ads

Search This Blog

Thursday, 19 December 2024

ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ: ಭಾಗ-೧೦.

 ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ: ಭಾಗ-೧೦.


ಶರಣನ ಆಚಾರ ಮಾರ್ಗ: ಶರಣ ಸಂಸ್ಕೃತಿಯ(ಬಸವ ತತ್ತ್ವದ) ಮಾರ್ಗದಲ್ಲಿ ಬರುವ ಪಂಚಾಚಾರಗಳು ಶರಣನ ಪ್ರಾಣವಾಗಿವೆ. ಇವು ಮಾನವನ ಸರ್ವತೋಮುಖ ಬೆಳವಣಿಗೆಗೆ ಪ್ರೇರಣೆಯನ್ನು ಒದಗಿಸುತ್ತವೆ. ಪಂಚಾಚಾರಗಳಿಗೆ ಶಿವಾಚಾರಗಳೆಂದು ಅಕ್ಕಮಹಾದೇವಿಯವರು ಹೆಸರಿಸುತ್ತಾರೆ. ಶಿವಾಚಾರದ ಮರ್ಮವನ್ನು ತಮ್ಮ ವಚನದ ಮೂಲಕ ಈ ರೀತಿ ಬೋಧಿಸುತ್ತಾ, ಶಿವಾಚಾರಿಯಾದವನು ಪಂಚಾಚಾರಗಳನ್ನು ಅತ್ಯಂತ ನಿಷ್ಟೆಯಿಂದ ಮತ್ತು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಎಚ್ಚರಿಕೆಯನ್ನು ನೀಡುತ್ತಾರೆ. 

