೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳ ಜೊತೆಗೆ ರಾಜ್ಯ ಸರಕಾರದ ಯೋಜನೆಗಳನ್ನು ಜೋಡಿಸಲಾಗುತ್ತಿದೆ. ಸಮಗ್ರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಮಂಡನೆ ಮಾಡಲಾಗುವುದು. ಕನ್ನಡ ಸಾಹಿತ್ಯ ಪರಿಷತ್ ಕೂಡ ಈ ಬಗ್ಗೆ ತನ್ನ ಅಭಿಲಾಷೆ ವ್ಯಕ್ತಪಡಿಸಿದೆ. ಅದಕ್ಕೆ ಪೂರಕವಾಗಿ ಶಿಫಾರಸ್ಸು ಮಾಡುತ್ತೇವೆ ಎಂದರು.

  ಜಲಸಂಪನ್ಮೂಲ ಸಚಿವರಾದ ಗೋವಿಂದ ಎಂ.ಕಾರಜೋಳ, ಕಾರ್ಮಿಕ  ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ ಇತರರು ಉಪಸ್ಥಿತರಿದ್ದರು.

ಶಾಲಾ ಕಾಲೇಜು ವ್ಯಾಪ್ತಿಯಲ್ಲಿ 144 ಕಲಂ ನಿಷೇಧಾಜ್ಞೆ ಜಾರಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ : ಸಿ.ಸಿ.ಪಾಟೀಲ


ಶಾಲಾ ಕಾಲೇಜು ವ್ಯಾಪ್ತಿಯಲ್ಲಿ 144 ಕಲಂ ನಿಷೇಧಾಜ್ಞೆ ಜಾರಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ : ಸಿ.ಸಿ.ಪಾಟೀಲ

ಬಾಗಲಕೋಟೆ  : ರಾಜ್ಯಾದ್ಯಂತ ನಡೆದ ಹಿಜಾಬ್ ವಿವಾದದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

  ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿಂದು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜರುಗಿದ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಬನಹಟ್ಟಿಯ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಹಿಜಾಬ್ ವಿವಾದದ ಕೆಲವೊಂದು ಘಟನೆಗಳು ಸಂಭವಿಸಿದ್ದು, ಈ ಘಟನೆಗೆ ಕಾರಣವಾದವರ ಮೇಲೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

  ಇಂತಹ ಘಟನೆಗಳು ಮರುಕಳುಹಿಸದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಬೇಕು. ಕಾನೂನು ಹಿತಾಸಕ್ತಿ ಕಾಪಾಡುವಲ್ಲಿ ಸರಕಾರದ ಜೊತೆ ಸಾರ್ವಜನಿಕರು ಸಹ ಸಹಕಾರ ಮಾಡಬೇಕು. ಭಾವೈಕ್ಯತೆಯ ಕಡೆ ಹೆಚ್ಚಿನ ಒಲವು ಕೊಡಬೇಕು. ಸಮವಸ್ತ್ರ ಇರುವುದು ಸಮಾನತೆಗಾಗಿ ಇದನ್ನರಿತು 

ವಿದ್ಯಾರ್ಥಿಗಳು ಯಾವುದೇ ತರಹದ ವದಂತಿಗಳಿಗೆ ಕಿವಿಗೊಡದೇ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆ ಮಾಡಿದರು. ಈ ವಿಷಯದಲ್ಲಿ ಪಾಲಕರ ಪಾತ್ರ ಮಹತ್ವವಾಗಿದ್ದು, ಮಕ್ಕಳ ವಿದ್ಯಾಬ್ಯಾಸದ ಕಡೆ ಹೆಚ್ಚಿನ ಗಮನ ಕೊಡುವಂತೆ ಸಚಿವರು ಮನವಿ ಮಾಡಿಕೊಂಡರು.

  ಬರುವ ಸೋಮವಾರದಿಂದ 15 ದಿನಗಳ ಕಾಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಹಶೀಲ್ದಾರರು ಶಾಲಾ, ಕಾಲೇಜುಗಳಿಗೆ ಭೇಟಿ ನೀಡತಕ್ಕದ್ದು. ಭೇಟಿ ನೀಡಿದ ಬಗ್ಗೆ ಆಯಾ ಉಪವಿಭಾಗಾಧಿಕಾರಿಗಳು ಮಾನಿಟರಿಂಗ್ ಮಾಡಬೇಕು. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿ.ಪಂ ಸಿಇಓ ಸೇರಿದಂತೆ ವಿವಿಧ ಅಧಿಕಾರಿಗಳ ವಾಟ್ಸ್‍ಪ್ ಗ್ರೂಪ್ ಮಾಡಿಕೊಂಡು ಮಾಹಿತಿಗಳನ್ನು ರವಾನಿಸುವ ಕೆಲಸವಾಗಬೇಕು. ಎಲ್ಲಿಯಾದರೂ ಈ ತರಹದ ಘಟನೆಗಳು ಮರುಕಳುಹಿಸಿದಲ್ಲಿ ತಕ್ಷಣ ಕ್ರಮಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದರು.

