ಬಸವಕಲ್ಯಾಣ : ಈ ಜಗತ್ತು ಸೃಷ್ಟಿಕರ್ತ ಪರಮೇಶ್ವರನ ಪ್ರವಾಸಿ ತಾಣವಾಗಿದ್ದು, ನಾವೆಲ್ಲ ಕೆಲ ದಿನಗಳವರೆಗೆ ಸೌಂದರ್ಯವನ್ನು ಅನುಭವಿಸಿ ಮತ್ತೆ ಹಿಂತಿರುಗಲು ಬಂದ ಪ್ರವಾಸಿಗರು ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಯಲದಗುಂಡಿ ಗ್ರಾಮದ ಶ್ರೀ ಪರಮೇಶ್ವರ ಜಾತ್ರೆಯ ಅಂಗವಾಗಿ ಏರ್ಪಡಿಸಿದ ಧರ್ಮಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಪ್ರಕೃತಿ ಸಹಜವಾಗಿ ಜನಿಸಿದ ಪ್ರತಿ ಮನುಷ್ಯ ಭವಚಕ್ರದಲ್ಲಿ ಸಿಲುಕಿ ನರಳದೆ ಸುಖ ಯಾತ್ರಿಕನಾಗಿ ಜೀವನ ಪಯಣ ಸಾಗಿಸಲು, ಮೋಹದ ಪರದೆ ಕಳಚಲು ಭಗವದ್ ದರ್ಶನ ಪಡೆಯಲು ನಿತ್ಯ ಸಂತುಷ್ಟನಾಗಿರುವಂತಹ ಕುಶಲ ಪ್ರಜ್ಞೆ ಬೆಳೆಸಿಕೊಳ್ಳಬೇಕು.
ದೇವನ ಅದ್ಭುತ ಚಿತ್ತಾರವನ್ನು ಕಂಡು ಆನಂದಿಸಬೇಕೆ ವಿನ: ತನ್ನದಾಗಬೇಕೆಂಬ ಹಪಾಹಪಿತನ ಇರಬಾರದು. ದೇವರ ಛತ್ರ ಮುಂದಿನ ಪೀಳಿಗೆಗೆ ವ್ಯವಸ್ಥಿತವಾಗಿ ಬಿಟ್ಟು ಹೋಗಬೇಕಾದ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಲೇಬೇಕಾದ ಸಂಗತಿ.
ನಾವೆಲ್ಲ ಬಂದು ಹೋಗುವ ನೆಂಟರು ಎನ್ನುವುದಕ್ಕೆ ಪರಮೇಶ್ವರನ ಜಾತ್ರೆಯೇ ದೊಡ್ಡ ನಿದರ್ಶನ, ಎಲ್ಲರ ಜೀವನ ಯಾತ್ರೆ ಸಿರಿಸೌಖ್ಯದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ತಾಲೂಕಿನ ಮಾನ್ಯ ಶಾಸಕರಾದ ಶರಣು ಸಲಗರ ಮಾತನಾಡಿ ಜಾತ್ರೆಗಳು ಮಾಡುವುದರ ಜೊತೆಗೆ ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರ ಕೊಡುವುದು ಅವಶ್ಯಕವಾಗಿದೆ.
ಜಾತ್ರೆಗಳಲ್ಲಿ ಸಾಮಾಜಿಕ ನಾಟಕಗಳ ಜೊತೆಗೆ ಧಾರ್ಮಿಕ ಹಾಗೂ ನೀತಿ ಪ್ರದಾನವಾದ ನಾಟಕಗಳು ಮಾಡುವುದರಿಂದ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಬಹುದು ಎಂದು ನುಡಿದರು. ಹಿರೇನಾಗಾಂವನ ಜಯಶಾಂತಲಿಂಗ ಮಹಾಸ್ವಾಮಿಗಳು, ನೀರಾವರಿ ನಿಗಮ ಮಂಡಳಿ ಬೆಂಗಳೂರಿನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರಾದ ಮಲ್ಲಿಕಾರ್ಜುನ ಗುಂಗೆ, ಮುಖಂಡರಾದ ಶಿವಕುಮಾರ ಸೆಟಗಾರ, ಹುಮನಾಬಾದಿನ ಪಿಎಸ್ಐ ಸುರೇಶ ಚೌಹಾಣ ಮಾತನಾಡಿದರು.
ಬಸ್ವತತ್ವ ಪ್ರಚಾರಕರಾದ ಬಸವರಾಜ ಪಂಡಿತ, ಶಿಕ್ಷಕರಾದ ಮಲ್ಲಿನಾಥ ಹಿರೇಮಠ ಹಾರಕೂಡ, ಮುಖಂಡರಾದ ಬಾಬು ಹೊನ್ನಾನಾಯಕ, ಸಂಜು ಸುಗರೆ, ಸಂತೋಷ ಪಾಟೀಲ ಹಾರಕೂಡ, ಸಿದ್ರಾಮಪ್ಪ ಗುದಗೆ, ಸಿದ್ರಾಮಪ್ಪ ಕವಳೆ, ರತಿಕಾಂತ ಕೊಹಿನೂರ, ಸದಾನಂದ ಪಾಟೀಲ, ನಾಗೇಶ ಮಹಾಜನ ಮುಂತಾದವರು ಉಪಸ್ಥಿತರಿದ್ದರು. ಮಲ್ಲಪ್ಪ ಕೋಟೆ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.
No comments:
Post a Comment