ಅಕ್ಕನು ಬೋಧಿಸಿದ ಶರಣಜ್ಞಾನ ಪ್ರವಚನಾಮೃತ ಸಾರ : ಭಾಗ-೧.
ಶರಣ ಜ್ಞಾನದ ಮಹತ್ವ:
ಶರಣ ಬಂಧುಗಳೇ, ಮಾನವನು ದೇವನ ಈ ಸೃಷ್ಟಿಯ ಪ್ರಕೃತಿಯಲ್ಲಿ ಮೂಲತಃ ಸಂಗ ಜೀವಿಯಾಗಿರುವನು. ಮೊದಲು ಸೃಷ್ಟಿಯನ್ನು ತಿಳಿಯುವುದು, ತನ್ನ ತಾನರಿವುದು, ಸಮೂಹ ಪ್ರಜ್ಞೆಯಲ್ಲಿ ಬದುಕುವುದು ಮಾನವನ ಸಹಜ ಕ್ರಿಯೆಯಾಗಿದೆ. ತನ್ನ ತಾ ಅರಿಯದೆ ಏನೇ ಜ್ಞಾನವನ್ನು ಪಡೆದರೂ ಅದು ಉಪಯೋಗವಾಗದು; ಕೇವಲ ಶುಷ್ಕ ಜ್ಞಾನವಾಗುತ್ತದೆ. ವಿಶ್ವಗುರು ಬಸವಣ್ಣನವರು ಹೇಳಿದಂತೆ "ಶ್ವಾನಜ್ಞಾನ, ಗಜಜ್ಞಾನ, ಕುಕ್ಕುಟ ಜ್ಞಾನವೆಂಬ ಜ್ಞಾನತ್ರಯಂಗಳೇನಾದವೊ ಕೂಡಲ ಸಂಗಮದೇವಾ ನಿಮ್ಮನರಿಯದ ಜ್ಞಾನವೆಲ್ಲ ಅಜ್ಞಾನ." ಈ ಜಗತ್ತಿನಲ್ಲಿ ಅನೇಕರು ಅನೇಕ ರೀತಿಯ ಜ್ಞಾನವನ್ನು ಹೊಂದಿರಬಹುದು ಆದರೆ ತನ್ನ ತಾನರಿವುದೆಂದರೆ ಪರಮಾತ್ಮನ ಮೂಲ ಜ್ಞಾನದಲ್ಲಿ ಒಂದಾಗುವುದು ಎಂದರ್ಥ. ಆ ಪರಮಜ್ಞಾನವನ್ನು ಅರಿತ ಬಳಿಕ ಅವನು ಪರಮಾತ್ಮನ ಮುಖವೇ ಆಗಿರುವ ಜಂಗಮ. ಅಂದರೆ ಸಮಾಜವನ್ನು ಪ್ರೀತಿಸಿ ಸಮೂಹ ಜ್ಞಾನದಲ್ಲಿ ಒಂದಾಗುತ್ತಾನೆ. ಈ ರೀತಿಯಾಗಿ ತಿಳಿಯುವ ಪರಮ ಜ್ಞಾನವೇ ಶರಣಜ್ಞಾನ. ಈ ಜ್ಞಾನವಿಲ್ಲದ ಮನುಜನು ಸಗಣಿಯಲ್ಲಿ ಹುಟ್ಟುವ ಹುಳುವಿಗೆ ಸಮಾನ ಎಂದಿರುವರು ಬಸವಣ್ಣನವರು.
"ಶಿವಚಿಂತೆ ಶಿವಜ್ಞಾನವಿಲ್ಲದ ಮನುಜರು ಸಗಣಕ್ಕೆ ಸಾಸಿರ ಹುಳು ಹುಟ್ಟವೆ ದೇವಾ, ಕಾಡ ಮೃಗವೊಂದಾಗಿರಲಾಗದೆ ದೇವಾ, ಊರ ಮೃಗವೊಂದಾಗಿರಲಾಗದೆ ಹರನೆ, ನಮ್ಮ ಕೂಡಲಸಂಗನ ಶರಣರಿಲ್ಲದ ಊರು ದೇಶ ವನವಾಸ, ನರವಿಂಧ್ಯ ಕಾಣಿರಣ್ಣಾ."
