ads

Search This Blog

Friday, 3 January 2025

ಶತಮಾನದ ಸಂತ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಪುಣ್ಯ ಸ್ಮರಣೆ:

 ಈ ಜಗತ್ತಿನಲ್ಲಿ ಅನೇಕ ಸಾಧು ಸಂತ ಮಹನೀಯರನ್ನು ನೋಡಿದ್ದೇವೆ ಕೇಳಿದ್ದೇವೆ, ಆದರೆ ಈಗಿನ ಕಾಲದಲ್ಲಿ ಜನರಿಗೆ ಸಾಧು ಸಂತ ಎಂದರೆ ಯಾರು ಎಂಬುದು ಸರಿಯಾಗಿ ತಿಳಿದಿಲ್ಲ. ಜಗತ್ತಿನ ಎಲ್ಲಾ ಕಾಮನೆಗಳನ್ನು ತೊರೆದು ಜಗತ್ತಿನ ಕಲ್ಯಾಣಕ್ಕಾಗಿ ಜನರ ಸೇವೆಗಾಗಿ ಸದಾ ತಮ್ಮನ್ನು ತಾವು ತೊಡಗಿಸಿಕೊಂಡು ಅದರ ಜೊತೆಗೆ ಆತ್ಮ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಹಂಬಲಿಸುವವರೆ ಸಾಧು ಸಂತರು ಶರಣರು ಸನ್ಯಾಸಿಗಳು ದಾರ್ಶನಿಕರು. ಹೇಗೆ ಒಂದು ಜೇನುಹುಳು ಹೂವಿನ ಮೇಲೆ ಕುಳಿತು ಮಕರಂದವನ್ನು ಮಾತ್ರ ಹಿರಿಕೊಳ್ಳುವವೋ ಹಾಗೆಯೇ ಒಬ್ಬ ಸಂತ ಮಹನೀಯನು ಸಹ ಬೇರೆಯಾವ ವಿಷಯಗಳ ಬಗ್ಗೆ ಯೋಚಿಸದೆ ಸದಾ ಲೋಕಕಲ್ಯಾಣಕ್ಕಾಗಿ ತಮ್ಮನ್ನು ತಾವು ಸಂಪೂರ್ಣವಾಗಿ  ಅಂತಃಕರಣ ಶುದ್ಧಿಯಿಂದ ತೊಡಗಿಸಿಕೊಂಡವರೆ ಸಂತ ಶರಣ ದಾರ್ಶನಿಕ. ಅವರ ಸಾಲಿನಲ್ಲಿ ಮೊದಲಪಂಕ್ತಿಯಲ್ಲಿ ಬರುವವರೇ ಈ ಶತಮಾನದ  ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು.




ಸಿದ್ಧೇಶ್ವರ ಸ್ವಾಮೀಜಿ ಕರುನಾಡ ಕಂಡ ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಆಸೆಯನ್ನು ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು, ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಈ ನಾಡಿನಲ್ಲಿ ಅನೇಕ ಸಂತರು ಸಾಧುಗಳು ಸತ್ಪುರುಷರು ಇದ್ದಾರೆ, ಇಂದಿನ ಪೀಳಿಗೆಯಲ್ಲಿ ಜ್ಞಾನಯೋಗಿಗಳು ಬಹಳ ಅಪರೂಪ. ಜಗತ್ತಿನ ಕಲ್ಯಾಣಕ್ಕಾಗಿ ಜನರ ಸೇವೆಗಾಗಿ ಸದಾ ಸಮರ್ಪಿತಭಾವದಿಂದ ಬದುಕಿದ ಯೋಗಿ, ಇವರ ಮಾತು ಎಂತಹ ಕಲ್ಲು ಮನಸ್ಸಿನವರನ್ನು ಸನ್ಮಾರ್ಗ ದೆಡೆಗೆ ಕರೆದೊಯ್ಯುವ ಶಕ್ತಿಯುಳ್ಳ ಮಹಾನ್ ಸಂತರಾಗಿದ್ದರು.

ಶ್ರೀ ಸಿದ್ದೇಶ್ವರ ಸ್ವಾಮಿಜಿಗಳ ಬಾಲ್ಯ ಜೀವನ:
ಶ್ರೀಗಳು ವಿಜಯಪೂರ ಜಿಲ್ಲೆ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941 ಅಕ್ಟೋಬರ್ 24 ರಂದು ಜನಿಸಿದರು.  ಸಿದ್ದಗೊಂಡಪ್ಪ ಇವರ ಬಾಲ್ಯದ ಹೆಸರು.
ಊರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ನಾಲ್ಕನೇ ತರಗತಿವರೆಗೆ ಓದಿದ ನಂತರ ಅವರು ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ಹೋದರು.
'ಬೆಳೆಯುವ ಪೈರು ಮೊಳಕೆಯಲ್ಲೇ’ ಎಂಬಂತೆ ಬಾಲಕ ಸಿದ್ಧೇಶ್ವರರ  ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನಕ್ಕೆ ಬರಲು ತಡವಾಗಲಿಲ್ಲ. ತಾವು ಪ್ರವಚನ ಮಾಡುವ ಸ್ಥಳಗಳಿಗೆ ಮಲ್ಲಿಕಾರ್ಜುನ ಸ್ವಾಮಿಗಳು ಸಿದ್ಧೇಶ್ವರರನ್ನು ಕರೆದೊಯ್ಯ ತೊಡಗಿದರು. ಜೊತೆಯಲ್ಲಿಯೇ ಅವರ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವೂ ಮುಂದುವರಿಯುವಂತೆ ನೋಡಿಕೊಂಡರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ನಂತರ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಕೊಲ್ಹಾಪುರ ವಿಶ್ವವಿದ್ಯಾನಿಲಯದಿಂದ ತತ್ವಶಾಸ್ತ ವಿಷಯದಲ್ಲಿ ಎಂ.ಎ ಪದವಿಯನ್ನು ಮುಗಿಸಿದರು.

ಜ್ಞಾನಯೋಗಾಶ್ರಮ:
ವಿಜಯಪುರದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ ಈ ಆಶ್ರಮ ಇವರ ಗುರುಗಳಾದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಅತ್ಯಂತ ಹೆಸರುವಾಸಿಯಾಗಿತ್ತು.  ಉತ್ತರ ಕರ್ನಾಟಕದ ಜನಮಾನಸದಲ್ಲಿ ಅತ್ಯಂತ ಮಹತ್ವ ಪಡೆಯಿತು. ನಿಸ್ವಾರ್ಥ ಸೇವೆ, ಜಾತಿ ಮತ ಕೀಳು ಮೇಲು ಎಂಬ ಭೇದಭಾವಗಳಿಲ್ಲದೆ, ಯಾರ ಹಂಗಿಗೂ ಒಳಗಾಗದೆ ಸರ್ವಜನರಿಂದಲೂ ಪ್ರೀತಿ, ವಿಶ್ವಾಸದ ಆಶ್ರಯತಾಣವಾಗಿ ಬೆಳೆಯಿತು. ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದರು. ಕರ್ನಾಟಕವಲ್ಲದೆ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ತಿಂಗಳುಗಟ್ಟಲೆ ಪ್ರವಚನ ನೀಡುತ್ತಿದ್ದರು. ಇವರ ಗಾಢ ಪ್ರಭಾವ ಸುತ್ತಮುತ್ತಲ ಜನರ ಮೇಲೆ ಉಂಟಾಗಿ ಕ್ರಮೇಣ ಶ್ರೀಗಳು ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಗಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿ ಅವರಿಗಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಅವರಿಗೆ ಊಟ, ವಸತಿಗಳಿಗೆ ವ್ಯವಸ್ಥೆ ಮಾಡಿದ್ದರು. ಇದರಿಂದಾಗಿ ಸಾವಿರಾರು ಮಕ್ಕಳು ವಿದ್ಯಾವಂತರಾದರು. ಹಾಗೆ ವಿದ್ಯೆ ಕಲಿಯಲು ಬಂದ ಸಾವಿರಾರು ಮಕ್ಕಳಲ್ಲಿ ಶ್ರೀ ಸಿದ್ದೇಶ್ವರರೂ ಒಬ್ಬರಾಗಿದ್ದರು.
ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ತುಂಬ ಆಳವಾದ ಅಧ್ಯಯನ ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭಾವಿಗಳೂ, ಮಧುರ ಸ್ವಭಾವದವರೂ ಆಗಿದ್ದು ಪಂಚಭಾಷಾ ನಿಪುಣರಾಗಿದ್ದರು. ಕನ್ನಡ ಸಂಸ್ಕೃತ ಹಿಂದಿ ಮರಾಠಿ ಇಂಗ್ಲಿಷ್ ಭಾಷೆಗಳ ಜ್ಞಾನವನ್ನು ಹೊಂದಿರುವ ಇವರು
ಆಧ್ಯಾತ್ಮಿಕದಂತೆ ಲೌಕಿಕ ವಿಷಯಗಳಲ್ಲೂ ವಿಶೇಷ ಜ್ಞಾನ ಹೊ0ದಿದ್ದ ಶ್ರೀಗಳು ಮುಂದೆ ಜಗತ್ತಿಗೇ ದೊಡ್ಡವನಾಗುತ್ತಾನೆ ಎಂದು ವಿಶ್ವಾಸದಿಂದ ಎಲ್ಲರೆದುರು ಹೇಳುತ್ತಿದ್ದರು. ಸ್ನಾತಕೋತ್ತರ ಪದವಿ ಪಡೆದು ಬಿಜಾಪುರಕ್ಕೆ ಹಿಂದಿರುಗಿದ ನಂತರ ಸಿದ್ದೇಶ್ವರರಿಗೆ ಭಗವದ್ಗೀತೆಯ ಬಗ್ಗೆ, ಉಪನಿಷತ್ತುಗಳ ಬಗ್ಗೆ ಮಲ್ಲಿಕಾರ್ಜುನ ಸ್ವಾಮಿಗಳು ಸವಿಸ್ತಾರವಾಗಿ ಅಭ್ಯಾಸವನ್ನು ನೀಡಿ ಅವರ ಜ್ಞಾನದಿಂಗಿತವನ್ನು ವಿಸ್ತರಿಸಿದರು. ಪೂಜ್ಯರು ಉಪನಿಷತ್ತುಗಳು, ಭಗವದ್ಗೀತೆ, ಯೋಗಸೂತ್ರ, ವಚನಶಾಸ್ತ್ರ ಮುಂತಾದ ವಿಷಯಗಳ ಬಗೆಗೆ ತಾವು ಹೇಗೆ ಗುರುಗಳಿಂದ ಕಲಿತ ಜ್ಞಾನವನ್ನು ಬಳಸಿಕೊಂಡು ಪ್ರವಚನಗಳನ್ನು ನೀಡುತ್ತಿದ್ದರು. ಸೂಕ್ಷ್ಮ ವಿಚಾರಗಳನ್ನು, ವೇದಾಂತ ತತ್ವಗಳನ್ನು ಅತ್ಯಂತ ಸರಳವಾಗಿ ಜನರ ಮನಸ್ಸಿನಲ್ಲಿ  ಉಳಿಯುವಂತೆ ಅತ್ಯಂತ ಸರಳವಾಗಿ ವಿವರಿಸುವುದೇ ಅವರ ವೈಶಿಷ್ಟ್ಯ.

