ads

Search This Blog

Thursday, 19 December 2024

ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ: ಭಾಗ-೧೨.

 ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ: ಭಾಗ-೧೨.


ಅಕ್ಕಮಹಾದೇವಿಯವರು ತಮ್ಮ ಪ್ರವಚನಾಮೃತದ ಶರಣ ಜ್ಞಾನದಲ್ಲಿ ಷಟಸ್ಥಲಕ್ಕೆ ಸಂಬಂಧಿಸಿದ ಶರಣನಾ ಸಾಧನಾ ಮಾರ್ಗವನ್ನು ಹೀಗೆ ಬೋಧಿಸಿರುವರು. 


ಷಟಸ್ಥಲವು ಶರಣನ ಆತ್ಮನಿದ್ದಂತೆ. ಶರಣ ಸಂಸ್ಕೃತಿಯಲ್ಲಿ ಬರುವ ಷಟಸ್ಥಲ ಸಾಧನ ಮಾರ್ಗವು ಸಾಧಕನ ಹರಿಯುವ ಮನಸ್ಸನ್ನು ನಿಲ್ಲಿಸಿ, ಏಕಾಗ್ರಗೊಳಿಸಿ ಪರಮಾತ್ಮನ ಸಾಮರಸ್ಯ(ಸಮಾಜ ಸೇವೆಯಲ್ಲಿ ಒಂದಾಗುವಿಕೆ)ದ ಕಡೆಗೆ ಕೊಂಡೊಯ್ಯುವಲ್ಲಿ ಆತ್ಮನಂತೆ ಕೆಲಸ ಮಾಡುತ್ತದೆ. ಈ ಸಾಧನ ಮಾರ್ಗದ ಷಟಸ್ಥಲವು ಇರುವುದೇ ಸಾಮಾಜಿಕ ಸಾಮರಸ್ಯಕ್ಕಾಗಿ. ಷಟಸ್ಥಲದ ಸಾಧನೆಯು ಸಾಧಕನಲ್ಲಿ ಸಮರಸ ಭಾವವನ್ನು ಮೂಡಿಸಿ, ಸಮಾಜದ ಸೇವೆಯಲ್ಲಿ ತೊಡಗಿಸಿ, ಸಮೂಹ ಜ್ಞಾನಕ್ಕೆ ಇಂಬು ಕೊಡಬೇಕೇ ವಿನಾ ಸಾಧಕನನ್ನು ಏಕಾಂತಕ್ಕೆ ಕೊಂಡೊಯ್ದು ಸಮುಷ್ಟಿ ಪ್ರಜ್ಞೆಯಿಂದ ದೂರ ತಳ್ಳುವುದಕ್ಕಲ್ಲ. ಸಾಧಕನಲ್ಲಿ ಅತಿಯಾದ ಏಕಾಂತ ಜ್ಞಾನವು ಅಹಂಕಾರವನ್ನು ಬೆಳೆಸಿ ಮಡಿವಂತಿಕೆಯನ್ನು ಸೃಷ್ಟಿಸುವಂತಿದ್ದರೆ ಅದು ಶತಸ್ಥಲ ಸಾಧನೆ ಎನಿಸಿಕೊಳ್ಳುವುದಿಲ್ಲ. ಸಮಷ್ಠಿ ಪ್ರಜ್ಞೆ ಜಾಗೃತಿಗೊಂಡು ಸೇವೆಯಲ್ಲಿ ಸಮರಸ ಭಾವವನ್ನು, ನಿಸ್ವಾರ್ಥ ಮತ್ತು ನಿರ್ಲಿಪ್ತತೆಯನ್ನು ಒಡಮೂಡಿಸುವುದೇ ಷಟಸ್ಥಲ ಸಾಧನೆಯ ಅಂತಿಮ ಗುರಿ.


ಷಟಸ್ಥಲಗಳು: ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ. ಈಗ ಷಟಸ್ಥಲಗಳ ವಿಸ್ತೃತ ಭಾವವನ್ನು ಒಂದೊಂದಾಗಿ ಅರಿತು ಸಾಧನೆಯಲ್ಲಿ ತೊಡಗಿಸಿಕೊಳ್ಳಬೇಕು.

