ಬಸವಕಲ್ಯಾಣ : ಆಧ್ಯಾತ್ಮದ ಅನುಸಂಧಾನವೇ ಗುರು ಶಿಷ್ಯರ ನಿಜವಾದ ಸಂಬಂಧ ಎಂದು ಹಾರಕೂಡದ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಆಲಗೂಡ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ 38ನೇ ಶಿವಾನುಭವ ಚಿಂತನ ಸಮಾರಂಭದ ಪಾವನ ಸನ್ನಿಧಾನ ವಹಿಸಿ ಮಾತನಾಡಿದ ಶ್ರೀಗಳು ನಾವು ಸನ್ಮಾರ್ಗದಲ್ಲಿ ನಡೆದಾಗಲೂ ಲೋಕ ನಿಂದೆಗಳು ಬರುವುದು ಸಹಜ, ಲೋಕ ನಿಂದನೆಗೆ ಧೃತಿಗೆಡದೆ ಸರ್ವರಿಗೂ ಪ್ರೀತಿಯಿಂದ ಹಿತವನ್ನೇ ಬಯಸುವವ ದೇವಮಾನವನಾಗುತ್ತಾನೆ. ಈ ಜಗತ್ತಿನಲ್ಲಿ ಹೆತ್ತ ತಾಯಿಯ ಆಶೀರ್ವಾದಕ್ಕಿಂತ ಶ್ರೇಷ್ಠ ಅನುಗ್ರಹ ಇನ್ನೊಂದಿಲ್ಲ. ತಾಯಿಯ ಪವಿತ್ರ ಪಾದ ಸ್ವರ್ಗಕ್ಕೆ ಸಮಾನ. ಯಾವ ದೇವರ ಆರಾಧನೆ ಮಾಡಿದರೂ ಹೆತ್ತ ತಾಯಿಯ ಸೇವೆ ಮಾಡುವುದು ಯಾವ ಕಾರಣಕ್ಕೂ ಅಲ್ಲಗಳೆಯಬಾರದು.ತಾಯಿಯೇ ಪರಮ ದೈವವೆಂದು ತಿಳಿದು, ತಂದೆ ತಾಯಿಯರ ಸೇವೆಯಿಂದ ಸಕಲೈಶ್ವರ್ಯ ಪ್ರಾಪ್ತವಾಗಿ ನೆಮ್ಮದಿಯ ಬದುಕು ಸಾಧ್ಯವಾಗುತ್ತದೆ.
ಗುರು ಭಕ್ತಿಯನ್ನೇ ಉಸಿರಾಗಿಸಿಕೊಂಡು ಸತ್ಕಾರ್ಯಗಳನ್ನು ಮಾಡುತ್ತಿರುವ ಆಲಗೂಡ ಜನತೆಗೆ ಶ್ರೀ ವೀರಭದ್ರೇಶ್ವರ ಹಾಗೂ ಹಾರಕೂಡ ಚನ್ನಬಸವ ಶಿವಯೋಗಿಗಳ ದಿವ್ಯ ಕೃಪೆಯಿಂದ ಶ್ರೇಯಸ್ಸಿನ ಬದುಕು ಸಾಧ್ಯವಾಗಲಿ, ಸರ್ವರಿಗೂ ಶುಭವಾಗಲಿ ಎಂದು ಹಾರೈಸಿದರು.
ಸಮಾರಂಭದಲ್ಲಿ ಭಾಗವಹಿಸಿದ ಬಸವಕಲ್ಯಾಣದ ಶಾಸಕ ಶರಣು ಸಲಗರ ಅವರು ಮಾತನಾಡಿ ದೇಶದ ಸವಾರ್ಂಗಣ ಸದ್ವಿಕಾಸಕ್ಕಾಗಿ ಸಮರ್ಥ ಯುವಶಕ್ತಿಯ ಅಗತ್ಯವಿದ್ದು, ರಾಷ್ಟ್ರಮಾತೆ ಜೀಜಾಮಾತೆಯಂತೆ ಎಲ್ಲಾ ತಾಯಂದಿರು ತಮ್ಮ ಮಕ್ಕಳನ್ನು ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಚೈತನ್ಯ ಕುಡಿಗಳಂತೆ ಬೆಳೆಸಬೇಕು.
ಬಸವಾದಿ ಶರಣರ ಪುಣ್ಯಭೂಮಿ ಸಾಧ್ಯತೆಗಳ ಶ್ರೇಷ್ಠ ಭೂಮಿಯಾಗಿದ್ದು, ಈ ನೆಲದ ವಾರಸುದಾರರು ನಾವುಗಳು ಎನ್ನುವ ಹೆಮ್ಮೆ ನಮಗಿರಬೇಕು ಎಂದು ನುಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯರಾದ ವಿಜಯ ಸಿಂಗ್, ಖ್ಯಾತ ಪ್ರವಚನಕಾರರಾದ ದಯಾನಂದ ಹಿರೇಮಠ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಶರಣು ಆಲಗೂಡ, ಆಲಗೂಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೇಘಾ ವಿದೇಶ ಸಗರ, ಪಿಎಸ್ಐ ಸುವರ್ಣ ಮಲ್ಲಶೆಟ್ಟಿ, ನಾಗೇಶ ಸ್ವಾಮಿ, ಶರಣಪ್ಪಾ ಬಂಗಾರೆ, ಬಸಯ್ಯ ಸ್ವಾಮಿ, ಗುಲಾಬ ಪಾಟೀಲ, ಗಣೇಶ ಸೋಮವಂಶೆ, ಮೋಹನ ಉಕ್ಕಾವಲೆ ಉಪಸ್ಥಿತರಿದ್ದರು. ರವಿ ಠಮಕೆ ಸ್ವಾಗತಿಸಿದರು. ಕಾರ್ತಿಕ ಬಡದಾಳೆ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಭಾಗ್ಯ ಮಠಪತಿ ವಚನ ಗಾಯನ ಪ್ರಸ್ತುತಪಡಿಸಿದರು. ನವಲಿಂಗ ಪಾಟೀಲ ನಿರೂಪಿಸಿದರು. ಗುರುನಾಥ ಬಡದಾಳೆ ವಂದಿಸಿದರು.
No comments:
Post a Comment