ads

Search This Blog

Thursday, 19 December 2024

ಅಶ್ಲೀಲ ಪದ ಬಳಕೆ: ಬಿಜೆಪಿ ಸಿಟಿ ರವಿ ಬಂಧನ

 ಅಶ್ಲೀಲ ಪದ ಬಳಕೆ: ಬಿಜೆಪಿ ಸಿಟಿ ರವಿ ಬಂಧನ

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು, ಸುವರ್ಣಸೌಧದಲ್ಲೇ ಸಿಟಿ ರವಿ ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ಯುತ್ತಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ವಿರುದ್ಧ ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆ ಎಂದು ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಸಿಟಿ ರವಿ ವಿರುದ್ಧ ಎಫ್​​ಐಆರ್ ದಾಖಲಾಗಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮದೇ ಲೆಟರ್‌ಹೆಡ್ ಮೇಲೆ ಅವಾಚ್ಯಪದ ಬಳಕೆ ಆರೋಪಿಸಿ ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ: ಭಾಗ-೧೨.

 ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ: ಭಾಗ-೧೨.


ಅಕ್ಕಮಹಾದೇವಿಯವರು ತಮ್ಮ ಪ್ರವಚನಾಮೃತದ ಶರಣ ಜ್ಞಾನದಲ್ಲಿ ಷಟಸ್ಥಲಕ್ಕೆ ಸಂಬಂಧಿಸಿದ ಶರಣನಾ ಸಾಧನಾ ಮಾರ್ಗವನ್ನು ಹೀಗೆ ಬೋಧಿಸಿರುವರು. 


ಷಟಸ್ಥಲವು ಶರಣನ ಆತ್ಮನಿದ್ದಂತೆ. ಶರಣ ಸಂಸ್ಕೃತಿಯಲ್ಲಿ ಬರುವ ಷಟಸ್ಥಲ ಸಾಧನ ಮಾರ್ಗವು ಸಾಧಕನ ಹರಿಯುವ ಮನಸ್ಸನ್ನು ನಿಲ್ಲಿಸಿ, ಏಕಾಗ್ರಗೊಳಿಸಿ ಪರಮಾತ್ಮನ ಸಾಮರಸ್ಯ(ಸಮಾಜ ಸೇವೆಯಲ್ಲಿ ಒಂದಾಗುವಿಕೆ)ದ ಕಡೆಗೆ ಕೊಂಡೊಯ್ಯುವಲ್ಲಿ ಆತ್ಮನಂತೆ ಕೆಲಸ ಮಾಡುತ್ತದೆ. ಈ ಸಾಧನ ಮಾರ್ಗದ ಷಟಸ್ಥಲವು ಇರುವುದೇ ಸಾಮಾಜಿಕ ಸಾಮರಸ್ಯಕ್ಕಾಗಿ. ಷಟಸ್ಥಲದ ಸಾಧನೆಯು ಸಾಧಕನಲ್ಲಿ ಸಮರಸ ಭಾವವನ್ನು ಮೂಡಿಸಿ, ಸಮಾಜದ ಸೇವೆಯಲ್ಲಿ ತೊಡಗಿಸಿ, ಸಮೂಹ ಜ್ಞಾನಕ್ಕೆ ಇಂಬು ಕೊಡಬೇಕೇ ವಿನಾ ಸಾಧಕನನ್ನು ಏಕಾಂತಕ್ಕೆ ಕೊಂಡೊಯ್ದು ಸಮುಷ್ಟಿ ಪ್ರಜ್ಞೆಯಿಂದ ದೂರ ತಳ್ಳುವುದಕ್ಕಲ್ಲ. ಸಾಧಕನಲ್ಲಿ ಅತಿಯಾದ ಏಕಾಂತ ಜ್ಞಾನವು ಅಹಂಕಾರವನ್ನು ಬೆಳೆಸಿ ಮಡಿವಂತಿಕೆಯನ್ನು ಸೃಷ್ಟಿಸುವಂತಿದ್ದರೆ ಅದು ಶತಸ್ಥಲ ಸಾಧನೆ ಎನಿಸಿಕೊಳ್ಳುವುದಿಲ್ಲ. ಸಮಷ್ಠಿ ಪ್ರಜ್ಞೆ ಜಾಗೃತಿಗೊಂಡು ಸೇವೆಯಲ್ಲಿ ಸಮರಸ ಭಾವವನ್ನು, ನಿಸ್ವಾರ್ಥ ಮತ್ತು ನಿರ್ಲಿಪ್ತತೆಯನ್ನು ಒಡಮೂಡಿಸುವುದೇ ಷಟಸ್ಥಲ ಸಾಧನೆಯ ಅಂತಿಮ ಗುರಿ.


ಷಟಸ್ಥಲಗಳು: ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ. ಈಗ ಷಟಸ್ಥಲಗಳ ವಿಸ್ತೃತ ಭಾವವನ್ನು ಒಂದೊಂದಾಗಿ ಅರಿತು ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕು.

1) ಭಕ್ತ: ದೇವನ ಅನನ್ಯ ಪ್ರೀತಿಯ ಭಕ್ತಿ; ಅದನ್ನು ಸತ್ಯ ಶುದ್ಧವಾಗಿ ಅಳವಡಿಸಿಕೊಂಡವನೇ ಶ್ರದ್ಧಾ ಭಕ್ತನು. ಪ್ರತಿಯೊಂದು ಆತ್ಮಗಳು ಪರಮಾತ್ಮ ಸ್ವರೂಪಗಳನ್ನು ತಿಳಿದು ಆ ಜೀವ ಜಂಗಮಕ್ಕೆ ಸ್ವಾರ್ಥವಿಲ್ಲದೆ ಅನನ್ಯ ಪ್ರೀತಿ ಇಟ್ಟು ಗೌರವಿಸಿ ಸೇವೆಯಲ್ಲಿ ತೊಡಗಿಸಿಕೊಳ್ಳುವುದು, ಸಜ್ಜನನಾಗಿ ಗುರು ಲಿಂಗ ಜಂಗಮಕ್ಕೆ ವಂಚನೆಯಿಲ್ಲದೆ ಇರುವುದು, ತನು-ಮನ-ಧನದಿಂದ ಸೇವೆ ಮಾಡುವುದು, ಮನದಲ್ಲಿ ಪರಮಾತ್ಮನ ಕುರಿತು ಸಂಶಯ ಇಲ್ಲದೇ ಇರುವುದು, ವಿನಯವಂತನಾಗಿರುವುದು, ಸತ್ಯವಂತನಾಗಿರುವುದು, ಶಾಂತ ಸ್ವಭಾವದವನಾಗಿರುವುದು, ಸೂಕ್ಷ್ಮ ಸಂವೇದಿಯಾಗಿರುವುದು ಇವು ಭಕ್ತನ ಲಕ್ಷಣಗಳಾಗಿವೆ. 'ಭಕ್ತ ದೇಹಿಕ ದೇವ, ದೈಹಿಕ ಭಕ್ತ'; ಈ ಭಾವವೇ ಪ್ರೀತಿಯ ಸಾಮ್ರಾಜ್ಯಕ್ಕೆ ಇರುವ ಮೊದಲನೇ ಮೆಟ್ಟಿಲು. ಅದನ್ನೇ ಗುರು ಬಸವಣ್ಣನವರು ತಮ್ಮ ವಚನದಲ್ಲಿ ಹೀಗೆ ಹೇಳುವರು. "ಭಕ್ತಿ ಎಂಬ ನಿಧಾನವ ಸಾಧಿಸುವಡೆ ಶಿವ ಪ್ರೇಮವೆಂಬ ಅಂಜನ ಹಚ್ಚಿಕೊಂಬುದು ಭಕ್ತನಾದವನಿಗೆ ಇದೇ ಪಥವಾಗಿರಬೇಕು ನಮ್ಮ ಕೂಡಲಸಂಗಮದೇವನ ಶರಣರ ಅನುಭವ ಗಜವೈದ್ಯ." ಭಕ್ತಿ ಎನ್ನುವುದು ಒಂದು ಅಮೂಲ್ಯ ಸಂಪತ್ತು. ಎಲ್ಲರೂ ಭಕ್ತಿಯನ್ನು ಮಾಡುವಂತೆ ತೋರುವದಾದರೂ ಅದು ನಿಜಭಕ್ತಿ ಆಗಿರದೆ ತೋರಿಕೆಯ ಭಕ್ತಿಯಾಗಿರುತ್ತದೆ. ಪತ್ತಿಯು ಹೃದಯದ ಅಂತರಾಳದಲ್ಲಿರುವ ನಿಧಿಯಂತೆ. ಭೂಮಿಯ ಅಂತರಾಳದಲ್ಲಿ ಇರುವ ನಿಧಿಯನ್ನು ಕಂಡು ಹಿಡಿಯಲು ಅಂಜನವನ್ನು ಹಚ್ಚಿಕೊಳ್ಳುವರು. ಅದೇ ರೀತಿ ಭಕ್ತಿಯನ್ನು ಕರಗತ ಮಾಡಿಕೊಳ್ಳಬೇಕಾದರೆ ಶಿವಪ್ರೇಮ(Love of God) ಎಂಬ ಅಂಜನವ ಹಚ್ಚಿಕೊಳ್ಳಬೇಕು.


