ads

Search This Blog

Friday, 20 December 2024

ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ : ಭಾಗ-೨

 ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ : ಭಾಗ-೨



ಅಕ್ಕಮಹಾದೇವಿ


"ಅರಿವು-ಆಚಾರ-ಅನುಭಾವ:"

"ಅಕ್ಕಿಯಿಲ್ಲದ ತುಷಕ್ಕೆ ಅಗ್ಗವಣಿಯನೆರೆದಡೆ ಅದೆಂದಿಂಗೆ ಬೆಳೆದು ಫಲವಪ್ಪುದಯ್ಯಾ ಅರಿವಿಲ್ಲದವರಿಗೆ ಆಚಾರವಿದ್ದಡೆ ಅರಕೆಗೆಟ್ಟು ಸುಖವೆಂದಪ್ಪುದಯ್ಯಾ ಹೊರೆದ ಪರಿಮಳ ಸ್ಥಿರವಾಗಬಲ್ಲುದೆ ಎನ್ನದೇವ ಚೆನ್ನಮಲ್ಲಿಕಾರ್ಜುನನ ಅರಿಯದವರಿಗೆ ಆಚಾರವಿಲ್ಲ ಕಾಣಿರಣ್ಣಾ"

ಈ ವಚನದ ಮೂಲಕ ಅಕ್ಕಮಹಾದೇವಿಯವರು ಅರಿವು-ಆಚಾರ-ಅನುಭಾವದ ಕುರಿತು ಅಮೂಲ್ಯವಾದ ಸಂದೇಶವನ್ನು ನೀಡುತ್ತಾರೆ.  ಕೆಲವು ಉಪಮೆಗಳ ಮೂಲಕ ಆಚಾರ ಮತ್ತು ಅರಿವಿನ ಮಹತ್ವವನ್ನು ತಿಳಿಸಿದ್ದಾರೆ. ಭತ್ತದ ಒಳಗಿನ ತಿರುಳಾದ ಅಕ್ಕಿ ಇಲ್ಲದೆ ಬರೀ ಭತ್ತದ ಹೊಟ್ಟು (ಸಿಪ್ಪೆ)ನ್ನು ಬಿತ್ತಿ, ನೀರು, ಗೊಬ್ಬರ ಹಾಕಿ ಪೋಷಿಸಿದರೆ ಅದು ಎಂದಾದರೂ ಬೆಳೆದು ಫಲ ಕೊಡಲು ಸಾಧ್ಯವೇ? ಇಲ್ಲ. ಏಕೆಂದರೆ ಒಳ ಹೊರಗೆ ಬತ್ತದ ಬಿತ್ತನೆ ಬೀಜ ಸತ್ವಯುತವಾಗಿದ್ದರೆ ಮಾತ್ರ ನೀರು ಗೊಬ್ಬರ ಉಂಡು ಫಲ ಕೊಡುತ್ತದೆ. ಮೇಲೆ ಹೇಳಿದಂತೆ ಬರಿ ಹೊರಗಿನ ಬತ್ತದ ಹೊಟ್ಟಿಗೆ ನೀರು ಗೊಬ್ಬರ ಹಾಕಿದರೆ ಅದು ವ್ಯರ್ಥ ಪರಿಶ್ರಮವಲ್ಲದೆ ಬೇರಲ್ಲ. ತಿಳುವಳಿಕೆ ಅಥವಾ ಅರಿವು, ಜ್ಞಾನ ಇಲ್ಲದೆ ಕೇವಲ ಆಚಾರವನ್ನು ಮಾತ್ರ ಅಳವಡಿಸಿಕೊಂಡು ಆಚಾರವಂತನಾದರೆ ಅದು ಎಂದಿಗೂ ಶಾಶ್ವತ ಪರಿಣಾಮ ಬೀರುವುದಿಲ್ಲ. ಬೆವರಿನ ವಾಸನೆಯಿಂದ ಕೂಡಿದ ಶರೀರಕ್ಕೆ ಸುವಾಸಿತ ದ್ರವ್ಯ ಸಿಂಪಡಿಸಿದರೆ ಅದು ಕ್ಷಣಿಕ ಪರಿಹಾರ ಮಾತ್ರವಾಗುತ್ತದೆ. ಮತ್ತೆ ಶರೀರವು ಬೆವರು ವಾಸನೆಯಿಂದ ಕೂಡುತ್ತದೆ. ಅದೇ ರೀತಿ ಅರಿವಿಲ್ಲದ ಆಚಾರದ ಪರಿಣಾಮವು ಸಹ ಕೆಟ್ಟು ಹೋದ ಗಡಿಯಾರ ದಿನಕ್ಕೆ ಎರಡು ಬಾರಿ ಮಾತ್ರ ಸರಿಯಾದ ಸಮಯ ತೋರಿದಂತೆ ಕ್ಷಣಿಕ ಸತ್ಯವಾಗಿದೆ. ಆದ್ದರಿಂದ ಸರ್ವಶಕ್ತ, ಹುಟ್ಟು-ಸಾವಿಲ್ಲದ, ನಿರಾಕಾರ, ನಿರ್ಗಣನಾದ ಪರಮಾತ್ಮನ ಅಸ್ತಿತ್ವ ಮತ್ತು ಸ್ವರೂಪವನ್ನು ಅರಿತು ಲಿಂಗ ದೀಕ್ಷೆ ಪಡೆದು ಸದಾಚಾರ ಸಂಪನ್ನನಾದಾಗ ಮಾತ್ರ ಆ ಭಕ್ತನ ಆಚಾರಕ್ಕೆ ಫಲ ಸಿಗುತ್ತದೆ. ಉದಾಹರಣೆಗೆ ಒಂದು ಪಕ್ಷಿ ಹಾರಲು ಎರಡು ರೆಕ್ಕೆಗಳು ಮತ್ತು ಒಂದು ಪುಚ್ಚ ಬೇಕು. ಹಾಗೆಯೇ ಭಕ್ತನಿಗೆ ದೇವನ ಸಾಮ್ರಾಜ್ಯದಲ್ಲಿ ಓಲಾಡಬೇಕಾದರೆ ಅರಿವು ಆಚಾರವೆಂಬ ರೆಕ್ಕೆ ಬೇಕು ಜೊತೆಗೆ ಭಕ್ತಿ ಎಂಬ ಪುಚ್ಚ ಬೇಕು. 


ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳ ಅರಿವಿನ ಮಾರ್ಗ, ಪಂಚಾಚಾರದ ಆಚಾರ ಮಾರ್ಗ, ಷಟಸ್ಥಲದ ಸಾಧನ ಮಾರ್ಗಗಳಿವೆ. ಇವುಗಳ ಸಾಧನೆಯಿಂದ ದೇವನ ನಿಜವಾದ ಅರಿವನ್ನು ಅಳವಡಿಸಿಕೊಳ್ಳಬೇಕು. ಇದರ ಹೊರತು ಭಕ್ತನು ಮಾಡುವ ಅನ್ಯ ದೇವತೆಗಳ ಪೂಜೆ, ವೃತ, ನಿಯಮ, ಆಚರಣೆಗಳು ಧರ್ಮಸಮತವಾದುದಲ್ಲ. ಕೇವಲ ಧರ್ಮದ ಲಾಂಛನಗಳನ್ನ ಆಚರಣೆಗೆ ತಂದರೆ ಸಾಲದು; ಲಾಂಛನಗಳ ಅರಿವು, ಆಚಾರಕ್ಕೆ ತಂದಾಗಲೇ ಶರಣ ಜ್ಞಾನದ ಮೂಲತತ್ವದಲ್ಲಿ ಒಂದಾಗಲು ಸಾಧ್ಯ. ಅಲ್ಲದೆ ಅರಿವನ್ನು ಆಚಾರಕ್ಕೆ ತಂದು ಅನುಭಾವದ ಮೂಲಕ ಈ ಜಗತ್ತಿಗೆ ಬೋಧನೆಯನ್ನು ಮಾಡಿ, ಜಗದ ಲೇಸನ್ನು ಬಯಸುವುದು ಶರಣ ಜ್ಞಾನಿಯ ಕರ್ತವ್ಯವಾಗಿದೆ ಎಂದು ಅರಿವು ಆಚಾರ ಅನುಭಾವದ ತಿಳುವರಿಕೆಯನ್ನು ಅಕ್ಕನವರು ಕೊಟ್ಟಿರುವರು. 