  ಬರುವ ಫೆಬ್ರವರಿ 14 ರಿಂದ ಅಧಿವೇಶನ ಪ್ರಾರಂಭವಾಗಲಿದ್ದು, ರಾಜ್ಯದ ಮುಖ್ಯಮಂತ್ರಿಗಳು ನೀಡುವದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಧಾರ್ಮಿಕ ಆಚರಣೆಗಳು ಮನೆಯಲ್ಲಿಯೇ ಇರಬೇಕು. ಶಾಲಾ ಕಾಲೇಜುಗಳಲ್ಲಿ ಎಲ್ಲರೂ ಸಮಾನರು ಈ ಬಗ್ಗೆ ಪಾಲಕರ ಜೊತೆ ಸಮಾಲೋಚನೆ ನಡೆಸಿ ಪರೀಕ್ಷೆಗಳು ಹತ್ತಿರ ಬರುತ್ತಿದ್ದು, ಮಕ್ಕಳನ್ನು ಓದಿನ ಕಡೆ ಹೆಚ್ಚಿನ ಗಮನ ಹರಿಸುವಂತೆ ಮಾಡಬೇಕು. ಘಟನೆಗಳು ಮರುಕಳುಹಿಸದಂತೆ ಎಚ್ಚರಿಕೆ ವಹಿಸುವದರ ಜೊತೆಗೆ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಣ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. 

  ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾರ್ಯನಿವಾಹಕ ಅಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪಾತ್ರ ಮುಖ್ಯವಾಗಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಕೈಗೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡದುಕೊಂಡರು. ಅಲ್ಲದೇ ಅಭಿಪ್ರಾಯ ಸಲಹೆಗಳನ್ನು ಪಡೆದುಕೊಂಡರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಅವರು ಹಿಜಾಬ್ ವಿವಾದದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ನಡೆದ ಘಟನೆಗಳ ಬಗ್ಗೆ ಮಾಹಿತಿ ನೀಡಿದರು. 14 ಜನರ ಮೇಲೆ ಪ್ರಕರಣ ದಾಖಲಿಸಲಾಗಿರುವುದಾಗಿ ತಿಳಿಸಿದರು. 

       ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಸಂಸದ ಗದ್ದಿಗೌಡರ, ರಾಜ್ಯ ಕೈಮಗ್ಗ ನೇಕಾರರ ಅಭಿವೃದ್ದಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಆನಂದ ನ್ಯಾಮಗೌಡ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಲ್ಲೊಳ್ಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು

ಶಾಲಾ, ಕಾಲೇಜು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

        ಜಿಲ್ಲೆಯಾದ್ಯಂತ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಫೆಬ್ರವರಿ 12 ರಿಂದ ಮುಂದಿನ ಆದೇಶದ ವರೆಗೆ ಎಲ್ಲ ಶಾಲಾ ಕಾಲೇಜುಗಳ ಸುತ್ತಲೂ ಯಾವುದೇ ಸಂಘಟನೆಗಳು ಪ್ರತಿಭಟನೆ ಮಾಡದÀಂತೆ ಹಾಗೂ ಅನಧಿಕೃತ ವ್ಯಕ್ತಿಗಳ ಪ್ರವೇಶವನ್ನು ನಿಷೇಧಿಸಿ ಶಾಲಾ, ಕಾಲೇಜುಗಳ ಸುತ್ತ 200 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಡಳಿತ ಮಂಡಳಿಯರನ್ನು ಹೊರತುಪಡಿಸಿ ಯಾವುದೇ ಸಾರ್ವಜನಿಕರಿಗೆ ಒಳ ಪ್ರವೇಶಿಸದಂತೆ 144 ಕಲಂ ದಡಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ನಿಷೇಧಾಜ್ಞೆ ಹೊರಡಿಸಿದ್ದಾರೆ.