1) ಭಕ್ತ: ದೇವನ ಅನನ್ಯ ಪ್ರೀತಿಯ ಭಕ್ತಿ; ಅದನ್ನು ಸತ್ಯ ಶುದ್ಧವಾಗಿ ಅಳವಡಿಸಿಕೊಂಡವನೇ ಶ್ರದ್ಧಾ ಭಕ್ತನು. ಪ್ರತಿಯೊಂದು ಆತ್ಮಗಳು ಪರಮಾತ್ಮ ಸ್ವರೂಪಗಳನ್ನು ತಿಳಿದು ಆ ಜೀವ ಜಂಗಮಕ್ಕೆ ಸ್ವಾರ್ಥವಿಲ್ಲದೆ ಅನನ್ಯ ಪ್ರೀತಿ ಇಟ್ಟು ಗೌರವಿಸಿ ಸೇವೆಯಲ್ಲಿ ತೊಡಗಿಸಿಕೊಳ್ಳುವುದು, ಸಜ್ಜನನಾಗಿ ಗುರು ಲಿಂಗ ಜಂಗಮಕ್ಕೆ ವಂಚನೆಯಿಲ್ಲದೆ ಇರುವುದು, ತನು-ಮನ-ಧನದಿಂದ ಸೇವೆ ಮಾಡುವುದು, ಮನದಲ್ಲಿ ಪರಮಾತ್ಮನ ಕುರಿತು ಸಂಶಯ ಇಲ್ಲದೇ ಇರುವುದು, ವಿನಯವಂತನಾಗಿರುವುದು, ಸತ್ಯವಂತನಾಗಿರುವುದು, ಶಾಂತ ಸ್ವಭಾವದವನಾಗಿರುವುದು, ಸೂಕ್ಷ್ಮ ಸಂವೇದಿಯಾಗಿರುವುದು ಇವು ಭಕ್ತನ ಲಕ್ಷಣಗಳಾಗಿವೆ. 'ಭಕ್ತ ದೇಹಿಕ ದೇವ, ದೈಹಿಕ ಭಕ್ತ'; ಈ ಭಾವವೇ ಪ್ರೀತಿಯ ಸಾಮ್ರಾಜ್ಯಕ್ಕೆ ಇರುವ ಮೊದಲನೇ ಮೆಟ್ಟಿಲು. ಅದನ್ನೇ ಗುರು ಬಸವಣ್ಣನವರು ತಮ್ಮ ವಚನದಲ್ಲಿ ಹೀಗೆ ಹೇಳುವರು. "ಭಕ್ತಿ ಎಂಬ ನಿಧಾನವ ಸಾಧಿಸುವಡೆ ಶಿವ ಪ್ರೇಮವೆಂಬ ಅಂಜನ ಹಚ್ಚಿಕೊಂಬುದು ಭಕ್ತನಾದವನಿಗೆ ಇದೇ ಪಥವಾಗಿರಬೇಕು ನಮ್ಮ ಕೂಡಲಸಂಗಮದೇವನ ಶರಣರ ಅನುಭವ ಗಜವೈದ್ಯ." ಭಕ್ತಿ ಎನ್ನುವುದು ಒಂದು ಅಮೂಲ್ಯ ಸಂಪತ್ತು. ಎಲ್ಲರೂ ಭಕ್ತಿಯನ್ನು ಮಾಡುವಂತೆ ತೋರುವದಾದರೂ ಅದು ನಿಜಭಕ್ತಿ ಆಗಿರದೆ ತೋರಿಕೆಯ ಭಕ್ತಿಯಾಗಿರುತ್ತದೆ. ಪತ್ತಿಯು ಹೃದಯದ ಅಂತರಾಳದಲ್ಲಿರುವ ನಿಧಿಯಂತೆ. ಭೂಮಿಯ ಅಂತರಾಳದಲ್ಲಿ ಇರುವ ನಿಧಿಯನ್ನು ಕಂಡು ಹಿಡಿಯಲು ಅಂಜನವನ್ನು ಹಚ್ಚಿಕೊಳ್ಳುವರು. ಅದೇ ರೀತಿ ಭಕ್ತಿಯನ್ನು ಕರಗತ ಮಾಡಿಕೊಳ್ಳಬೇಕಾದರೆ ಶಿವಪ್ರೇಮ(Love of God) ಎಂಬ ಅಂಜನವ ಹಚ್ಚಿಕೊಳ್ಳಬೇಕು.