ಹಾಗಾದರೆ ಶರಣ ಪದದ ಅರ್ಥ ಮತ್ತು ಅಸ್ತಿತ್ವ ಏನು? ಶರಣನೆಂದರೆ ಯಾರು ಅವನು ಸ್ವರೂಪ, ವ್ಯಕ್ತಿತ್ವ ಏನು? ಶರಣು ಶರಣಾರ್ಥಿ ಎಂದರೇನು? ಶರಣನ ಧ್ಯೇಯ ಏನಾಗಿರಬೇಕು? ಶರಣನ ಮೂಲಭೂತ ಹಕ್ಕುಗಳು ಯಾವವು? ಶರಣನು ಸಾಧಿಸುವ ಸಮನ್ವಯತೆ ಯಾವುದು? ಶರಣನ ಅರಿವು ಮಾರ್ಗ ಯಾವುದು? ಶರಣನ ಆಚಾರ ಮಾರ್ಗ ಯಾವುದು? ಶರಣನ ಸಾಧನಾ ಮಾರ್ಗ ಯಾವುದು? ಶರಣ ಜೀವನದ ದಿನಚರಿ ಹೇಗಿರಬೇಕು?. ಎನ್ನುವ ಪರಿಪೂರ್ಣ ಶರಣಜ್ಞಾನವನ್ನು ಅನುಭವ ಮಂಟಪದಲ್ಲಿ ಗುರು ಬಸವಣ್ಣನವರು ನೇತೃತ್ವದಲ್ಲಿ ಶರಣರು ಚರ್ಚಿಸಿ ಅನುಷ್ಟಾನಕ್ಕೆ ತಂದ ಈ ಎಲ್ಲಾ ಸಂದೇಶವನ್ನು ಅಕ್ಕನು ಮಾರ್ಮಿಕವಾಗಿ ತಿಳಿಸುತ್ತಾಳೆ. 


೧) ಶರಣ ಪದದ ಅರ್ಥ ಮತ್ತು ಅಸ್ತಿತ್ವ ಏನು?:

'ಶರಣ' ಪದದ ಅರ್ಥವು ಆಳವಾದ ತಾತ್ವಿಕ ಅರ್ಥದಿಂದ ಕೂಡಿದೆ. ಪರಮಾತ್ಮನಲ್ಲಿ ಪ್ರಥಮದಲ್ಲಿ ಉದಯವಾದ ಜ್ಞಾನಕ್ಕೆ ಶರಣ ಎಂಬ ಹೆಸರು ಬಂದಿದೆ. 'ಶರಣ' ಎನ್ನುವುದು ಸೃಷ್ಟಿಯ ಪ್ರಥಮ ತತ್ತ್ವ. ಈ ತತ್ತ್ವ ಸಕಲ ಜೀವಾತ್ಮರನ್ನೂ, ಸಮಸ್ತ ಜಗತ್ತನ್ನು ನಿರ್ದೇಶಿಸುತ್ತದೆ. ಆದ್ದರಿಂದ 'ಶರಣ' ಪದವು ವಿಶ್ವದರ್ಶಕ, ಏನೇನೂ ಇಲ್ಲದ ಎಲ್ಲವನ್ನೂ ಒಳಗೊಂಡ ಪರಮಸತ್ಯಕ್ಕೆ 'ಶರಣ' ಎಂದೂ ಶೂನ್ಯ ಸಿದ್ಧಾಂತವು ಕರೆಯಲ್ಪಡುತ್ತದೆ. ಈ ಶರಣನ ಅಸ್ತಿತ್ವದ ಬಗ್ಗೆ ಅಲ್ಲಮಪ್ರಭು ಬಹಳ ಅರ್ಥಪೂರ್ಣವಾಗಿ ಹೇಳಿರುವರು.

