ads

Search This Blog

Thursday, 19 December 2024

ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ: ಭಾಗ-೧೧.

 ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ: ಭಾಗ-೧೧.


1) ಗಣಾಚಾರ: ಗಣ ಎಂದರೆ ಉಸಿರಾಡುವ ಜೀವಗಳ ಸಮುದಾಯ. ಗುಂಪು ಎಂಬ ಅರ್ಥವಿದೆ. ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದವೆಂಬ ಅಷ್ಟಾವರಣ ಕುರಿತು ಯಾರಾದರೂ ವಿಡಂಬನೆ, ನಿಂದೆ ಮಾಡಿದರೆ ಅದನ್ನು ಹೇಡಿತನದಿಂದ ಸಹಿಸಿಕೊಳ್ಳದೆ ಅಂಥ ನಿಂದಕರಿಗೆ ಶಿಕ್ಷೆ ನೀಡುವ ನಿಷ್ಠೆಯೇ ಗಣಾಚಾರ. ಹೀಗೆ ತಿಳಿಯುವುದು. ಇದು ಜ್ಞಾನವಾದರೆ . ಆ ಸಮುದಾಯಕ್ಕೆ ಅನ್ಯಾಯವಾದಾಗ ಸಾತ್ವಿಕವಾಗಿ ಪ್ರತಿಭಟಿಸಿ ನ್ಯಾಯ ಒದಗಿಸುವುದು ಆಚಾರ. ಪರಸ್ಪರ ವ್ಯಕ್ತಿಗಳಲ್ಲಿ ಅಥವಾ ಸಮುದಾಯಗಳಲ್ಲಿ ದೇಹ ಭಾವದ ಅಜ್ಞಾನ ಕಾರಣವಾಗಿ ವ್ಯತ್ಯಾಸಗಳು ಉಂಟಾದಾಗ ಅವರಿರ್ವವರಲ್ಲಿ ಆತ್ಮ ಭಾವ ಪ್ರಜ್ಞೆ ಮೂಡಿಸಿ, ಆತ್ಮರುಗಳನ್ನೆಲ್ಲ ಒಗ್ಗೂಡಿಸಿ ಪರಮಾತ್ಮನೆಡೆಗೆ ಕೊಂಡಯ್ಯುವುದೇ ಗಣಾಚಾರದ ತತ್ತ್ವದ ಉದ್ಧೇಶ. ನನಗೆ ಯಾರು ಕೂಡ ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಹಿಂಸೆ ಮಾಡಬಾರದೆಂದು ಬಯಸುತ್ತೇನೆಯೋ ಹಾಗೆಯೇ ನಾನು ಕೂಡ ಇನ್ನೊಬ್ಬರಿಗೆ ತೊಂದರೆ ಕೊಡಬಾರದು ಎಂಬ ನಿಷ್ಠೆಯನ್ನು ಹೊಂದುವುದು ಗಣಾಚಾರದ ನೀತಿ. ಗಣಚಾರದಲ್ಲಿ ಎರಡು ಬಗೆ. ತಾನು ತಪ್ಪು ಮಾಡಿದಾಗ ತಿದ್ದುಕೊಳ್ಳಲು ಆತ್ಮಾವಲೋಕನಕ್ಕಿಳಿವುದು. ಇನ್ನೊಂದು ಸಮಾಜ ವ್ಯವಸ್ಥೆಯಲ್ಲಿ ನಡೆಯುವ ಅನ್ಯಾಯ ಅತ್ಯಾಚಾರದ ವಿರುದ್ಧ ಧ್ವನಿಯೆತ್ತಿ ಸಾತ್ವಿಕವಾಗಿ ಪ್ರತಿಭಟಿಸಿ ನ್ಯಾಯ ಒದಗಿಸುವುದು. ಗುರು ಬಸವಣ್ಣನವರು ಈ ಆಚಾರದ ಕುರಿತು ಹೀಗೆ ಹೇಳುವರು. "ಆಪ್ಯಾಯನಕ್ಕೆ ನೀಡುವೆ, ಲಾಂಛನಕ್ಕೆ ಶರಣೆಂಬೆ. ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದಡೆ ಕೂಡಲಸಂಗಮದೇವಾ, ನೀ ಸಾಕ್ಷಿಯಾಗಿ ಛೀ ಎಂಬೆನು."  ಮಾನವೀಯ ದೃಷ್ಟಿಯಿಂದ ಸಮಾಜದಲ್ಲಿ ಹಸಿದವರಿಗೆ ಅನ್ನವ ನೀಡುವುದು, ಗುರು-ಹಿರಿಯರನ್ನು, ಲಾಂಛನದಾರಿಗಳನ್ನು ಗೌರವಿಸಬೇಕು ನಿಜ. ಆದರೆ ಲಾಂಛನಕ್ಕೆ ತಕ್ಕಂತೆ ನಡೆ ನುಡಿ ಇಲ್ಲವಾದರೆ ಅಂಥವರ ವಿರುದ್ಧ ಧ್ವನಿ ಎತ್ತಿ ಲಾಂಛನದ ಗೌರವ ಉಳಿಸುವುದು ಗಣಾಚಾರದ ನೀತಿ ಎನ್ನುತ್ತಾರೆ ಗುರು ಬಸವಣ್ಣನವರು.