2) ಮಹೇಶ: ಈ ವಿಶ್ವವನ್ನು ಮುನ್ನೆಡೆಸುವ ಕರ್ತನೊಬ್ಬನಿದ್ದಾನೆಂದು ಗಟ್ಟಿಯಾಗಿ ನಂಬುವುದು ಮಹೇಶ ಸ್ಥಲದ ನಿಷ್ಟೆ. ಅಂತಹ ದೇವನು ಅತಿಮಾನುಷವಾಗಿರದೆ, ಎಲ್ಲಿಯೋ ಆಕಾಶದ ಕಡೆ ಮುಖ ಮಾಡಿ ಸ್ವರ್ಗದಲ್ಲಿದ್ದಾನೆಂದು ತೋರಿಸುವ ಮುಗಿಲ ಮರೆಯ ಗೊಂಬೆಯಾಗಿರದೆ, ಕಲ್ಲು, ಮರ, ಕಂಚು, ಹಿತ್ತಾಳೆ ಮುಂತಾದ ಅದಿಭೌತಿಕ ವಸ್ತುಗಳಲ್ಲಿರದೆ ಅವನು ಸಚಾರಚರ ಜೀವಿಗಳಲ್ಲಿ ಚೇತನ ಶಕ್ತಿಯಾಗಿದ್ದಾನೆಂದು ಗಟ್ಟಿಯಾಗಿ ನಂಬಬೇಕು. ಯಾವುದೇ ಭೌತಿಕ ವಸ್ತುಗಳಿಗೆ ದೇವರೆಂದು ಪೂಜಿಸದೆ, ಸ್ವರ್ಗ-ಮರ್ತ್ಯ-ಕೈಲಾಸ ವೈಕುಂಠದಲ್ಲಿರುವನೆಂದು ಅದಿದೈವಿಕವಾಗಿ ಹುಡುಕದೆ, ತನ್ನೊಳಗೆ ಮತ್ತು ಸಮಸ್ತ ಜೀವಿಗಳೊಳಗೆ ಇರುವನೆಂದು ದೃಢವಾಗಿ ನಂಬುವ ಛಲವನ್ನು ಆಧ್ಯಾತ್ಮಿಕವಾಗಿ ಮೈಗೂಡಿಸಿಕೊಳ್ಳುವುದೇ ಮಹೇಶ ಸ್ಥಲದ ನಿಷ್ಠೆಯಾಗಿದೆ. ನಿಷ್ಟೆಯುಳ್ಳವನಾಗಿರುವುದು, ಅನ್ಯದೈವಪೂಜೆ ಮಾಡದಿರುವುದು, ಶೀಲವುಳ್ಳವನಾಗಿರುವುದು, ಕಿರುಕುಳ ದೈವ ಪೂಜೆ ಮಾಡದಿರುವುದು, ಗುರುವಿನ ಅನುಗ್ರಹದಲ್ಲಿ ಮುಂದುವರೆಯುವುದು, ಸದಾಚಾರಿಯಾಗಿರುವುದು ಇವು ಮಹೇಶ ಸ್ಥಲದ ಲಕ್ಷಣಗಳು. ಈ ಛಲದಲ್ಲಿ ನಿರಂತರವಾಗಿ ಮುನ್ನಡೆದು ತಾಪತ್ರಯದ ಜಂಜಡವನ್ನು ಕಳೆದುಕೊಂಡವನೇ ಮಹೇಶ ಸ್ಥಲದ ಅಧಿಪತಿ; ಇದುವೇ ಷಟಸ್ಥಲ ಸಾಧಕನ ಎರಡನೇ ಮೆಟ್ಟಿಲು. ಗುರು ಬಸವಣ್ಣನವರು ಈ ಸ್ಥಲದ ಕುರಿತು ಹೀಗೆ ಹೇಳುವರು. 

"ಛಲಬೇಕು ಶರಣಂಗೆ ʼಪರಧನವನೊಲ್ಲೆನೆಂಬʼ ಛಲಬೇಕು ಶರಣಂಗೆ ʼಪರಸತಿಯನೊಲ್ಲೆನೆಂಬʼ ಛಲಬೇಕು ಶರಣಂಗೆ ʼಪರದೈವವನೊಲ್ಲೆನೆಂಬʼ ಛಲಬೇಕು ಶರಣಂಗೆ ʼಲಿಂಗಜಂಗಮ ಒಂದೆʼ ಎಂಬ ಛಲಬೇಕು ಶರಣಂಗೆ ʼಪ್ರಸಾದ ದಿಟವೆಂಬʼ ಛಲವಿಲ್ಲದವರ ಮೆಚ್ಚ ನಮ್ಮ ಕೂಡಲಸಂಗಮದೇವ." 

ಶರಣ ಪಥಿಕನಾದ ಮಹೇಶ ಸ್ಥಲ ಸಾಧಕನಿಗೆ ಕೆಲವು ವಿಷಯಗಳಲ್ಲಿ ಛಲ, ದೃಢತೆ, ತತ್ತ್ವ ನಿಷ್ಟೆ ಇರಬೇಕು. ತಾನು ಕಾಯಕದಿಂದ ದುಡಿದುದಲ್ಲದ ಪರಧನವನ್ನು ಶರಣನು ನಿರಾಕರಿಸಬೇಕು. ತನ್ನದಲ್ಲದ ಸ್ವತ್ತಿಗೆ ಆಸೆ ಪಡಬಾರದು. ಪರಸ್ತ್ರೀಯರ ಸಂಗವನ್ನು ಬಯಸಬಾರದು. ತನ್ನ ಪತ್ನಿಯಲ್ಲಿಯೇ ಏಕ ನಿಷ್ಟೆಯನ್ನು ಹೊಂದಿರಬೇಕು. ಪಾತಿವ್ರತ್ಯವು ಅಂದರೆ ಏಕ ಪತಿ ನಿಷ್ಠೆ ಸ್ತ್ರೀಗೆ ಎಷ್ಟು ಅಗತ್ಯವೋ ಏಕ ಪತ್ನಿ ನಿಷ್ಠೆಯು ಪುರುಷನಿಗೆ ಅಷ್ಟೇ ಅತ್ಯಗತ್ಯ. ಪರಸ್ತ್ರೀಯನ್ನು ತಾಯಿ ಎಂದು ಕಾಣಬೇಕು. ಸೃಷ್ಟಿಕರ್ತನವರದ್ದು ಅನ್ಯದೈವವನ್ನು ಪೂಜಿಸೆನು ಎಂಬ ಛಲ ಶರಣನಲ್ಲಿರಬೇಕು. ಲಿಂಗ ಜಂಗಮ ಒಂದೇ ಎಂಬ ವಿಶ್ವಾಸ ಶರಣನಿಗೆ ಬೇಕು. ದೇವರು ನಿರಾಕಾರ ಅವನ ಸಾಕಾರ ರೂಪವೇ ಜಂಗಮರು, ತ್ಯಾಗಿಗಳು, ಯೋಗಿಗಳು, ಸಮಾಜ ಸೇವಕರು. ಸಮಾಜವೇ ಜಂಗಮ, ನಿರಾಕಾರ ದೇವರ ಪೂಜೆ ಮಾಡಬೇಕು. ಸಾಕಾರ ಜಂಗಮದ ಸೇವೆ ಮಾಡಬೇಕು. ತನು ಮನ ಧನಗಳು ಜಂಗಮದ ಸೇವೆಯಲ್ಲಿ ಸವೆಯಬೇಕು. ಶರಣನಿಗೆ ಪ್ರಸಾದ ತತ್ವದಲ್ಲಿ ಪೂರ್ಣ ಶ್ರದ್ಧೆ ಇರಬೇಕು. ಪರಮಾತ್ಮನ ಕರುಣೆಯಿಂದ ಅಸಾಧ್ಯ ಸಾಧ್ಯವಾಗುವುದು ಎಂಬ ನಂಬಿಕೆ ಬೆಳೆಯಬೇಕು. ನಿತ್ಯವೂ ಪೂಜಾ ನಂತರ ಸ್ವೀಕರಿಸುವ ಕರುಣ(ಪಾದೋದಕ) ಪ್ರಸಾದದ ಬಗ್ಗೆ ನಿಷ್ಠೆ ಇರಬೇಕು. ಶರಣನಿಗೆ ಪರವಾದಿಯನ್ನು ನಿಗ್ರಹಿಸುವಲ್ಲಿ ಛಲ ಇರಬೇಕು. ತತ್ತ್ವ ಸಿದ್ಧಾಂತಗಳ ಬಗ್ಗೆ ಸರಿಯಾದ ಜ್ಞಾನವನ್ನು ಹೊಂದಿ ಅದನ್ನು ಇತರರಿಗೆ ಮನವರಿಕೆ ಮಾಡಿಕೊಡುವಲ್ಲಿ ಆಸಕ್ತಿ, ಛಲ ಇರಬೇಕು. ಸತ್ಯವನ್ನು ಪ್ರತಿಪಾದಿಸುವಲ್ಲಿ, ವಾದಿಸುವಲ್ಲಿ ಛಲ ಇರಬೇಕು. ಯಾವ ಛಲವೂ ಇಲ್ಲದ ಹೇಡಿಗಳನ್ನು ಮಾನಸಿಕ ದುರ್ಬಲರನ್ನು ಪರಮಾತ್ಮ ಮೆಚ್ಚಿಕೊಳ್ಳನು.