"ಶಿಲೆಯೊಳಗಣ ಪಾವಕನಂತೆ ಉದಕದೊಳಗಣ ಪ್ರತಿಬಿಂಬದಂತೆ, ಬೀಜದೊಳಗಣ ವೃಕ್ಷದಂತೆ ಶಬ್ದದೊಳಗಣ ನಿಶ್ಶಬ್ದದಂತೆ, ಗುಹೇಶ್ವರಾ ನಿಮ್ಮ ಶರಣಸಂಬಂಧ"

ಶಿಲೆಯೊಳಗೆ ಅಗ್ನಿ ಇದೆ, ಆದರೆ ಅದು ಕಣ್ಣಿಗೆ ಕಾಣುವುದಿಲ್ಲ. ಹಾಗೆಯೇ ಚಿಧಗ್ನಿ ರೂಪವಾದ ಪರಮಾತ್ಮನು ಈ ಜಗತ್ತಿನಲ್ಲಿ ನಿಗೂಢವಾಗಿ ನೆಲೆಸಿದ್ದಾನೆ. ಉದಕದೊಳಗೆ ಪ್ರತಿಬಿಂಬವಿದೆ ಆದರೆ ಅದು ಗೌಪ್ಯವಾಗಿದೆ. ಅಂದರೆ ಆ ಜಲದ ಗುಣ ದೋಷಗಳು ಈ ಪ್ರತಿಬಿಂಬಕ್ಕೆ ಅಂಟುವುದಿಲ್ಲ. ಹಾಗೆಯೇ ಚಲನಶೀಲವಾದ ಪ್ರಪಂಚದ ಯಾವ ಗುಣದೋಷಗಳು ಅವನಿಗೆ ಅಂಟುವುದಿಲ್ಲ. ಅವನು ಅಷ್ಟು ಅಲಿಪ್ತ, ನಿರ್ಲಿಪ್ತ. ಬೀಜದೊಳಗೆ ಬೃಹತ್ತಾದ ವೃಕ್ಷವಿದೆ, ಆದರೆ ಅದು ಅವ್ಯಕ್ತವಾಗಿದೆ. ಹಾಗೆಯೇ ಜೀವಾತ್ಮನಲ್ಲಿ ಪರಮಾತ್ಮ ನೆಲೆಸಿದ್ದಾನೆ. ಹಾಗೆಯೇ ಶಬ್ದದೊಳಗೆ ನಿಶಬ್ದವಿದೆ. ಆದರೆ ಅಭಿಯವಾಗಿದೆ ಅದು ಬಯಲಿನಂತೆ ಮಹಾ ಮೌನ. ಶಬ್ದಗಳಿಂದ ನಿಶಬ್ದತೆಗೆ ಯಾವ ಬಾಧೆಯೂ ಇಲ್ಲ. ಹಾಗೆಯೇ ಪರಮಾತ್ಮನು ನಿಶಬ್ದ ಬ್ರಹ್ಮನಾಗಿರುವನು. ಅವನದು ಮೌನ ಅಸ್ತಿತ್ವ. ಹೀಗೆ ಪರಮಾತ್ಮನ ಅಂದರೆ ಶರಣನ ಸಂಬಂಧದ ನಿಲವು. 


ಮುಂದುವರೆಯುವುದು........


ಪ್ರವಚನಕಾರರು: ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು 

ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...