5) "ಭೃತ್ಯಾಚಾರ" ಮರ್ತ್ಯಲೋಕದಲ್ಲಿ ಪ್ರತಿಯೊಂದು ಜೀವಿಗಳು ಪರಮಾತ್ಮನ ಸ್ವರೂಪವೆಂದು ಮತ್ತು ಪರಮ ಜ್ಞಾನಿಗಳು ಶ್ರೇಷ್ಠರೆಂದು ಅವರ ಸೇವಕ(ಭೃತ್ಯ) ತಾನೇ ಎಂದು ಕಿಂಕರ ಭಾವದಿಂದ ಸಮಾಜ ಸೇವೆ ಮಾಡುವುದು ಭತ್ಯಾಚಾರ. ಹೀಗೆ ನಾನು ಕಿಂಕರ ಈ ಕರ್ತವ್ಯಕ ಮಟ್ಟದಲ್ಲಿ ಜನಿಸಿ ಬಂದ ಪರಮಾತ್ಮನ(ಸಮಾಜದ) ಕರ್ತವ್ಯ ನಿಷ್ಟ ಸೇವಕ ಎಂದು ತಿಳಿಯುವುದು ಭೃತ್ಯಾಚಾರದ ಜ್ಞಾನ. ಅದರಂತೆ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಆಚಾರ. ಶಿವಶರಣರೆ(ಸಮಾಜವೆ) ಹಿರಿಯರಾಗಿ ತಾನೇ ಕಿರಿಯನಾಗಿ ಶ್ರದ್ಧಾ ಭಕ್ತಿಯಿಂದ ಆದರಿಸುವುದೇ ಭೃತ್ಯಾಚಾರದ ನಡೆಯಾಗಿದೆ. ವಿದ್ಯೆ, ಅಂತಸ್ತು, ಅಧಿಕಾರ, ಜ್ಞಾನ, ರೂಪ ಹೀಗೆ ವಿಷಯ ಯಾವುದೇ ಇರಲಿ, ಆ ವಿಷಯದಲ್ಲಿ ತಾನು ಎಷ್ಟೇ ಪಾರಂಗತನಾಗಿರಲಿ ಕಿಂಕರನಾಗಿ ವರ್ತಿಸುವುದು ಬಹಳ ಮುಖ್ಯ. ಇದಕ್ಕೆ ಬಸವಣ್ಣನವರೇ ನಮಗೆ ಅತ್ಯುತ್ತಮ ನಿದರ್ಶನವಾಗುತ್ತಾರೆ. ಅವರೇ ಹೇಳುವಂತೆ, "ಎನಗಿಂತ ಕಿರಿಯರಿಲ್ಲ, ಶಿವ ಭಕ್ತರಿಗಿಂತ ಹಿರಿಯರಿಲ್ಲ ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ ಕೂಡಲಸಂಗಮದೇವಾ ಎನಗಿದೇ ದಿಭ್ಯ." ಈ ವಚನ ಭಾವವನ್ನು ಮೈಗೂಡಿಸಿಕೊಂಡ ಬಸವಣ್ಣನವರು ಕಳ್ಳನಲ್ಲಿ, ಕೊಲೆಗಡುಕನಲ್ಲಿ ದೈಹಿಕ ಮತ್ತು ಮಾನಸಿಕ ಬಡತನ ತೊಲಗಿಸಿ ಪರಮಾತ್ಮನನ್ನು ಕಂಡರು. ಈ ನಡವಳಿಕೆಯೆ ಅವರನ್ನು ವಿಶ್ವಗುರುವನ್ನಾಗಿಸಿತು.


ಈ ರೀತಿಯಾಗಿ ಅಕ್ಕಮಹಾದೇವಿಯವರು ತಮ್ಮ ಶರಣ ಜ್ಞಾನ ಪ್ರವಚನದಲ್ಲಿ ಪಂಚಾಚಾರದ ಆಚರಣೆಯ ಅರಿವಿನ ಮಾರ್ಗವನ್ನು ವಿಸ್ತೃತವಾಗಿ ತಿಳಿಸಿಕೊಟ್ಟರು. ಈಗ ಪಂಚಾಚಾರದ ಅರಿವನ್ನು ಶ್ರದ್ಧಾಪೂರ್ವಕವಾಗಿ ಆಚಾರಕ್ಕೆ ತಂದುಕೊಳ್ಳುವ ಕ್ರಮವನ್ನು ಅರುಹುತ್ತಾಳೆ.