"ಭವಿಯಾಚಾರವ ಬಿಡದೆ ಭಯೋಗರವ ಹೊಗದೆ, ಶಿವಾಚಾರದಲ್ಲಿ ನಡೆವ ನಾಯಿಗಳು ಬರಿದೆ ನಾವು ಶಿವಾಚಾರಿಗಳೆಂದರೆ ನಮ್ಮ ಶಿವಾಚಾರಿ ಶರಣ ಬಸವಣ್ಣ ಮೆಚ್ಚ ನೋಡಯ್ಯ. ಶಿವಾಚಾರದ ಮಾರ್ಗವನು, ಶಿವಾಚಾರದ ಮರ್ಮವನು, ಶಿವಾಚಾರದ ವಿಸ್ತಾರವನು ನಮ್ಮ ಶರಣ ಬಸವಣ್ಣ ಬಲ್ಲನಲ್ಲದೆ ಉದರವ ಹೊರೆವ ವೇಷಧಾರಿಗಳೆತ್ತಬಲ್ಲರಯ್ಯ? ಅಂತಪ್ಪ ಶಿವಾಚಾರದ ವಿಸ್ತಾರ ಸಕೀಲ ಹೇಳಿಹೆ ಕೇಳಿರಣ್ಣ. ಅದೆಂತೆಂದೊಡೆ ಲಿಂಗಾಚಾರವೆಂದು, ಸದಾಚಾರವೆಂದು, ಶಿವಾಚಾರವೆಂದು, ಭೃತ್ಯಾಚಾರವೆಂದು, ಗಣಾಚಾರವೆಂದು ಶಿವಾಚಾರವು ಐದುತೆರನಾಗಿಪ್ಪುದು ನೋಡಯ್ಯಾ. ಶ್ರೀ ಗುರು ಕರುಣಿಸಿಕೊಟ್ಟ ಲಿಂಗವನಲ್ಲದೆ ಅನ್ಯದೈವಂಗಳಿಗೆರಗದಿಹುದೇ ಲಿಂಗಾಚಾರ ನೋಡಯ್ಯ. ತಾ ಮಾಡುವ ಸತ್ಯ ಕಾಯಕದಿಂದ ಬಂದ ಅರ್ಥಾದಿಗಳಿಂದ ತನ್ನ ಕುಟುಂಬ ರಕ್ಷಣೆಗೊಂಬ ತೆರದಿ ಗುರುಲಿಂಗಜಂಗಮ ದಾಸೋಹಿಯಾಗಿಪ್ಪುದೇ ಸದಾಚಾರ ನೋಡಯ್ಯ. ಶಿವಭಕ್ತರಾದ ಲಿಂಗಾಂಗಿಗಳಲ್ಲಿ ಪೂರ್ವದ ಜಾತಿಸೂತಕಾದಿಗಳನ್ನು ವಿಚಾರಿಸದೆ ಅವರ ಮನೆಯಲ್ಲಿ ತಾ ಹೊಕ್ಕು ಒಕ್ಕು ಮಿಕ್ಕ ಪ್ರಸಾದವ ಕೊಂಬುದೇ ಶಿವಾಚಾರ ನೋಡಯ್ಯ. ಲಿಂಗಾಂಗಿಗಳಾದ ಶಿವಭಕ್ತರೇ ಮರ್ತ್ಯದಲ್ಲಿ ಮಿಗಿಲಹರೆಂದು ತಾನು ಅವರ ಭೃತ್ಯನೆಂದರಿದು ಅಂತಪ್ಪ ನಿಜಲಿಂಗಾಂಗಿಗಳ ಚಮ್ಮಾವುಗೆಯ ಕಾಯ್ದಿಪ್ಪುದೇ ಭೃತ್ಯಾಚಾರ ನೋಡಯ್ಯ. ಗುರುಲಿಂಗಜಂಗಮ ಪಾದೋದಕ ಪ್ರಸಾದ ರುದ್ರಾಕ್ಷಿ ಮಂತ್ರಗಳೆಂಬಷ್ಟಾವರಣಂಗಳು ತನ್ನ ಪ್ರಾಣಸ್ವರೂಪವಾಗಿ ಅವುಗಳ ನಿಂದೆಯನ್ನು ಕೇಳಿ ಸೈರಿಸದೆ ಶಿಕ್ಷಿಸುವೆನೆಂಬ ನಿಷ್ಠೆಗೊಂಡುದೇ ಗಣಾಚಾರ ನೋಡಯ್ಯ. ಇಂತಪ್ಪ ಶಿವಾಚಾರದ ಆಚಾರವನರಿಯದೆ ನಾ ಶಿವಭಕ್ತ ನಾ ಶಿವಭಕ್ತೆ ನಾ ಶಿವಾಚಾರಿ ಎಂದು ಕೊಂಬ ಶೀಲವಂತರ ನೋಡಿ ಎನ್ನ ಮನ ನಾಚಿ ನಿಮ್ಮಡಿ ಮುಖವಾಯಿತ್ತಯ್ಯ ಶ್ರೀಗಿರಿ ಚೆನ್ನಮಲ್ಲಿಕಾರ್ಜುನ ದೇವರ ದೇವಯ್ಯಾ."

ಭವಿಯ ಆಚಾರ ಎಂದರೆ ಅನಾಚಾರ; ಸ್ನಾನ-ಪೂಜೆ ಇಲ್ಲದೆ ತಿನ್ನುವುದು-ಕುಡಿಯುವುದು; ದುಶ್ಚಟಗಳಿಗೆ ಒಳಗಾಗುವುದು, ದುರಾಚಾರಿಯಾಗಿರುವುದು, ದುರ್ನಡತೆಯಿಂದ ಬದುಕುವುದು ಇವು ಶರಣ ಧರ್ಮಕ್ಕೆ ವಿರುದ್ಧವಾದ ನಡೆಗಳು. ಇವನ್ನೆಲ್ಲ ಮಾಡುವವರ ಜೊತೆ ಒಡನಾಡುವುದು ಶಿವಾಚಾರಿಗೆ ಸಲ್ಲದ ನಡೆ. ಭಯಾರೋಗ ಎಂದರೆ ಶರಣ(ವಿರಕ್ತ)ನು ತಿನ್ನಬಾರದ ಜಾಗದಲ್ಲಿ ಕದ್ದು ತಿನ್ನುವುದು. ಇಂಥ ನಡೆ ಅಳವಡಿಸಿಕೊಂಡು "ನಾವು ಶಿವಾಚಾರಿಗಳು(ಪಂಚಾಚಾರಿಗಳು) ಎಂದು ಹೇಳಿಕೊಂಡರೆ ಪ್ರಥಮಚಾರ್ಯ ಶಿವಾಚಾರಿ ಸಂಘದ ಬಸವಣ್ಣ ಮೆಚ್ಚನು. ಶಿವಾಚಾರದ ಮಾರ್ಗವನ್ನು ಅದರ ಮರ್ಮವನ್ನು ಮತ್ತು ಅದರ ವಿಸ್ತಾರವನ್ನು ಸಂಗನ ಬಸವಣ್ಣನವರು ತಿಳಿದಿರುವವರಲ್ಲದೆ ಹೊಟ್ಟೆಪಾಡಿಗಾಗಿ ಲಾಂಛನ ಧರಿಸಿದ ವೇಷಧಾರಿಗಳು ಎತ್ತಬಲ್ಲರು? ಎಂದು ಪ್ರಶ್ನಿಸಿ ಶಿವಾಚಾರ್ಯರು ಅತ್ಯಂತ ವಿಸ್ತಾರವಾದುದು ಎಂದು ಅಕ್ಕನವರು ಅದನ್ನು ಬಣ್ಣಿಸುತ್ತಾರೆ. 


