ಪ್ರವಾಸ ಮಾಡೋಣ ಅನುಭವ ಪಡೆಯೋಣ
ಜಗನ್ಮಾತೆ ಅಕ್ಕಮಹಾದೆವಿಯವರು ಹೇಳುವಂತೆ ಜೀವಿಸುವ ಜೀವನಕ್ಕೆ ಶೃಂಗಾರ ಯಾವುದು ಎಂದರೆ; ಗುರು ಹಿರಿಯರನ್ನು ನೋಡುವುದು, ಅವರ ಮಾತುಗಳನ್ನು ಆಲಿಸುವುದು, ಸಮಾಜದ ಬಂಧುಗಳು ಪರಸ್ಪರರು ಒಟ್ಟಿಗೆ ಸೇರಿ ಸತ್ಸಂಗ ಮಾಡುವುದು ಮತ್ತು ಒಟ್ಟಿಗೆ ಸೇರಿಕೊಂಡು ಪ್ರವಾಸ ಮಾಡುವುದು. ಈ ಲಕ್ಷಣಗಳೇ ನಮ್ಮ ವೈಯುಕ್ತಿಕ ಮತ್ತು ಸಮುಷ್ಟಿ ಜೀವನವನ್ನು ಶುದ್ಧೀಕರಣ ಮಾಡುತ್ತವೆ ಎಂಬುದು ಅಕ್ಕನ ಆಶಯ ನುಡಿ.
ಮುಡಬಿಯ ಅಂಬಾಭವಾನಿ ದೇವಸ್ಥಾನದ ಕಮಿಟಿಯವರು 2024ರ ದಸರಾ ನಿಮಿತ್ತವಾಗಿ 21 ದಿನಗಳ ಕಾಲ ಅಕ್ಕನ ಪ್ರವಚನ ಮಾಡಲು ನನ್ನನ್ನು ಸಂಪರ್ಕಿಸಿದಾಗ ಸಂತೋಷದಿಂದ ಒಪ್ಪಿಕೊಂಡು ದಿನಾಂಕ 21-10-2024 ರಿಂದ 11-11-2024ರವರೆಗೆ ಊರಿನ ಗುರು ಹಿರಿಯರ ಸಹಕಾರದಿಂದ ಯಶಸ್ವಿಯಾಗಿ ಪ್ರವಚನ ನಡೆಸಿಕೊಟ್ಟೆನು. ಪ್ರವಚನ ಮಂಗಲದ ದಿನ ನಾನು; ಅಕ್ಕನ ಬಳಗ ಸಂಘಟನೆ ಮಾಡಬೇಕೆಂದೂ ಮತ್ತು ಶ್ರೀಶೈಲಕ್ಕೆ ಹೋಗುವ ಬಯಕೆ ವ್ಯಕ್ತಪಡಿಸಿದಾಗ ಊರಿನ ಜನತೆ ಸಂತೋಷದಿಂದ ಒಪ್ಪಿಕೊಂಡರಲ್ಲದೆ ತಾವು ಬರುವುದಾಗಿ ತಿಳಿಸಿದರು. ಆಗ ಅಕ್ಕನ ಬಳಗವನ್ನು ಉದ್ಘಾಟನೆ ಮಾಡಿದ್ದಲ್ಲದೆ ಪ್ರತಿವಾರ ಮಂಗಳವಾರ ಸತ್ಸಂಗವನ್ನು ಮಾಡಲು ಸೂಚಿಸಿದೆನು. ಅದರಂತೆ ಪ್ರತೀ ಮಂಗಳವಾರದ ದಿನ ಪೂಜೆ, ಪ್ರಾರ್ಥನೆ, ಅನುಭಾವ ಏರ್ಪಡಿಸಿ ಸತ್ಸಂಗ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ.
ಪ್ರವಾಸದ ಅನುಭವ:
ಅಕ್ಕನ ಬಳಗದವರು ನನ್ನ ಜೊತೆ ಹೈದರಾಬಾದ್, ಶ್ರೀಶೈಲ, ಮಹಾನಂದಿ, ಮಂತ್ರಾಲಯ ಪ್ರವಾಸದ ಚರ್ಚೆ ಮಾಡಿ, ದಿನಾಂಕ 06-12-2024 ರಿಂದ 8-12-2024ರವರೆಗೆ ಮೂರು ದಿನ ನಿಗದಿ ಮಾಡಿದರು. ಪ್ರವಾಸಕ್ಕೆ ಐದು ಜನ ಮಕ್ಕಳು, 32 ಶರಣ-ಶರಣೆಯರು ಬರಲು ತಯಾರಾದರು, ಅದಕ್ಕಾಗಿ ಮೂರು ಕ್ರೋಸರ್ ಗೊತ್ತು ಮಾಡಿದರು. ಮೊದಲ ದಿನ(6-12-2024ರಂದು) ಸುಪ್ರಭಾತ ಸಮಯದಲ್ಲಿ 6ಗಂಟೆಗೆ ಕಲ್ಯಾಣ ಮಹಾಮನೆ ಗುಣತೀರ್ಥವಾಡಿಗೆ ಆಗಮಿಸಿದರು.