1)ಲಿಂಗಾಚಾರ: ಪರಮಾತ್ಮನೊಬ್ಬನಿದ್ದಾನೆಂದು ನಂಬಬೇಕು ಅವನನ್ನು ಇಷ್ಟಲಿಂಗ ರೂಪದಲ್ಲಿ ನಿರೀಕ್ಷಣೆ ಮಾಡಿ. ತನು ಮನ ಧನ ಸಮಯ ಪ್ರಾಣ ಅಭಿಮಾನ ಪರಮಾತ್ಮನದು ಎಂದು ಭಾವಿಸಿ, ಅವನ ಪ್ರತಿರೂಪವಾದ ಸಮಾಜಕ್ಕೆ ಅವುಗಳನ್ನು ಸಮರ್ಪಿಸಬೇಕು. 

2) ಶಿವಾಚಾರ: ಎಲ್ಲರಲ್ಲೂ ಪರಮಾತ್ಮನನ್ನು ಕಂಡು ಪ್ರೀತಿಯಿಂದ ಮಾತನಾಡಬೇಕು. ಜಾತಿ ಬೇಧ, ವರ್ಗ ಭೇದ, ಲಿಂಗ ಭೇದ, ಸಂಸಾರಿ-ಸನ್ಯಾಸಿ ಎಂಬ ಭೇದವನ್ನು ಮಾಡಬಾರದು. ಯಾವುದೇ ವ್ಯಕ್ತಿ ಕರ್ತವ್ಯ ಪ್ರಜ್ಞೆಯಿಂದ ಬೇರೆ ಬೇರೆ ಕಾಯಕದಲ್ಲಿ ತೊಡಗಿಸಿಕೊಂಡಿದ್ದರೂ ವ್ಯಕ್ತಿತ್ವದಿಂದ ಎಲ್ಲರೂ ಸಮಾನತೆಯಿಂದ ಕಾಣಬೇಕು. 

3) ಸದಾಚಾರ: ದುಶ್ಚಟಗಳ ದಾಸರಾಗಬಾರದು, ಯಾವುದಾದರೂ ಒಂದು ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು ಬಂದಿರುವ ಹಣದಿಂದ ಕುಟುಂಬ ಮತ್ತು ಸಮಾಜ ಮತ್ತು ದೇಶಕ್ಕೆ ದಾಸೋಹಂಭಾವದಲ್ಲಿ ಸಲ್ಲಿಸಿ ಸಂತೃಪ್ತರಾಗಿ ಬದುಕಬೇಕು.

4) ಗಣಾಚಾರ: ಸಮಾಜವು ದೇವನ ಪ್ರತಿರೂಪವಾಗಿರುವುದರಿಂದ ಸಮಾಜಕ್ಕೆ ಅನ್ಯಾಯವಾಗುವುದನ್ನು ತಡೆದು ನ್ಯಾಯ ಕೊಡಿಸಬೇಕು. ವ್ಯಕ್ತಿ ಸಮಾಜದ ಜೀವಿಯಾಗಿರುವುದರಿಂದ ಶರಣ ಸೇವಾದಳ(ಸಂಘಟನೆ)ಕ್ಕೆ ಸೇರಿಕೊಂಡು, ವಾರಕ್ಕೊಮ್ಮೆ ಶರಣ ಸಂಗಮ ಮಾಡಬೇಕು. ವಾರ್ಷಿಕ ಶರಣ ಸಮ್ಮೇಳನಗ(ಶರಣ ಸಮಾಗಮ)ಳಲ್ಲಿ ಭಾಗಿಯಾಗಬೇಕು.

5) ಭೃತ್ಯಾಚಾರ: ಎಂತದ್ದೇ ದೊಡ್ಡ ವ್ಯಕ್ತಿ ಇರಲಿ ಪರಮಾತ್ಮನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ತಿಳಿದು ಕಿಂಕರನಾಗಿ ಕರ್ತವ್ಯದಿಂದ ಸಮಾಜದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು; ಸೇವೆಯಲ್ಲಿ ಪರಮಾತ್ಮನು ಅಡಗಿರುವೆನೆಂದು ಭಾವನಾತ್ಮಕವಾಗಿ ತಿಳಿದುಕೊಂಡಿರಬೇಕು.


ಮುಂದುವರೆಯುವುದು........


ಪ್ರವಚನಕಾರರು: ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...