2) ಮಹೇಶ: ಈ ವಿಶ್ವವನ್ನು ಮುನ್ನೆಡೆಸುವ ಕರ್ತನೊಬ್ಬನಿದ್ದಾನೆಂದು ಗಟ್ಟಿಯಾಗಿ ನಂಬುವುದು ಮಹೇಶ ಸ್ಥಲದ ನಿಷ್ಟೆ. ಅಂತಹ ದೇವನು ಅತಿಮಾನುಷವಾಗಿರದೆ, ಎಲ್ಲಿಯೋ ಆಕಾಶದ ಕಡೆ ಮುಖ ಮಾಡಿ ಸ್ವರ್ಗದಲ್ಲಿದ್ದಾನೆಂದು ತೋರಿಸುವ ಮುಗಿಲ ಮರೆಯ ಗೊಂಬೆಯಾಗಿರದೆ, ಕಲ್ಲು, ಮರ, ಕಂಚು, ಹಿತ್ತಾಳೆ ಮುಂತಾದ ಅದಿಭೌತಿಕ ವಸ್ತುಗಳಲ್ಲಿರದೆ ಅವನು ಸಚಾರಚರ ಜೀವಿಗಳಲ್ಲಿ ಚೇತನ ಶಕ್ತಿಯಾಗಿದ್ದಾನೆಂದು ಗಟ್ಟಿಯಾಗಿ ನಂಬಬೇಕು. ಯಾವುದೇ ಭೌತಿಕ ವಸ್ತುಗಳಿಗೆ ದೇವರೆಂದು ಪೂಜಿಸದೆ, ಸ್ವರ್ಗ-ಮರ್ತ್ಯ-ಕೈಲಾಸ ವೈಕುಂಠದಲ್ಲಿರುವನೆಂದು ಅದಿದೈವಿಕವಾಗಿ ಹುಡುಕದೆ, ತನ್ನೊಳಗೆ ಮತ್ತು ಸಮಸ್ತ ಜೀವಿಗಳೊಳಗೆ ಇರುವನೆಂದು ದೃಢವಾಗಿ ನಂಬುವ ಛಲವನ್ನು ಆಧ್ಯಾತ್ಮಿಕವಾಗಿ ಮೈಗೂಡಿಸಿಕೊಳ್ಳುವುದೇ ಮಹೇಶ ಸ್ಥಲದ ನಿಷ್ಠೆಯಾಗಿದೆ. ನಿಷ್ಟೆಯುಳ್ಳವನಾಗಿರುವುದು, ಅನ್ಯದೈವಪೂಜೆ ಮಾಡದಿರುವುದು, ಶೀಲವುಳ್ಳವನಾಗಿರುವುದು, ಕಿರುಕುಳ ದೈವ ಪೂಜೆ ಮಾಡದಿರುವುದು, ಗುರುವಿನ ಅನುಗ್ರಹದಲ್ಲಿ ಮುಂದುವರೆಯುವುದು, ಸದಾಚಾರಿಯಾಗಿರುವುದು ಇವು ಮಹೇಶ ಸ್ಥಲದ ಲಕ್ಷಣಗಳು. ಈ ಛಲದಲ್ಲಿ ನಿರಂತರವಾಗಿ ಮುನ್ನಡೆದು ತಾಪತ್ರಯದ ಜಂಜಡವನ್ನು ಕಳೆದುಕೊಂಡವನೇ ಮಹೇಶ ಸ್ಥಲದ ಅಧಿಪತಿ; ಇದುವೇ ಷಟಸ್ಥಲ ಸಾಧಕನ ಎರಡನೇ ಮೆಟ್ಟಿಲು. ಗುರು ಬಸವಣ್ಣನವರು ಈ ಸ್ಥಲದ ಕುರಿತು ಹೀಗೆ ಹೇಳುವರು. 

"ಛಲಬೇಕು ಶರಣಂಗೆ ʼಪರಧನವನೊಲ್ಲೆನೆಂಬʼ ಛಲಬೇಕು ಶರಣಂಗೆ ʼಪರಸತಿಯನೊಲ್ಲೆನೆಂಬʼ ಛಲಬೇಕು ಶರಣಂಗೆ ʼಪರದೈವವನೊಲ್ಲೆನೆಂಬʼ ಛಲಬೇಕು ಶರಣಂಗೆ ʼಲಿಂಗಜಂಗಮ ಒಂದೆʼ ಎಂಬ ಛಲಬೇಕು ಶರಣಂಗೆ ʼಪ್ರಸಾದ ದಿಟವೆಂಬʼ ಛಲವಿಲ್ಲದವರ ಮೆಚ್ಚ ನಮ್ಮ ಕೂಡಲಸಂಗಮದೇವ." 