ಕಲ್ಯಾಣ ಮಹಾಮನೆ ದರ್ಶನ:
ಕಲ್ಯಾಣ ಮಹಾಮನೆಯಲ್ಲಿ ದರ್ಶನ, ಪೂಜೆ, ಪ್ರಾರ್ಥನೆ, ಅನುಭಾವ, ಮಂಗಲ ಅತ್ಯಂತ ಯಶಸ್ವಿಯಾಗಿ ನಡೆಯಿತು. ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರ ಸತ್ಯ ಸಂಕಲ್ಪದ ದ್ಯೋತಕವಾಗಿ, ಗುಡ್ಡಾಪೂರು ದಾನಮ್ಮನ ತಪೋಕ್ಷೇತ್ರ ಗುಣತೀರ್ಥ ವಾಡಿಯಲ್ಲಿ ಕಲ್ಯಾಣ ಮಹಾಮನೆಯನ್ನು, 770 ಜೆಂಬಿಟ್ಟಿಗೆಯ ಕೆಂಪು ಕಲ್ಲಿನಿಂದ ವೃತ್ತಾಕಾರವಾಗಿ ಕಟ್ಟಲಾಗಿದೆ. ಅದರ ಛಾವಣೆಯು ಪಿರಾಮಿಡ್ ಶೈಲಿಯಲ್ಲಿ ವೃತ್ತಾಕಾರವಾಗಿದೆ. ಆ ಛಾವಣಿಯ ಮೇಲೆ ವಿಶ್ವ ಶಕ್ತಿಯನ್ನು ಎಳೆದು ಒಳಗೆ ಬಿಡುವ ಮೂರುವರೆ ಅಡಿಯ ಲಿಂಗವಿದೆ. ಮಹಾಮನೆಯ ಒಳಗೆ ಮೂವತ್ತಾರು ತತ್ವ ಸೂಚಿಸುವ ಛಾವಣಿ ಖಾನೆಗಳಿವೆ. ಮಹಾಮನೆಯ ಸುತ್ತಲೂ ಪ್ರತೀ ಕಲ್ಲಿನ ಮೇಲೆ ಶರಣ-ಶರಣೆಯರ ಹೆಸರನ್ನು ಬರೆಯಿಸಿಲಾಗಿದ್ದು ಒಂದು ಪ್ರದಕ್ಷಿಣೆ ಮಾಡಿದರೆ ಸಮಗ್ರ 770 ಅಮರಗಣಂಗಳ ದರ್ಶನವಾಗುತ್ತದೆ. ಪಶ್ಚಿಮ ಬಾಗಿಲಿನಿಂದ ಒಳಗಡೆ ಪ್ರವೇಶಿಸಿದಾಗ ಎದುರುಗಡೆ ಗೋಡೆಯ ಮೇಲೆ ಎಂಟು ಅಡಿ ಎತ್ತರದಲ್ಲಿ ಲಿಂಗದ ಚಿತ್ರ ಮತ್ತು ಅದರೊಳಗೆ ಧ್ಯಾನಕ್ಕೆ ಕುಳಿತ ಗುರು ಬಸವಣ್ಣನವರ ಭಾವಚಿತ್ರವನ್ನು ತೈಲ ವರ್ಣದಿಂದ ಬಿಡಿಸಲಾಗಿದೆ. ಅದರ ಮುಂದೆ ಚೌಕಾಕಾರದಲ್ಲಿ ಕಟ್ಟಿದ ಕಟ್ಟೆ ಇದೆ. ಅದು ಆರು ಮೆಟ್ಟಿಲಿನಿಂದ ಕೂಡಿದೆ. ಪ್ರತಿಯೊಂದು ಮೆಟ್ಟಿಲು ಮೇಲೆ ಎದುರಿಗೆ ಕಾಣುವಂತೆ ಆಚಾರ ಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ ಎಂದು ಆರು ಲಿಂಗದ ಹೆಸರನ್ನು ರೇಡಿಯಮ್ (ಬೆಳಕಿನ) ಅಕ್ಷರದಲ್ಲಿ ಬರೆಸಲಾಗಿದೆ. ಆ ಮೆಟ್ಟಿಲು ಮೇಲೆ ಎಂಟುದಳದ ಕಮಲವಿದ್ದು ಅದರೊಳಗೆ ಆಕರ್ಷಣೀಯ ಮತ್ತು ತ್ರಾಟಕ ಯೋಗಕ್ಕೆ ಸಹಾಯಕವಾಗುವ ಮೂರು ಅಡಿಯ ಗಣಲಿಂಗವಿದೆ. ಆ ಗಣಲಿಂಗದೊಳಗಡೆ ದಕ್ಷಿಣ ಭಾಗದ ತುದಿಯ ಎರಡು ಇಂಚಿನ ಕೊಳವೆಯಲ್ಲಿ ಇಣುಕಿ ನೋಡಿದರೆ ಲಿಂಗಪೂಜೆಗೆ ಕುಳಿತ ಅಕ್ಕಮಹಾದೇವಿಯ ಮೂರ್ತಿ ಕಾಣಿಸುತ್ತದೆ. ಇದು ಧ್ಯಾನಿಗಳನ್ನು ಲಘುವಾಗಿ ಆಕರ್ಷಿಸಿ ಮನಕ್ಕೆ ಮುದವನ್ನು ನೀಡುತ್ತದೆ. ಉತ್ತರಕ್ಕೆ ತಿರುಗಿದರೆ ಬಸವಣ್ಣ ನೀಲಗಂಗಾಬಿಕೆ ಭಾವಚಿತ್ರ ಇಡಲಾಗಿದ್ದು ಈ ಚಿತ್ರವು ಪೂಜ್ಯತೆಯೊಂದಿಗೆ ದಾಂಪತ್ಯ ಧರ್ಮದ ಪವಿತ್ರ ಭಾವನೆಯನ್ನು ಕಣ್ಣು ಮುಂದೆ ತಂದು ನಿಲ್ಲಿಸುತ್ತದಲ್ಲದೆ ಶರಣಜ್ಞಾನವನ್ನು ಬೋಧಿಸುವ ಭಾವನೆ ಇದೆ.
ಮಹಾಮನೆಯ ನೆಲ ಮಹಡಿಯಲ್ಲಿ ಲಿಂಗಾನುಷ್ಟಾನಿಗಳಿಗಾಗಿ ಗವಿಯನ್ನು ನಿರ್ಮಿಸಲಾಗಿದೆ.
ಕಲ್ಯಾಣ ಮಹಾಮನೆಯ ಹೊರಗಡೆ ಪೌಳಿಯ ಸುತ್ತಲೂ ವಿವಿಧ ಶರಣರ ವಚನ ಫಲಕಗಳನ್ನು ಹಾಕಲಾಗಿದೆ. 13 ಗುಂಟೆಯ ವಿಸ್ತೀರ್ಣದಲ್ಲಿ ವಿವಿಧ ಬಗೆಯ ಹಣ್ಣಿನ, ಹೂವಿನ ಗಿಡಗಳನ್ನು ನೆಡಲಾಗಿದ್ದು, ಸಂದರ್ಶಕರಿಗೆ ಪ್ರಕೃತಿ ಭಾವದ ಪ್ರಜ್ಞೆಯನ್ನು ಮೂಡಿಸುತ್ತವೆ. 45*60 ಜಾಗದಲ್ಲಿ ಪ್ಯಾಷನ್ ಫ್ರೂಟ್(ಕೃಷ್ಣ ಫಲ) ಬೆಳೆಸಲಾಗಿದ್ದು ಬಂದ ಭಕ್ತರಿಗೆ ಜ್ಯೂಸ್ ಮಾಡಿ ಕೊಡಲಾಗುತ್ತಿದೆ. ಈ ಕಲ್ಯಾಣ ಮಹಾಮನೆಯನ್ನು ದರ್ಶನ ಮಾಡುವುದೇ ಒಂದು ಅಹೋ ಭಾಗ್ಯ.