ಯಾರು ಪರಮಾತ್ಮನ ಚಿಂತನೆಯ ಮೂಲಕ ದಿವ್ಯ ಜ್ಞಾನವನ್ನು ಪಡೆಯಲಾರರೋ ಅಂಥವರ ಬದುಕು ಸೆಗಣಿಯ ಹುಳು ಮತ್ತು ಕಾಡು ಪ್ರಾಣಿ ಹಾಗೂ ಊರ ಪ್ರಾಣಿಗಳಿಗಿಂತ ಕಟ್ಟ ಕಡೆಯಾಗಿರುವುದು. ಅಲ್ಲದೇ ಅವರ ಮನಸ್ಸು ಮತ್ತು ಮನೆ ಸ್ಮಶಾನದಂತೆ ನರಕಯಾತನೆ ಅನುಭವಿಸುತ್ತದೆ ಎಂದು ಹೇಳಿ, ಮಾನವನ ಬದುಕಿಗೆ ಎಚ್ಚರಿಕೆಯನ್ನು ನೀಡುತ್ತಾರೆ.
ಶರಣ ಜ್ಞಾನವು ನಿಜವಾದ ಅರ್ಥದಲ್ಲಿ ಲೋಕಜ್ಞಾನವೇ ಆಗಿದೆ. ಲೋಕ ಎಂದರೆ ಸಕಲ ಜೀವರಾಶಿಗಳಿಂದ ಕೂಡಿದ ವಿಶ್ವ. ಲೋಕ ಎಂದರೆ ಜನರು. ಲೋಕ ಬಿಟ್ಟು ನಾವಿಲ್ಲ, ನಮ್ಮ ಬಿಟ್ಟು ಲೋಕವಿಲ್ಲ. ಮಾನವ ಮತ್ತು ಪ್ರಕೃತಿಯ ಮಧ್ಯೆ ಅವಿನಾಭಾವ ಸಂಬಂಧವಿದೆ. ಪ್ರಕೃತಿ ಎಂದರೆ ಮನಸ್ಸು, ದೇಹ ಮತ್ತು ನಿಸರ್ಗ. ಪ್ರಕೃತಿಯೊಳಗೆ ಸಾಂದರ್ಭಿಕವಾಗಿ ಈ ಮೂರು ಅಡಗಿವೆ. ಮಾನವ ಮತ್ತು ಪ್ರಕೃತಿಯ ಮಧ್ಯೆ ಸಂಬಂಧವನ್ನು ಕಲ್ಪಿಸುವ ಉದ್ಧೇಶವನ್ನು ಬಸವಧರ್ಮ ಹೊಂದಿದೆ. ಮನಸ್ಸಿನ ರಕ್ಷಣೆ ಮಾಡುವ ಅಷ್ಟಾವರಣ ಮೊದಲನೆಯ ಹಂತವಾಗಿದೆ. ಮನಸ್ಸಿನ ಬೆಳವಣಿಗೆ ಮೂಲಕ ವ್ಯಕ್ತಿತ್ವ ವಿಕಸನಗೊಳಿಸಿ ವಿಶ್ವಮಾನವ ಮಾಡುವ ಷಟಸ್ಥಲ ಎರಡನೆಯ ಹಂತವಾಗಿದೆ. ಲೋಕಹಿತಕ್ಕಾಗಿ ಕ್ರಿಯಾಶೀಲವಾಗುವ ಪಂಚಾಚಾರ ಮೂರನೆಯ ಹಂತವಾಗಿದೆ.
ವ್ಯಷ್ಟಿಯಿಂದ ಸಮಷ್ಟಿಯವರೆಗೆ ಈ ಧರ್ಮದ ವಿಸ್ತಾರವಿದೆ. ವ್ಯಕ್ತಿಯಿಂದ ಸಮೂಹದ ವರೆಗೆ ಇಡೀ ಮಾನವ ಕುಲ ನಿಸರ್ಗದ ರಹಸ್ಯವನ್ನು ಅರಿತ ನಂತರ ಆ ಅರಿವನ್ನು ನಮ್ಮ ಬದುಕಿಗೆ ಅಳವಡಿಸಿಕೊಂಡು, ಸಕಲಜೀವಾತ್ಮರಿಗೆ ಲೇಸನೇ ಬಯಸುತ್ತ ಕಾಯಕ ಪ್ರಸಾದ ಮತ್ತು ದಾಸೋಹ ಪ್ರಜ್ಞೆಯಿಂದ ಕ್ರಿಯಾಶೀಲವಾಗಿ ಬದುಕಿದರೆ ಲಿಂಗಭೇದ, ಜಾತಿಭೇದ, ವರ್ಣಭೇದ, ವರ್ಗಭೇದ ಮುಂತಾದ ಭೇದಗಳಿಂದ ಮುಕ್ತವಾಗಿ ನೆಮ್ಮದಿ ಪಡೆದು ಆನಂದಮಯ ಬದುಕನ್ನು ಬದುಕಲು ಸಾಧ್ಯವಿದೆ. ಬಸವಧರ್ಮವು ಮುಖ್ಯವಾಗಿ ಮನೋವೈಜ್ಞಾನಿಕ ಧರ್ಮವಾಗಿರುವುದರಿಂದ ಇಲ್ಲಿ ಮಾನವ ಸಂಸ್ಕಾರಕ್ಕೆ ಪ್ರಾಧಾನ್ಯವಿದೆ. ಮೊದಲ ಹಂತದಲ್ಲಿ ಮನಸ್ಸಿನ ಸಂರಕ್ಷಣೆ, ಎರಡನೆಯ ಹಂತದಲ್ಲಿ ಮನಸ್ಸಿನ ಬೆಳವಣಿಗೆಯಿಂದ ಪಡೆದ ವಿಶ್ವಮಾನವ ಪ್ರಜ್ಞೆಯ ಮೂಲಕ ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಅರಿವಿನ ಸಾಕ್ಷಾತ್ಕಾರವಾಗಿ ಅನುಭಾವದ ಮಟ್ಟಕ್ಕೆ ಏರುತ್ತದೆ. ಈ ಅನುಭಾವವೇ ಲಿಂಗಾಂಗ ಸಾಮರಸ್ಯದ ಫಲ. ಹೀಗೆ ಜೀವಾತ್ಮ ಮತ್ತು ನಮ್ಮೊಳಗೆ ಇರುವ ಪರಮಾತ್ಮನ ಜೊತೆಗೆ ನಿತ್ಯ ಐಕ್ಯ ಸಾಧಿಸುವುದೇ ಲಿಂಗಾಂಗ ಸಾಮರಸ್ಯ. ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ ಇವು ಅಷ್ಟಾವರಣಗಳು. ಮನಸ್ಸನ್ನು ಐಹಿಕ ಆಸೆಗಳಿಂದ ಸಂರಕ್ಷಿಸುವ ಶಕ್ತಿ ಇವುಗಳಿಗಿದೆ. ಐಹಿಕ ಆಕರ್ಷಣೆಗಳಿಂದ ಮುಕ್ತವಾಗುವ ಹಾಗೆ ಮನಸ್ಸನ್ನು ಗಟ್ಟಿಗೊಳಿಸುವುದು ಸುಲಭದ ಕಾರ್ಯವಲ್ಲ. ಗುರುವೆಂಬ ಅರಿವು, ಲಿಂಗವೆಂಬ ತತ್ತ್ವ, ಜಂಗಮವೆಂಬ ಸಾಮಾಜಿಕ ಜವಾಬ್ದಾರಿ. ಪಾದೋದಕ ಎಂಬ ಜ್ಞಾನೋದಕ. ಪ್ರಸಾದವೆಂಬುದು ದೇವರ ಕಾಣಿಕೆಯಾದ ಈ ಲೋಕ ಮತ್ತು ಕಾಯ. ವಿಭೂತಿ ಎಂಬ ಅಂತಿಮ ಸತ್ಯ. ಮಂತ್ರ ಎಂಬ ಇಷ್ಟಲಿಂಗ ಮತ್ತು ಜಂಗಮಲಿಂಗದ ಜ್ಞಾನದ ನಿರಂತರದ ಲಕ್ಷ್ಯ. ಇಷ್ಟಲಿಂಗ ಪೂಜೆಯಿಂದ ಬರುವ ಅರಿವಿನಲ್ಲಿ ಮನಸ್ಸು ತೆರಪಿಲ್ಲದಂತಾಗುತ್ತದೆ. ಅಂಗಲಿಂಗದ ಆಚರಣೆಯಲ್ಲಿ ಆ ತೆರಪಿಲ್ಲದ ಮನಸ್ಸು ಲೋಕಹಿತ ಸಾಧಿಸುವ ಕ್ರಿಯೆಗೆ ತೊಡಗಲು ಪ್ರೇರೇಪಿಸುತ್ತದೆ. ಹೀಗೆ ಅಷ್ಟಾವರಣಗಳು ಮನಸ್ಸನ್ನು ಲೌಕಿಕ ಆಶೆಗಳಿಗೆ ಹರಿಯದಂತೆ ತಡೆಯುತ್ತವೆ. ಆಗ ಮನಸ್ಸು ಫಲ ಪಡೆಯಲು ಬೇಕಾದ ಸುರಕ್ಷಿತ ಬೀಜದಂತಾಗುತ್ತದೆ.