ಶರಣ ಪಥಿಕನಾದ ಮಹೇಶ ಸ್ಥಲ ಸಾಧಕನಿಗೆ ಕೆಲವು ವಿಷಯಗಳಲ್ಲಿ ಛಲ, ದೃಢತೆ, ತತ್ತ್ವ ನಿಷ್ಟೆ ಇರಬೇಕು. ತಾನು ಕಾಯಕದಿಂದ ದುಡಿದುದಲ್ಲದ ಪರಧನವನ್ನು ಶರಣನು ನಿರಾಕರಿಸಬೇಕು. ತನ್ನದಲ್ಲದ ಸ್ವತ್ತಿಗೆ ಆಸೆ ಪಡಬಾರದು. ಪರಸ್ತ್ರೀಯರ ಸಂಗವನ್ನು ಬಯಸಬಾರದು. ತನ್ನ ಪತ್ನಿಯಲ್ಲಿಯೇ ಏಕ ನಿಷ್ಟೆಯನ್ನು ಹೊಂದಿರಬೇಕು. ಪಾತಿವ್ರತ್ಯವು ಅಂದರೆ ಏಕ ಪತಿ ನಿಷ್ಠೆ ಸ್ತ್ರೀಗೆ ಎಷ್ಟು ಅಗತ್ಯವೋ ಏಕ ಪತ್ನಿ ನಿಷ್ಠೆಯು ಪುರುಷನಿಗೆ ಅಷ್ಟೇ ಅತ್ಯಗತ್ಯ. ಪರಸ್ತ್ರೀಯನ್ನು ತಾಯಿ ಎಂದು ಕಾಣಬೇಕು. ಸೃಷ್ಟಿಕರ್ತನವರದ್ದು ಅನ್ಯದೈವವನ್ನು ಪೂಜಿಸೆನು ಎಂಬ ಛಲ ಶರಣನಲ್ಲಿರಬೇಕು. ಲಿಂಗ ಜಂಗಮ ಒಂದೇ ಎಂಬ ವಿಶ್ವಾಸ ಶರಣನಿಗೆ ಬೇಕು. ದೇವರು ನಿರಾಕಾರ ಅವನ ಸಾಕಾರ ರೂಪವೇ ಜಂಗಮರು, ತ್ಯಾಗಿಗಳು, ಯೋಗಿಗಳು, ಸಮಾಜ ಸೇವಕರು. ಸಮಾಜವೇ ಜಂಗಮ, ನಿರಾಕಾರ ದೇವರ ಪೂಜೆ ಮಾಡಬೇಕು. ಸಾಕಾರ ಜಂಗಮದ ಸೇವೆ ಮಾಡಬೇಕು. ತನು ಮನ ಧನಗಳು ಜಂಗಮದ ಸೇವೆಯಲ್ಲಿ ಸವೆಯಬೇಕು. ಶರಣನಿಗೆ ಪ್ರಸಾದ ತತ್ವದಲ್ಲಿ ಪೂರ್ಣ ಶ್ರದ್ಧೆ ಇರಬೇಕು. ಪರಮಾತ್ಮನ ಕರುಣೆಯಿಂದ ಅಸಾಧ್ಯ ಸಾಧ್ಯವಾಗುವುದು ಎಂಬ ನಂಬಿಕೆ ಬೆಳೆಯಬೇಕು. ನಿತ್ಯವೂ ಪೂಜಾ ನಂತರ ಸ್ವೀಕರಿಸುವ ಕರುಣ(ಪಾದೋದಕ) ಪ್ರಸಾದದ ಬಗ್ಗೆ ನಿಷ್ಠೆ ಇರಬೇಕು. ಶರಣನಿಗೆ ಪರವಾದಿಯನ್ನು ನಿಗ್ರಹಿಸುವಲ್ಲಿ ಛಲ ಇರಬೇಕು. ತತ್ತ್ವ ಸಿದ್ಧಾಂತಗಳ ಬಗ್ಗೆ ಸರಿಯಾದ ಜ್ಞಾನವನ್ನು ಹೊಂದಿ ಅದನ್ನು ಇತರರಿಗೆ ಮನವರಿಕೆ ಮಾಡಿಕೊಡುವಲ್ಲಿ ಆಸಕ್ತಿ, ಛಲ ಇರಬೇಕು. ಸತ್ಯವನ್ನು ಪ್ರತಿಪಾದಿಸುವಲ್ಲಿ, ವಾದಿಸುವಲ್ಲಿ ಛಲ ಇರಬೇಕು. ಯಾವ ಛಲವೂ ಇಲ್ಲದ ಹೇಡಿಗಳನ್ನು ಮಾನಸಿಕ ದುರ್ಬಲರನ್ನು ಪರಮಾತ್ಮ ಮೆಚ್ಚಿಕೊಳ್ಳನು.


ಮುಂದುವರೆಯುವುದು........


ಪ್ರವಚನಕಾರರು: ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...