ದಾನಮ್ಮ ದಾಸೋಹ ಮಹಾಮನೆಯ ತಾಯಿಯಾದ ಶರಣೆ ಅನಿತಾ ಅವರು ಎಲ್ಲರಿಗೂ ಚಹಾ ವ್ಯವಸ್ಥೆ ಮತ್ತು ಉಪಹಾರ ವ್ಯವಸ್ಥೆ ಮಾಡಿದರು. ಉಪಹಾರವನ್ನು ಜೊತೆಗೆ ಕಟ್ಟಿಕೊಂಡು ಹೋದೆವು. ಸದಾಶಿವ ಪೇಟೆಯ ಹೆದ್ಧಾರಿಗೆ ಹೊಂದಿಕೊಂಡಿದ್ದ ಒಬ್ಬ ರೈತನ ಮಾವಿನ ತೋಟದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಬೆಳಗಿನ ಕುಳಿತು ಪ್ರಸಾದವನ್ನು ಸ್ವೀಕರಿಸಿದೆವು. ಆ ರೈತನ ನಿಸ್ವಾರ್ಥ ಸೇವೆಯಿಂದ ನೂರಾರು ಗಿಡಗಳ ಮಾವಿನ ತೋಟವು ಅಷ್ಟೇ ನಿಸ್ವಾರ್ಥದಿಂದ ತನ್ನ ಫಲ ನೀಡಲಿಕ್ಕಾಗಿ ಮೈ ತುಂಬಾ ಹೂಗಳನ್ನು ಹೊತ್ತುಕೊಂಡು, ಆಶ್ರಯಿಸುವವರಿಗೆ ಅಪಾರ ನೆರಳನ್ನು ನೀಡಲಿಕ್ಕಾಗಿ ಸ್ವಾಗತಿಸುವುದನ್ನು ಕಂಡರೆ, ಮಾನವನ ಜೀವನಕ್ಕಿಂತ ಮಾವಿನ ತೋಟದ ಸಾರ್ಥಕತೆ ಹಿರಿದು ಎನಿಸಿತ್ತದೆ.
ರಾಮಾನುಜಾಚಾರ್ಯರ ಸಮತಾ ಮೂರ್ತಿ:
ನಮ್ಮ ಪ್ರವಾಸ ಹೈದರಾಬಾದ್ ಗೆ ಶಮಶಾಬಾದನ ರಾಮಾನುಜಾಚಾರ್ಯರ 102ಅಡಿ ಸಮಾತಾ ಮೂರ್ತಿಗೆ 11:30ಕ್ಕೆ ತಲುಪಿತು. ಪ್ರತಿಯೊಬ್ಬರಿಗೆ 200ರಂತೆ
ರಿಯಾಯಿತಿ ದರದಲ್ಲಿ ಟಿಕೇಟ್ ಪಡೆದು ಒಳಗೆ ಪ್ರವೇಶ ಮಾಡಿದೆವು. ಶ್ರಿಮನ್ ನಾರಾಯಣನ ಭಾರತದ 108 ದೇಗುಲಗಳ ಯತಾವತ್ತಾದ ದೇಗುಲಗಳನ್ನು ದ್ರಾವೀಡ ಶೈಲಿಯಲ್ಲಿ ಅದ್ಭುತವಾಗಿ ಕಟ್ಟಿದ್ದಾರೆ. ಆ ಗರ್ಭಗುಡಿಯಲ್ಲಿ ನಾರಾಯಣನ ವಿವಿಧ ಭಂಗಿಯಲ್ಲಿ ಪೂಜೆಗೊಳ್ಳುವ ವಿಗ್ರಹಗಳು ನಾರಾಯಣ ಭಕ್ತರನ್ನು ಆಕರ್ಷಿಸಿ, ಹೃದಯವನ್ನು ತಂಪಾಗಿಸುತ್ತವೆ. ಮುರ್ತಿಯ ಸುತ್ತಲೂ ಇರುವ 108ದೇವಾಲಯಗಳನ್ನು ಸಂದರ್ಶಿಸಿ ನೆಲ ಮಹಡಿಗೆ ಬಂದರೆ ಅಲ್ಲಿ ಪದ್ಮಾಸನದಲ್ಲಿ ಕುಳಿತ ರಾಮಾನುಜಾಚಾರ್ಯರ ಮೂರು ಅಡಿಯ ವಿಗ್ರಹವಿದೆ. ಆ ವಿಗ್ರಹ ದರ್ಶನ ಮಾಡಿಕೊಂಡು ಒಂದಿಷ್ಟು ಧ್ಯಾನ ಮಾಡಿ, ಲಿಪ್ಟ್ ಸಹಾಯದಿಂದ ಮೇಲ್ಮಹಡಿಗೆ ಹೋದರೆ ಅಲ್ಲಿ ಸುಂದರ ಮತ್ತು ವಿಶಾಲವಾದ ಕಂಭಗಳಲ್ಲಿ ತೈಲ ವರ್ಣದಿಂದ ಚಿತ್ರಿಸಿದ ರಾಮಾನುಜಾಚಾರ್ಯರ ಸಮಗ್ರ ಜೀವನ ಚರಿತ್ರೆಯನ್ನು ವರ್ಣ ರಂಜಿತ ಬೆಳಕಿನ ಸಹಾಯದಿಂದ ನೋಡಿದೆವು. ಮೂರನೇ ಮಹಡಿಗೆ ಹೋದಾಗ ಅಲ್ಲಿ ಅತ್ಯಂತ ಆಕರ್ಷಣೀಯವಾದ 35 ಆನೆಗಳ ಶಿರದ ಮೇಲಿರುವ ಕಮಲ ಅದರ ಮೇಲೆ ಕುಳಿತ ಸಾತ್ವಿಕ ತೇಜಸ್ಸಿನಿಂದ ಸಮತಾ ಧ್ವಜವಿಡಿದ ಅಭಯ ಹಸ್ತದ 102ಅಡಿಯ ಹಳದಿ ಬಣ್ಣದ ಭವ್ಯ ದಿವ್ಯ ತೇಜೋಮೂರ್ತಿ ರಾಮಾನುಜಾಚಾರ್ಯರ ವಿಗ್ರಹ ಭಕ್ತರನ್ನು ಆಕರ್ಷಿಸಿ ಸಮ್ಮೋಹನಕ್ಕೊಳಪಡಿಸುತ್ತದೆ. ಮೂರ್ತಿ ಸ್ಥಳವನ್ನು ದರ್ಶನ ಮಾಡಿಕೊಂಡು ಮೆಟ್ಟಿಲಿನ ಸಹಾಯದಿಂದ ಕೆಳಗಿಳಿದರೆ ಮೂರ್ತಿ ಎದರುಗಡೆ ವಿಶಾಲವಾದ ಮೈದಾನದಲ್ಲಿ ಸಂಗೀತ ಕಾರಂಜಾ ಕೊಳ ಇದೆ. ಆ ಕೊಳದ ಮಧ್ಯದಲ್ಲಿ ನೂರು ಅಡಿಗೂ ಹೆಚ್ಚು ಇರುವ ಮತ್ತು ಕಮಲದಳದಿಂದ ಕೂಡಿದ ಕಂಚಿನ ಕಂಭವಿದೆ. ಕಂಚಿನ ಕಂಭದ ತುತ್ತ ತುದಿಯ ಕಮಲದಳದೊಳಗೆ ಅಡಗಿ ಕುಳಿತುಕೊಂಡಿರುವ ರಾಮಾನುಜಾಚಾರ್ಯರ ಮೂರ್ತಿ ಇದೆ. ಶ್ರೀಮನ್ ನಾರಾಯಣನ ಮಂತ್ರ ಪ್ರಾರಂಭವಾದೊಡನೆಯೆ ಸಂಗೀತಾ ಕಾರಂಜಿಯ ನೀರು ವಿವಿಧ ರೀತಿ ನರ್ತನೆ ಮಾಡುತ್ತದೆ. ನೆರೆದ ಭಕ್ತರ ಮಂತ್ರ ಘೋಷ ಜೋರಾದಂತೆ ಕಮಲದಳಗಳು ಬಿಡಿಸಿಕೊಳ್ಳುತ್ತವೆ ಆಗ ರಾಮಾನುಜಾಚಾರ್ಯರ ಮೂರ್ತಿ ಕಮಲದಳದಿಂದ ಹೊರಬಂದು ಸೂತ್ತಲೂ ಪ್ರದಕ್ಷಣೆ ಮಾಡಿ ಭಕ್ತರಿಗೆ ದರ್ಶನ ನೀಡುವುದು. ಈ ದೃಶ್ಯ ಭಕ್ತರನ್ನು ರೋಮಾಂಚನಗೊಳಿಸುತ್ತದೆ. ಇದೆಲ್ಲವನ್ನು ನೋಡಿ ಹೊರಗಡೆ ನಿರ್ಗಮಿಸುವಾಗ ಉಚಿತವಾಗಿ ಒಂದು ಬಟ್ಟಲು ಪ್ರಸಾದ ಎಡೆಮಾಡುತ್ತಾರೆ. ಅದನ್ನು ಸ್ವೀಕರಿಸಿ ನಮ್ಮ ಪ್ರವಾಸ ಮುಂದುವರೆಸಿದೆವು.
ಮಹಾಮಹೇಶ್ವರ ಪಿರಾಮಿಡ್
ಮಹಾಮಹೇಶ್ವರ ಪಿರಾಮಿಡ್ ಹೈದರಾಬಾದನಿಂದ ಶ್ರೀಶೈಲಂ ದಾರಿಯ ಮಧ್ಯದಲ್ಲಿ ಕಡತಾಲ ಊರಿನಿಂದ ಏಳೆಂಟು ಕಿಲೋ ಮೀಟರ್ ಅನತಿ ದೂರದಲ್ಲಿದೆ. ಬ್ರಹ್ಮರ್ಷಿ ಪತ್ರೀಜಿಯವರ ಸಂಕಲ್ಪ ಶಕ್ತಿ ಕಾರಣವಾಗಿ ಈಜಿಪ್ಟಿನ ಗೀಜಾ ಪಿರಾಮಿಡ್ ಮಾದರಿಯಲ್ಲಿ ನಿರ್ಮಾಣಗೊಂಡ ಮಹಾಮಹೇಶ್ವರ ಪಿರಾಮಿಡ್ ಧ್ಯಾನ ಕೇಂದ್ರವು 216ಅಡಿ ಎತ್ತರವಿದೆ. ನಾಲ್ಕು ಕೋನಗಳು ಒಂದು ಕಡೆ ಸೇರುವ ಕಟ್ಟಡ ಇದು. ಒಳಗಡೆ ಐದು ಸಾವಿರ ಜನ ಏಕ ಕಾಲದಲ್ಲಿ ಕುಳಿತು ಧ್ಯಾನ ಮಾಡುವಷ್ಟು ವಿಶಾಲವಾಗಿದೆ. ಮಧ್ಯದಲ್ಲಿ 200ಅಡಿ ಎತ್ತರದ ನಡುಗಂಭವಿದೆ. ಅದರೊಳಗಿನಿಂದ ಏಣಿಯ ಮೂಲಕ ತುತ್ತ ತುದಿಯವರೆಗೆ ಏರಿಕೊಂಡು ಹೋಗಿ ಅಲ್ಲಿ ಧ್ಯಾನ ಮಾಡುವಂತೆ ವ್ಯವಸ್ಥೆ ಮಾಡಿರುವರು. ಅಲ್ಲಿ ಕುಳಿತರೆ ಕ್ಷಣಾರ್ಧದಲ್ಲಿ ಮಾತುಗಳು ಮೌನ ಮನಸ್ಸು ಶೂನ್ಯವಾಗಿ ಧ್ಯಾನ ಹತ್ತುತ್ತದೆ. ಕೇವಲ ಉಸಿರಿನ ಮೇಲೆ ಗಮನವಿಟ್ಟು ಮಾಡುವಂತಹ ಅದ್ಭುತ ಮತ್ತು ಸರಳ ಧ್ಯಾನ ವಿಧಾನವಾಗಿದೆ. ಇಲ್ಲಿ ತುಸು ಹೊತ್ತು ಧ್ಯಾನ ಮಾಡಿ ಅಲ್ಲಿಯೇ ಮಧ್ಯಾಹ್ನ ವೇಳೆಯ ಪ್ರಸಾದ ಸ್ವೀಕರಿಸಿ ಶ್ರೀಶೈಲದತ್ತ ಪ್ರಯಾಣ ಬೆಳೆಸಿದೆವು.