ಷಟಸ್ಥಲಗಳಾದ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಸ್ಥಲಗಳು ಮಾನವನ ಮನಸ್ಸಿನ ವಿಕಾಸಕ್ಕಾಗಿ ಇವೆ. ಇಲ್ಲಿ ಆ ಬೀಜ ಮನಸ್ಸಿನ ಬಿತ್ತನೆಯಾಗುತ್ತದೆ. ಈ ಬೀಜ ಮನಸ್ಸು ಭಕ್ತಸ್ಥಲದಲ್ಲಿ ಮೊಳಕೆಯೊಡೆಯುತ್ತದೆ. 'ನಾನು ಭಕ್ತ, ಜಗತ್ತಿನ ಸೇವೆ ಮಾಡಬಯಸುವವ' ಎಂಬ ಭಾವ ಮೂಡುತ್ತದೆ. ಮಹೇಶ ಸ್ಥಲದಲ್ಲಿ ಈ ಭಾವ ಗಟ್ಟಿಗೊಂಡು ಪರಿಪೂರ್ಣ ಆವಸ್ಥೆಯನ್ನು ತಲುಪುತ್ತದೆ. 'ಪ್ರಸಾದಿ ಸ್ಥಲದಲ್ಲಿ ನಮ್ಮ ದೇಹ ಸಮೇತ ಇಡೀ ಲೋಕ ದೇವರ ಪ್ರಸಾದ' ಎಂಬ ಭಾವ ಮೂಡುತ್ತದೆ. ಪ್ರಾಣಲಿಂಗಿ ಸ್ಥಲದಲ್ಲಿ ಮಾನವನ ಒಳಲೋಕವೆಲ್ಲ ದೇವಮಯವಾಗುತ್ತದೆ. ಶರಣ ಸ್ಥಲದಲ್ಲಿ ವ್ಯಷ್ಟಿ ಮತ್ತು ಸಮಷ್ಟಿಯ ಮಧ್ಯದಗೆರೆ ಅಳಿದು ಹೋಗುತ್ತದೆ. ಐಕ್ಯಸ್ಥಲದಲ್ಲಿ ದೆಹವೆಂಬ ದೇಗುಲದೊಳಗಿನ ಪರಮಾತ್ಮನ ಜೊತೆಗೆ ಬೆರೆಯುವ ಮೂಲಕ ಲಿಂಗೈಕ್ಯ ಸ್ಥಿತಿಗೆ ತಲುಪಿ ಲಿಂಗಾಂಗ ಸಾಮರಸ್ಯವಾಗುತ್ತದೆ.
ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಮತ್ತು ಭೃತ್ಯಾಚಾರಗಳು ಅರಿವನ್ನು ಆಚರಣೆಗೆ ತರುವುದಕ್ಕಾಗಿ ಇವೆ. ಮಾನವನ ಈ ಆಚಾರಗಳನ್ನು ಕೃತಿಯಲ್ಲಿ ತಂದಾಗಲೇ ನಡೆ-ನುಡಿ ಸಿದ್ಧಾಂತವನ್ನು ಪ್ರತಿಪಾದಿಸುವ ಬಸವಧರ್ಮದ ಪಾಲನೆ ಮಾಡಿದಂತಾಗುವುದು. ಒಬ್ಬನೇ ದೇವರು, ಒಂದೇ ಭೂಮಿ, ಒಂದೇ ಮಾನವಕುಲ ಎಂಬುದನ್ನು ಲಿಂಗಾಚಾರ ಹೇಳುತ್ತದೆ. ಸ್ವಾವಲಂಬಿಯಾಗಿ ಸಮಾಜದ ಉನ್ನತಿಗಾಗಿ ಕ್ರೀಯಾಶೀಲವಾಗಲು ಸದಾಚಾರ ತಿಳಿಸುತ್ತದೆ. ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದಗಳಿಲ್ಲದೆ ಬದುಕಲು ಶಿವಾಚಾರ ಪ್ರೇರೇಪಿಸುತ್ತದೆ. ಈ ತತ್ತ್ವವನ್ನು ಸಂರಕ್ಷಿಸಿ ಪ್ರಸಾರ ಮಾಡಲು ಗಣಾಚಾರ ಕರೆ ನೀಡುತ್ತದೆ. ಇದನ್ನೆಲ್ಲ 'ಎನಗಿಂತ ಕಿರಿಯರಿಲ್ಲ' ಎಂಬ ಮನೋಭಾವದೊಂದಿಗೆ ಸೇವೆ ಮಾಡುತ್ತ ಸಾಧಿಸಿಬೇಕೆಂದು ಭೃತ್ಯಾಚಾರ ಸೂಚಿಸುತ್ತದೆ. ಹೀಗೆ ಅಕ್ಕ ಮಹಾದೇವಿ ಶರಣ ಜ್ಞಾನದ ಮಹತ್ವವನ್ನು ಪೂರ್ವ ಪೀಠಿಕೆಯಾಗಿ ತಿಳಿಸುತ್ತಾರೆ.
ಮುಂದುವರೆಯುವುದು........
ಪ್ರವಚನಕಾರರು: ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.
No comments:
Post a Comment