Monday, 7 February 2022

ಕೊರೊನಾ ದೇಶಾದ್ಯಂತ ಹರಡಲು ವಿಪಕ್ಷಗಳೇ​ ಕಾರಣ: ಲೋಕಸಭೆಯಲ್ಲಿ 'ಕೈ' ವಿರುದ್ಧ ನಮೋ ವಾಗ್ಬಾಣ

 

ಕೊರೊನಾ ದೇಶಾದ್ಯಂತ ಹರಡಲು ವಿಪಕ್ಷಗಳೇ​ ಕಾರಣ: ಲೋಕಸಭೆಯಲ್ಲಿ 'ಕೈ' ವಿರುದ್ಧ ನಮೋ ವಾಗ್ಬಾಣ

ನವದೆಹಲಿ: ಗಾನ ಕೋಗಿಲೆ ಲತಾ ಮಂಗೇಶ್ಕರ್​ ಅವರ ನಿಧನ ಭಾರತದ ಧ್ವನಿಯನ್ನೇ ಕಳೆದುಕೊಂಡಂತಾಗಿದೆ ಎಂದು ಪ್ರಧಾನಿ ಮೋದಿ ಲತಾ ಜಿ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ರಾಷ್ಟ್ರಪತಿ ಭಾಷಣದ ಮೇಲೆ ವಂದನಾರ್ಪಣೆಗೆ ಉತ್ತರ ನೀಡಿದ ಅವರು, ಬಡವರ ಮನೆಗಳಲ್ಲಿ ಬೆಳಕು ಮೂಡಿದ್ದು, ಬಡವರ ಸಂತಸ ದೇಶದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಗ್ಯಾಸ್​ ಸಂಪರ್ಕ ಮಹಿಳೆಯರ ಸಂಕಷ್ಟ ದೂರ ಮಾಡಿದೆ ಎಂದು ಹೇಳಿದರು.
ಹಲವು ವಲಯಗಳಲ್ಲಿ ನಾವು ಮುನ್ನಡೆಯುತ್ತಿದ್ದೇವೆ. ಭಾರತ ವಿಶ್ವದ ನಾಯಕತ್ವ ವಹಿಸಬೇಕಾಗಿದೆ. ಸ್ವಾತಂತ್ರ್ಯಾನಂತರ ಬಡವರ ಎಲ್ಲಾ ಮನೆಗಳಿಗೆ ವಿದ್ಯುತ್​, ಗ್ಯಾಸ್​ ಸಂಪರ್ಕ ಕಲ್ಪಿಸಿದ್ದು ಸರ್ಕಾರ ಸಾಧನೆ ಎಂದು ಬಣ್ಣಿಸಿದರು.
ಕಾಂಗ್ರೆಸ್​ ವಿರುದ್ಧ ಪ್ರಧಾನಿ ಟೀಕಾ ಪ್ರಹಾರ: ಪ್ರಧಾನಿ ಮೋದಿ ಅವರ ಭಾಷಣದ ವೇಳೆ ಅಡ್ಡಿಪಡಿಸುತ್ತಿದ್ದ ಕಾಂಗ್ರೆಸ್​ ನಾಯಕರನ್ನು ಗುರಿಯಾಗಿಸಿ ಮಾತನಾಡಿದ ಪ್ರಧಾನಿ, ಕಾಂಗ್ರೆಸ್​ ತೆಲಂಗಾಣ, ಜಾರ್ಖಂಡ್​ ಮಾತ್ರವಲ್ಲದೇ ವಿವಿಧ ರಾಜ್ಯಗಳಲ್ಲಿ ತಿರಸ್ಕೃತವಾಗಿ ದೇಶದಿಂದಲೇ ಪಕ್ಷ ಮಾಯವಾಗುತ್ತಿದೆ ಎಂದು ಟೀಕಿಸಿದರು. ಕೊರೊನಾ ವೇಳೆ ಜನರು ಎಲ್ಲಿದ್ದಾರೋ ಅಲ್ಲಿಯೇ ಇರಿ ಎಂದು ವಿಶ್ವಸಂಸ್ಥೆ ಹೇಳಿತ್ತು.