ಆಚಾರದಲ್ಲಿ ಐದು ಬಗೆಯನ್ನು ಬೋಧಿಸುವರು. 

1) ಲಿಂಗಾಚಾರ(Consistent of monotheism): ಏಕದೇವೋಪಾಸನೆಗೆ ಸ್ಥಿರವಾಗಿರು. 

2) ಶಿವಾಚಾರ(Social equality): ಸಾಮಾಜಿಕ ಸಮಾನತೆ ಬಯಸು.

3) ಸದಾಚಾರ(Economics stability): ಆರ್ಥಿಕ ಸ್ಥಿರತೆ ಕಾಪಾಡು.

4) ಗಣಾಚಾರ(Fighting capacity): ಅನ್ಯಾಯದ ವಿರುದ್ಧ ಹೋರಾಡಲು ಸಾಮರ್ಥ್ಯಗಳಿಸಿಕೊಳ್ಳು.

5) ಭೃತ್ಯಾಚಾರ(Service mentality): ಕರ್ತವ್ಯ ನಿಷ್ಠೆಯಿಂದ ಸೇವಾ ಮನೋಭಾವದಲ್ಲಿರು.

ಈ ಪಂಚಾಚಾರಗಳ ವಿಸ್ಮೃತ ಭಾವವನ್ನು ಅರಿತು ಆಚರಣೆಯಲ್ಲಿ ಹೇಗೆ ತೊಡಿಸಿಕೊಳ್ಳಬೇಕೆಂದು ಅವುಗಳ ವಿವರಣೆಯನ್ನು ನೀಡುತ್ತಾಳೆ. 

1) ಲಿಂಗಾಚಾರ: ಶ್ರೀ ಗುರುವು ಚಿತ್ಕಳೆ ತುಂಬಿ, ಸೃಷ್ಟಿಕರ್ತ ಲಿಂಗದೇವನ (ಸಮಾನತೆಯ)ಕುರುಹಾಗಿ ಇಷ್ಟ ಲಿಂಗವನ್ನು ಕರುಣಿಸುವನು. ಲಿಂಗದೇವನೇ ಪತಿ ಶರಣನು ಸತಿ ಎಂಬ ಭಾವದಿಂದ ಪಾತಿವ್ರತ್ಯ ಭಾವದಿಂದ ಇಷ್ಟಲಿಂಗವನ್ನು ಸಾಧಕನು ಪೂಜಿಸಬೇಕು. ಅದನ್ನು ಬಿಟ್ಟು ಅನ್ಯ ದೈವಂಗಳಿಗೆ ಎರಗುವುದಿಲ್ಲ ಎಂಬ ನಿಷ್ಠೆಯೇ ಏಕದೇವೋಪಾಸನೆ; ಅದೇ ಲಿಂಗಾಚಾರ. ಅದರ ವಿಸ್ತೃತ ಭಾವವು ಹೀಗಿದೆ. ಲಿಂಗ ಎಂದರೆ ಪರಮಾತ್ಮ. ಪರಮಾತ್ಮ ಎಂದರೆ ಸತ್ ಚಿತ್ ಆನಂದಮಯವಾಗಿರುವಂಥದ್ದು. ನಾಮ ರೂಪ ಆಕಾರವಿಲ್ಲದ್ದು. ಅದು ನಿರಾಕಾರ ನಿರ್ಗುಣ ತತ್ವದಿಂದ ಕೂಡಿದೆ. ತನ್ನೊಳಗೊಂಡಂತೆ ಸಕಲ ಜೀವಗಳಲ್ಲಿ ಆತ್ಮ ಸ್ವರೂಪವಾಗಿದೆ ಎಂದು ತಿಳಿಯುವುದು ಲಿಂಗ ತತ್ವದ ಜ್ಞಾನ. ಅಂತ ಚೈತನ್ಯಾತ್ಮಕ ಪರಮಾತ್ಮನನ್ನು ಜೀವ ಜಂಗಮದ(ಸಮಾಜ)ದಲ್ಲಿ ಕಾಣುವುದೇ ಆಚಾರ. ಗುರು ಬಸವಣ್ಣನವರು ಹೇಳುವಂತೆ