ಶ್ರೀಶೈಲ:
ಪೂರ್ವ ನಿಯೋಜನೆಯಂತೆ ಶ್ರೀಶೈಲದ ಸಾರಂಗ ಮಠದ ಛತ್ರದಲ್ಲಿ ತಂಗುವ ಅನುಮತಿಯನ್ನು ಅಲ್ಲಿನ ಜಗದ್ಗುರುಗಳಾದ ಪೂಜ್ಯ ಶ್ರೀ ಸಾರಂಗಧರ ದೇಶಿಕೇಂದ್ರ ಸ್ವಾಮಿಗಳಿಂದ ಪಡೆದಿದ್ದೆವು. ಅದರಂತೆ ಪೂಜ್ಯರು ವಸತಿ ಮತ್ತು ರಾತ್ರಿಯ ಪ್ರಸಾದ ವ್ಯವಸ್ಥೆ ಮಾಡಿಸಿದ್ದರು. ರಾತ್ರಿ ವಸತಿ ಮಾಡಿ ಬೆಳಿಗ್ಗೆ 4ಗಂಟೆಗೆ ಎದ್ದು ನಮ್ಮ ಜೊತೆ ಬಂದ ಎಲ್ಲಾ ಶರಣರು ಸೇರಿಕೊಂಡು ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡಿದೆವು. ಸುಪ್ರಭಾತ ಸಮಯ 6 ಗಂಟೆಗೆ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಭ್ರಮರಾಂಭ ದೇವಸ್ಥಾನ ನೋಡಿದೆವು. ಬೆಳಗಿನ ಉಪಹಾರ ಮುಗಿಸಿ ನೇರವಾಗಿ ಕೆಲವರು ರೂಪ್ ವೇ ಮೂಲಕವಾಗಿ, ಕೆಲವರು ನನ್ನ ಜೊತೆ ಮೆಟ್ಟಿಲು ಮೂಲಕ ಕಾಲ್ನಡಿಗೆಯಿಂದ ನಡೆದುಕೊಂಡು ಪಾತಾಳ ಗಂಗೆಗೆ ಬಂದರು, 9ಗಂಟೆಗೆ ತಲುಪಿದೆವು. ಅಕ್ಕಮಹಾದೇವಿ ಗವಿ ನೋಡಲು ನಿರ್ಧರಿಸಿ ತಲಾ 650 ರೂ ಟಿಕೆಟ್ ಪಡೆದು ನೀರಿನ ದೋಣಿಯಲ್ಲಿ ಕುಳಿತು ಹೊರಟೆವು.
ಪಾತಾಳ ಗಂಗೆಯ ರೋಪ್ ವೆ.
ನಾವು ರೋಪ್ವೇ ನಿಲ್ದಾಣದಿಂದ ಬೋಟಿಂಗ್ ನಿಲ್ದಾಣವನ್ನು ತಲುಪುವ ಮೊದಲು ಇದು ಸುಮಾರು 1500ಮೀ ಬೆಟ್ಟದ ಆರೋಹಣವಾಗಿದೆ ಮತ್ತು ಈ ಅನುಭವವು ಸುಮಾರು 4-5 ನಿಮಿಷಗಳವರೆಗೆ ಇರುತ್ತದೆ. ಶ್ರೀಶೈಲಂನಲ್ಲಿರುವ ರೋಪ್ ವೇ ಭಾರತದ ಅತ್ಯುತ್ತಮ ಹಗ್ಗದ ಮಾರ್ಗವಾಗಿದೆ ಮತ್ತು ಪರ್ವತ, ನದಿ ಮತ್ತು ದಟ್ಟವಾದ ಹಸಿರು ನಲ್ಲಮಲೈ ಕಾಡಿನ ಅತ್ಯಂತ ಸುಂದರವಾದ ನೋಟವನ್ನು ನೀಡುತ್ತದೆ. ಖಂಡಿತವಾಗಿಯೂ ಈ ರೋಪ್ವೇ ಡ್ರೈವ್ ಎಲ್ಲರಿಗೂ ಮರೆಯಲಾಗದ ಅನುಭವವಾಗಿದೆ.
ಅಕ್ಕ ಮಹಾದೇವಿ ಗುಹೆಗೆ ಪ್ರಯಾಣ
ಪವಿತ್ರ ನದಿ ಕೃಷ್ಣಾ ಅಥವಾ ಅಕ್ಕಮಹಾದೇವಿ ಗುಹೆಗಳಿಗೆ 3-4 ಗಂಟೆಗಳ ಕಾಲ ದೀರ್ಘ ಪ್ರವಾಸವಾಗಿದೆ. ಶ್ರೀಶೈಲವು ಅನೇಕ ಸಾಹಸಮಯ ಗುಹೆಗಳಿಗೆ ನೆಲೆಯಾಗಿದೆ, ಅವು ನೈಸರ್ಗಿಕವಾಗಿ ರೂಪುಗೊಂಡಿವೆ, ಅವುಗಳಲ್ಲಿ ಹಲವು ಪೂರ್ವ-ಐತಿಹಾಸಿಕ ಕಾಲದವುಗಳಾಗಿವೆ. ನಲ್ಲಮಲೈ ಬೆಟ್ಟದ ಸಾಲುಗಳು ಅಂತಹ ಸುಂದರವಾಗಿ ರೂಪುಗೊಂಡ ನೈಸರ್ಗಿಕ ಗುಹೆಗಳಿಗೆ ಅವಕಾಶವನ್ನು ನೀಡುತ್ತವೆ, ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಪ್ರಸಿದ್ಧ ಅಕ್ಕಮಹಾದೇವಿ ಗುಹೆಗಳು. ಈ ಗುಹೆಗಳ ಇತಿಹಾಸವು ಬಹಳ ಹಿಂದಿನಿಂದಲೂ ಇದೆಯಾದರೂ, ಪ್ರಸ್ತುತ ಹೆಸರು ಮತ್ತು ಸೆಳವು ನಿರಂತರವಾಗಿದೆ ಏಕೆಂದರೆ ಪ್ರಸಿದ್ಧ ಮಹಿಳಾ ಸಾಕಾರವೆಂದರೆ ಅಕ್ಕಮಹಾದೇವಿಯಾಗಿದ್ದಾಳೆ.