ಆದರೆ, ಕಾಂಗ್ರೆಸ್​ ನಾಯಕರು ಮುಗ್ಧ ಜನರು, ಕಾರ್ಮಿಕರಿಗೆ ಉಚಿತವಾಗಿ ಟಿಕೆಟ್​ ನೀಡಿ ಎಲ್ಲರನ್ನೂ ಒಕ್ಕಲೆಬ್ಬಿಸಿದ್ದರು. ಇದರಿಂದ ಉತ್ತರಾಖಂಡ, ಪಂಜಾಬ್​, ಮಹಾರಾಷ್ಟ್ರ ವಿವಿಧ ರಾಜ್ಯಗಳಲ್ಲಿ ಕೊರೊನಾ ಉತ್ತುಂಗಕ್ಕೇರಲು ಕಾರಣವಾಯಿತು ಎಂದು ಪ್ರಧಾನಿ ಮೋದಿ ಆರೋಪಿಸಿದರು.

ಜನರನ್ನು ಸರಿಯಾದ ದಾರಿಯಲ್ಲಿ ನಡೆಸಬೇಕಾದ ರಾಷ್ಟ್ರೀಯ ಪಕ್ಷವೊಂದು ಜನರ ಜೀವದ ಜೊತೆ ಆಟವಾಡಿದೆ. ಕೊರೊನಾ ನಿರ್ಬಂಧ ಹೇರಿದರೆ ಕೇಂದ್ರ ಸರ್ಕಾರಕ್ಕೆ ಏನು ಪ್ರಯೋಜನವಿತ್ತು. ಇದು ಜನರ ಒಳಿತಿಗಾಗಿ ಹಾಕಲಾಗಿದ್ದ ನಿರ್ಬಂಧ ಅಷ್ಟೇ ಎಂದು ಹೇಳಿದರು.ಯೋಗ ಮಾಡಲೂ ವಿರೋಧ: ಯೋಗ ಆರೋಗ್ಯಕ್ಕೆ ಸಹಕಾರಿ ಎಂದು ಹೇಳಲಾಗುತ್ತೆ. ಅದನ್ನು ಸಾಮೂಹಿಕವಾಗಿ ಮಾಡಲು ಹೇಳಿದಾಗ ಆಗಲೂ ವಿರೋಧ ವ್ಯಕ್ತವಾಯಿತು. ಸರ್ಕಾರ ಮಾಡುವ ಎಲ್ಲಾ ಉತ್ತಮ ಕಾರ್ಯಗಳನ್ನು ಕಾಂಗ್ರೆಸ್​ ವಿರೋಧಿಸುವುದರಿಂದ ಈಗ ಪಕ್ಷ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಅವಲೋಕಿಸಿಕೊಳ್ಳಲಿ ಎಂದು ಹೇಳಿದರು.

ನಮ್ಮ ಉದ್ಯಮಿಗಳನ್ನೇ ವೈರಸ್​ ಎಂದು ಕಾಂಗ್ರೆಸ್​ ಟೀಕಿಸಿದೆ. ದೇಶದ ಅಭ್ಯುದಯದಲ್ಲಿ ಪಾಲುದಾರರಾಗಿರುವ ಉದ್ಯಮಿಗಳನ್ನು ವೈರಸ್​ ಎಂದು ಜರಿದ ಕಾಂಗ್ರೆಸ್​ ಇಂದು ದಿವಾಳಿಯಾಗಿದೆ. ತಮ್ಮ ಖಜಾನೆ ತುಂಬಿಕೊಳ್ಳುತ್ತಿದ್ದ ಕಾಂಗ್ರೆಸ್​ಗೆ ಮೇಕ್​ ಇನ್​ ಇಂಡಿಯಾ ಬ್ರೇಕ್​ ಹಾಕಿದೆ. ಇದರಿಂದ ಅದು ಮೇಕ್​ ಇನ್​ ಇಂಡಿಯಾ ಯೋಜನೆಯನ್ನೂ ವಿರೋಧಿಸುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್ಸನ್ನೇ ಓಡಿಸಿದ ಬಡತನ

ಕಾಂಗ್ರೆಸ್​ ಪಕ್ಷ ಬಡತನದ ವಿರುದ್ಧ ಹೋರಾಡಲಿಲ್ಲ. ಇದರಿಂದ ಕಾಂಗ್ರೆಸ್​ ಅನ್ನು ಬಡತನವೇ ಹೋಗಲಾಡಿಸಿದೆ. ಭಾರತದ ಗಡಿ ವಿಷಯದಲ್ಲೂ ಕಾಂಗ್ರೆಸ್​ ರಾಜಕೀಯ ಮಾಡಿದೆ. ಪಕ್ಷ ಇದನ್ನು ಮುಂದುವರೆಸಿದ್ದೇ ಆದಲ್ಲಿ ಇತಿಹಾಸದಿಂದಲೇ ಕಳೆದು ಹೋಗಲಿದೆ ಎಂದು ಶ್ಲೋಕದ ಮೂಲಕ ಮೋದಿ ತಿವಿದರು.