ಮುಂದುವರೆಯುವುದು........


ಪ್ರವಚನಕಾರರು: ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.

ಬಸವಣ್ಣನವರನ್ನು ಮರೆತ ಕನ್ನಡ ಸಾಹಿತ್ಯ ಸಮ್ಮೇಳನ: ಬಸವಪ್ರಭು ಸ್ವಾಮೀಜಿ ಅಪಸ್ವರ

 ಬಸವಣ್ಣನವರನ್ನು ಮರೆತ ಕನ್ನಡ ಸಾಹಿತ್ಯ ಸಮ್ಮೇಳನ: ಬಸವಪ್ರಭು ಸ್ವಾಮೀಜಿ ಅಪಸ್ವರ

ಈ ವರ್ಷದ ಮಂಡ್ಯದಲ್ಲಿ ನಡೆಯವ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಮತ್ತು ಪೋಸ್ಟರಗಳಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಇಲ್ಲದಿರುವುದಕ್ಕೆ ಗುಣತೀರ್ಥದ ಕಲ್ಯಾಣ ಮಹಾಮನೆ ಬಸವಪ್ರಭು ಸ್ವಾಮೀಜಿಯವರು ಅಪಸ್ವರ ಎತ್ತಿದ್ದಾರೆ. ಕನ್ನಡ ಸಾಹಿತ್ಯದ ಆತ್ಮವೆಂದರೆ ವಚನ ಸಾಹಿತ್ಯ ಅಂತಹ ವಚನಸಾಹಿತ್ಯದ ಪಿತಾಮಹ ಎಂದರೆ ಬಸವಣ್ಣನವರು. ಹನ್ನೆರಡನೆ ಶತಮಾನದಲ್ಲಿ ಇವನಾರವ ಇವನಾರವ ಇವನಾರವ ಎನ್ನದೆ, ಇವನಮ್ಮವ ಇವನಮ್ಮವ ಇವನಮ್ಮವ ಎಂದು ಯಾವುದೇ ಜಾತಿ ಮತ ಪಂಥ ಪಂಗಡ ಭೇದವಿಲ್ಲದೆ ಸರ್ವರಿಗೂ ಸಮ ಬಾಳು ಸರ್ವರಿಗೂ ಸಮಪಾಲು ಎಂಬ ಧ್ಯೇಯ ವಾಕ್ಯದೊಂದಿಗೆ ಜಗಬದುಕಲಿ ಜನ ಬದುಕುವ ತತ್ವವನ್ನು ನೀಡಿ, ವಿಶ್ವದ ಮೊದಲ ಸಂಸತ್ತು ಅನುಭವ ಮಂಟಪವನ್ನು ಸ್ಥಾಪಿಸಿ ತನ್ಮೂಲಕ ವಿಶ್ವ ಸಮಾನತೆಯನ್ನು ಸಾರಿದವರು ಬಸವಣ್ಣನವರು. ಕನ್ನಡದಲ್ಲಿಯೇ ವಚನಗಳನ್ನು ಬರೆದು ಕನ್ನಡದ ಭಾಷೆಯನ್ನು ದೇವ ಭಾಷೆಯನ್ನಾಗಿಸಿದವರು, ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದವರು ಗುರು ಬಸವಾದಿ ಶರಣರು ಇಂತಹ ಬಸವಣ್ಣನವರನ್ನು ಕರ್ನಾಟಕ ಸರ್ಕಾರ ಕನ್ನಡ ನೆಲದ ರಾಯಭಾರಿ, ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಗೌರವ ನೀಡಿದೆ, ಪ್ರತಿಯೊಂದು ಕಛೇರಿಯಲ್ಲಿ ಅವರ ಭಾವಚಿತ್ರವನ್ನು ಅಳವಡಿಸಿದೆ. ಹೀಗಿರುವಾಗ ಈ ವರ್ಷ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಮತ್ತು ಪೋಸ್ಟರಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಹಾಕದಿರುವುದು ಹಾಗೂ ಸಮ್ಮೇಳನದಲ್ಲಿ ಶರಣರಿಗೆ ಸಂಬಂಧಿಸಿದ ಒಂದು ಗೋಷ್ಠಿಯನ್ನೂ ಏರ್ಪಡಿಸದೇ ಅಗೌರವ ತೋರಿರುವುದು ಕನ್ನಡ ಸಾಹಿತ್ಯ ಪರಿಷತ್ತಿನ ಅಜ್ಞಾನವೋ ಅಥವಾ ವೈದಿಕ ಮನಸ್ಸುಗಳ ಕುತಂತ್ರವೋ ಎಂದು ಪ್ರಶ್ನಿಸಿದ್ದಾರೆ. 


ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪನವರು ಅವರು ಬಸವಾದಿ ಪ್ರಮಥರ ಬಗ್ಗೆ ಅಪಾರ ಗೌರವವನ್ನು ಹೊಂದಿರುವವರು, ಅನುಭವ ಮಂಟಪ ನಿರ್ಮಾಣದ ಸಲಹಾ ಸಮಿತಿಯ ಅಧ್ಯಕ್ಷರೂ ಆಗಿರುವ ಅವರು ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಅವರು ಈ ಬಗ್ಗೆ ಗಮನ ಹರಿಸದೇ ಇರುವುದು ಮತ್ತು ಅವರ ನೇತೃತ್ವದಲ್ಲಿ ನಡೆಯುವ ಸಮ್ಮೇಳನದಲ್ಲಿ ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಯಾವ ಗೋಷ್ಠಿಯೂ ಇಲ್ಲದಿರುವುದು ಬೇಸರದ ಸಂಗತಿ .