"ದೇವನೊಬ್ಬ ನಾಮ ಹಲವು ಪರಮ ಪತಿವ್ರತೆಗೆ ಗಂಡನೊಬ್ಬ. ಮತ್ತೊಂದಕ್ಕೆರಗಿದಡೆ ಕಿವಿ-ಮೂಗ ಕೊಯ್ವನು. ಹಲವು ದೈವದ ಎಂಜಲ ತಿಂಬವರನೇನೆಂಬೆ ಕೂಡಲಸಂಗಮದೇವಾ!" ಈ ಸಮಾಜದಲ್ಲಿ ಒಬ್ಬ ಸತಿ ತನ್ನ ಪತಿಯಲ್ಲಿ ನಿಷ್ಠೆಯನ್ನು ಹೊಂದಿ ಪತಿವ್ರತೆ ಧರ್ಮವನ್ನು ಪಾಲಿಸುವಂತೆ ನಿಜಭಕ್ತನಾದವನು ಒಬ್ಬ ದೇವನಲ್ಲಿ ನಂಬಿಕೆ ಇಟ್ಟು ಸಾಗಬೇಕು. ದೇವನನ್ನು ಹಲವಾರು ಹೆಸರುಗಳಿಂದ ಕರೆದರೂ ಇರುವುದು ಮಾತ್ರ ಒಬ್ಬನೆ. ಇಂದು ಒಂದೊಂದು ಹೆಸರಿಗೆ ಒಂದೊಂದು ರೂಪ ಕೊಟ್ಟು ಆ ರೂಪವನ್ನು ಪೂಜಿಸುವುದನ್ನು ಸಮಾಜದಲ್ಲಿ ಕಾಣುತ್ತೇವೆ; ಇದು ಸರಿಯಾದ ಮಾರ್ಗವಲ್ಲ. ನೀರನ್ನು ಯಾವುದೇ ಭಾಷೆಯಿಂದ ಹೆಸರಿಸಿದರೂ ಅದರ ಮೂಲ ರೂಪ ಬದಲಾಗುವುದಿಲ್ಲ, ಅದರ ರುಚಿಯು ಬದಲಾಗುವುದಿಲ್ಲ. ಆದರೆ ಲೋಕದ ಜನ ದೇವರ ರೂಪವನ್ನೇ ಬದಲಾಯಿಸಿ ದೇವರ ಅಸ್ತಿತ್ವಕ್ಕೆ ಭಂಗ ತರುವರು ಇದು ಅವರ ಅಜ್ಞಾನ. ದೇವರಿಗೆ ಅನಂತ ಹೆಸರುಗಳಿದ್ದರೂ ರೂಪ ಬೇರೆಯಾಗಿರುವುದಿಲ್ಲ ಎಂಬುದನ್ನು ಅರಿತು ಲಿಂಗಾಚಾರದಲ್ಲಿರಬೇಕು.