ತಮಿಳುನಾಡಿನಲ್ಲಿ ಸಿಡಿಎಸ್​ ರಾವತ್​ಗೆ ಅದ್ಭುತ ವಿದಾಯ

ತಮಿಳುನಾಡಿನಲ್ಲಿ ದುರ್ಘಟನೆಯಲ್ಲಿ ಸಿಡಿಎಸ್​ ಬಿಪಿನ್​ ರಾವತ್​ ಅವರು ಮೃತಪಟ್ಟಾಗ ಅಲ್ಲಿನ ಜನರು ವೀರ ಯೋಧನಿಗೆ ಅದ್ಭುತ ವಿದಾಯ ಹೇಳಿದ್ದಾರೆ. ಆದರೆ, ದೇಶವನ್ನು ಒಡೆದು ಆಳುವ ನೀತಿ ಹೊಂದಿರುವ ಕಾಂಗ್ರೆಸ್​ ಕೇಂದ್ರ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು. ಇಂತಹ ನೂರಾರು ಜನರು ಬಂದು ಹೋಗಿದ್ದಾರೆ. ಭಾರತ ಶ್ರೇಷ್ಠ ದೇಶ, ಶ್ರೇಷ್ಠವಾಗಿದೆ. ಶ್ರೇಷ್ಠವಾಗಿರುತ್ತದೆ. ದೇಶ ಎಂದಿಗೂ ಅಜರಾಮರವಾಗಿರುತ್ತದೆ. ಕಾಂಗ್ರೆಸ್​ನ ಯಾವ ಗೇಮ್​ ಪ್ಲಾನ್​ ಇಲ್ಲಿ ನಡೆಯಲ್ಲ ಎಂದು ಹೇಳಿದರು.






ಗಾನ ಕೋಗಿಲೆ ಲತಾ ಮಂಗೇಶ್ಕರ್​​​​​ ಅವರ ಕಂಠವನ್ನು ಯಾರೊಬ್ಬರೂ ಹೊಂದಿಸಲಾರರು: ನಟ ಶತ್ರುಘ್ನ ಸಿನ್ಹಾ

 

ಗಾನ ಕೋಗಿಲೆ ಲತಾ ಮಂಗೇಶ್ಕರ್​​​​​ ಅವರ ಕಂಠವನ್ನು ಯಾರೊಬ್ಬರೂ ಹೊಂದಿಸಲಾರರು: ನಟ ಶತ್ರುಘ್ನ ಸಿನ್ಹಾ