ನಾವೆಲ್ಲ ನಿರ್ಧರಿಸಲಾದ ದೋಣಿಯಲ್ಲಿ ಕುಳಿತೆವು. ನಮ್ಮಲ್ಲಿನ ಪ್ರತಿಯೊಬ್ಬರಿಗೂ ರೋಮಾಂಚನದ ಅನುಭವ. ಕೃಷ್ಣಾ ನದಿಯ ಮೂಲಕ ದೋಣಿ ಸವಾರಿ ಪ್ರಾರಂಭವಾಯಿತು. ನಾನು ಎಲ್ಲರನ್ನು ಉದ್ಧೇಶಿಸಿ ಮುಡಬಿಯಲ್ಲಿ ನಡೆದ ಅಕ್ಕನ ಪ್ರವಚನವನ್ನು ನೆನಪಿಸಿ ಅಕ್ಕನು ಕದಳಿವನಕ್ಕೆ ಬಂದ ಉದ್ಧೇಶ ಮತ್ತು ಲಿಂಗೈಕ್ಯದ ಕುರಿತು ವಚನಗಳನ್ನು ಉಲ್ಲೇಖಿಸಿ ಮಾತನಾಡಿದೆ. ಕೊನೆಗೆ "ನಶ್ವರ ಮಾಯಾ ಸಾಗರದಲ್ಲಿ ಬಾಳಿನ ದೋಣಿ ಸಾಗುತ್ತಿದೆ" ಎಂಬ ನಮ್ಮ ಗುರುಗಳು ಬರೆದ ಪದ್ಯವನ್ನು ಹಾಡಿದೆ. ಅಕ್ಕನ ಜೀವನದ ಅಂತಿಮ ಘಟನೆಗಳನ್ನು ಕೇಳಿದ ಎಲ್ಲರೂ ತುಸು ಹೊತ್ತು ಭಾವುಕರಾದರು. ವಿಶಾಲವಾದ ಆರು ಬೆಟ್ಟಗಳು, 10 ಕಿಮೀ ದೂರದ ನದಿಯ ಪ್ರಯಾಣ, ಅಲ್ಲಿನ ಚುಂಚರ ಮನೆ, ಪ್ರಕೃತಿ ನಿಸರ್ಗ ರಮ್ಯ ದೃಶ್ಯದ ವೈಭವ ನಮ್ಮನ್ನು ಲಘುವಾಗಿ ಆಕರ್ಷಿಸಿ ನಮ್ಮನ್ನು ಮೂಖ ವಿಸ್ಮೀತರನ್ನಾಗಿಸಿದವು. 12ಗಂಟೆಗೆ ಅಕ್ಕಮಹಾದೇವಿ ಗವಿ ತಲುಪಿದೆವು.
ಅಕ್ಕಮಹಾದೇವಿಯ ಗುಹೆ
ದೋಣಿಯಿಂದ ಇಳಿದ ಮೇಲೆ ಇಳಿದ ಮೇಲೆ ಗವಿಯ ಪ್ರವೇಶದ್ವಾರಕ್ಕೆ ತಲುಪಲು ಸು.150ಮೀಟರ್ ನಡೆದುಕೊಂಡು ಹೋದೆವು. ಗವಿಯ ಪ್ರವೇಶದ್ವಾರದ ಒಂದೇ ಕಲ್ಲಿನ ಕಂಭ ಸು.80ಅಡಿ ಇದ್ದು, ಮದ್ಯದಲ್ಲಿ ನಡುಗಂಭವಿಲ್ಲದೆ ಅದು ಅಖಂಡವಾಗಿ ನಿಂತಿದ್ದು ಆಶ್ಚರ್ಯವನ್ನುಂಟು ಮಾಡಿತು. ಪ್ರವೇಶಧ್ವಾರದಲ್ಲಿಯೇ ಅಕ್ಕಮಹಾದೇವಿಯ ವಿಗ್ರಹ ನೋಡಿ ಅಕ್ಕನ ಹಾಡು ಹಾಡಿ ದರ್ಶಿಸಿದೆವು. ಅಕ್ಕಮಹಾದೇವಿಯ ಗರ್ಭಗುಡಿಗೆ ಭೇಟಿ ನೀಡಲು ಗುಹೆಯೊಳಗೆ ಅಂದಾಜು 150 ಮೀಟರ್ ಚಾರಣವಿದೆ. ಅಲ್ಲಿಗೆ ನಮ್ಮ ಜೊತೆ ಬಂದ ಮಾರ್ಗದರ್ಶಿ ಒಬ್ಬೊಬ್ಬರನ್ನು ಕರೆದುಕೊಂಡು ಹೋಗಿ ತೋರಿಸಿದ. ಜಗನ್ಮಾತೆ ಅಕ್ಕಮಹಾದೇವಿಯು ಲಿಂಗಾನುಷ್ಟಾನವನ್ನು ಇದೇ ಗುಹೆಯಲ್ಲಿ ಮಾಡಿದ್ದಾಳೆ. ಅಕ್ಕ ಮಹಾದೇವಿಯು ಕುಳಿತ ಜಾಗದಲ್ಲಿ ಈಗ ಶಿವಲಿಂಗವನ್ನು ಪೂಜಿಸುತ್ತಾರೆ. ಅಕ್ಕಮಹಾದೇವಿ ಗುಹೆಯು ನಮ್ಮಗೆಲ್ಲ ಸಾಹಸಮಯ ರೋಮಾಂಚನವನ್ನು ನೀಡಿತು, ಅಲ್ಲಯೇ ಕುಳಿತು ಅಕ್ಕನ ಯೋಗಾಂಗ ತ್ರಿವಧಿಯನ್ನು ಪಠಣ ಮಾಡಿದೆವು ನಂತರ ಮಂಗಲ ಮಾಡಿ ಹೊರಗೆ ಬಂದು ಸಾಮೂಹಿಕವಾಗಿ ನಿಂತು ಪೋಟೊ ಕ್ಲಿಕ್ಕಿಸಿಕೊಂಡು ದೋಣಿಯಲ್ಲಿ ಕುಳಿತು ಮರಳಿದೆವು.