2) ಶಿವಾಚಾರ: ಯಾವುದೇ ಜಾತಿಯವರು ಲಿಂಗ ದೀಕ್ಷ ಪಡೆದು ಲಿಂಗಾಂಗಿಗಳಾದ ಮೇಲೆ ದೀಕ್ಷಾ ಪೂರ್ವದ ಜಾತಿಯನ್ನು ಹುಡುಕದೆ ಅವರ ಮನೆಯಲ್ಲಿ ಹೋಗಿ ಅವರೊಡನೆ ಪ್ರಸಾದವ ಸೇವಿಸುವ ಸಾಮಾಜಿಕ ಸಮಾನತೆಯೇ ಶಿವಾಚಾರ. ಅದರ ವಿಸ್ತೃತ ಭಾವವನ್ನು ಹೀಗೆ ತಿಳಿದುಕೊಳ್ಳಬೇಕು. ಶಿವ ಎಂದರೆ ಜೀವಸಂಕುಲಗಳ ಒಡೆಯಂದರ್ಥ. ಶಿವನು ಪ್ರತಿಯೊಂದು ಜೀವಿಗಳಲ್ಲಿ ಆತ್ಮ ಸ್ವರೂಪನಾಗಿರುವವನು. ಜೀವ ಇರುವ ಜೀವ ಜಂಗಮ(ಸಮಾಜ)ವು ಶಿವತತ್ವವೇ ಎಂದು ತಿಳಿಯುವುದು ಶಿವ ಜ್ಞಾನ. ಆ ಜೀವಗಳಲ್ಲಿ ಭೇದ ಮಾಡದಿರುವುದೇ ಆಚಾರ. ಶಿವಾಚಾರವೆಂದರೆ ಗುರುಬಸವಣ್ಣನವರು ಹೇಳುವಂತೆ  *"ಇವನಾರವ, ಇವನಾರವ,

ಇವನಾರವನೆಂದೆನಿಸದಿರಯ್ಯಾ.

ಇವ ನಮ್ಮವ, ಇವ ನಮ್ಮವ,

ಇವನಮ್ಮವನೆಂದೆನಿಸಯ್ಯಾ.

ಕೂಡಲಸಂಗಮದೇವಾ

ನಿಮ್ಮ ಮನೆಯ ಮಗನೆಂದೆನಿಸಯ್ಯಾ.*" ಜಾತಿ, ವರ್ಗ, ಲಿಂಗದಿಂದ ಭೇದ ಮಾಡಲಾರೆ ಎಂದು ಸಾಮಾಜಿಕ ಸಮಾನತೆಯನ್ನು ಬಯಸಬೇಕು.