ನವದೆಹಲಿ: ಸಂಗೀತ ಶಾರದೆ, ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್​​ ಅವರ ಸ್ವರವನ್ನು ಯಾರೊಬ್ಬರೂ ಕೂಡ ಹೊಂದಿಸಲಾರರು. ಮೇರು ವ್ಯಕ್ತಿತ್ವ ಕಣ್ಮರೆಯಾಗಿದ್ದು, ಚಿತ್ರರಂಗ ಮತ್ತು ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಎಂದು ನಟ ಮತ್ತು ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ಹೇಳಿದ್ದಾರೆ. ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಲತಾ ಮಂಗೇಶ್ಕರ್​ ಅವರು ಹಾಡು ನಿಲ್ಲಿಸಿದ ಬಳಿಕ ಸಂಗೀತ ಲೋಕದಲ್ಲಿ ಶೂನ್ಯ ಆವರಿಸಿಕೊಂಡಿದೆ. ಸಂಗೀತದ ರಾಣಿ ಹಾಡಿದ ಹಾಡುಗಳು ಜನಮಾನಸದಲ್ಲಿ ಎಂದಿಗೂ ಚಿರಸ್ಥಾಯಿ. ಲತಾ ಅವರು ದೇಶ - ವಿದೇಶಗಳಲ್ಲಿ ಅವರ ಹಾಡಿಗೆ ಅಭಿಮಾನಿಗಳಿದ್ದಾರೆ ಎಂದು ತಿಳಿಸಿದರು.
ನಾನು ಅವರ ಹಾಡುಗಳ ಉತ್ಕಟ ಅನುಯಾಯಿ. ಅವರ ಹಾಡು ಮತ್ತು ವ್ಯಕ್ತಿತ್ವ ನಮಗೆ ಸ್ಫೂರ್ತಿಯಾಗಿತ್ತು. ಸಂಗೀತದ ರಾಣಿಯ ಪರಲೋಕ ಪಯಣ ನನ್ನನ್ನು ಶೂನ್ಯವಾಗಿಸಿದೆ ಎಂದು ನೊಂದು ನುಡಿದರು. 92 ನೇ ವಯಸ್ಸಿನಲ್ಲಿಯೂ ಅವರು ಫಿಟ್ ಮತ್ತು ಫೈನ್ ಆಗಿದ್ದರು. ಲತಾ ಜೀ ಅವರು ತಮಾಷೆ ಮತ್ತು ಸ್ನೇಹಪರ ಜೀವಿಯಾಗಿದ್ದರು. ಎಲ್ಲ ನಾಯಕಿಯರಿಗೆ ಧ್ವನಿ ನೀಡಿದ್ದಾರೆ. ಅವರ ಸುಮಧುರ ಕಂಠವೇ ಹಾಡಿನ ಜೀವಾಳವಾಗಿತ್ತು ಎಂದು ಬಣ್ಣಿಸಿದ್ದಾರೆ.
ಪಾಕಿಸ್ತಾನದ ಜನರು ಕೂಡ ಲತಾ ಜಿ ಅವರನ್ನು ಸ್ಮರಿಸುತ್ತಾರೆ. ಅವರ ನಿಧನದ ಬಳಿಕ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞನಾಗಿದ್ದೇನೆ. ಲತಾ ಜಿ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಆತ್ಮೀಯತೆಯನ್ನು ಹೊಂದಿದ್ದರು. ಅಲ್ಲದೇ ಅವರು ಕ್ರಿಕೆಟ್‌ನ ಅಭಿಮಾನಿಯಾಗಿದ್ದರು ಎಂದೆಲ್ಲಾ ಸ್ಮರಿಸಿಕೊಂಡರು.

ಕೇಂದ್ರಕ್ಕೆ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಸಂಸದರೊಂದಿಗೆ ಚರ್ಚಿಸಿದ್ದೇನೆ : ದೆಹಲಿಯಲ್ಲಿ ಸಿಎಂ ಹೇಳಿಕೆ

 

ಕೇಂದ್ರಕ್ಕೆ ಪ್ರಸ್ತಾಪಿಸಬೇಕಾದ ವಿಷಯಗಳ ಬಗ್ಗೆ ಸಂಸದರೊಂದಿಗೆ ಚರ್ಚಿಸಿದ್ದೇನೆ : ದೆಹಲಿಯಲ್ಲಿ ಸಿಎಂ ಹೇಳಿಕೆ

ನವದೆಹಲಿ : ಕೇಂದ್ರಕ್ಕೆ ಸಂಬಂಧಿಸಿದಂತೆ ರಾಜ್ಯದ ನೀರಾವರಿ, ರೈಲ್ವೆ, ನಗರಾಭಿವೃದ್ಧಿ, ಬಂದರು, ರಸ್ತೆ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಸದರ ಸಭೆಯಲ್ಲಿ ಚರ್ಚೆಯಾಗಿದೆ. ಕೇಂದ್ರದಲ್ಲಿ ಯಾವ ವಿಷಯಗಳನ್ನು ಪ್ರಸ್ತಾಪ ಮಾಡಬೇಕೆನ್ನುವ ವಿಚಾರಗಳ ಬಗ್ಗೆ ಸೌಹಾರ್ದಯುತವಾಗಿ ಚರ್ಚೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನವದೆಹಲಿಯಲ್ಲಿ ನಡೆಸಲಾದ ಸಂಸದರ ಸಭೆಯ ನಂತರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡ ಸಂಸದರ ಸಭೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಸಚಿವರ ನೇತೃತ್ವದಲ್ಲಿ ಬಜೆಟ್​​ನಲ್ಲಿ ಘೋಷಿಸಿರುವ ಯೋಜನೆಗಳನ್ನು ಅನುಷ್ಠಾನ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. 15ನೇ ಹಣಕಾಸು ಯೋಜನೆಯಡಿ ಮಂಜೂರಾತಿ ದೊರೆತಿರುವ ಯೋಜನೆಗಳನ್ನು ಸಂಪೂರ್ಣವಾಗಿ ರಾಜ್ಯಕ್ಕೆ ಒದಗಿಸಿಕೊಡುವುದಾಗಿಯೂ ಭರವಸೆ ನೀಡಿದ್ದಾರೆ ಎಂದರು.
ವಿತ್ತ ಸಚಿವರೊಂದಿಗೆ ನಡೆದ ಮಾತುಕತೆಯಲ್ಲಿ 1 ಲಕ್ಷ ಕೋಟಿ ರೂ.ಗಳ ಬಂಡವಾಳ ಅನುದಾನದಲ್ಲಿ 50 ವರ್ಷಗಳ ಅವಧಿಗೆ ಬಡ್ಡಿರಹಿತವಾಗಿ ಒಂದು ಲಕ್ಷ ಕೋಟಿ ರೂ.ಗಳನ್ನು ರಾಜ್ಯಕ್ಕೆ ಸಾಲದ ರೂಪದಲ್ಲಿ ನೀಡಬೇಕೆನ್ನುವ ಬಗ್ಗೆ ಚರ್ಚೆಯಾಗಿದೆ. ಕರ್ನಾಟಕಕ್ಕೆ ಎಷ್ಟು ಬರಬೇಕೆನ್ನುವುದು ಚರ್ಚೆಯಾಗಿ ಸುಮಾರು 3,800 ರಿಂದ 4,000 ಕೋಟಿ ರೂ.ಗಳು ದೊರೆಯಬಹುದೆಂಬ ಅಂದಾಜಿದೆ ಎಂದು ಹೇಳಿದರು.