ಬಸವಣ್ಣನವರು ಕುವೆಂಪು ಮತ್ತು ಕನ್ನಡ ನೆಲದ ಎರಡು ಕಣ್ಣುಗಳು ಅವರನ್ನೇ ಕಡೆಗಣಿಸಿ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುವುದು ಭಂಡತನದ ಪರಮಾವಧಿ ಎಂದರು. ಈ ಕೂಡಲೇ ಮಾನ್ಯ ಜಿಲ್ಲಾಧಿಕಾರಿಗಳು ಎತ್ತೆಚ್ಚುಕೊಂಡು ಈ ಎರಡು ಮಹಾನ್ ಚೇತನಗಳ ಭಾವಚಿತ್ರವನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಪೋಸ್ಟರ್ ಮತ್ತು ಆಹ್ವಾನ ಪತ್ರಿಕೆಯಲ್ಲಿ ಹಾಕುವಂತೆ ಹಾಗೂ ಸಮ್ಮೇಳನಗಳಲ್ಲಿ ವಚನಸಾಹಿತ್ಯದ ಕುರಿತಾದ ಗೋಷ್ಟಿಗಳನ್ನು ಏರ್ಪಡಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೂಚಿಸಿ ಆದೇಶ ಹೊರಡಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಒಂದು ವೇಳೆ ಹಾಕದೇ ಹೋದರೆ ಕಸಾಪ ನಡೆಸುವ ಸಮ್ಮೇಳನದಲ್ಲಿ ಬಸವಪರ ಸಂಘಟನೆ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳಿಂದ ಕಪ್ಪುಬಟ್ಟೆ ಪ್ರದರ್ಶಿಸಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. 


ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣ.

ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ: ಭಾಗ-೧೧.

 ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ: ಭಾಗ-೧೧.


1) ಗಣಾಚಾರ: ಗಣ ಎಂದರೆ ಉಸಿರಾಡುವ ಜೀವಗಳ ಸಮುದಾಯ. ಗುಂಪು ಎಂಬ ಅರ್ಥವಿದೆ. ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದವೆಂಬ ಅಷ್ಟಾವರಣ ಕುರಿತು ಯಾರಾದರೂ ವಿಡಂಬನೆ, ನಿಂದೆ ಮಾಡಿದರೆ ಅದನ್ನು ಹೇಡಿತನದಿಂದ ಸಹಿಸಿಕೊಳ್ಳದೆ ಅಂಥ ನಿಂದಕರಿಗೆ ಶಿಕ್ಷೆ ನೀಡುವ ನಿಷ್ಠೆಯೇ ಗಣಾಚಾರ. ಹೀಗೆ ತಿಳಿಯುವುದು. ಇದು ಜ್ಞಾನವಾದರೆ . ಆ ಸಮುದಾಯಕ್ಕೆ ಅನ್ಯಾಯವಾದಾಗ ಸಾತ್ವಿಕವಾಗಿ ಪ್ರತಿಭಟಿಸಿ ನ್ಯಾಯ ಒದಗಿಸುವುದು ಆಚಾರ. ಪರಸ್ಪರ ವ್ಯಕ್ತಿಗಳಲ್ಲಿ ಅಥವಾ ಸಮುದಾಯಗಳಲ್ಲಿ ದೇಹ ಭಾವದ ಅಜ್ಞಾನ ಕಾರಣವಾಗಿ ವ್ಯತ್ಯಾಸಗಳು ಉಂಟಾದಾಗ ಅವರಿರ್ವವರಲ್ಲಿ ಆತ್ಮ ಭಾವ ಪ್ರಜ್ಞೆ ಮೂಡಿಸಿ, ಆತ್ಮರುಗಳನ್ನೆಲ್ಲ ಒಗ್ಗೂಡಿಸಿ ಪರಮಾತ್ಮನೆಡೆಗೆ ಕೊಂಡಯ್ಯುವುದೇ ಗಣಾಚಾರದ ತತ್ತ್ವದ ಉದ್ಧೇಶ. ನನಗೆ ಯಾರು ಕೂಡ ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಹಿಂಸೆ ಮಾಡಬಾರದೆಂದು ಬಯಸುತ್ತೇನೆಯೋ ಹಾಗೆಯೇ ನಾನು ಕೂಡ ಇನ್ನೊಬ್ಬರಿಗೆ ತೊಂದರೆ ಕೊಡಬಾರದು ಎಂಬ ನಿಷ್ಠೆಯನ್ನು ಹೊಂದುವುದು ಗಣಾಚಾರದ ನೀತಿ. ಗಣಚಾರದಲ್ಲಿ ಎರಡು ಬಗೆ. ತಾನು ತಪ್ಪು ಮಾಡಿದಾಗ ತಿದ್ದುಕೊಳ್ಳಲು ಆತ್ಮಾವಲೋಕನಕ್ಕಿಳಿವುದು. ಇನ್ನೊಂದು ಸಮಾಜ ವ್ಯವಸ್ಥೆಯಲ್ಲಿ ನಡೆಯುವ ಅನ್ಯಾಯ ಅತ್ಯಾಚಾರದ ವಿರುದ್ಧ ಧ್ವನಿಯೆತ್ತಿ ಸಾತ್ವಿಕವಾಗಿ ಪ್ರತಿಭಟಿಸಿ ನ್ಯಾಯ ಒದಗಿಸುವುದು. ಗುರು ಬಸವಣ್ಣನವರು ಈ ಆಚಾರದ ಕುರಿತು ಹೀಗೆ ಹೇಳುವರು. "ಆಪ್ಯಾಯನಕ್ಕೆ ನೀಡುವೆ, ಲಾಂಛನಕ್ಕೆ ಶರಣೆಂಬೆ. ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದಡೆ ಕೂಡಲಸಂಗಮದೇವಾ, ನೀ ಸಾಕ್ಷಿಯಾಗಿ ಛೀ ಎಂಬೆನು."  ಮಾನವೀಯ ದೃಷ್ಟಿಯಿಂದ ಸಮಾಜದಲ್ಲಿ ಹಸಿದವರಿಗೆ ಅನ್ನವ ನೀಡುವುದು, ಗುರು-ಹಿರಿಯರನ್ನು, ಲಾಂಛನದಾರಿಗಳನ್ನು ಗೌರವಿಸಬೇಕು ನಿಜ. ಆದರೆ ಲಾಂಛನಕ್ಕೆ ತಕ್ಕಂತೆ ನಡೆ ನುಡಿ ಇಲ್ಲವಾದರೆ ಅಂಥವರ ವಿರುದ್ಧ ಧ್ವನಿ ಎತ್ತಿ ಲಾಂಛನದ ಗೌರವ ಉಳಿಸುವುದು ಗಣಾಚಾರದ ನೀತಿ ಎನ್ನುತ್ತಾರೆ ಗುರು ಬಸವಣ್ಣನವರು.


5) "ಭೃತ್ಯಾಚಾರ" ಮರ್ತ್ಯಲೋಕದಲ್ಲಿ ಪ್ರತಿಯೊಂದು ಜೀವಿಗಳು ಪರಮಾತ್ಮನ ಸ್ವರೂಪವೆಂದು ಮತ್ತು ಪರಮ ಜ್ಞಾನಿಗಳು ಶ್ರೇಷ್ಠರೆಂದು ಅವರ ಸೇವಕ(ಭೃತ್ಯ) ತಾನೇ ಎಂದು ಕಿಂಕರ ಭಾವದಿಂದ ಸಮಾಜ ಸೇವೆ ಮಾಡುವುದು ಭತ್ಯಾಚಾರ. ಹೀಗೆ ನಾನು ಕಿಂಕರ ಈ ಕರ್ತವ್ಯಕ ಮಟ್ಟದಲ್ಲಿ ಜನಿಸಿ ಬಂದ ಪರಮಾತ್ಮನ(ಸಮಾಜದ) ಕರ್ತವ್ಯ ನಿಷ್ಟ ಸೇವಕ ಎಂದು ತಿಳಿಯುವುದು ಭೃತ್ಯಾಚಾರದ ಜ್ಞಾನ. ಅದರಂತೆ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಆಚಾರ. ಶಿವಶರಣರೆ(ಸಮಾಜವೆ) ಹಿರಿಯರಾಗಿ ತಾನೇ ಕಿರಿಯನಾಗಿ ಶ್ರದ್ಧಾ ಭಕ್ತಿಯಿಂದ ಆದರಿಸುವುದೇ ಭೃತ್ಯಾಚಾರದ ನಡೆಯಾಗಿದೆ. ವಿದ್ಯೆ, ಅಂತಸ್ತು, ಅಧಿಕಾರ, ಜ್ಞಾನ, ರೂಪ ಹೀಗೆ ವಿಷಯ ಯಾವುದೇ ಇರಲಿ, ಆ ವಿಷಯದಲ್ಲಿ ತಾನು ಎಷ್ಟೇ ಪಾರಂಗತನಾಗಿರಲಿ ಕಿಂಕರನಾಗಿ ವರ್ತಿಸುವುದು ಬಹಳ ಮುಖ್ಯ. ಇದಕ್ಕೆ ಬಸವಣ್ಣನವರೇ ನಮಗೆ ಅತ್ಯುತ್ತಮ ನಿದರ್ಶನವಾಗುತ್ತಾರೆ. ಅವರೇ ಹೇಳುವಂತೆ, "ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ ಕೂಡಲಸಂಗಮದೇವಾ ಎನಗಿದೇ ದಿಭ್ಯ." ಈ ವಚನ ಭಾವವನ್ನು ಮೈಗೂಡಿಸಿಕೊಂಡ ಬಸವಣ್ಣನವರು ಕಳ್ಳನಲ್ಲಿ, ಕೊಲೆಗಡುಕನಲ್ಲಿ ದೈಹಿಕ ಮತ್ತು ಮಾನಸಿಕ ಬಡತನ ತೊಲಗಿಸಿ ಪರಮಾತ್ಮನನ್ನು ಕಂಡರು. ಈ ನಡವಳಿಕೆಯೆ ಅವರನ್ನು ವಿಶ್ವಗುರುವನ್ನಾಗಿಸಿತು.