3) "ಸದಾಚಾರ:" ಸತ್ಯ ಶುದ್ಧವಾಗಿ ಕಾಯಕವನ್ನು ಮಾಡುತ್ತ, ಅದರಿಂದ ಬಂದ ಅರ್ಥವನ್ನು ತನ್ನ ಕುಟುಂಬ ರಕ್ಷಣೆಗೆ ಬಳಸುತ್ತಾ ಜೊತೆಗೆ ಗುರುಲಿಂಗ ಜಂಗಮಕ್ಕೆ ವಿನಿಯೋಗಿಸುವ ದಾಸೋಹ ಪ್ರಜ್ಞೆಯೇ ಸದಾಚಾರ; ಇದುವೇ ಈ ಆಚಾರದ ಸದಾ ಜ್ಞಾನ, ಅರಿವು. ಇದರ ವಿಸ್ತೃತ ಭಾವದ ಆಚಾರವೆಂದರೆ ಅರಿತಿರುವ ಸದಾಚಾರದ ನುಡಿಯನ್ನು ನಿತ್ಯ ನಿರಂತರ ನ್ಯಾಯಯುತವಾದ ಆಚರಣೆಯಲ್ಲಿ ಸದಾಕಾಲ ತಂದುಕೊಳ್ಳುವುದು. 'ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗ ಘಟಸರ್ಪ' ಅಂದರೆ ಸತ್ಯ ಶುದ್ಧ ಮತ್ತು ನ್ಯಾಯಯುತವಾದ ಕಾಯಕದಿಂದ ಗುರುಲಿಂಗ ಜಂಗಮರ ದಾಸೋಹ ಸೇವೆಯನ್ನು ಮನಮುಟ್ಟಿ ಮಾಡಬೇಕು. ಆಗ ಆಚಾರ ಸುವಿಚಾರ ಉಚ್ಚಾರಗಳು ಪರಿಶುದ್ಧಗೊಂಡು ಲಿಂಗವು (ಪರಮಾತ್ಮ, ಸಮಾಜ)ಮೆಚ್ಚುವಂತಾಗುತ್ತದೆ. ಅಂತಹ ನಡೆಯು ಸದಾಚಾರವಾಗುತ್ತದೆ. ಹೀಗಾಗದಿದ್ದಲ್ಲಿ ನಮ್ಮ ಕೈಯಲ್ಲಿ ಪೂಜೆಸಲ್ಪಡುವ ಲಿಂಗವೇ ಘಟಸರ್ಪವಾಗಿ ಪರಿಣಮಿಸುತ್ತದೆ. ಗುರು ಬಸವಣ್ಣನವರು ಹೇಳುವಂತೆ "ನಾನು ಆರಂಭವ ಮಾಡುವೆನಯ್ಯಾ ಗುರುಪೂಜೆಗೆಂದು ನಾನು ಬೆವಹಾರವ ಮಾಡುವೆನಯ್ಯಾ ಲಿಂಗಾರ್ಚನೆಗೆಂದು ನಾನು ಪರಸೇವೆಯ ಮಾಡುವೆನಯ್ಯಾ ಜಂಗಮದಾಸೋಹಕ್ಕೆಂದು. ನಾನಾವಾವ ಕರ್ಮಂಗಳ ಮಾಡಿದಡೆಯು ಆ ಕರ್ಮಫಲಭೋಗವ ನೀ ಕೊಡುವೆ ಎಂಬುದ ನಾನು ಬಲ್ಲೆನು. ನೀ ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಮಾಡೆನು ನಿಮ್ಮ ಸೊಮ್ಮಿಂಗೆ ಸಲಿಸುವೆನು. ನಿಮ್ಮಾಣೆ ಕೂಡಲಸಂಗಮದೇವಾ." ನಾನು ತನುವನ್ನು ಬಳಸಿ ಮಾಡುವ ಕಾಯಕವೇ ಗುರುಪೂಜೆಯಾಗಿದೆ, ಅದನ್ನೇ ಗುರುಪೂಜೆ ಎಂದು ಭಾವಿಸಿ ಗುರುವಿಗೆ ಸಮರ್ಪಿಸುವೆ. ನಾನು ಮಾಡುವ ಲಿಂಗಾರ್ಚನೆಯೇ ಕಾಯಕದಿಂದ ಬಂದ ಪರಿಣಾಮದ ಸಂಪತ್ತು ವ್ಯವಹಾರವಾಗಿದೆ ಅದನ್ನೆ ಲಿಂಗಯ್ಯನಿಗೆ ಎಡೆಮಾಡುವೆ. ನಾನು ಮಾಡುವ ಕಾಯಕದ ಸತ್ಫಲ ದಾಸೋಹವಾಗಿದೆ ಅದನ್ನು ಸಮಾಜಕ್ಕೆ ಸಮರ್ಪಿಸುವೆ. ಅಂದರೆ ನೀನೇ ಆಗು ಮಾಡಿದ ಧನ ದ್ರವ್ಯವನ್ನು ಗುರು ಲಿಂಗ ರೂಪದಲ್ಲಿ ನಿಮಗೆ ಸಮರ್ಪಿಸಿ ನಿಶ್ಚಿಂತವಾಗಿದ್ದು ಶರಣರ ಸತ್ಸಂಗ ಮಾಡುತ್ತಾ ಪರಮಾತ್ಮನ ಭಾವದಲ್ಲಿ ದಿನಗಳನ್ನು ಕಳೆಯಬೇಕೆಂಬುದು ಸದಾಚಾರದ ನಿಲವು.


ಮುಂದುವರೆಯುವುದು........


ಪ್ರವಚನಕಾರರು: ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...