ಎಸ್ಕಾಂಗಳಿಗೆ ಸಾಲ ಷರತ್ತುಗಳನ್ನು ಕೈಬಿಡಲು ಕೇಂದ್ರಕ್ಕೆ ಮನವಿ : ಎಸ್ಕಾಂಗಳಿಗೆ ಸಾಲ ಪಡೆಯಲು ವಿಧಿಸಿರುವ ಕೆಲವು ಷರತ್ತುಗಳನ್ನು ಕೈಬಿಡುವಂತೆ ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಅವರಲ್ಲಿ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಎಸ್ಕಾಂಗಳಿಗೆ ಸಹಾಯಧನ, ಅಂತರ ಇಲಾಖಾ ಬಿಲ್​​ಗಳನ್ನು ಕೊಡಬೇಕೆನ್ನುವ ಷರತ್ತುಗಳನ್ನು ವಿಧಿಸಲಾಗಿದೆ. ಒಂದೇ ವರ್ಷಕ್ಕೆ ಇಷ್ಟು ಷರತ್ತುಗಳನ್ನು ಹಾಕದಿರುವಂತೆ ಮನವಿ ಮಾಡಲಾಗಿದೆ. ಅವುಗಳನ್ನು ಮನ್ನಾ ಮಾಡಿದರೆ ಎಸ್ಕಾಂಗಳಿಗೆ ಬ್ಯಾಂಕ್​​ನಿಂದ ಹಣ ದೊರೆಯಲಿದೆ. ಕರ್ನಾಟಕ ಪವರ್ ಜನರೇಷನ್ ಕಂಪನಿಗೆ ಈ ಮೊತ್ತವನ್ನು ಪಾವತಿಸಬಹುದು. ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕೆಲವು ಸ್ಪಷ್ಟೀಕರಣಗಳ ಅಗತ್ಯವಿದೆ ಎಂದಿದ್ದಾರೆ.

ಅಧಿಕಾರಿಗಳೊಂದಿಗಿನ ಸಭೆಯ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮದು ಅತಿ ಹೆಚ್ವು ಇಂಧನ ಸಹಾಯಧನ ನೀಡುವ ರಾಜ್ಯವಾಗಿದೆ. 15,000 ಕೋಟಿ ರೂ.ಗಳ ಸಹಾಯಧನವನ್ನು ಕರ್ನಾಟಕ ಒದಗಿಸುತ್ತದೆ. ಅದಕ್ಕೆ ಹಿಂದಿನ ವರ್ಷಗಳ ಬಾಕಿ ಮೊತ್ತವನ್ನು ನೀಡಲು ಸಮಯಾವಕಾಶದ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದರು.