ಪ್ರಶಸ್ತಿ ಗೌರವಗಳು ಬೇಕೆಂದು ವಿಧಾನಸೌಧದಲ್ಲಿ ಎಲ್ಲಾ ಮಂತ್ರಿಗಳ ಕೈ ಕಾಲು ಹಿಡಿದು , ಧನ ದ್ರವ್ಯವನ್ನು ಕೊಟ್ಟು ಅನೇಕರಿಂದ ಶಿಫಾರಸ್ಸು ಪಡೆದು ಪ್ರಶಸ್ತಿ ಕೇಳುವ ಜನರನ್ನು ನಾವು ನೋಡಿದ್ದೇವೆ ಪ್ರಶಸ್ತಿಗಾಗಿ ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿ ಪ್ರಶಸ್ತಿಯನ್ನು ಸ್ವೀಕರಿಸುತ್ತಾರೆ. ಪ್ರಶಸ್ತಿ ಗೌರವ ಮನ್ನಣೆಗಾಗಿ ಹಪಹಪಿಸುವ ಜನರ ನಡುವೆ ಪ್ರಶಸ್ತಿ ಪುರಸ್ಕಾರಗಳನ್ನು  ನಗುನಗುತ್ತಲೇ ತಿರಸ್ಕರಿಸಿದ ಸರಳ ವ್ಯಕ್ತಿಯನ್ನು ಎಲ್ಲೂ ಕಾಣಲು ಸಾಧ್ಯವಿಲ್ಲ. ಅವರು ಆಧ್ಯಾತ್ಮ, ಆದರ್ಶ ಮತ್ತು ನೈತಿಕತೆ ಬಗ್ಗೆ ಕೇವಲ ಬೋಧನೆ ಮಾಡುವುದಷ್ಟೇ ಅಲ್ಲ. ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದ ಅವರು ನುಡಿದಂತೆ ನಡೆಯುವ ಮತ್ತು ನಡೆದಂತೆಯೇ ನುಡಿಯುವ ವ್ಯಕ್ತಿತ್ವದವರಾಗಿದ್ದರು.
ಭಾರತ ಸರಕಾರ ಇವರ ಕಾರ್ಯವನ್ನು ಗುರುತಿಸಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಹೆಸರು ಘೋಷಿಸಿತ್ತು ಆದರೆ ಶ್ರೀಗಳು "ಭಾರತ ಸರಕಾರ ನೀಡುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳ ಮೇಲೆ ನನಗೆ ಅಪಾರ ಗೌರವವಿದೆ. ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಕ್ಕೆ ಧನ್ಯವಾದಗಳು. ಆದರೆ ನಾನೊಬ್ಬ ಸರಳ ವ್ಯಕ್ತಿ. ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವುದು ಉದ್ದೇಶ ನನ್ನದು ಹಾಗಾಗಿ ಪ್ರಶಸ್ತಿಗಳ ಅವಶ್ಯಕತೆಯು ನನಗಿಲ್ಲ. ಎಲ್ಲ ಗೌರವಾದರಗಳೊಂದಿಗೆ ಈ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ. ಅನ್ಯಥಾ ಭಾವಿಸದಿರಿ" ಎಂದು ಸಿದ್ದೇಶ್ವರ ಸ್ವಾಮೀಜಿಗಳು ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸಿದ್ದರು. ಅದೇರೀತಿಯಾಗಿ ಕರ್ನಾಟಕ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪ್ರಕಟಿಸಿತ್ತು. ಅದನ್ನೂ ಸಹ ಶ್ರೀಗಳು ಸ್ವೀಕರಿಸಿರಲಿಲ್ಲ. ಹೀಗೆ ತಮಗೆ ಒದಗಿ ಬಂದ ಎಷ್ಟೋ ಪ್ರಶಸ್ತಿ ಪುರಸ್ಕಾರಗಳನ್ನು ಅವರು ವಿನಮೃವಾಗಿಯೇ ನಿರಾಕರಿಸಿದ್ದರು. ಇವರ ಜ್ಞಾನ ದೇಶ ವಿದೇಶಗಳಲ್ಲಿ ಪಸರಿಸಿದೆ. ಸಿದ್ಧೇಶ್ವರ ಸ್ವಾಮೀಜಿ ಎಂತಹ ಸರಳ ವ್ಯಕ್ತಿಯನ್ನು ಎಲ್ಲಿಯೂ ನೋಡಲು ಸಾಧ್ಯವಿಲ್ಲ. ಇವರು ಕಿಸೆ ಇಲ್ಲದ ಸ್ವಾಮೀಜಿ ಎಂದೇ ಹೆಸರು ವಾಸಿಯಾಗಿದ್ದವರು. ಜ್ಞಾನದಲ್ಲಿ ಬೃಹತ್ ಪರ್ವತದಂತೆ ಕಾಣುತ್ತಿದ್ದರು. ಅತ್ಯಂತ ಸುಂದರ ಸರಳ ರೀತಿಯಲ್ಲಿ ಪ್ರವಚನ ಹೇಳುತ್ತಿದ್ದ  ಇವರು ಜ್ಞಾನದ ನಿಧಿಯಾಗಿದ್ದರು. ಶತಮಾನದ ಸಂತ ಸಿದ್ಧೇಶ್ವರ ಶ್ರೀಗಳು ದಿನಾಂಕ 2 ಜನೆವರಿ 2023 ರಂದು ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಇಹಲೋಕ ತ್ಯಜಿಸಿದರು. ನಮ್ಮನ್ನಗಲಿ ಇಂದಿಗೆ 2 ವರ್ಷ ಕಳೆದರೂ ಅವರು ಹೇಳಿಕೊಟ್ಟ  ನೀತಿಪಾಠ ಅಧ್ಯಾತ್ಮದ ಅರಿವು, ಸರಳತೆಯ ಸೂತ್ರ, ವಿಶ್ವ ಶಾಂತಿ, ಪರಸ್ಪರ ಪ್ರೇಮದ ಸಾಲುಗಳು ಇಂದಿಗೂ ನಮ್ಮ ಮನ ಮನದಲ್ಲಿ ಅಚ್ಚಳಿಯದೆ ಉಳಿದಿವೆ. ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ 2ನೆಯ ವಾರ್ಷಿಕ ಪುಣ್ಯಸ್ಮರಣೆ ನಿಮಿತ್ತ ಈ ಲೇಖನ.
-ಸಿದ್ಧಲಿಂಗ ಶಿವಯೋಗಿ ಮಠಪತಿ ಸ್ವಾಮಿ ಉಚ್ಚಾ ತಾ. ಭಾಲ್ಕಿ ಜಿ. ಬೀದರ್

No comments:

ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ...!

  ಪ್ರೇಮ ಕಾಶ್ಮೀರದಲ್ಲಿ ರಕ್ತದೋಕುಳಿ; ಹಿಂದೂಗಳೇ ಟಾರ್ಗೆಟ್. ಭೂಲೋಕದ ಸ್ವರ್ಗವೆಂದೇ ಕರೆಯುವ ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಸಮೀಪದ ಬೈಸರನ್ ಹುಲ್ಲುಗಾವಲಿನಲ್ಲಿ ಪಾಕ್ ಪ್...