ಈ ರೀತಿಯಾಗಿ ಅಕ್ಕಮಹಾದೇವಿಯವರು ತಮ್ಮ ಶರಣ ಜ್ಞಾನ ಪ್ರವಚನದಲ್ಲಿ ಪಂಚಾಚಾರದ ಆಚರಣೆಯ ಅರಿವಿನ ಮಾರ್ಗವನ್ನು ವಿಸ್ತೃತವಾಗಿ ತಿಳಿಸಿಕೊಟ್ಟರು. ಈಗ ಪಂಚಾಚಾರದ ಅರಿವನ್ನು ಶ್ರದ್ಧಾಪೂರ್ವಕವಾಗಿ ಆಚಾರಕ್ಕೆ ತಂದುಕೊಳ್ಳುವ ಕ್ರಮವನ್ನು ಅರುಹುತ್ತಾಳೆ.

1)ಲಿಂಗಾಚಾರ: ಪರಮಾತ್ಮನೊಬ್ಬನಿದ್ದಾನೆಂದು ನಂಬಬೇಕು ಅವನನ್ನು ಇಷ್ಟಲಿಂಗ ರೂಪದಲ್ಲಿ ನಿರೀಕ್ಷಣೆ ಮಾಡಿ. ತನು ಮನ ಧನ ಸಮಯ ಪ್ರಾಣ ಅಭಿಮಾನ ಪರಮಾತ್ಮನದು ಎಂದು ಭಾವಿಸಿ, ಅವನ ಪ್ರತಿರೂಪವಾದ ಸಮಾಜಕ್ಕೆ ಅವುಗಳನ್ನು ಸಮರ್ಪಿಸಬೇಕು. 

2) ಶಿವಾಚಾರ: ಎಲ್ಲರಲ್ಲೂ ಪರಮಾತ್ಮನನ್ನು ಕಂಡು ಪ್ರೀತಿಯಿಂದ ಮಾತನಾಡಬೇಕು. ಜಾತಿ ಬೇಧ, ವರ್ಗ ಭೇದ, ಲಿಂಗ ಭೇದ, ಸಂಸಾರಿ-ಸನ್ಯಾಸಿ ಎಂಬ ಭೇದವನ್ನು ಮಾಡಬಾರದು. ಯಾವುದೇ ವ್ಯಕ್ತಿ ಕರ್ತವ್ಯ ಪ್ರಜ್ಞೆಯಿಂದ ಬೇರೆ ಬೇರೆ ಕಾಯಕದಲ್ಲಿ ತೊಡಗಿಸಿಕೊಂಡಿದ್ದರೂ ವ್ಯಕ್ತಿತ್ವದಿಂದ ಎಲ್ಲರೂ ಸಮಾನತೆಯಿಂದ ಕಾಣಬೇಕು. 

3) ಸದಾಚಾರ: ದುಶ್ಚಟಗಳ ದಾಸರಾಗಬಾರದು, ಯಾವುದಾದರೂ ಒಂದು ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು ಬಂದಿರುವ ಹಣದಿಂದ ಕುಟುಂಬ ಮತ್ತು ಸಮಾಜ ಮತ್ತು ದೇಶಕ್ಕೆ ದಾಸೋಹಂಭಾವದಲ್ಲಿ ಸಲ್ಲಿಸಿ ಸಂತೃಪ್ತರಾಗಿ ಬದುಕಬೇಕು.

4) ಗಣಾಚಾರ: ಸಮಾಜವು ದೇವನ ಪ್ರತಿರೂಪವಾಗಿರುವುದರಿಂದ ಸಮಾಜಕ್ಕೆ ಅನ್ಯಾಯವಾಗುವುದನ್ನು ತಡೆದು ನ್ಯಾಯ ಕೊಡಿಸಬೇಕು. ವ್ಯಕ್ತಿ ಸಮಾಜದ ಜೀವಿಯಾಗಿರುವುದರಿಂದ ಶರಣ ಸೇವಾದಳ(ಸಂಘಟನೆ)ಕ್ಕೆ ಸೇರಿಕೊಂಡು, ವಾರಕ್ಕೊಮ್ಮೆ ಶರಣ ಸಂಗಮ ಮಾಡಬೇಕು. ವಾರ್ಷಿಕ ಶರಣ ಸಮ್ಮೇಳನಗ(ಶರಣ ಸಮಾಗಮ)ಳಲ್ಲಿ ಭಾಗಿಯಾಗಬೇಕು.

5) ಭೃತ್ಯಾಚಾರ: ಎಂತದ್ದೇ ದೊಡ್ಡ ವ್ಯಕ್ತಿ ಇರಲಿ ಪರಮಾತ್ಮನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ತಿಳಿದು ಕಿಂಕರನಾಗಿ ಕರ್ತವ್ಯದಿಂದ ಸಮಾಜದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು; ಸೇವೆಯಲ್ಲಿ ಪರಮಾತ್ಮನು ಅಡಗಿರುವೆನೆಂದು ಭಾವನಾತ್ಮಕವಾಗಿ ತಿಳಿದುಕೊಂಡಿರಬೇಕು.


ಮುಂದುವರೆಯುವುದು........


ಪ್ರವಚನಕಾರರು: ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.

ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ: ಭಾಗ-೧೦.

 ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ: ಭಾಗ-೧೦.


ಶರಣನ ಆಚಾರ ಮಾರ್ಗ: ಶರಣ ಸಂಸ್ಕೃತಿಯ(ಬಸವ ತತ್ತ್ವದ) ಮಾರ್ಗದಲ್ಲಿ ಬರುವ ಪಂಚಾಚಾರಗಳು ಶರಣನ ಪ್ರಾಣವಾಗಿವೆ. ಇವು ಮಾನವನ ಸರ್ವತೋಮುಖ ಬೆಳವಣಿಗೆಗೆ ಪ್ರೇರಣೆಯನ್ನು ಒದಗಿಸುತ್ತವೆ. ಪಂಚಾಚಾರಗಳಿಗೆ ಶಿವಾಚಾರಗಳೆಂದು ಅಕ್ಕಮಹಾದೇವಿಯವರು ಹೆಸರಿಸುತ್ತಾರೆ. ಶಿವಾಚಾರದ ಮರ್ಮವನ್ನು ತಮ್ಮ ವಚನದ ಮೂಲಕ ಈ ರೀತಿ ಬೋಧಿಸುತ್ತಾ, ಶಿವಾಚಾರಿಯಾದವನು ಪಂಚಾಚಾರಗಳನ್ನು ಅತ್ಯಂತ ನಿಷ್ಟೆಯಿಂದ ಮತ್ತು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಎಚ್ಚರಿಕೆಯನ್ನು ನೀಡುತ್ತಾರೆ. 