ಶ್ರೀಶೈಲಂ ಅಣೆಕಟ್ಟು
ಮರಳಿ ಬರುವಾಗ ಶ್ರೀಶೈಲಂ ಅಣೆಕಟ್ಟಿನ ಮಾಹಿತಿಯನ್ನು ನಮ್ಮ ಮಾರ್ಗದರ್ಶಿ ಹೀಗೆ ಮಾಡಿಕೊಟ್ಟನು. ಕೃಷ್ಣಾ ನದಿಯ ಮೂಲ ಉಗಮ ಮಹಾರಾಷ್ಟ್ರದ ಮಹಾ ಬಳೇಶ್ವರದಲ್ಲಿಯಾಗುತ್ತದೆ. ಅಲ್ಲಿಂದ ಕೂಡಲ ಸಂಗಮ ಮಾರ್ಗವಾಗಿ ಈ ನೀರು ಆಲಮಟ್ಟಿಗೆ ತಲುಪಿ ಅಲ್ಲಿಂದ ಹರಿದು ಇಲ್ಲಿಗೆ ಬರುತ್ತದೆ. ಇದು ಪಂಚಧಾರೆ ನದಿಯಾಗಿದೆ. ಈ ಶ್ರೀಶೈಲದಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ. ಈ ಆಣೆಕಟ್ಟು ಸಿವಿಲ್ ಎಂಜಿನಿಯರಿಂಗ್ನ ಅದ್ಭುತ ಶಕ್ತಿಯಾಗಿದೆ ಮತ್ತು ಇದು ಭಾರತದಲ್ಲಿನ ಮಹಬೂಬ್ನಗರ ಜಿಲ್ಲೆ, ತೆಲಂಗಾಣ (ಎಡದಂಡೆ) ಮತ್ತು ಆಂಧ್ರಪ್ರದೇಶದ (ಬಲದಂಡೆ) ಕರ್ನೂಲ್ ಜಿಲ್ಲೆಯ ಗಡಿಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಅಣೆಕಟ್ಟು ಮತ್ತು ಇದು 3 ನೇ ಅತಿದೊಡ್ಡ ಸಾಮರ್ಥ್ಯದ ಜಲವಿದ್ಯುತ್ ಯೋಜನೆಯಾಗಿದೆ. ಈ ಅಣೆಕಟ್ಟನ್ನು ಮಹಬೂಬ್ನಗರ ಮತ್ತು ಕರ್ನೂಲ್ ಜಿಲ್ಲೆಗಳ ನಡುವಿನ ನಲ್ಲಮಲ ಬೆಟ್ಟಗಳಲ್ಲಿ ಸಮುದ್ರ ಮಟ್ಟದಿಂದ 300 ಮೀ ಎತ್ತರದಲ್ಲಿ ಆಳವಾದ ಕಮರಿಯಲ್ಲಿ ನಿರ್ಮಿಸಲಾಗಿದೆ. ಇದು 512 ಮೀ ಉದ್ದ, 269.748 ಮೀಟರ್ ಎತ್ತರ ಮತ್ತು 12 ರೇಡಿಯಲ್ ಕ್ರೆಸ್ಟ್ ಗೇಟ್ಗಳನ್ನು ಹೊಂದಿದೆ. ಇದು 800 ಚದರ ಕಿಲೋಮೀಟರ್ ವಿಸ್ತೀರ್ಣದ ಜಲಾಶಯವನ್ನು ಹೊಂದಿದೆ. ಯೋಜನೆಯು 178.74 ಶತಕೋಟಿ ಘನ ಅಡಿಗಳನ್ನು ಹಿಡಿದಿಡಲು ಅಂದಾಜು ಲೈವ್ ಸಾಮರ್ಥ್ಯವನ್ನು ಹೊಂದಿದೆ. ಎಡದಂಡೆಯ ವಿದ್ಯುತ್ ಕೇಂದ್ರವು 6 × 150 ಮೆಗಾವ್ಯಾಟ್ಗಳ ರಿವರ್ಸಿಬಲ್ ಟರ್ಬೈನ್ಗಳನ್ನು ಹೊಂದಿದೆ ಮತ್ತು ಬಲದಂಡೆ 7 × 110 ಮೆಗಾವ್ಯಾಟ್ಗಳ ಟರ್ಬೈನ್ ಜನರೇಟರ್ಗಳನ್ನು ಒಳಗೊಂಡಿದೆ ಈ ಮಾಹಿತಿ ಅತ್ಯಂತ ಉಪಯುಕ್ತವಾಯಿತು. ಶ್ರೀಶೈಲದಲ್ಲಿ ನಮ್ಮ ಪ್ರವಾಸವನ್ನು ಮುಗಿಸಿ, ಸಂಜೆ 5ಗಂಟೆಗೆ ಮಹಾನಂದಿ ಕಡೆ ಪ್ರಯಾಣ ಬೆಳೆಸಿದೆವು.
ಮಹಾನಂದಿ:
ಶ್ರೀಶೈಲದಿಂದ ಸುಮಾರು 179km ಪ್ರಯಾಣ ಮಾಡಿ ಸಂಜೆ 11ಗಂಟೆಗೆ ಮಹಾನಂದಿಗೆ ತಲುಪಿದೆವು. ಮಹಾನಂದಿಯ ದೇವಸ್ಥಾನ ವಿಶಾಲ ಮೈದಾನದಲ್ಲಿ ನಮ್ಮ ಜೊತೆ ಕೆಲವರು ಉಳಿದುಕೊಂಡರು. ವಯಸ್ಸಾದ ಕೆಲವರು ರೂಂ ಹಿಡಿದು ಅಲ್ಲಿ ವಸತಿ ಮಾಡಿದರು. ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಸ್ನಾನ ಮಾಡಿ 6:30ಕ್ಕೆ ದೇವಸ್ಥಾನದ ಒಳಗೆ ಪ್ರವೇಶ ಮಾಡಿದೆವು. ಕೆಲವರು ಪುಷ್ಕರಣಿಯಲ್ಲಿ ಸ್ನಾನ ಮಾಡಿದರು. ನಂತರ ಅಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮುಗಿಸಿದೆವು. ನಮ್ಮೊಳಗಿನ ನಾಗಮ್ಮ ಯರಬಾಗೆ ಎಂಬುವವರ ಹುಟ್ಟು ಹಬ್ಬ ಆಚರಣೆಯನ್ನು ಅಲ್ಲಿಯೇ ಮಾಡಿದೆವು. ದೇವಸ್ಥಾನವನ್ನು ಸಮಗ್ರವಾಗಿ ವೀಕ್ಷಿಸಿದೆವು, ಎತ್ತರದ ಮಹಾನಂದಿಯನ್ನು ನೋಡಿ ದೇವಸ್ಥಾನದ ಆವರ್ಣದಲ್ಲಿರುವ ಅನ್ನಪೂರ್ಣ ಹೊಟೆಲ್ ದಲ್ಲಿ ಉಪಹಾರ ಮುಗಿಸಿ ಮಂತ್ರಾಲಯದ ಕಡೆ ಪ್ರಯಾಣ ಬೆಳೆಸಿದೆವು.