ಇಂಧನ ಕ್ಷೇತ್ರದಲ್ಲಿ 4 % ವಿತ್ತೀಯ ಕೊರತೆಗೆ ಅನುಮತಿ ನೀಡಿದ್ದು, ಶೇ. 0.5ರಷ್ಟು ಇಂಧನ ಕ್ಷೇತ್ರಕ್ಕೆ ಮೀಸಲಿಡಲು ಸೂಚನೆ ನೀಡಿದ್ದು, ಇಂಧನ ಕ್ಷೇತ್ರದ ಸುಧಾರಣೆಗಾಗಿ ಈ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಸಚಿವರು ತಿಳಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ರೇಕುಗಳ ಸರಬರಾಜಿಗೆ ರೈಲ್ವೆ ಸಚಿವರಿಗೆ ಮನವಿ: ಕಲ್ಲಿದ್ದಲು ಸಾಗಾಣಿಕೆಗೆ ಅಗತ್ಯವಿರುವ ರೇಕುಗಳ ಸರಬರಾಜಿನ ಕುರಿತು ಚರ್ಚಿಸಲಾಗಿದೆ. ಈ ಬಗ್ಗೆ ರೈಲ್ವೆ ಮಂಡಳಿಯಲ್ಲಿ ಸಂಬಂಧಿಸಿದವರಿಗೆ ಸೂಚನೆ ನೀಡುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಈ ಕುರಿತು ರಾಜ್ಯದ ಮುಖ್ಯ ಕಾರ್ಯದರ್ಶಿಗಳು ರೈಲ್ವೆ ಮಂಡಳಿ ಅಧ್ಯಕ್ಷರೊಂದಿಗೆ ಮಾತನಾಡಲಿದ್ದಾರೆ ಎಂದು ಸಚಿವರು ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಕೇಂದ್ರ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿದೆ. ರಸ್ತೆ ಮತ್ತು ರೈಲ್ವೆ ಯೋಜನೆಗಳಲ್ಲಿ ತೆರಿಗೆ ವಿನಾಯ್ತಿ ಹಾಗೂ ಅನುಮೋದನೆಗಳನ್ನು ನೀಡುವಲ್ಲಿ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಎಸ್​ಟಿಆರ್​​ಆರ್ ರಸ್ತೆಗಳಿಗೆ ಜಿಎಸ್​ಟಿ ವಿನಾಯ್ತಿ ನೀಡಲು ಒಪ್ಪಿಗೆ ನೀಡಲಾಗಿದೆ. ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 50:50 ಪಾಲುದಾರಿಕೆಯಲ್ಲಿ ರೈಲ್ವೆ ಯೋಜನೆಗಳು ಅನುಷ್ಠಾನಗೊಳ್ಳುತ್ತವೆ. ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರದಿಂದ ಒಂದೇ ವರ್ಷ ಸಂಪೂರ್ಣ ಹಣ ಬಿಡುಗಡೆ ಮಾಡಲಾಗುವುದಿಲ್ಲ.

ಆದ್ಯತೆ ಆಧಾರದ ಮೇಲೆ ಹಣ ಬಿಡುಗಡೆ ನಿಗದಿಪಡಿಸಿಕೊಳ್ಳಲಾಗಿದೆ. ಕೆಲವು ರೈಲ್ವೆ ಯೋಜನೆಗಳಲ್ಲಿ ಹಣ ಬಿಡುಗಡೆಯಾಗಿದ್ದರೂ ಭೂ ಸ್ವಾಧೀನದಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರದಲ್ಲಿ ಮಂಜೂರಾತಿ ದೊರೆತು ಅನುದಾನ ಬಿಡುಗಡೆಯಾಗಿರುವ ಪ್ರಮುಖ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರವೂ ಆದ್ಯತೆ ಮೇರೆಗೆ ಅನುದಾನ ಬಿಡುಗಡೆ ಹಾಗೂ ಭೂ ಸ್ವಾಧೀನ ಪ್ರಕ್ರಿಯೆಯನ್ನು ಜಾರಿಗೊಳಿಸುತ್ತಿದೆ ಎಂದು ತಿಳಿಸಿದರು.

ಆರೋಗ್ಯ ಮೂಲಸೌಕರ್ಯಕ್ಕೆ ಅನುದಾನ : ಆರೋಗ್ಯ ಸಚಿವರನ್ನು ಭೇಟಿಯಾಗಿ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಮಾತುಕತೆ ನಡೆಸಲಾಗಿದೆ. ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ರಾಜ್ಯ ಸರ್ಕಾರಕ್ಕೆ ಒದಗಿಸಲು ಮನವಿ ಮಾಡಲಾಗಿದ್ದು, ಅವರು ಅದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.






ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...