"ಭವಿಯಾಚಾರವ ಬಿಡದೆ ಭಯೋಗರವ ಹೊಗದೆ, ಶಿವಾಚಾರದಲ್ಲಿ ನಡೆವ ನಾಯಿಗಳು ಬರಿದೆ ನಾವು ಶಿವಾಚಾರಿಗಳೆಂದರೆ ನಮ್ಮ ಶಿವಾಚಾರಿ ಶರಣ ಬಸವಣ್ಣ ಮೆಚ್ಚ ನೋಡಯ್ಯ. ಶಿವಾಚಾರದ ಮಾರ್ಗವನು, ಶಿವಾಚಾರದ ಮರ್ಮವನು, ಶಿವಾಚಾರದ ವಿಸ್ತಾರವನು ನಮ್ಮ ಶರಣ ಬಸವಣ್ಣ ಬಲ್ಲನಲ್ಲದೆ ಉದರವ ಹೊರೆವ ವೇಷಧಾರಿಗಳೆತ್ತಬಲ್ಲರಯ್ಯ? ಅಂತಪ್ಪ ಶಿವಾಚಾರದ ವಿಸ್ತಾರ ಸಕೀಲ ಹೇಳಿಹೆ ಕೇಳಿರಣ್ಣ. ಅದೆಂತೆಂದೊಡೆ ಲಿಂಗಾಚಾರವೆಂದು, ಸದಾಚಾರವೆಂದು, ಶಿವಾಚಾರವೆಂದು, ಭೃತ್ಯಾಚಾರವೆಂದು, ಗಣಾಚಾರವೆಂದು ಶಿವಾಚಾರವು ಐದುತೆರನಾಗಿಪ್ಪುದು ನೋಡಯ್ಯಾ. ಶ್ರೀ ಗುರು ಕರುಣಿಸಿಕೊಟ್ಟ ಲಿಂಗವನಲ್ಲದೆ ಅನ್ಯದೈವಂಗಳಿಗೆರಗದಿಹುದೇ ಲಿಂಗಾಚಾರ ನೋಡಯ್ಯ. ತಾ ಮಾಡುವ ಸತ್ಯ ಕಾಯಕದಿಂದ ಬಂದ ಅರ್ಥಾದಿಗಳಿಂದ ತನ್ನ ಕುಟುಂಬ ರಕ್ಷಣೆಗೊಂಬ ತೆರದಿ ಗುರುಲಿಂಗಜಂಗಮ ದಾಸೋಹಿಯಾಗಿಪ್ಪುದೇ ಸದಾಚಾರ ನೋಡಯ್ಯ. ಶಿವಭಕ್ತರಾದ ಲಿಂಗಾಂಗಿಗಳಲ್ಲಿ ಪೂರ್ವದ ಜಾತಿಸೂತಕಾದಿಗಳನ್ನು ವಿಚಾರಿಸದೆ ಅವರ ಮನೆಯಲ್ಲಿ ತಾ ಹೊಕ್ಕು ಒಕ್ಕು ಮಿಕ್ಕ ಪ್ರಸಾದವ ಕೊಂಬುದೇ ಶಿವಾಚಾರ ನೋಡಯ್ಯ. ಲಿಂಗಾಂಗಿಗಳಾದ ಶಿವಭಕ್ತರೇ ಮರ್ತ್ಯದಲ್ಲಿ ಮಿಗಿಲಹರೆಂದು ತಾನು ಅವರ ಭೃತ್ಯನೆಂದರಿದು ಅಂತಪ್ಪ ನಿಜಲಿಂಗಾಂಗಿಗಳ ಚಮ್ಮಾವುಗೆಯ ಕಾಯ್ದಿಪ್ಪುದೇ ಭೃತ್ಯಾಚಾರ ನೋಡಯ್ಯ. ಗುರುಲಿಂಗಜಂಗಮ ಪಾದೋದಕ ಪ್ರಸಾದ ರುದ್ರಾಕ್ಷಿ ಮಂತ್ರಗಳೆಂಬಷ್ಟಾವರಣಂಗಳು ತನ್ನ ಪ್ರಾಣಸ್ವರೂಪವಾಗಿ ಅವುಗಳ ನಿಂದೆಯನ್ನು ಕೇಳಿ ಸೈರಿಸದೆ ಶಿಕ್ಷಿಸುವೆನೆಂಬ ನಿಷ್ಠೆಗೊಂಡುದೇ ಗಣಾಚಾರ ನೋಡಯ್ಯ. ಇಂತಪ್ಪ ಶಿವಾಚಾರದ ಆಚಾರವನರಿಯದೆ ನಾ ಶಿವಭಕ್ತ ನಾ ಶಿವಭಕ್ತೆ ನಾ ಶಿವಾಚಾರಿ ಎಂದು ಕೊಂಬ ಶೀಲವಂತರ ನೋಡಿ ಎನ್ನ ಮನ ನಾಚಿ ನಿಮ್ಮಡಿ ಮುಖವಾಯಿತ್ತಯ್ಯ ಶ್ರೀಗಿರಿ ಚೆನ್ನಮಲ್ಲಿಕಾರ್ಜುನ ದೇವರ ದೇವಯ್ಯಾ."

ಭವಿಯ ಆಚಾರ ಎಂದರೆ ಅನಾಚಾರ; ಸ್ನಾನ-ಪೂಜೆ ಇಲ್ಲದೆ ತಿನ್ನುವುದು-ಕುಡಿಯುವುದು; ದುಶ್ಚಟಗಳಿಗೆ ಒಳಗಾಗುವುದು, ದುರಾಚಾರಿಯಾಗಿರುವುದು, ದುರ್ನಡತೆಯಿಂದ ಬದುಕುವುದು ಇವು ಶರಣ ಧರ್ಮಕ್ಕೆ ವಿರುದ್ಧವಾದ ನಡೆಗಳು. ಇವನ್ನೆಲ್ಲ ಮಾಡುವವರ ಜೊತೆ ಒಡನಾಡುವುದು ಶಿವಾಚಾರಿಗೆ ಸಲ್ಲದ ನಡೆ. ಭಯಾರೋಗ ಎಂದರೆ ಶರಣ(ವಿರಕ್ತ)ನು ತಿನ್ನಬಾರದ ಜಾಗದಲ್ಲಿ ಕದ್ದು ತಿನ್ನುವುದು. ಇಂಥ ನಡೆ ಅಳವಡಿಸಿಕೊಂಡು "ನಾವು ಶಿವಾಚಾರಿಗಳು(ಪಂಚಾಚಾರಿಗಳು) ಎಂದು ಹೇಳಿಕೊಂಡರೆ ಪ್ರಥಮಚಾರ್ಯ ಶಿವಾಚಾರಿ ಸಂಘದ ಬಸವಣ್ಣ ಮೆಚ್ಚನು. ಶಿವಾಚಾರದ ಮಾರ್ಗವನ್ನು ಅದರ ಮರ್ಮವನ್ನು ಮತ್ತು ಅದರ ವಿಸ್ತಾರವನ್ನು ಸಂಗನ ಬಸವಣ್ಣನವರು ತಿಳಿದಿರುವವರಲ್ಲದೆ ಹೊಟ್ಟೆಪಾಡಿಗಾಗಿ ಲಾಂಛನ ಧರಿಸಿದ ವೇಷಧಾರಿಗಳು ಎತ್ತಬಲ್ಲರು? ಎಂದು ಪ್ರಶ್ನಿಸಿ ಶಿವಾಚಾರ್ಯರು ಅತ್ಯಂತ ವಿಸ್ತಾರವಾದುದು ಎಂದು ಅಕ್ಕನವರು ಅದನ್ನು ಬಣ್ಣಿಸುತ್ತಾರೆ. 


ಆಚಾರದಲ್ಲಿ ಐದು ಬಗೆಯನ್ನು ಬೋಧಿಸುವರು. 

1) ಲಿಂಗಾಚಾರ(Consistent of monotheism): ಏಕದೇವೋಪಾಸನೆಗೆ ಸ್ಥಿರವಾಗಿರು. 

2) ಶಿವಾಚಾರ(Social equality): ಸಾಮಾಜಿಕ ಸಮಾನತೆ ಬಯಸು.

3) ಸದಾಚಾರ(Economics stability): ಆರ್ಥಿಕ ಸ್ಥಿರತೆ ಕಾಪಾಡು.

4) ಗಣಾಚಾರ(Fighting capacity): ಅನ್ಯಾಯದ ವಿರುದ್ಧ ಹೋರಾಡಲು ಸಾಮರ್ಥ್ಯಗಳಿಸಿಕೊಳ್ಳು.

5) ಭೃತ್ಯಾಚಾರ(Service mentality): ಕರ್ತವ್ಯ ನಿಷ್ಠೆಯಿಂದ ಸೇವಾ ಮನೋಭಾವದಲ್ಲಿರು.

