ಚಿಂಚೋಳಿ : ನಾವು ಆಚರಿಸುವ, ಅನುಸರಿಸುವ, ಧರ್ಮಾಚರಣೆಗಳು ಬೇರೆ ಬೇರೆಯಾದರೂ ಎಲ್ಲರೊಳಗಿರುವ ಆತ್ಮ ಚೈತನ್ಯ ಒಂದೆ ಆಗಿರುತ್ತದೆ ಎಂದು ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ಚಿಂಚೋಳಿ ತಾಲೂಕಿನ ಸಾಲೆ ಬೀರನಳ್ಳಿ ಗ್ರಾಮದಲ್ಲಿ ಆಯೋಜಿಸಿದ ಪಾಂಡುರಂಗ ವಿಠಲನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದ ಪಾವನ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಬಹುತ್ವ ನಮ್ಮ ದೇಶದ ವೈಶಿಷ್ಟ್ಯ
ಆಧ್ಯಾತ್ಮ ಸಾಧನೆಗಾಗಿ, ಆರಾಧನೆಗಾಗಿ ವಿಭಿನ್ನ ಮಾರ್ಗಗಳನ್ನು ಅನುಸರಿಸಿದರೂ ದೈವತ್ವದ ವಾರಿಧಿ ಒಂದೆ ಆಗಿರುತ್ತದೆ.
ಕಷ್ಟದುಳಿಯ ಸಹಸ್ರ ಪೆಟ್ಟು ಸಹಿಸಿದವನೇ ನಿಜವಾದ ಸಾಧಕನಾಗಿ ಹೊರಹೊಮ್ಮುತ್ತಾನೆ.
ಲೋಕ ನಿಂದೆಗಳಿಗೆ ಕಿವಿಗೊಡದೆ, ಆತ್ಮ ಸಾಕ್ಷಿಯಿಂದ ಪ್ರಯತ್ನ ಶೀಲನಾದರೆ ಯಶಸ್ಸು ಲಭಿಸುತ್ತದೆ.
ಭಾರತೀಯ ಪರಂಪರೆಯಲ್ಲಿ ವಾರಕಾರಿ ಭಕ್ತಿ ಪಂಥ ಒಂದು ವಿಶೇಷವಾದ ಆರಾಧನಾ ಪಂಥವಾಗಿದ್ದು ಪಂಡರಪುರ ವಿಠಲನ ನಾಮಸ್ಮರಣೆಯಿಂದ ಶಾಶ್ವತ ಶಾಂತಿ ಪಡೆಯಬಹುದಾಗಿದೆ.
ಭಕ್ತಿಯಲ್ಲಿ ದೃಢತೆ ಇದ್ದರೆ ನಮ್ಮ ಹೃದಯ ವಿಠಲನ ಆವಾಸಸ್ಥಾನವಾಗಿರುತ್ತದೆ.
ಸೌಹಾರ್ದತೆಯ ತೊಟ್ಟಿಲಿನಂತಿರುವ ಸಾಲೆ ಬೀರನಳ್ಳಿ ಗ್ರಾಮದ ಜನತೆ ಬದುಕು ಯಾವತ್ತೂ ಶ್ರೇಯಸ್ಸಿನಿಂದ ಕೂಡಿರಲಿ, ಈ ನಿಟ್ಟಿನಲ್ಲಿ ಹಾರಕೂಡ ಚೆನ್ನಬಸವರ ಆಶೀರ್ವಾದ ಸದಾ ಎಲ್ಲರನ್ನೂ ಕಾಪಾಡಲಿ ಎಂದು ಶುಭ ಹಾರೈಸಿದರು.
ವೀರೇಶ್ವರ ಶಿವಾಚಾರ್ಯರು ಧನಶ್ರೀ ಹಾಗೂ ಸುಭಾಷ ರಾಥೋಡ ಮಾತನಾಡಿದರು.
ಪೂಜ್ಯಶ್ರೀ ಶಿವಕುಮಾರ ಶಿವಾಚಾರ್ಯರು ನರನಾಳ, ಬಸವರಾಜ ಮಾಲಿ, ಪ್ರಭುಲಿಂಗ ಲೇವಡಿ, ವಿಕ್ರಮ ಪಾಟೀಲ, ಬಾಬುರಾವ ಪಾಟೀಲ, ಗೌತಮ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಜಗನ್ನಾಥ ರೆಡ್ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರೇವಣಸಿದ್ದಯ್ಯ ಸ್ವಾಮಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ನವಲಿಂಗ ಪಾಟೀಲ ನಿರೂಪಿಸಿದರು.
ಚಿಂಚೋಳಿ ತಾಲೂಕಿನ ಸಾಲೆ ಬೀರನಳ್ಳಿ ಗ್ರಾಮದಲ್ಲಿ ಆಯೋಜಿಸಿದ ಪಾಂಡುರಂಗ ವಿಠಲನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭವನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.
ಶ್ರೀ ವೀರೇಶ್ವರ ಶಿವಾಚಾರ್ಯರು ಧನಶ್ರೀ, ಪೂಜ್ಯಶ್ರೀ ಶಿವಕುಮಾರ ಶಿವಾಚಾರ್ಯರು ನರನಾಳ, ಸುಭಾಷ ರಾಥೋಡ, ಬಸವರಾಜ ಮಾಲಿ, ಪ್ರಭುಲಿಂಗ ಲೇವಡಿ, ವಿಕ್ರಮ ಪಾಟೀಲ, ಬಾಬುರಾವ ಪಾಟೀಲ, ಗೌತಮ ಪಾಟೀಲ, ಜಗನ್ನಾಥ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
No comments:
Post a Comment