ಮಂತ್ರಾಲಯ:
ಬೆಳಿಗ್ಗೆ 10ಗಂಟೆಗೆ ಮಹಾನಂದಿಯಿಂದ ಹೊರಟು 179ಕಿ ಮೀ ಸಂಚರಿಸಿ ಮದ್ಯಾಹ್ನ 2:30ಕ್ಕೆ ಮಂತ್ರಾಲಯ ತಲುಪಿದೆವು. ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಮುಖಮಾರ್ಜನೆ ಮಾಡಿಕೊಂಡು ಗುರು ರಾಘವೇಂದ್ರ ದರ್ಶನಕ್ಕೆಂದು ದೇವಸ್ಥಾನಕ್ಕೆ ಹೋದೆವು ಸರಿಯಾಗಿ ನಾಲ್ಕು ಗಂಟೆಗೆ ಒಳಗೆ ಪ್ರವೇಶ ದೊರೆಯಿತು. ಅರ್ಧ ಗಂಟೆ ದರ್ಶನ ಮುಗಿಸಿ,ಗುರು ರಾಘವೇಂದ್ರರ ಜೀವನ ಚರಿತ್ರೆ ಕುರಿತ ತೈಲವರ್ಣದ ಚಿತ್ರವನ್ನು ವೀಕ್ಷಿಸಿದೆವು. ದೇವಸ್ಥಾನವು ಸುಂದರವಾದ ಕಲಾಕೃತಿಯಿಂದ ನಿರ್ಮಾಣವಾಗಿದೆ, ಮೈದಾನವಂತೂ ಅತ್ಯಂತ ವಿಶಾಲವಾಗಿದ್ದು ಸಾವಿರಾರು ಭಕ್ತರು ವಿಶ್ರಿಮಿಸಲು ಯೋಗ್ಯವಾದ ಪ್ರಶಾಂತ ಸ್ಥಳವಾಗಿದೆ. ದೇವಸ್ಥಾನ ದರ್ಶಿಸಿದ ನಮ್ಮವರು ಒಂದು ಗಂಟೆ ಮಂತ್ರಾಲಯದ ಸುಸಜ್ಜಿತ ಕಟ್ಟಡ ಹೊಂದಿದ ಪ್ರಸಿದ್ದ ಮಳಿಗೆಗಳಿಗೆ ಭೇಟಿ ನೀಡಿ ಮರಳಿದರು. ಸಂಜೆ 5ಗಂಟೆಗೆ ಮಂತ್ರಾಲಯದಿಂದ ಹೊರಟೆವು ರಾತ್ರಿ ವೇಳೆ ಒಂದು ಕಡೆ ನಿಂತು ನಾವು ತಂದಿರುವ ಬುತ್ತಿ ಬಿಚ್ಚಿಕೊಂಡು ಪ್ರಸಾದ ಮಾಡಿದೆವು. ಸುಪ್ರಭಾತದ 3ಗಂಟೆಗೆ ಮುಡಬಿ ಮಾರ್ಗವಾಗಿ ಮುಡಬಿ ಶರಣರನ್ನು ಅಲ್ಲಿಯೇ ಇಳಿಸಿ ನಮ್ಮ ಕಲ್ಯಾಣ ಮಹಾಮನೆಗೆ ಬಂದೆನು.
ಕೃತಜ್ಞತೆಗಳು
ಮೂರು ದಿನ ಪ್ರವಾಸದಲ್ಲಿ ತುಸು ವ್ಯತ್ಯಾಸವನ್ನು ಹೊರತುಪಡಿಸಿ, ಉಳಿದಂತೆ ಭಕ್ತಿಯ ಹಾಡು, ಪ್ರವಚನ, ಮಕ್ಕಳ ಜೊತೆಗಿನ ಆಟಗಳು, ಹಾಸ್ಯಮಯ ಕಥೆಯೊಂದಿಗೆ ಪ್ರವಾಸವನ್ನು ನಾನಂತೂ ಆನಂದವಾಗಿ ಅನುಭವಿಸಿದೆ. ನನ್ನನ್ನು ಕರೆದುಕೊಂಡು ಹೋಗಿ ಗೌರವ, ಪ್ರೀತಿ, ಪ್ರಸಾದ, ಕಾಣಿಕೆ ನೀಡಿ ಸಹಕರಿಸಿದ, ಮುಡಬಿಯ ಪ್ರವಾಸಿಕರಾದ ಬಸವರಾಜ ಕಣಜಿ, ನಾಗಮ್ಮ, ಸುಲೋಚನಾ, ಶ್ರೀದೇವಿ, ಶ್ರೀದೇವಿ, ಶಾರದಾ, ಕಲಾವತಿ, ಚಂದ್ರಕಲಾ, ಗೀತಾ, ಗೀತಾ, ಗಿರಿಜಾ, ಸಿದ್ದಣ್ಣ, ಸರಸ್ವತಿ, ಇಂದ್ರಬಾಯಿ, ಗಂಗಮ್ಮ, ರೇಖಾ, ಜಗದೇವಿ, ನಿರ್ಮಲಾ, ಸಂಗಮೇಶ, ಕಾವೇರಿ, ಸುಜಾತಾ, ಮಹಾದೇವಿ, ಶಾಲುಬಾಯಿ, ಅಮೃತಾ, ಮಧು, ಅನಿತಾ ಮಧುಮತಿ, ಶ್ವೇತಾ, ಇಂದುಮತಿ, ಬಸಮ್ಮ, ಸುಜಾತಾ, ವಿಜಯಕುಮಾರ, ಜಗದೇವಿ, ನಾಗರಾಜ, ಸಿಂಧೂರಿ, ಸೃಷ್ಟಿ, ಪ್ರಾಚಿ ಮತ್ತು ವಾಹನ ಚಾಲಕರಿಗೆ ಶರಣು ಶರಣಾರ್ಥಿಗಳೊಂದಿಗೆ ಕೃತಜ್ಞತೆಗಳು.
ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣ.
No comments:
Post a Comment