ಈ ಪಂಚಾಚಾರಗಳ ವಿಸ್ಮೃತ ಭಾವವನ್ನು ಅರಿತು ಆಚರಣೆಯಲ್ಲಿ ಹೇಗೆ ತೊಡಿಸಿಕೊಳ್ಳಬೇಕೆಂದು ಅವುಗಳ ವಿವರಣೆಯನ್ನು ನೀಡುತ್ತಾಳೆ. 

1) ಲಿಂಗಾಚಾರ: ಶ್ರೀ ಗುರುವು ಚಿತ್ಕಳೆ ತುಂಬಿ, ಸೃಷ್ಟಿಕರ್ತ ಲಿಂಗದೇವನ (ಸಮಾನತೆಯ)ಕುರುಹಾಗಿ ಇಷ್ಟ ಲಿಂಗವನ್ನು ಕರುಣಿಸುವನು. ಲಿಂಗದೇವನೇ ಪತಿ ಶರಣನು ಸತಿ ಎಂಬ ಭಾವದಿಂದ ಪಾತಿವ್ರತ್ಯ ಭಾವದಿಂದ ಇಷ್ಟಲಿಂಗವನ್ನು ಸಾಧಕನು ಪೂಜಿಸಬೇಕು. ಅದನ್ನು ಬಿಟ್ಟು ಅನ್ಯ ದೈವಂಗಳಿಗೆ ಎರಗುವುದಿಲ್ಲ ಎಂಬ ನಿಷ್ಠೆಯೇ ಏಕದೇವೋಪಾಸನೆ; ಅದೇ ಲಿಂಗಾಚಾರ. ಅದರ ವಿಸ್ತೃತ ಭಾವವು ಹೀಗಿದೆ. ಲಿಂಗ ಎಂದರೆ ಪರಮಾತ್ಮ. ಪರಮಾತ್ಮ ಎಂದರೆ ಸತ್ ಚಿತ್ ಆನಂದಮಯವಾಗಿರುವಂಥದ್ದು. ನಾಮ ರೂಪ ಆಕಾರವಿಲ್ಲದ್ದು. ಅದು ನಿರಾಕಾರ ನಿರ್ಗುಣ ತತ್ವದಿಂದ ಕೂಡಿದೆ. ತನ್ನೊಳಗೊಂಡಂತೆ ಸಕಲ ಜೀವಗಳಲ್ಲಿ ಆತ್ಮ ಸ್ವರೂಪವಾಗಿದೆ ಎಂದು ತಿಳಿಯುವುದು ಲಿಂಗ ತತ್ವದ ಜ್ಞಾನ. ಅಂತ ಚೈತನ್ಯಾತ್ಮಕ ಪರಮಾತ್ಮನನ್ನು ಜೀವ ಜಂಗಮದ(ಸಮಾಜ)ದಲ್ಲಿ ಕಾಣುವುದೇ ಆಚಾರ. ಗುರು ಬಸವಣ್ಣನವರು ಹೇಳುವಂತೆ

"ದೇವನೊಬ್ಬ ನಾಮ ಹಲವು ಪರಮ ಪತಿವ್ರತೆಗೆ ಗಂಡನೊಬ್ಬ. ಮತ್ತೊಂದಕ್ಕೆರಗಿದಡೆ ಕಿವಿ-ಮೂಗ ಕೊಯ್ವನು. ಹಲವು ದೈವದ ಎಂಜಲ ತಿಂಬವರನೇನೆಂಬೆ ಕೂಡಲಸಂಗಮದೇವಾ!" ಈ ಸಮಾಜದಲ್ಲಿ ಒಬ್ಬ ಸತಿ ತನ್ನ ಪತಿಯಲ್ಲಿ ನಿಷ್ಠೆಯನ್ನು ಹೊಂದಿ ಪತಿವ್ರತೆ ಧರ್ಮವನ್ನು ಪಾಲಿಸುವಂತೆ ನಿಜಭಕ್ತನಾದವನು ಒಬ್ಬ ದೇವನಲ್ಲಿ ನಂಬಿಕೆ ಇಟ್ಟು ಸಾಗಬೇಕು. ದೇವನನ್ನು ಹಲವಾರು ಹೆಸರುಗಳಿಂದ ಕರೆದರೂ ಇರುವುದು ಮಾತ್ರ ಒಬ್ಬನೆ. ಇಂದು ಒಂದೊಂದು ಹೆಸರಿಗೆ ಒಂದೊಂದು ರೂಪ ಕೊಟ್ಟು ಆ ರೂಪವನ್ನು ಪೂಜಿಸುವುದನ್ನು ಸಮಾಜದಲ್ಲಿ ಕಾಣುತ್ತೇವೆ; ಇದು ಸರಿಯಾದ ಮಾರ್ಗವಲ್ಲ. ನೀರನ್ನು ಯಾವುದೇ ಭಾಷೆಯಿಂದ ಹೆಸರಿಸಿದರೂ ಅದರ ಮೂಲ ರೂಪ ಬದಲಾಗುವುದಿಲ್ಲ, ಅದರ ರುಚಿಯು ಬದಲಾಗುವುದಿಲ್ಲ. ಆದರೆ ಲೋಕದ ಜನ ದೇವರ ರೂಪವನ್ನೇ ಬದಲಾಯಿಸಿ ದೇವರ ಅಸ್ತಿತ್ವಕ್ಕೆ ಭಂಗ ತರುವರು ಇದು ಅವರ ಅಜ್ಞಾನ. ದೇವರಿಗೆ ಅನಂತ ಹೆಸರುಗಳಿದ್ದರೂ ರೂಪ ಬೇರೆಯಾಗಿರುವುದಿಲ್ಲ ಎಂಬುದನ್ನು ಅರಿತು ಲಿಂಗಾಚಾರದಲ್ಲಿರಬೇಕು.


2) ಶಿವಾಚಾರ: ಯಾವುದೇ ಜಾತಿಯವರು ಲಿಂಗ ದೀಕ್ಷ ಪಡೆದು ಲಿಂಗಾಂಗಿಗಳಾದ ಮೇಲೆ ದೀಕ್ಷಾ ಪೂರ್ವದ ಜಾತಿಯನ್ನು ಹುಡುಕದೆ ಅವರ ಮನೆಯಲ್ಲಿ ಹೋಗಿ ಅವರೊಡನೆ ಪ್ರಸಾದವ ಸೇವಿಸುವ ಸಾಮಾಜಿಕ ಸಮಾನತೆಯೇ ಶಿವಾಚಾರ. ಅದರ ವಿಸ್ತೃತ ಭಾವವನ್ನು ಹೀಗೆ ತಿಳಿದುಕೊಳ್ಳಬೇಕು. ಶಿವ ಎಂದರೆ ಜೀವಸಂಕುಲಗಳ ಒಡೆಯಂದರ್ಥ. ಶಿವನು ಪ್ರತಿಯೊಂದು ಜೀವಿಗಳಲ್ಲಿ ಆತ್ಮ ಸ್ವರೂಪನಾಗಿರುವವನು. ಜೀವ ಇರುವ ಜೀವ ಜಂಗಮ(ಸಮಾಜ)ವು ಶಿವತತ್ವವೇ ಎಂದು ತಿಳಿಯುವುದು ಶಿವ ಜ್ಞಾನ. ಆ ಜೀವಗಳಲ್ಲಿ ಭೇದ ಮಾಡದಿರುವುದೇ ಆಚಾರ. ಶಿವಾಚಾರವೆಂದರೆ ಗುರುಬಸವಣ್ಣನವರು ಹೇಳುವಂತೆ  *"ಇವನಾರವ, ಇವನಾರವ,

ಇವನಾರವನೆಂದೆನಿಸದಿರಯ್ಯಾ.

ಇವ ನಮ್ಮವ, ಇವ ನಮ್ಮವ,

ಇವನಮ್ಮವನೆಂದೆನಿಸಯ್ಯಾ.

ಕೂಡಲಸಂಗಮದೇವಾ

ನಿಮ್ಮ ಮನೆಯ ಮಗನೆಂದೆನಿಸಯ್ಯಾ.*" ಜಾತಿ, ವರ್ಗ, ಲಿಂಗದಿಂದ ಭೇದ ಮಾಡಲಾರೆ ಎಂದು ಸಾಮಾಜಿಕ ಸಮಾನತೆಯನ್ನು ಬಯಸಬೇಕು.


3) "ಸದಾಚಾರ:" ಸತ್ಯ ಶುದ್ಧವಾಗಿ ಕಾಯಕವನ್ನು ಮಾಡುತ್ತ, ಅದರಿಂದ ಬಂದ ಅರ್ಥವನ್ನು ತನ್ನ ಕುಟುಂಬ ರಕ್ಷಣೆಗೆ ಬಳಸುತ್ತಾ ಜೊತೆಗೆ ಗುರುಲಿಂಗ ಜಂಗಮಕ್ಕೆ ವಿನಿಯೋಗಿಸುವ ದಾಸೋಹ ಪ್ರಜ್ಞೆಯೇ ಸದಾಚಾರ; ಇದುವೇ ಈ ಆಚಾರದ ಸದಾ ಜ್ಞಾನ, ಅರಿವು. ಇದರ ವಿಸ್ತೃತ ಭಾವದ ಆಚಾರವೆಂದರೆ ಅರಿತಿರುವ ಸದಾಚಾರದ ನುಡಿಯನ್ನು ನಿತ್ಯ ನಿರಂತರ ನ್ಯಾಯಯುತವಾದ ಆಚರಣೆಯಲ್ಲಿ ಸದಾಕಾಲ ತಂದುಕೊಳ್ಳುವುದು. 'ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗ ಘಟಸರ್ಪ' ಅಂದರೆ ಸತ್ಯ ಶುದ್ಧ ಮತ್ತು ನ್ಯಾಯಯುತವಾದ ಕಾಯಕದಿಂದ ಗುರುಲಿಂಗ ಜಂಗಮರ ದಾಸೋಹ ಸೇವೆಯನ್ನು ಮನಮುಟ್ಟಿ ಮಾಡಬೇಕು. ಆಗ ಆಚಾರ ಸುವಿಚಾರ ಉಚ್ಚಾರಗಳು ಪರಿಶುದ್ಧಗೊಂಡು ಲಿಂಗವು (ಪರಮಾತ್ಮ, ಸಮಾಜ)ಮೆಚ್ಚುವಂತಾಗುತ್ತದೆ. ಅಂತಹ ನಡೆಯು ಸದಾಚಾರವಾಗುತ್ತದೆ. ಹೀಗಾಗದಿದ್ದಲ್ಲಿ ನಮ್ಮ ಕೈಯಲ್ಲಿ ಪೂಜೆಸಲ್ಪಡುವ ಲಿಂಗವೇ ಘಟಸರ್ಪವಾಗಿ ಪರಿಣಮಿಸುತ್ತದೆ. ಗುರು ಬಸವಣ್ಣನವರು ಹೇಳುವಂತೆ "ನಾನು ಆರಂಭವ ಮಾಡುವೆನಯ್ಯಾ ಗುರುಪೂಜೆಗೆಂದು ನಾನು ಬೆವಹಾರವ ಮಾಡುವೆನಯ್ಯಾ ಲಿಂಗಾರ್ಚನೆಗೆಂದು ನಾನು ಪರಸೇವೆಯ ಮಾಡುವೆನಯ್ಯಾ ಜಂಗಮದಾಸೋಹಕ್ಕೆಂದು. ನಾನಾವಾವ ಕರ್ಮಂಗಳ ಮಾಡಿದಡೆಯು ಆ ಕರ್ಮಫಲಭೋಗವ ನೀ ಕೊಡುವೆ ಎಂಬುದ ನಾನು ಬಲ್ಲೆನು. ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಾಡೆನು ನಿಮ್ಮ ಸೊಮ್ಮಿಂಗೆ ಸಲಿಸುವೆನು. ನಿಮ್ಮಾಣೆ ಕೂಡಲಸಂಗಮದೇವಾ." ನಾನು ತನುವನ್ನು ಬಳಸಿ ಮಾಡುವ ಕಾಯಕವೇ ಗುರುಪೂಜೆಯಾಗಿದೆ, ಅದನ್ನೇ ಗುರುಪೂಜೆ ಎಂದು ಭಾವಿಸಿ ಗುರುವಿಗೆ ಸಮರ್ಪಿಸುವೆ. ನಾನು ಮಾಡುವ ಲಿಂಗಾರ್ಚನೆಯೇ ಕಾಯಕದಿಂದ ಬಂದ ಪರಿಣಾಮದ ಸಂಪತ್ತು ವ್ಯವಹಾರವಾಗಿದೆ ಅದನ್ನೆ ಲಿಂಗಯ್ಯನಿಗೆ ಎಡೆಮಾಡುವೆ. ನಾನು ಮಾಡುವ ಕಾಯಕದ ಸತ್ಫಲ ದಾಸೋಹವಾಗಿದೆ ಅದನ್ನು ಸಮಾಜಕ್ಕೆ ಸಮರ್ಪಿಸುವೆ. ಅಂದರೆ ನೀನೇ ಆಗು ಮಾಡಿದ ಧನ ದ್ರವ್ಯವನ್ನು ಗುರು ಲಿಂಗ ರೂಪದಲ್ಲಿ ನಿಮಗೆ ಸಮರ್ಪಿಸಿ ನಿಶ್ಚಿಂತವಾಗಿದ್ದು ಶರಣರ ಸತ್ಸಂಗ ಮಾಡುತ್ತಾ ಪರಮಾತ್ಮನ ಭಾವದಲ್ಲಿ ದಿನಗಳನ್ನು ಕಳೆಯಬೇಕೆಂಬುದು ಸದಾಚಾರದ ನಿಲವು.


ಮುಂದುವರೆಯುವುದು........


ಪ್ರವಚನಕಾರರು: ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.

kannada kirana


 

ಪ್ರಧಾನಿ ಮೋದಿ ತೀವ್ರ ಸಂತಾಪ; ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ಘೋಷಣೆ

 

ಮುಂಬೈ ದೋಣಿ ದುರಂತ: ಪ್ರಧಾನಿ ಮೋದಿ ತೀವ್ರ ಸಂತಾಪ; ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ಘೋಷಣೆ

ನವದೆಹಲಿ: ಗೇಟ್‌ವೇ ಆಫ್ ಇಂಡಿಯಾ ಬಳಿ ಪ್ರಯಾಣಿಕರಿದ್ದ ದೋಣಿಗೆ ಸ್ಪೀಡ್‌ಬೋಟ್ ಡಿಕ್ಕಿ ಹೊಡೆದು 13 ಮಂದಿ ಪ್ರಯಾಣಿಕರು ಮೃತಪಟ್ಟ ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.




ದುರ್ಘಟನೆ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮುಂಬೈನಲ್ಲಿ ದೋಣಿ ಅಪಘಾತದಲ್ಲಿ ಸಾವನ್ನಪ್ಪಿದ ಪ್ರತಿಯೊಬ್ಬರ ಕುಟುಂಬಕ್ಕೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿಗಳ ಪರಿಹಾರವನ್ನು ಪ್ರಧಾನಿ ಘೋಷಿಸಿದ್ದಾರೆ. ಗಾಯಗೊಂಡವರಿಗೆ 50,000 ರೂಪಾಯಿಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರು ಸಿಎಂ ದೇವೇಂದ್ರ ಫಡ್ನವೀಸ್ ಅವರು, 'ಮುಂಬಯಿ ಬಳಿ ಬುಚರ್ ಐಲ್ಯಾಂಡ್‌ನಲ್ಲಿ ಮಧ್ಯಾಹ್ನ 3.55ರ ವೇಳೆಗೆ ನೌಕಾಪಡೆಯ ಬೋಟ್ 'ನೀಲ್‌ಕಮಲ್' ಹೆಸರಿನ ದೋಣಿಗೆ ಡಿಕ್ಕಿ ಹೊಡದು ಅವಘಡ ಸಂಭವಿಸಿದೆ. ಸಂಜೆ 7.30ರ ಮಾಹಿತಿ ಪ್ರಕಾರ 101 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. 10 ಮಂದಿ ಪ್ರಯಾಣಿಕರು ಹಾಗೂ 3 ಮಂದಿ ನೌಕಾಪಡೆಯ ಸಿಬ್ಬಂದಿ ಸೇರಿ ಒಟ್ಟು ದುರಂತದಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಶೋಧಕಾರ್ಯ ಮುಂದುವರಿದಿದೆ. ನಾಪತ್ತೆಯಾದವರ ಹೆಚ್ಚಿನ ವಿವರ ನಾಳೆ ಬೆಳಗ್ಗೆ ಲಭ್ಯವಾಗಲಿದೆ' ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ ಮೃತರ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ 5 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ.


ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...